Homeಕರ್ನಾಟಕಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ

ಅಭ್ಯರ್ಥಿ ಆಯ್ಕೆ: ಗೋತಾ ಹೊಡೆದ ಬಿಜೆಪಿಯ ಅವಸರದ ಪ್ರಯೋಗ

- Advertisement -
- Advertisement -

ಮೇ ಹತ್ತರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಒಟ್ಟು 224 ಸ್ಥಾನಗಳ ಪೈಕಿ 212 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ ಬಳಿಕ ಭುಗಿಲೆದ್ದ ಬಂಡಾಯದಿಂದ ಆಳುವ ಬಿಜೆಪಿಯು ಕಂಗಾಲಾಗಿದೆ. ಪಕ್ಷದ ಟಿಕೆಟ್ ಸಿಗದಿರುವ ಆಕಾಂಕ್ಷಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುವುದು ಪ್ರತಿಯೊಂದು ಚುನಾವಣೆಯಲ್ಲಿ ಮತ್ತು ಪ್ರತಿಯೊಂದು ಪಕ್ಷದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿಯು ಎದುರಿಸುತ್ತಿರುವಂತದ್ದು ’ಸಾಮಾನ್ಯ’ ಎಂದು ಪರಿಗಣಿಸಲಾಗುವುದಕ್ಕಿಂತ ಖಂಡಿತವಾಗಿಯೂ ಹೆಚ್ಚೇ ಆಗಿದೆ ಮತ್ತು ಪಕ್ಷದೊಳಗಿನ ಕೆಲವು ನಿರ್ದಿಷ್ಟ ಅಲ್ಲೋಲಕಲ್ಲೋಲಗಳಿಗೆ ಇದು ರೋಗಲಕ್ಷಣದಂತೆ ಕಂಡುಬರುತ್ತಿದೆ.

ಈ ಬಾರಿ ಬಿಜೆಪಿಯು ಯಥಾಸ್ಥಿತಿಯನ್ನು ಮುರಿದು, ತನ್ನ ಅಭ್ಯರ್ಥಿಗಳ ಪಟ್ಟಿಯು ಹಲವಾರು ಹೊಸಮುಖಗಳೊಂದಿಗೆ ಅಚ್ಚರಿಯನ್ನು ಹೊಂದಿರಲಿದೆ ಎಂಬ ಭಾವನೆ ಮೂಡಿಸಲು ಯತ್ನಿಸಿತ್ತು. ಆದರೆ, ಅಂತಿಮವಾಗಿ ಬಹು ನಿರೀಕ್ಷಿತ ಪಟ್ಟಿಯ ಘೋಷಣೆಯಾದಾಗ ಅದು ಆರಂಭಿಕ ನಿರೀಕ್ಷೆಗಿಂತ ವ್ಯತಿರಿಕ್ತವಾಗಿತ್ತು. ಕೆಲವು ಹೊಸಮುಖಗಳಿದ್ದು, 16 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಯಿತು. ಆದರೆ, ಈ ಬದಲಾವಣೆಗಳು, ಕರ್ನಾಟಕದಲ್ಲಿ ಪ್ರಯೋಗ ಮಾಡುವಲ್ಲಿ ಬಿಜೆಪಿಯ ಶಕ್ತಿಗೆ ಬದಲಾಗಿ, ಅದರ ಸೀಮಿತತೆಯನ್ನು ಹೆಚ್ಚಾಗಿ ಪ್ರತಿಫಲಿಸುತ್ತವೆ. ಗಂಭೀರವಾದ ರಾಚನಿಕ ಅಥವಾ ಸಂಘಟನಾತ್ಮಕ ದೌರ್ಬಲ್ಯಗಳು ಮತ್ತು ಆಳವಾದ ಗುಂಪುಗಾರಿಕೆಯ ಬಿರುಕುಗಳನ್ನು ಹೊಂದಿರುವ ರಾಜ್ಯದಲ್ಲಿ ಪಕ್ಷವು ಸಾಹಸವನ್ನು ತೋರಲು ಅವಸರ ಮಾಡಿರುವಂತೆ ಕಾಣುತ್ತದೆ.

