ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಗಳಾಗುತ್ತಿರುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಈ ವರ್ಷ ಗರಿಷ್ಠ ಆರು ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಐಎಎಸ್ ಅಧಿಕಾರಿಗಳಾಗುವ ಸಾಧ್ಯತೆ ಇದೆ ಎಂದು ‘siasat.com’ ಎಂದು ವರದಿ ಮಾಡಿದೆ.
2022ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಯುಪಿಎಸ್ಸಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ವಿವರಗಳನ್ನು ಪ್ರಕಟಿಸಿದೆ.
ಈ ವರ್ಷ ಆರು ಮುಸ್ಲಿಂ ಅಭ್ಯರ್ಥಿಗಳು ಐಎಎಸ್ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದ ನಾಗರಿಕ ಸೇವಾ ಪರೀಕ್ಷೆಯ ಸೇವಾ ಹಂಚಿಕೆ ದತ್ತಾಂಶವನ್ನು ವಿಶ್ಲೇಷಿಸಿದಾಗ, ಈ ವರ್ಷ ಐಎಎಸ್ ಅಧಿಕಾರಿಗಳಾಗಲು ಕೇವಲ ಆರು ಮುಸ್ಲಿಂ ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಎಂದು ಕಂಡುಬಂದಿದೆ.
ಆಯ್ಕೆಯಾಗಲಿರುವ ಆರು ಮಂದಿ ಮುಸ್ಲಿಂ ಅಭ್ಯರ್ಥಿಗಳು
- ಸಾಮಾನ್ಯ ವರ್ಗದ ಅಡಿಯಲ್ಲಿ ವಸೀಮ್ ಅಹ್ಮದ್ ಭಟ್ (ಅಖಿಲ ಭಾರತ ರ್ಯಾಂಕ್-7)
- ಸಾಮಾನ್ಯ ವರ್ಗದ ಅಡಿಯಲ್ಲಿ ನವೀದ್ ಅಹ್ಸಾನ್ ಭಟ್ (ರ್ಯಾಂಕ್- 84)
- ಒಬಿಸಿ ವರ್ಗದ ಅಡಿಯಲ್ಲಿ ಅಸದ್ ಜುಬೇರ್ (ರ್ಯಾಂಕ್-86)
- ಒಬಿಸಿ ವರ್ಗದ ಅಡಿಯಲ್ಲಿ ಆಕಿಪ್ ಖಾನ್ (ರ್ಯಾಂಕ್-268)
- ಒಬಿಸಿ ವರ್ಗದ ಅಡಿಯಲ್ಲಿ ಮೊಯಿನ್ ಅಹಮದ್ (ರ್ಯಾಂಕ್-296)
- ಎಸ್ಟಿ ವರ್ಗದ ಅಡಿಯಲ್ಲಿ ಮೊಹಮ್ಮದ್ ಇರ್ಫಾನ್ (ರ್ಯಾಂಕ್-476)
ಹಿಂದಿನ ವರ್ಷಗಳ ಅಂಕಿ-ಅಂಶ
2021ರಲ್ಲಿ ಒಟ್ಟು ಐಎಎಸ್ ಅಧಿಕಾರಿಗಳ ಪೈಕಿ ಕೇವಲ 1.6 ಪ್ರತಿಶತದಷ್ಟು ಮುಸ್ಲಿಮರಿದ್ದರು. 2020ಕ್ಕೆ ಹೋಲಿಸಿದರೆ ಶೇ. 4.4ರಷ್ಟು ಕುಸಿತವನ್ನು ಇಲ್ಲಿ ಕಾಣಬಹುದು. ಹಿಂದಿನ ವರ್ಷಗಳಲ್ಲಿಯೂ ಅಂತಹ ಏರಿಕೆ ಕಂಡುಬಂದಿಲ್ಲ. ಐಎಎಸ್ ಅಧಿಕಾರಿಗಳಾಗುವ ಮುಸ್ಲಿಮರ ಸಂಖ್ಯೆ ಶೇಕಡಾ 1 ರಿಂದ 5ರ ನಡುವೆ ಇತ್ತಷ್ಟೆ. ಮುಸ್ಲಿಂ ಜನಸಂಖ್ಯೆಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಕುಸಿತ ಇರುವುದನ್ನು ಕಾಣಬಹುದು. ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಶೇ. 17.22 ಮುಸ್ಲಿಮರಿದ್ದಾರೆ.
ಯುಪಿಎಸ್ ನಾಗರಿಕ ಸೇವೆಗಳ ಪರೀಕ್ಷೆಯ ಹಂತಗಳು
ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿದೆ. ಅವುಗಳೆಂದರೆ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ. ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಇತರ ಸರ್ಕಾರಿ ಪ್ರತಿಷ್ಠಿತ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಇದನ್ನೂ ಓದಿರಿ: ದೋಷಪೂರಿತ ರೈಲ್ವೆ ಸಿಗ್ನಲ್, ಕಳಪೆ ಹಳಿ ದುರಸ್ತಿ ಬಗ್ಗೆ 6 ತಿಂಗಳಲ್ಲಿ 2 ಸಲ ಎಚ್ಚರಿಸಲಾಗಿತ್ತು: ವರದಿ
ಸೀಮಿತ ಸಂಖ್ಯೆಯ ಖಾಲಿ ಹುದ್ದೆಗಳಿಗೆ ಲಕ್ಷಗಟ್ಟಲೆ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿರುವುದರಿಂದ ಈ ಹುದ್ದೆಗಳಿಗೆ ಪೈಪೋಟಿ ತೀವ್ರವಾಗಿರುತ್ತದೆ.
ಯುಪಿಎಸ್ಸಿ, ಸಿಎಸ್ಇಯಲ್ಲಿ ಮುಸ್ಲಿಂ ಅಭ್ಯರ್ಥಿಗಳ ಪ್ರಾತಿನಿಧ್ಯ ಕಡಿಮೆಯಿರುವುದು ಕಳವಳಕಾರಿ ವಿಷಯವಾಗಿದೆ. ಸರ್ಕಾರ ಮಾತ್ರವಲ್ಲದೆ ನಾಗರಿಕ ಸಮಾಜ ಸಂಸ್ಥೆಗಳು ಸಹ ಈ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ‘siasat.com’ ಅಭಿಪ್ರಾಯಪಟ್ಟಿದೆ.