HomeUncategorizedಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

- Advertisement -
- Advertisement -

ಈಗಿನ ಸುದ್ದಿ ಬರೀ ಲಾಠಿ -ಬೂಟಿನ ಸದ್ದಿನ ಸುದ್ದಿ. ಅಸ್ಸಾಮಿನೊಳಗ ಸುರು ಆದ ಈ ಸದ್ದು ಈಗ ಎಲ್ಲಾ ಕಡೆ ಝಂಕಾರ ಬೀಟ್ಸ ಜೊತೆ ಕೇಳಲಿಕ್ಕೆ ಹತ್ತೇದ.

ಕಾಲೇಜು- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಅಧ್ಯಯನ ಮಾಡಬೇಕು. ಅದನ್ನ ಬಿಟ್ಟುಕೊಟ್ಟು ಪ್ರತಿಭಟನೆ – ಹೋರಾಟ ಎಲ್ಲಾ ಯಾಕ ಮಾಡಬೇಕು? ಅಂತ ಕೆಲವರು ಕೇಳಾಕ ಹತ್ಯಾರ. ನೀವು ಗದ್ದಲಾ ಮಾಡಿದರ ನಾವು ಬಡೀತೇವಿ ಅಂತ ಹೇಳಿ ಅದು ಖರೇ ಅನ್ನೋದನ್ನ ತೋರಿಸಲಿಕ್ಕೆ ಹತ್ಯಾರ.

ಇದೆಲ್ಲಾ ಯಾಕ ಸುರು ಆತು? ಇದು ಪಾರ್ಲಿಮೆಂಟ ಭವನದಿಂದ ಸುರು ಆತು. ಅಲ್ಲೆ ನಮ್ಮನ್ನ ಪ್ರತಿನಿಧಿಸುವ ಮಹಾಮಹೋಪಾಧ್ಯಾಯರೆಲ್ಲಾ ಸೇರಿ `ಹೊರಗಿನಿಂದ ಬಂದವರನ್ನ ಹಿಡದು ಹೊರಗ ಹಾಕೋ’ ಕಾನೂನು ಖಲಬಲಿಯಿಂದ ಪಾಸು ಮಾಡಿದರು. ಅವರ ಪ್ರಕಾರ ಇದು ಅಸ್ಸಾಮು ಮತ್ತು ಇನ್ನು ಕೆಲವು ಪೂರ್ವ ಹಾಗೂ ಈಶಾನ್ಯದ ರಾಜ್ಯಗಳಿಗೆ ಅನ್ವಯ ಆಗಬೇಕಾಗಿತ್ತು. ಆದರ ಅವರಿಗೆ ಭಾಳ ದೊಡ್ಡ ಮನಸ್ಸು ಇದ್ದದ್ದಕ್ಕ ಇಡೀ ದೇಶಕ್ಕ ಲಾಗೂ ಮಾಡೋ ಹಂಗ ಅದನ್ನ ಮಾಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ರಕ್ತ ಬರೋ ಹಂಗ ಹೊಡದು, ಅವರ ಮ್ಯಾಲೆ ದೌರ್ಜನ್ಯ ಮಾಡಿ ಅವಮಾನ ಮಾಡಿದ್ದನ್ನ ಭಾಳ ಜನಾ ಖಂಡಿಸಲಿಕ್ಕೆ ಹತ್ಯಾರ. ಆದರ ಅದನ್ನ ಬೆಂಬಲಿಸೋರ ಸಂಖ್ಯಾನೂ ಏನು ಕಮ್ಮಿ ಇಲ್ಲ. ಅವರು `ಹಂಗ ಆಗಬೇಕು’, `ದಂಡಂ ದಶಗುಣಂ’, `ಜಿಸಕಿ ಲಾಠ, ಉಸಕೀ ಭೈಂಸ್’ ಅಂತೆಲ್ಲಾ ಸಮಾಜ ವಿರೋಧಿ ಮಾಧ್ಯಮಗಳಾದ ವಾಟ್ಸಪ್ಪು – ಫೇಸುಬುಕ್ಕಿನ್ಯಾಗ ಚೀರಲಿಕ್ಕೆ ಹತ್ಯಾರ. ಈಗ ಆಗಲಿಕ್ಕೆ ಹತ್ತಿದ್ದು ಅವರ ಪ್ರಕಾರ ಸರಿ.

