Homeಮುಖಪುಟಮೋದಿ ಗೆಲುವು: ಈ ಪ್ರಶ್ನೆಗಳನ್ನು ಕೇಳದೆ ಇರಲಾದೀತೇ? - ಎ.ನಾರಾಯಣ್ ಲೇಖನ

ಮೋದಿ ಗೆಲುವು: ಈ ಪ್ರಶ್ನೆಗಳನ್ನು ಕೇಳದೆ ಇರಲಾದೀತೇ? – ಎ.ನಾರಾಯಣ್ ಲೇಖನ

ಮೋದಿ ಸಾಧನೆಯ ಬಲದಿಂದ ಗೆದ್ದರೋ ಅಥವಾ ತಂತ್ರ ಹೂಡಿ ಗೆದ್ದರೋ, ಮೋದಿ ಜನರನ್ನು ಮೋಡಿ ಮಾಡಿದ ನಾಯಕತ್ವದ ಗುಣಾವಗುಣಗಳೇನು? ಇಂತಹ ತಂತ್ರದ ಮೂಲಕ ಗೆಲ್ಲುವ ಇಂತಹ ನಾಯಕತ್ವದ ಮಾದರಿ ಭಾರತೀಯ ಪ್ರಜಾತಂತ್ರವನ್ನು ಯಾವ ದಾರಿಯಲ್ಲಿ ಮುನ್ನಡೆಸೀತು? ಈ ಪ್ರಶ್ನೆಗಳೆಲ್ಲಾ ಮುಖ್ಯವಾದರೂ ಅವುಗಳನ್ನು ಕೇಳುವ ವ್ಯವಧಾನವಾಗಲೀ, ಉತ್ಸಾಹವಾಗಲೀ ಸದ್ಯಕ್ಕೆ ಕಂಡು ಬರಲಾರದು

- Advertisement -
- Advertisement -

| ಎ.ನಾರಾಯಣ್ |

ಬಿಜೆಪಿ ನೇತೃತ್ವದ ಎನ್.ಡಿ.ಎ. 2019ರ ಲೋಕಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಿದೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಈ ಗೆಲುವಿನಿಂದಾಗಿ ಭಾರತದ ರಾಜಕೀಯದಲ್ಲಿ ನಿಜಕ್ಕೂ ಏನು ಗೆದ್ದಿತು, ಏನು ಸೋತಿತು ಎನ್ನುವ ಪ್ರಶ್ನೆ ಸದ್ಯಕ್ಕೆ ಯಾರೂ ಕೇಳಲಾರರು. ಆದರೆ ಈ ಇಡೀ ಚುನಾವಣೆಯಲ್ಲಿ ಪ್ರಸ್ತುತವಾಗುವ ಪ್ರಶ್ನೆ ಅಂತ ಒಂದಿದ್ದರೆ ಅದು ಮಾತ್ರ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಅಭಿಪ್ರಾಯ ಎಲ್ಲೆಡೆ ಹೆಚ್ಚು ಕಡಿಮೆ ಚುನಾವಣಾ ಘೋಷಣೆಗೆ ಮೊದಲೇ ತಲೆದೋರಿತ್ತು. ಪುಲ್ವಾಮ ಘಟನೆಯ ಬಳಿಕ ಬಿಜೆಪಿ ದೇಶರಕ್ಷಣೆ, ಸೈನ್ಯ ಇತ್ಯಾದಿ ವಿಚಾರಗಳನ್ನೆಲ್ಲಾ ಚುನಾವಣಾ ಕಣಕ್ಕೆ ಎಳೆದುತಂದ ನಂತರ ಈ ಸಾಧ್ಯತೆ ಮತ್ತೂ ನಿಚ್ಚಳವಾಗಿತ್ತು. ಆದರೆ ಇಷ್ಟೆಲ್ಲಾ ಆದರೂ ಬಿಜೆಪಿ ಹೋದ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಗೆಲ್ಲಲಾರದು ಎನ್ನುವ ಅಭಿಪ್ರಾಯ ಮೂಡಿತ್ತು. ಹೋದ ಬಾರಿ ಬಿಜೆಪಿಗೆ 282 ಸ್ಥಾನಗಳು ಬಂದಿದ್ದವು. ಸ್ವಂತ ಬಲದಲ್ಲಿ ಸರಕಾರ ರಚಿಸಲು ಬೇಕಾಗಿರುವುದು 272 ಸ್ಥಾನಗಳು. ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸಬಹುದಾಗಿದ್ದರೂ ಎನ್.ಡಿ.ಎ. ಮಿತ್ರಕೂಟದ ಸರಕಾರವನ್ನೇ ರಚಿಸಿತ್ತು. ಕೆಲವರು ಇದನ್ನು ಮಿಗತೆ ಮೈತ್ರಿಕೂಟ (surplus coalition) ಎಂದು ಬಣ್ಣಿಸಿದ್ದರು. ಈ ಬಾರಿ ಮಿಗತೆ ಮೈತ್ರಿಕೂಟ ಹೋಗಿ ಕೊರತೆ ಮೈತ್ರಿಕೂಟ ಅಧಿಕಾರಕ್ಕೆ ಬಂದೀತು ಎನ್ನುವುದು ಲೆಕ್ಕಾಚಾರವಾಗಿತ್ತು.