ದಾಖಲೆಯಲ್ಲಿ ಅಭ್ಯರ್ಥಿಗಳ ಯಾದಿಯು ಹಲವು ಹೊಸ ಮುಖಗಳನ್ನು ಹೊಂದಿದೆಯಾದರೂ, ಅವರಲ್ಲಿ ಹೆಚ್ಚಿನವರನ್ನು, ಕಳೆದ ಬಾರಿ ಪಕ್ಷವು ಸೋತಿದ್ದ ಅಥವಾ ಈ ಬಾರಿಯೂ ಗೆಲ್ಲುವ ಆಸೆ ಹೆಚ್ಚೇನೂ ಇಲ್ಲದ ಕ್ಷೇತ್ರಗಳಲ್ಲಿ ನಿಲ್ಲಿಸಲಾಗಿದೆ. ಹೆಚ್ಚುಕಡಿಮೆ ಇಡೀ ಹಳೆ ಮೈಸೂರು ಪ್ರದೇಶದ ಪರಿಸ್ಥಿತಿ ಇದಾಗಿದೆ. ಹೊಸಮುಖಗಳೆಂದು ಪರಿಗಣಿಸಲಾದವರಲ್ಲಿ, ಹಾಲಿ ಶಾಸಕರು ನಿವೃತ್ತಿ ಘೋಷಿಸಿರುವ ಕ್ಷೇತ್ರಗಳಲ್ಲಿ ನಿಲ್ಲಿಸಲಾಗಿರುವವರನ್ನೂ ಸೇರಿಸಲಾಗಿದೆ. (ಉದಾಹರಣೆಗೆ: ಉಡುಪಿ ಜಿಲ್ಲೆಯ ಕುಂದಾಪುರ ಕ್ಷೇತ್ರ.) ಅಥವಾ ಹಾಲಿ ಶಾಸಕರು ಗಂಭೀರವಾದ ಆರೋಪಗಳಲ್ಲಿ ಸಿಲುಕಿಹಾಕಿಕೊಂಡು ಅವರನ್ನು ಮತ್ತೆ ನಿಲ್ಲಿಸಲು ಪಕ್ಷಕ್ಕೆ ಸಾಧ್ಯವಾಗದಂತಹ ಕ್ಷೇತ್ರಗಳಲ್ಲಿ ನಿಂತವರು. (ಉದಾಹರಣೆಗೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರ.) ಅದಲ್ಲದೇ, ಹೊಸಮುಖಗಳಲ್ಲಿ ಇಬ್ಬರು ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದವರು ಮತ್ತೊಬ್ಬರು ಬಹುಕೋಟಿ ಹಣಕಾಸು ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಸರಕಾರಿ ಅಧಿಕಾರಿ ಸೇರಿದ್ದಾರೆ. ಯಾದಿಯಲ್ಲಿ ’ಜಾತಿ ಸಮತೋಲನ’ ಕಾಯ್ದುಕೊಳ್ಳಲು ಅವರನ್ನು ಸೇರಿಸಲಾಗಿದೆ ಎಂದು ಪಕ್ಷವು ಸಮರ್ಥಿಸಿಕೊಂಡಿದೆ.

ಅದೇ ರೀತಿಯಲ್ಲಿ ಹಾಲಿ ಶಾಸಕರನ್ನು ಕೈಬಿಟ್ಟಿರುವ ಬಗ್ಗೆ ಬಹಳಷ್ಟನ್ನು ಹೇಳಿಕೊಳ್ಳಲಾಗುತ್ತಿದೆಯಾದರೂ, ವಾಸ್ತವವು ಬಹಳಷ್ಟು ಬೇರೆಯಾಗಿದೆ. ಈ ಯಾವ ಪ್ರಕರಣಗಳಲ್ಲೂ ಪಕ್ಷವು ಒಂದು ತಾತ್ವಿಕ ಗಟ್ಟಿ ನಿಲುವಿನಿಂದ ಅಪಾಯವನ್ನು ಎಳೆದುಕೊಂಡಂತೆ ಕಾಣುವುದಿಲ್ಲ. ಕೆಲವು ಕಡೆ ಕೈಬಿಡಲಾದ ಹಾಲಿ ಶಾಸಕರು ಪಕ್ಷವು ಕರಾವಳಿ ಕರ್ನಾಟಕದಲ್ಲಿ ಇರುವಂತೆ ಪಕ್ಷಕ್ಕೆ ಗೆಲ್ಲುವ ಆತ್ಮವಿಶ್ವಾಸ ಇರುವಂಥ ಕ್ಷೇತ್ರಗಳಿಗೆ ಸೇರಿದವರು ಅಥವಾ ಪಕ್ಷದ ಅಭ್ಯರ್ಥಿಗಳು ಮತ್ತೆ ಆಯ್ಕೆಯಾಗುವ ಅತ್ಯಲ್ಪ ಸಾಧ್ಯತೆ ಇರುವ ಕ್ಷೇತ್ರಗಳಿಗೆ ಸೇರಿದವರು. ಪಕ್ಷದ ಮಾಧ್ಯಮ ನಿರ್ವಾಹಕರು ಬಿತ್ತಲು ಯತ್ನಿಸಿದಂತೆ ಈ ಇಡೀ ’ದಿಟ್ಟ, ಹೊಸ ಪ್ರಯೋಗ’ವು ಈ ರೀತಿಯಲ್ಲಿ ನೆಲಕಚ್ಚಿದೆ. ಆದರೆ, ಇದಕ್ಕಿಂತ ಹೆಚ್ಚು ಕುತೂಹಲಕಾರಿಯಾದುದೆಂದರೆ, ಈ ಸೀಮಿತವಾದ ಪ್ರಯೋಗವು ಕೂಡಾ ಪಕ್ಷದಲ್ಲಿ ಉಂಟುಮಾಡಿರುವ ಬಂಡಾಯದ ಪ್ರಮಾಣ ಮತ್ತು ಅದರ ತೀವ್ರತೆ. ಬಿಜೆಪಿಯಾಗಲೀ, ಕರ್ನಾಟಕದ ಬೇರೆ ಯಾವುದೇ ಪಕ್ಷವಾಗಲೀ ಇಲ್ಲಿಯವರೆಗೆ, ಬಿಜೆಪಿಯು ಈಗ, ಪಕ್ಷದ ಅಭ್ಯರ್ಥಿಗಳ ಹೆಸರು ಬಹಿರಂಗವಾದ ಬಳಿಕ ಎದುರಿಸುತ್ತಿರುವ ಬಂಡಾಯ ಅಥವಾ ಹಿನ್ನಡೆಯನ್ನು ಎದುರಿಸಿಲ್ಲ.