ಇದರ ಬಗ್ಗೆ ಒಂದು ಸ್ವಲ್ಪ ಉಲ್ಟಾ ವಿಚಾರ ಮಾಡೋಣ. ಎನ್‍ಡಿಎ ಸರಕಾರದ ಜಾಗಾದಾಗ ಯುಪಿಎ ಇತ್ತು ಅನಕೋರಿ, ಆಗ ಪೊಲೀಸರು ಬನಾರಸ ಹಿಂದೂ ಯುನಿವರ್ಸಿಟಿ ಒಳಗ ಹೊಕ್ಕು ಹುಡುಗ- ಹುಡುಗಿಯರನ್ನು ಹೊಡದಿದ್ದರೂ ಅಂತ ಅನಕೋರಿ ಆವಾಗನೂ ಅವರದು ಇದ ರೀತಿ ಪ್ರತಿಕ್ರಿಯಾ ಇರತಿತ್ತ? ಈ ನುಡಿಮುತ್ತುಗಳನ್ನ ಬಳಸಿ ಅವರು ಇದನ್ನ ಸಮರ್ಥಿಸಿ ಕೊಳ್ಳತಿದ್ದರೇನು?

ಇಷ್ಟರಾಗ ನಮ್ಮ ಮಹಾಮಹಿಮ ಪಂತ ಪ್ರಧಾನರ ಬಾಯಿಯಿಂದ ಒಂದು ಪವಿತ್ರ ವಾಕ್ಯ ಉದರಿ ಬಿದ್ದದ. ಅದೇನಂದರ ‘ಹಿಂಸಾಕೃತ್ಯಗಳನ್ನ ಮಾಡಲಿಕ್ಕೆ ಹತ್ತವರು ಯಾರು ಅಂತ ಎಲ್ಲಾರಿಗೂ ಗೊತ್ತದ. ಅವರವರು ಹಾಕ್ಕೊಂಡ ಅರಿವಿಯಿಂದ ಗೊತ್ತಾಗೇ ಬಿಡತದ’ ಅಂತ ಅಪರೂಪಕ್ಕ ಒಂದು ಖರೇ ಹೇಳ್ಯಾರ. ಯಾಕಂದರ ಹೊಡದವರು, ಬಡದವರು, ಖಾಕಿ ಸಮವಸ್ತ್ರ ಹಾಕಿಕೊಂಡ ಪೊಲೀಸರು. ದೆಹಲಿ ಪೋಲೀಸರು ದೆಹಲಿ ರಾಜ್ಯದ ಕೆಳಗ ಕೆಲಸ ಮಾಡೋರಲ್ಲ. ನೇರವಾಗಿ ಕೇಂದ್ರ ಸರಕಾರದ ಕೈಕೆಳಗ ದುಡಿಯೋರು. ಅವರ ಚಕ್ರವರ್ತಿ ಅಂದರ ಕೇಂದ್ರದ ಗೃಹ ಮಂತ್ರಿ. ಹಿಂಗಾಗಿ ಹಿಂಸೆಯನ್ನ ಆರ್ಡರ್ ಮಾಡಿದವರು ಯಾರು ಅಂತ ಎಲ್ಲಾರಿಗೂ ಗೊತ್ತಾಗತದ.

ಇನ್ನ ಕೆಲವರು ಟೀ ಷರ್ಟು – ಜೀನ್ಸ ಪ್ಯಾಂಟ್ ಹಕ್ಕೊಂಡು, ಪೊಲೀಸರ ಹೆಲ್ಮೇಟು, ಮುಖದ ಮ್ಯಾಲೆ ಮುಸುಗು ಹಾಕಿಹೊಂಡು ಸಣ್ಣಸಣ್ಣ ಹುಡುಗಿಯರನ್ನು ಹುಡುಕಿಹುಡುಕಿ ದೊಡ್ಡ ದೊಡ್ಡ ಲಾಠಿ ತೊಗೊಂಡು ಹೊಡದಾರ. ಅವರ ಅರಿವಿ ನೋಡಿದರ ಅವರು ಯಾರು ಅಂತ ಇನ್ನೋ ಗೊತ್ತಾಗವಲ್ಲದು. ಇನ್ನೇನು ಇನ್ನೊಂದು ಸ್ವಲ್ಪ ದಿವಸದಾಗ ಗೊತ್ತಾಗತದ. ನಮ್ಮ ನಾಯಕರು ದಾಡಿ- ಪೈಜಾಮಾ- ಬುರ್ಖಾ ಮನಸಿನ್ಯಾಗ ಇಟಗೊಂಡು ಹೇಳಿದ್ದರೋ ಏನೋ. ನಮಗಂತೂ ಅಂಥಾ ಅರಿವಿ ಕಾಣಲಿಲ್ಲ.