ಅಂದರೆ, ಬಿಜೆಪಿಗೆ ಸ್ವಂತ ಬಲದಿಂದ ಸರಕಾರ ರಚಿಸುವಷ್ಟು ಸ್ಥಾನಗಳು ಸಿಗದೇ ಅದು ಮೈತ್ರಿಕೂಟದ ಇತರ ಪಕ್ಷಗಳ ಬಲದ ಮೇಲೆ ಅವಲಂಬಿಸಬೇಕಾದೀತು. ಅಷ್ಟರಮಟ್ಟಿಗೆ ಮೋದಿಯ ಪ್ರಾಬಲ್ಯ ಕುಸಿದೀತು ಎನ್ನುವ ಅಭಿಪ್ರಾಯ ಇತ್ತು. ಈ ಲೆಕ್ಕಾಚಾರಕ್ಕೆ ಕಾರಣವೂ ಇತ್ತು. ಮುಖ್ಯವಾಗಿ ಹಿಂದಿ ರಾಜ್ಯಗಳಾದ ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಪಡೆದುಕೊಂಡ ಕಾರಣ ಈ ರಾಜ್ಯಗಳಲ್ಲಿ ಈ ಬಾರಿ ಹಿನ್ನಡೆ ಅನುಭವಿಸುತ್ತದೆ. ಒಟ್ಟು ಸುಮಾರು 150 ಸ್ಥಾನಗಳನ್ನು ಹೊಂದಿರುವ ಈ ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸುವ ಕಾರಣ ಬಿಜೆಪಿ ಗೆಲ್ಲುವ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಕುಸಿಯಬಹುದು ಮತ್ತು ಈ ಇಳಿಕೆಯನ್ನು ಇತರೆಡೆ ಅದು ಗೆಲ್ಲಬಹುದಾದ ಹೆಚ್ಚುವರಿ ಸೀಟುಗಳು ಸರಿದೂಗಿಸಲಾರವು ಎಂದು ಲೆಕ್ಕಹಾಕಲಾಗಿತ್ತು.

