ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಬರೆದಿರುವ ಕರಪತ್ರ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾದ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಹಾತ್ಮಗಾಂಧಿ ಬಗ್ಗೆ “ಆಕ್ಷೇಪಾರ್ಹ” ಪದಗಳನ್ನು ಒಳಗೊಂಡಿರುವ ಕರಪತ್ರಗಳನ್ನು ಹಂಚುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ನರೇಂದ್ರ ಬಾಥಮ್, ಪವನ್ ಮಹೌರ್, ಕಿಶೋರ್ ಮತ್ತು ಆನಂದ್ ಮಹೌರ್ ಎಂಬ ನಾಲ್ವರನ್ನು ಬಂಧಿಸಲಾಗಿದೆ ಎಂದು ಕೊಟ್ವಾಲಿ ಪೊಲೀಸ್ ಠಾಣೆ ಉಸ್ತುವಾರಿ ವಿವೇಕ್ ಅಷ್ಟನಾರವರು ತಿಳಿಸಿದ್ದಾರೆ.
ಹಿಂದೂ ಮಹಾಸಭಾ ಕಾರ್ಯಕರ್ತರು ನವೆಂಬರ್ 15 ರಂದು ಅವರ ಕಚೇರಿಯಲ್ಲಿ ಗೋಡ್ಸೆ ಅವರ ಮರಣೋತ್ಸವವನ್ನು ಆಚರಿಸಿದ್ದರು.
ಪೊಲೀಸರ ಪ್ರಕಾರ, ಕಾರ್ಯಕ್ರಮಕ್ಕೆ ಒಂದು ದಿನ ಮೊದಲು, ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ದೌಲತ್ಗಂಜ್ ಪ್ರದೇಶದಲ್ಲಿ ಮಹಾತ್ಮ ಗಾಂಧಿಯನ್ನು ‘ಆಕ್ಷೇಪಾರ್ಹ’ ರೀತಿಯಲ್ಲಿ ವಿವರಿಸುವ ಕರಪತ್ರಗಳನ್ನು ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಕೊಟ್ವಾಲಿ ಪೊಲೀಸ್ ಠಾಣೆ ಮಹಾಸಭಾ ಸದಸ್ಯರಾದ ನರೇಶ್ ಬಾಥಮ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153-ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನಿನ್ನೆಯಿಂದಲೂ ಲೋಕಸಭೆಯಲ್ಲಿ ಗಾಂಧಿ ವಿಚಾರ ಪ್ರತಿಧ್ವನಿಸುತ್ತಿದೆ. ಪ್ರಗ್ಯಾ ಠಾಕೂರ್ ಗಾಂಧಿಯವರನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ದೇಶಭಕ್ತ ಎಂದು ಲೋಕಸಭೆಯಲ್ಲಿ ಕರೆದಿದ್ದರು. ಇದು ದೊಡ್ಡ ವಿವಾದವಾದ ನಂತರ ಇಂದು ಅವರು ಎರಡು ಬಾರಿ ಕ್ಷಮೆ ಕೇಳಿದ್ದಾರೆ.
ಇಂತಹ ಸಂದರ್ಭದಲ್ಲಿಯೇ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸುವ ಹಿಂದೂ ಮಹಾಸಭಾದ ಕಾರ್ಯಕರ್ತರು ಗಾಂಧಿ ವಿರುದ್ಧ ಕರಪತ್ರಗಳನ್ನು ಹಂಚಲು ಹೋಗಿ ಸಿಕ್ಕಿಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುವಂತಿದೆ.
ಪ್ರಗ್ಯಾರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಯೋತ್ಪಾದಕಿ ಎಂದು ಕರೆದಿದ್ದರು. ಆನಂತರ ರಾಹುಲ್ ಗಾಂಧಿ ಹಾಗೆ ಕರೆದಿದ್ದು ಗಾಂಧಿಯನ್ನು ಗೋಡ್ಸೆ ಕೊಂದಿದ್ದಕ್ಕಿಂತಲೂ ಹೆಚ್ಚು ಖಂಡನೀಯ ಎಂದು ಸಂಸದ ನಿಶಿಕಾಂತ್ ದುಬೆ ಅಭಿಪ್ರಾಯಪಟ್ಟಿದ್ದರು.