ಪ್ರತಿಭಟನೆಗಳು, ರಾಜೀನಾಮೆಗಳು, ಪಕ್ಷಾಂತರಗಳು ಮತ್ತು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಬೆದರಿಕೆಗಳ ಕತೆಗಳು ಪಕ್ಷದ ನಾಯಕತ್ವವನ್ನು ಅಲುಗಾಡಿಸುತ್ತಿವೆ. ಕೆಲವು ಅಸಮಾಧಾಗೊಂಡಿರುವ ನಾಯಕರ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ಕಿತ್ತುಹಾಕುವ ಮತ್ತು ಪಕ್ಷದ ಧ್ವಜಕ್ಕೆ ಬೆಂಕಿಹಚ್ಚುವ ಮಟ್ಟಕ್ಕೂ ಹೋಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುನಗುಂದದಲ್ಲಿ ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿ

ಈ ಬಂಡಾಯವು ಕರ್ನಾಟಕದಲ್ಲಿ ಬಿಜೆಪಿ ವಿಸ್ತರಿಸುತ್ತಿರುವ ರೀತಿಗೆ ಸಂಬಂಧಿಸಿದಂತೆ ಗಂಭೀರವಾದ ವಿರೋಧಾಭಾಸವನ್ನು ಬಯಲುಮಾಡಿದೆ. ಬಿಜೆಪಿಯು ಒಂದು ಶಿಸ್ತುಬದ್ಧ ಪಕ್ಷ ಎಂಬ ರಾಷ್ಟ್ರವ್ಯಾಪಿ ಪ್ರತಿಪಾದನೆಗೆ ಹೊರತಾಗಿ, ಕರ್ನಾಟಕದಲ್ಲಿ ಅದು ಅತ್ಯಂತ ಅರ್ಥವಿಲ್ಲದ ಮಾತಾಗಿ, ಅಶಿಸ್ತಿನ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ಬೆಳೆದಿದೆ. ಹಲವು ವರ್ಷಗಳಿಂದ ಅದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತರು ಮತ್ತು ಅಧಿಕಾರದಾಹಿಗಳನ್ನು ಸೇರಿಸಿಕೊಳ್ಳುವುದರ ಮೂಲಕ ಇದನ್ನು ಸಾಧಿಸಿದೆ. ಪಕ್ಷದೊಂದಿಗೆ ಯಾವುದೇ ತಾತ್ವಿಕ ನಂಟಿಲ್ಲದ ಈ ನಾಯಕರು ಸಹಜವಾಗಿಯೇ ದಿಟ್ಟ ಪ್ರಯೋಗವನ್ನು ಮಾಡುವ ಬಿಜೆಪಿ ಹೈಕಮಾಂಡಿನ ಯೋಜನೆಗೆ ಸಹಕರಿಸಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿಯು ಬೀದಿಗಳಲ್ಲಿ ಪಕ್ಷದ ಕೋಮುವಾದಿ ಅಜೆಂಡಾವನ್ನು ನಡೆಸುವ ಹಲವಾರು ಹಿಂದುತ್ವದ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿದೆ. ಹಲವಾರು ಗಂಭೀರ ಪ್ರಕರಣಗಳನ್ನು ತಮ್ಮ ಮೇಲೆ ಎಳೆದುಕೊಂಡಿರುವ ಈ ನಾಯಕರು ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಮೂಲಕ ಕೊಳ್ಳೆಯಲ್ಲಿ ತಮ್ಮ ಪಾಲು ಕೇಳುತ್ತಿದ್ದಾರೆ.