ಫಲಿತಾಂಶ ಈ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ. ಮೊದಲನೆಯದಾಗಿ ಹಿಂದಿ ಪ್ರದೇಶದಲ್ಲಿ ಬಿಜೆಪಿಯ ಸ್ಥಾನಗಳು ದೊಡ್ಡಮಟ್ಟದಲ್ಲಿ ಕುಸಿದಿಲ್ಲ. ಹೆಚ್ಚು ಕಡಿಮೆ ಈ ರಾಜ್ಯಗಳಲ್ಲಿ 2014ರಲ್ಲಿ ಗಳಿಸಿದಷ್ಟೇ ಸ್ಥಾನಗಳನ್ನು ಮತ್ತೆ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮಾತ್ರವಲ್ಲ. ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲಿ, ಮುಖ್ಯವಾಗಿ ಪೂರ್ವ ಭಾರತದ ರಾಜ್ಯಗಳಾದ ಪಶ್ಚಿಮಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಹೆಚ್ಚುವರಿಯಾಗಿ ಗಳಿಸಿದ ಸ್ಥಾನಗಳು ಅದು ಹಿಂದಿ ಪ್ರದೇಶದಲ್ಲಿ ಕಳೆದುಕೊಂಡ ಸ್ಥಾನಗಳಿಗಿಂತ ಅಧಿಕವಾಗಿದೆ. ಅಂತಿಮ ಲೆಕ್ಕಾಚಾರದ ಪ್ರಕಾರ ಬಿಜೆಪಿ ಸುಮಾರು 300ರಷ್ಟು ಮತ್ತು ಎನ್.ಡಿ.ಎ. ಮಿತ್ರಕೂಟ ಪಡೆಯುವ ಸ್ಥಾನಗಳ ಸಂಖ್ಯೆ 350 ಸಮೀಪಿಸುವ ಸಾಧ್ಯತೆ ಇದೆ. ಮತ್ತೆ ಮಿಗತೆ ಮೈತ್ರಿಕೂಟ ಬಂದಿದೆ. ಮೋದಿಯ ಬಲ ಪಕ್ಷದೊಳಗೆ, ದೇಶದೊಳಗೆ ಹೆಚ್ಚಿದೆ.

ಮೋದಿ ಭಕ್ತರು ಹಿಂದೆಂದಿಗಿಂತಲೂ ಹೆಚ್ಚು ನಿರ್ಭೀತಿಯಿಂದ ತಮ್ಮ ಕಾರ್ಯಸೂಚಿಯನ್ನು ದೇಶದ ಮೇಲೆ ಹೇರುವ ಸಾಧ್ಯತೆ ಇದೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಪಡೆದ ಸ್ಥಾನಗಳ ಸಂಖ್ಯೆ 50 ದಾಟುವ ಹಾಗೆ ಕಾಣಿಸುತ್ತಿಲ್ಲ. ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಲಭಿಸಲಾರದು. ಕೇರಳ ಮತ್ತು ಪಂಜಾಬ್ ರಾಜ್ಯಗಳನ್ನು ಬಿಟ್ಟರೆ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗಿದೆ.

ಸ್ವತಃ ರಾಹುಲ್ ಗಾಂಧಿಯವರು ತಮ್ಮ ಕುಟುಂಬದ ಭದ್ರಕೋಟೆ ಎಂದೆನಿಸಿದ್ದ ಅಮೇಠಿಯಲ್ಲಿ ಸೋತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಏನಾಗಬಹುದು? ಯಾವ ಪರ್ಯಾಯ ಧ್ವನಿಗಳು, ಹೇಗೆ ಹುಟ್ಟಿಕೊಳ್ಳಬಹುದು ಎನ್ನುವುದು ಸದ್ಯದ ಕುತೂಹಲ.
ಈ ಗೆಲುವನ್ನು ಹೇಗೆ ಅರ್ಥೈಸಿಕೊಳ್ಳುವುದು?