ಇಷ್ಟು ಎಲ್ಲದಕ್ಕೂ ಕಾರಣ ಏನು? ಹೊರಗಿನಿಂದ ಬಂದವರನ್ನು ಹೊರಗ ಹಾಕೋ ಹೆಸರಿನ್ಯಾಗ ನಮ್ಮ ಅಣ್ಣತಮ್ಮಂದಿರನ್ನ ಬ್ಯಾರೆ ಮಾಡೋ ಪಿತೂರಿ ನಡದದ.

ಭಾರತದ ವಿಭಜನಾ 1947 ಆದಾಗ ಹಾಗೂ ಪಾಕಿಸ್ತಾನದ ವಿಭಜನಾ 1971 ರೊಳಗ ಭಾಳ ಕುಟುಂಬ ಈ ನಾಲ್ಕೂ ದೇಶಗಳ ಗಡಿ ದಾಟಿ ಹೋದರು, ಬಂದರು. ಅವರು ಈಗ 50-70 ವರ್ಷಗಳಿಂದ ಈ ದೇಶದ ನೀರು ಕುಡದು, ಇಲ್ಲೆ ಮಣ್ಣಿನ್ಯಾಗ ಬೆವರು ಸುರಿಸಿಕೊಂಡು, ದುಡಕೊಂಡು, ದುಃಖ ಪಟಕೊಂಡು ಇದ್ದಾರ. ಇಷ್ಟು ವರ್ಷ ಆಗಲಾರದ ಈ ನಿರಾಶ್ರಿತರ ಸಮಸ್ಯಾ ಈಗ ಬಂದಂಗ ಕಾಣತದ. ಯಾಕಂದರ ಈ ದೇಶದಾಗ ಯಾವ ಸಮಸ್ಯೆನೂ ಇಲ್ಲ ಈಗ. ಬಡತನಾ ಇಲ್ಲ, ಹಸಿವು ಇಲ್ಲಾ, ನಿರಕ್ಷರತೆ ಇಲ್ಲಾ, ದೌರ್ಜನ್ಯ ಇಲ್ಲ, ಬಾಲ್ಯವಿವಾಹ ಇಲ್ಲ, ದೇವದಾಸಿ ಪದ್ಧತಿ ಇಲ್ಲ, ಬಾಲ ಕಾರ್ಮಿಕರು ಇಲ್ಲ, ಯಾವುದೇ ರೋಗ – ರುಜಿನ ಇಲ್ಲ, ಎಲ್ಲರಿಗೂ ಬೇಕಾದಷ್ಟು ಶಿಕ್ಷಣ ಸಿಕ್ಕದ, ಸಾಕಷ್ಟು ಉದ್ಯೋಗ ಅವ. ನಮ್ಮ ಆರ್ಥಿಕತೆ ಐದೋ – ಆರೋ ಟ್ರಿಲಿಯನ್ ಡಾಲರ್ ಕಡೆ ದಾಪುಗಾಲು ಹಾಕಲಿಕ್ಕೆ ಹತ್ತೇದ. ಹಿಂಗಾಗಿ ಇವೆಲ್ಲಾ.

ಹಿಂಗಾಗಿ ನಾಗರಿಕತೆ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ ಅಂತೆಲ್ಲಾ ಅವರನ್ನ ಹುಡುಕೋದು, ಕುತಗೀ ಹಿಡದು ಹೊರಗ ಹಾಕೋದು ಇಂಥಾ ವಿಚಾರ ನಡದದ. ಇದು ಉಚ್ಚ ಶಿಕ್ಷಣ ಪಡದ ವಿದ್ಯಾರ್ಥಿಗಳಿಗೆ ಮನಸು ಬರವಲ್ಲತು. ಹಿಂದೂ – ಮುಸ್ಲಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರಾಣದ ಆಹುತಿ ಪಡದ ಮ್ಯಾಲೆ ಈ ದೇಶ ಪ್ರಜಾತಂತ್ರ ಆಗೇದ. ಈಗ ಅದನ್ನ ಧರ್ಮದ ಆಧಾರದ ಮ್ಯಾಲೆ ಒಡದು ಹಾಕಿದರ ಜನಸತ್ತಾ ಹೋಗಿ ಜನಾ ಸತ್ತಾರ ಆಗತದ ಅಂತ ಅವರ ಚಿಂತಿ.