ಇವೆಲ್ಲವುಗಳಿಗಿಂತ ಹೆಚ್ಚಾಗಿ ಪಕ್ಷವು 2008 ಮತ್ತು 2018ರಲ್ಲಿ ಬಹುಮತ ಪಡೆಯಲು ವಿಫಲವಾದಾಗ, ಸರಕಾರ ರಚಿಸಲು ಬೇಕಾದ ಸಂಖ್ಯಾಬಲ ಕ್ರೋಢೀಕರಿಸಲು ವಿರೋಧ ಪಕ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರವನ್ನು ಪ್ರಚೋದಿಸಿತ್ತು. ಇಂಥ ವಲಸಿಗರು ಮತ್ತು ಬೀದಿ ಮಟ್ಟದ ಮುಖಂಡರೇ ಬಹುತೇಕ ರಾಜ್ಯದಾದ್ಯಂತ ಪಕ್ಷದ ಮಧ್ಯಮ ಹಂತದ ನಾಯಕತ್ವವನ್ನು ವಹಿಸಿದ್ದು ಇವರುಗಳ ಮೇಲೆ ಬಿಜೆಪಿ ತೀವ್ರ ಅವಲಂಬಿತವಾಗಿದೆ. ಇಂಥ ಅಶಿಸ್ತಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾಯಕತ್ವವು ಒಂದು ಸಣ್ಣಮಟ್ಟದ ’ಶಿಸ್ತಿನ ಟಿಕೆಟ್ ಹಂಚಿಕೆ’ಗೆ ಹೊರಟಾಗ ಅದು ನಿರೀಕ್ಷಿತವಾಗಿಯೇ ಹಿಂದೇಟು ಹೊಡೆಯಿತು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಯೋಗ ಮಾಡುವ ಬಿಜೆಪಿಯ ಯೋಜನೆಯು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ತೀರಾ ಅವಲಂಬಿತವಾಗಿದೆ ಎಂಬ ವಾಸ್ತವದ ಜೊತೆಯೂ ಪಕ್ಷ ರಾಜಿ ಮಾಡಿಕೊಳ್ಳಬೇಕಾಯಿತು. ಅವರ ಹೊರತು ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ತನ್ನ ಸಂಬಂಧಿಕರು ಮಾತ್ರವಲ್ಲದೆ, ತನ್ನದೇ ಆದ ನಾಯಕರು ಮತ್ತು ಕಾರ್ಯಕರ್ತರ ಜಾಲವನ್ನು ಹೊಂದಿರುವ ಹಳೆಯ ಹುಲಿ ಯಡಿಯೂರಪ್ಪ ಅವರು ಅಭ್ಯರ್ಥಿ ಯಾದಿಯಲ್ಲಿ ತನ್ನ ಬೆಂಬಲಿಗರಿಗೆ ಸಾಕಷ್ಟು ಪ್ರಾತಿನಿಧ್ಯ ದೊರಕಿಸಿಕೊಡಲು ತೀವ್ರ ಚೌಕಾಶಿ ಮಾಡಿದರು.