ಮೊನ್ನೆ ಕೆಲ ಮತಗಟ್ಟೆ ಸಮೀಕ್ಷೆಗಳು ಹೆಚ್ಚು ಕಡಿಮೆ ಹೋದ ಬಾರಿ ಗೆದ್ದಷ್ಟೇ ಸ್ಥಾನಗಳನ್ನು ಬಿಜೆಪಿಗೆ ನೀಡಿದಾಗ ದೆಹಲಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಶಿವಂ ವಿಜ್ ಬಹಳ ಗಂಭೀರ ವಿಷಯವೊಂದನ್ನು ತಮಾಷೆಯ ರೂಪದಲ್ಲಿ ಬರೆದರು. ಅವರ ಪ್ರಕಾರ ಇಲ್ಲಿ ಮುಖ್ಯವಾದ ಪ್ರಶ್ನೆ ಬಿಜೆಪಿ ಹೋದ ಬಾರಿ ಗೆದ್ದಷ್ಟೇ ಸ್ಥಾನಗಳನ್ನು ಅಥವಾ ಅದಕ್ಕಿಂತ ಕೆಲವು ಹೆಚ್ಚು ಸ್ಥಾನಗಳನ್ನು ಹೇಗೆ ಗೆದ್ದಿದೆ ಎನ್ನುವುದಲ್ಲ. ಮೋದಿಯ ಬಿಜೆಪಿ ದೇಶದಲ್ಲಿರುವ ಒಟ್ಟು 542 ಲೋಕಸಭಾ ಸ್ಥಾನಗಳ ಪೈಕಿ 542 ಸ್ಥಾನಗಳನ್ನೂ ಯಾಕೆ ಗೆದ್ದಿಲ್ಲ ಎನ್ನುವುದು ಚೋದ್ಯದ ಪ್ರಶ್ನೆ.

ಯಾಕೆಂದರೆ ಈ ಚುನಾವಣೆ ಹೇಗಿತ್ತು ಎಂದರೆ ಭಾರತದ ಚುನಾವಣಾ ಚರಿತ್ರೆಯಲ್ಲೇ ಈ ಬಾರಿ ಅತ್ಯಂತ ದುರ್ಬಲವಾದ ಪ್ರತಿಪಕ್ಷಗಳಿದ್ದವು. ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕೆಲ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಲ್ಲೆಲ್ಲಾ ಇತರ ಬಿಜೆಪಿ ವಿರೋಧಿ ಪಕ್ಷಗಳು ಕೂಡಾ ಸ್ಪರ್ಧಿಸಿ ಮೈತ್ರಿಕೂಟವನ್ನು ದುರ್ಬಲಗೊಳಿಸಿದವು. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಎಸ್.ಪಿ.-ಬಿಎಸ್ಪಿ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದ್ದು. ಕನ್ನಯ್ಯ ಕುಮಾರ್ ವಿರುದ್ಧ ಆರ್‍ಜೆಡಿ ಸ್ಪರ್ಧಿಸಿದ್ದು, ಕರ್ನಾಟಕದಲ್ಲಿ ಮೈತ್ರಿಕೂಟ ರಚಿಸಿಕೊಂಡ ಪಕ್ಷಗಳು ಪರಸ್ಪರ ಕಾಲೆಳೆಯುವ ಕೆಲಸ ಮಾಡಿದ್ದು ಇತ್ಯಾದಿ.

