“ನಾಳೆ ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ” ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಇದೆ. ಪಕ್ಷವನ್ನು ಶುದ್ದೀಕರಣಗೊಳಿಸುವುದು ನನ್ನ ಉದ್ದೇಶ. ಈ ಉದ್ದೇಶವನ್ನು ಮೋದಿ, ಅಮಿತ್ ಶಾ ಅವರೂ ಒಪ್ಪಬಹುದು. ನಾನು ಒಪ್ಪಿಸುತ್ತೇನೆ ಎಂದಿದ್ದಾರೆ.
ಅಮಿತ್ ಶಾ ಅವರು ನನಗೆ ಕರೆ ಮಾಡಿದ್ದರು. ನಾನು ನನ್ನ ಉದ್ದೇಶ ಹೇಳಿದ್ದೇನೆ. ಅವರು ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಹೇಳಿದರು. ನಾನು ಹಿಂದುತ್ವದ ಬಗ್ಗೆ, ಹಿಂದುಳಿದವರಿಗೆ ಟಿಕೆಟ್ ಸಿಗದ ಬಗ್ಗೆ ಮತ್ತು ಪಕ್ಷದಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಹೋಗಲು ಹೇಳಿದ್ದಾರೆ. ನಾನು ಯಾವುದೇ ಬೇಡಿಕೆ ಇಡದಂತೆ ಮನವಿ ಮಾಡಿದ್ದೇನೆ. ಅವರು, ಬೇಡಿಕೆ ಅಲ್ಲ ಪ್ರಾರ್ಥನೆ ಎಂದಿದ್ದಾರೆ. ದಯವಿಟ್ಟು ನೀವು ನನ್ನ ಬಳಿ ಪ್ರಾರ್ಥನೆ ಮಾಡಿಬೇಡಿ ಎಂದಿದ್ದೇನೆ. ನಾನು ದೆಹಲಿಗೆ ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಟಿಕೆಟ್ ತನ್ನ ಮಗ ಕಾಂತೇಶ್ಗೆ ಸಿಗುವ ನಿರೀಕ್ಷೆಯಲ್ಲಿ ಈಶ್ವರಪ್ಪ ಇದ್ದರು. ಆದರೆ, ಬಿಜೆಪಿ ಹೈಕಮಾಂಡ್ ಕಾಂತೇಶ್ ಬದಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಕೋಪಗೊಂಡಿರುವ ಈಶ್ವರಪ್ಪ, ತನ್ನ ಮಗನಿಗೆ ಟಿಕೆಟ್ ತಪ್ಪಿಸಲು ಯಡಿಯೂರಪ್ಪ ಮತ್ತು ಅವರ ಮಗನೇ ಕಾರಣ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ : ‘ಒಂದು ಪೈಸೆ ಪರಿಹಾರ ನೀಡಿಲ್ಲ; ಕನ್ನಡಿಗರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ..’; ಅಮಿತ್ ಶಾ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟ ಸಿಎಂ