ಇದೇ ಹೊತ್ತಿನಲ್ಲಿ ’ಆಪರೇಷನ್ ಕಮಲ’ದ ವೇಳೆ ಬಿಜೆಪಿ ಸೇರಿದ್ದ ಪ್ರತಿಪಕ್ಷಗಳ ಪಕ್ಷಾಂತರಿಗಳು ಬಿಜೆಪಿಯಲ್ಲಿ ಚೌಕಾಶಿ ಮಾಡಬಲ್ಲ ಬಲವಾದ ಗುಂಪಾಗಿ ಬೆಳೆದರು. ತಮಗೆ ಮಾತ್ರವಲ್ಲದೇ, ತಮ್ಮ ಕೆಲವು ಬೆಂಬಲಿಗರಿಗೂ ಅವರು ಟಿಕೆಟ್ ಬೇಡಿಕೆಯಿಟ್ಟರು. ಈ ಗುಂಪಿನಲ್ಲಿ ಅತ್ಯಂತ ಬಲವಾದ ಧ್ವನಿ ಎಂದರೆ ಬೆಳಗಾವಿಯ ರಮೇಶ್ ಜಾರಕಿಹೊಳಿ. ಅವರು ಹೆಚ್ಚು ಕಡಿಮೆ ಪಕ್ಷವನ್ನೇ ಬ್ಲಾಕ್‌ಮೇಲ್ ಮಾಡಿ, ತಮಗೆ ಮಾತ್ರವಲ್ಲದೇ, ಪಕ್ಷಾಂತರಿಗಳು ಮತ್ತು ಅವರ ಬೆಂಬಲಿಗರಿಗೂ ಟಿಕೆಟ್ ಸಿಗವಂತೆ ಮಾಡಲು ಶಕ್ತರಾದರು. ನೆರೆಯ ಕ್ಷೇತ್ರಗಳಲ್ಲಿ ಕೂಡಾ ಅವರ ಪ್ರಭಾವವನ್ನು ಪರಿಗಣಿಸಿ ಪಕ್ಷವು ಅವರ ಒತ್ತಡಕ್ಕೆ ಬಹುತೇಕ ಮಣಿಯಬೇಕಾಯಿತು. ಆದರೆ, ಇದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊರಹೋಗುವುದಕ್ಕೆ ಕಾರಣವಾಯಿತು. ಯಾರ ಎದುರು ಪ್ರಬಲ ಬಿಜೆಪಿಯೇ ದುರ್ಬಲವಾಗಿ ಕಂಡಿತೋ, ಅಂತಾ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದ ಕಾರಣದಿಂದ ರಾಜೀನಾಮೆ ನೀಡಬೇಕಾಗಿ ಬಂದಿದ್ದ ಮಾಜಿ ಸಚಿವ.

ಕೊನೆಯದಾಗಿ, ಒಂದು ರಾಜಿಯಾಗಿ ಮೂಡಿಬಂದ ಈ ಅಭ್ಯರ್ಥಿ ಪಟ್ಟಿಯು ಪ್ರತಿಯೊಂದು ಬಣದಲ್ಲಿಯೂ ಅಸಮಾಧಾನ ಉಂಟುಮಾಡಿದೆ. ದೊಡ್ಡದಾಗಿ ಕಣ್ಣಿಗೆ ರಾಚುವುದೆಂದರೆ, ಕರ್ನಾಟಕದ ಚುನಾವಣೆಗಳ ನೇರ ಉಸ್ತುವಾರಿ ವಹಿಸಿಕೊಂಡಿರುವ ಅತ್ಯಂತ ಪ್ರಬಲ ಹೈಕಮಾಂಡಿನ ಇಮೇಜು ಕೂಡಾ, ತನ್ನ ಇಚ್ಚೆಯಂತೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಲೀ, ಬಂಡಾಯವನ್ನು ಶಮನ ಮಾಡುವುದಕ್ಕಾಗಲೀ ಶಕ್ತವಾಗಲಿಲ್ಲ. ನಾಯಕತ್ವದ ಒಂದು ಗುಂಪು ಅಭ್ಯರ್ಥಿ ಯಾರೇ ಆಗಿದ್ದರೂ, ಬಂಡಾಯ ಅಭ್ಯರ್ಥಿಗಳು ಇದ್ದರೂ ಪಕ್ಷದ ಚಿಹ್ನೆಗೆ ಮತಹಾಕುವ ಬೆಂಬಲಿಗರ ನೆಲೆಯನ್ನು ಕಟ್ಟಿದ್ದೇವೆ ಎಂದು ನಂಬಿದ್ದು, ನಿಶ್ಚಿಂತವಾಗಿದೆ. ಹಾಗಿದ್ದರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಂತಹ ಶುದ್ಧ ದಾಖಲೆ ಹೊಂದಿರುವವರು ಮತ್ತು ಪಕ್ಷದ ನಿಷ್ಠಾವಂತರನ್ನು ಬಲಿ ಕೊಟ್ಟು ಗಂಭೀರ ಆರೋಪ ಹೊಂದಿರುವವರು ಮತ್ತು ಪಕ್ಷಾಂತರಿಗಳು ಅಭ್ಯರ್ಥಿಗಳ ಯಾದಿಯಲ್ಲಿ ಸ್ಥಾನ ಪಡೆದಿರುವುದು ಏಕೆ ಎಂಬುದು ಬಿಜೆಪಿಯ ಈ ತೋಪಾಗಿರುವ ಪ್ರಯೋಗದ ಇನ್ನೊಂದು ಅರ್ಥವಾಗದ ಅಂಶ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...