ಜತೆಗೆ ಮೋದಿ ದೇಶದ ರಕ್ಷಣೆಯ ಮತ್ತು ಸೈನ್ಯದ ವಿಚಾರಗಳನ್ನು ನೇರವಾಗಿ ಚುನಾವಣಾ ಕಣಕ್ಕೆ ಎಳೆದು ತಂದಿದ್ದರು. ಬಿಜೆಪಿಗೆ ಓಟು ಹಾಕದೆ ಹೋದರೆ ದೇಶ ಉಳಿಯುವುದೇ ಕಷ್ಟ ಅಂತ ಸಾಮಾನ್ಯ ಜನರನ್ನು ನಂಬಿಸಿದರು. ಹೋದ ಚುನಾವಣೆಯ ವೇಳೆ ನೀಡಿದ ಭರವಸೆಗಳೆಲ್ಲಾ ಈಡೇರಿಲ್ಲ ಎಂಬ ಅಂಶ ಜನರಿಗೆ ಮರೆತೇ ಹೋಗುವಂತೆ ದೇಶರಕ್ಷಣೆ, ಭಯೋತ್ಪಾದನೆ, ಪಾಕಿಸ್ತಾನ ಮತ್ತು ಬಹುಸಂಖ್ಯಾತ ಹಿಂದುಗಳಲ್ಲಿ ಯಾವತೂ ಮನೆಮಾಡಿದ್ದ ಸುಪ್ತ ಮುಸ್ಲಿಂ ವಿರೋಧಿ ಭಾವನೆಗಳನ್ನೆಲ್ಲಾ ಒತ್ತಟ್ಟಿಗೆ ತಂದು ಅದ್ಭುತವಾದ ಚುನಾವಣಾ ಸಂಕಥನ ಒಂದನ್ನು ಮತದಾರರಿಗೆ ಮಾರಿದರು. ಪ್ರತಿಪಕ್ಷಗಳ ಬಳಿ ಇದಕ್ಕೆ ಸರಿಸಾಟಿಯಾದ ಸಮಾನವಾದ ಯಾವುದೇ ಸಂಕಥನ ಇರಲಿಲ್ಲ.

ಅಷ್ಟು ಮಾತ್ರವಲ್ಲ, ಯಾವತ್ತೂ ನಿಷ್ಪಕ್ಷಪಾತವಾಗಿ ಕಾರ್ಯವೆಸಗುವುದಕ್ಕೆ ಹೆಸರಾಗಿದ್ದ ಚುನಾವಣಾ ಆಯೋಗ ಕೂಡಾ ವರಸೆ ಬದಲಿಸಿ ಈ ಬಾರಿ ಮೋದಿಯ ಬೆಂಬಲಕ್ಕೆ ನಿಂತಿತು. ಇನ್ನು ಕೆಲವು ಕಡೆ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸ್ವಾಮೀಜಿಗಳು, ಮಠಾಧೀಶರು, ಧರ್ಮಾಧಿಕಾರಿಗಳು, ಪಟ್ಟಾಧಿಕಾರಿಗಳು ಎಲ್ಲಾ ಹೇಗೂ ಮೋದಿ ಜತೆ… ಸುಪ್ರೀಂ ಕೋರ್ಟೂ ಕೂಡಾ ಅವರತ್ತಲೇ ವಾಲಿದ ಹಾಗಿತ್ತು. ಬಹುತೇಕ ಮಾಧ್ಯಮಗಳು ಮೋದಿಪರ ಬರೆಯುವುದೇ ಪತ್ರಿಕಾಧರ್ಮ ಎಂದುಕೊಂಡ ಸ್ಥಿತಿ ಇತ್ತು, ಜತೆಗೆ ಯಾರಿಗೂ ಇಲ್ಲದಷ್ಟು ಹಣಬಲವಿತ್ತು. ಇಷ್ಟೆಲ್ಲಾ ಇದ್ದ ಮೇಲೆ ಮೋದಿ ಚುನಾವಣೆ ನಡೆದ 542 ಸ್ಥಾನಗಳನ್ನೂ ಗೆಲ್ಲಬೇಕಾಗಿರುವುದು ಸಹಜವಲ್ಲವೇ ಅಂತ ವಿಜಿ ಕೇಳುತ್ತಾರೆ. ವ್ಯಂಗ್ಯದಿಂದ ಕೂಡಿದರೂ ಈ ಪಶ್ನೆಯಲ್ಲಿ ಈ ಚುನಾವಣೆಯನ್ನು ಬಿಜೆಪಿ ಹೇಗೆ ಗೆದ್ದಿತು ಎನ್ನುವ ಪ್ರಶ್ನೆಗೆ ಉತ್ತರವಿದೆ. ಜತೆಗೆ ಈ ಚುನಾವಣೆಯಲ್ಲಿ ಯಾವ ಮೌಲ್ಯಗಳು ಗೆದ್ದವು ಎನ್ನುವುದಕ್ಕೂ ಉತ್ತರವಿದೆ.