ಅದಕ್ಕೆ ಈ ದೇಶ ಬರೇ ಹಿಂದೂಗಳದ್ದಲ್ಲ. ಬರೇ ಮೇಲುಜಾತಿಯವರದಲ್ಲ, ಬರೇ ಸಾಹುಕಾರರದ್ದಲ್ಲ. ಬರೇ ಗಂಡಸರದಲ್ಲ, ಬರೇ ಅಧಿಕಾರಸ್ಥರದಲ್ಲ, ಬರೇ ಜಮೀನುದಾರರು, ವ್ಯಾಪಾರಸ್ಥರು, ಕಾರಖಾನಿ ಮಾಲಿಕರದ್ದಲ್ಲ, ಇದು ಎಲ್ಲರಿಗೂ ಸೇರಿದ್ದು. ಐದು ಸಾವಿರ ವರ್ಷದ ಶ್ರೀಮಂತ ಬಹು ಸಾಂಸ್ಕøತಿಕ ನಾಗರಿಕತೆಯನ್ನು ಬರೇ ಐದು ವರ್ಷ ಆಳಲಿಕ್ಕೆ ಪರವಾನಗಿ ಪಡದು ಬಂದಿರೋರು ಹಾಳು ಮಾಡಬಾರದು ಅಂತ ಅವರ ಆಸೆ. ನಮ್ಮ ಯಾರನ್ನೂ ಸಾಕ್ಷ್ಯ, ಪ್ರಮಾಣ, ಗುರುತು, ಪುರಾವೆ ಕೇಳಬ್ಯಾಡರಿ. ಅಣ್ಣ- ತಮ್ಮಂದಿರಿಗೆ ಅಣ್ಣಾ ತಮ್ಮನಂಗ ಇರಲಿಕ್ಕೆ ಬಿಡರಿ ಅಂತ ಅವರ ಬೇಡಿಕೆ.

ಈ ಗುಂಗಿನ್ಯಾಗ ಶಾಯರಿ ಸರದಾರ ರಾಹತ್ ಇಂದೋರಿ ಅವರ ಒಂದು ಗಜಲ್ ಕೇಳೋಣು. ಏನಂತೀ?

ಏನು ?
ವಿರೋಧ ಮಾಡ್ತಾರಂತ?
ಮಾಡ್ಲಿ ಬಿಡು,
ಅವರೇನೀಗ
ನಮಗ ಜೀವಕ್ಕ ಜೀವಾ
ಕೊಡವರದಾರು? ಇಲ್ಲಲಾ?

ಇದೆಲ್ಲಾ ಬರೇ ಹೊಗಿ
ಬರೇ ಒಣಾ ಧೂಳು-ಹೊಗಿ ಅಷ್ಟ.
ಇದನ್ನ ಏನರ
ಮುಗಲು ಅಂತ ತಿಳ್ಕೊಂಡೀಯೇನು ಮತ್ತ?
ಇಲ್ಲಲಾ?

ಒಮ್ಮೆ ಬೆಂಕಿ ಬಿತ್ತೆಪಾ ಅಂದರ
ಕಿವಿ ತುಂಬುವಂಗ
ಕೆಟ್ಟ ಸುದ್ದಿ ಬರ್ತಾವ ನೋಡು
ಮನಿ ಎಲ್ಲಾ ಉರಕೊಂಡು ಬಿದ್ದಿದ್ದು,
ಬಾಯಿಬಾಯಿ ಬಡಕೊಂಡು ಅಳೋದು,
ಗೊತೈತಿಲ್ಲ?
ಇಲ್ಲೇನು ಬರೇ
ನಮ್ಮವ ಮನೀ
ಅದಾವೇನು?
ಇಲ್ಲಲಾ?

ನೋಡಪಾ ಯಪ್ಪಾ
ನಮ್ಮ ಬಾಯಾಗ ಬಂದದ್ದ ಮಾತೆಲ್ಲಾ
ಖರೇನ ಇರತೇತಿ
ನಮ್ಮ ಬಾಯಾಗೇನರ
ನಿಮ್ಮ ನಾಲಿಗಿ ಐತೇನ?
ಇಲ್ಲಲಾ?

ನಮ್ಮ ದುಷ್ಮನಗಳೇನೂ
ಕಮ್ಮಿ ಇಲ್ಲ ಅನ್ನೋದು
ನನಗ ಗೊತೈತಿ
ಆದರ ನಮ್ಮಂಗ ಅವರೇನು
ಮುಟಿಗ್ಯಾಗ
ಜೀವಾ ಇಟಗೊಂಡ
ಹೊಂಟಾರೇನು?
ಇಲ್ಲಲಾ?

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ನಾಳೆ ಇರಂಗಿಲ್ಲಾ
ಅವರು ಇಲ್ಲೆ
ಬಾಡಗೀಲೆ ಇರಾಕ ಬಂದಾವ್ರು
ಏನು ಈ ಮನಿ
ಇವರ ಸ್ವಂತದ್ದೇನು?
ಅಲ್ಲಲಾ?

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ
ಈ ಮಣ್ಣು
ಯಾರದರ
ಅಪ್ಪನ ಮನೀದೇನು
ಈ ಹಿಂದುಸ್ತಾನಾ?
ಅಲ್ಲಲಾ?

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....