ಫಲಿತಾಂಶವನ್ನು ಆಳಕ್ಕಿಳಿದು ವಿಶ್ಲೇಷಿಸಿದರೆ ಬೆಚ್ಚಿಬೀಳಿಸುವ ಹಲವು ಸತ್ಯಗಳು ಗೋಚರಿಸಬಹುದು. ಈಗಾಗಲೇ ಕಾಣಿಸುವಂತೆ ಯಾವುದೇ ಲಂಗುಲಗಾಮು ಇಲ್ಲದೆ ತಮ್ಮ ಮಾತುಗಳ ಮೂಲಕ ದ್ವೇಷ ಬಿತ್ತುವ ಉತ್ತರ ಕನ್ನಡದ ಅನಂತ ಕುಮಾರ ಹೆಗಡೆ, ಮಂಗಳೂರಿನ ನಳಿನ್ ಕುಮಾರ್ ಕಟೀಲ, ಭೋಪಾಲದ ಪ್ರಜ್ಞಾ ಸಿಂಗ್ ಠಾಕೂರ್ ಮುಂತಾದವರು ಭಾರೀ ಅಂತರದಲ್ಲಿ ಗೆದ್ದಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಉಮೇಶ್ ಜಾಧವ್ ಗೆದ್ದಿದ್ದಾರೆ. ಸಾಲದ್ದಕ್ಕೆ ವಿಧಾನಸಭಾ ಉಪಚುನಾವಣೆಯಲ್ಲಿ ಅವರ ಮಗನನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಅನಂತ ಕುಮಾರ ಹೆಗಡೆಯ ವಿರುದ್ದ ಸಮರ್ಥ ಅಭ್ಯರ್ಥಿ ಇರಲಿಲ್ಲ ಎನ್ನೋಣ. ಆದರೆ ಪ್ರಜ್ಞಾ ಸಿಂಗ್ ವಿರುದ್ದ ಸಮರ್ಥ ಎದುರಾಳಿಯಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಸ್ಪರ್ಧಿಸಿದ್ದರು. ಜಾಧವ್ ವಿರುದ್ದ ಕಾಂಗ್ರೆಸ್ಸಿನ ಪ್ರಬಲ ನಾಯಕ ಮತ್ತು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಹೆಸರು ಗಳಿಸಿರುವ ಮಲ್ಲಿಕಾರ್ಜುನ ಖರ್ಗೆ ಪ್ರತಿಸ್ಪರ್ಧಿಯಾಗಿದ್ದರು. ಕಟೀಲ್ ವಿರುದ್ಧ ಪ್ರಬಲ ಅಭ್ಯರ್ಥಿಯೇ ಇದ್ದರು.

ಆದರೂ, ಪ್ರಜ್ಞಾಸಿಂಗ್, ಕಟೀಲ್, ಜಾಧವ್ ಅಂತವರೆಲ್ಲಾ ಮೋದಿಯ ಬಲದಿಂದ ಗೆದ್ದರೆ? ಹೌದಾದರೆ ಮೋದಿ ಎಂತವರನ್ನು ನಿಲ್ಲಿಸಿದರೂ ಜನಮತ ನೀಡುತ್ತಾರೆಯೇ? ಮೋದಿಯ ಬಲದಿಂದ ಗೆಲ್ಲದೇ, ಇವರುಗಳೆಲ್ಲಾ ಸ್ಥಳೀಯ ಲೆಕ್ಕಾಚಾರದಲ್ಲೂ ಅಥವಾ ಜಾತಿ ಲೆಕ್ಕಾಚಾರದಲ್ಲೋ ಗೆದ್ದರೆ? ಹಾಗಿದ್ದರೆ ಇವರನ್ನೆಲ್ಲಾ ಪ್ರಚಂಡವಾಗಿ ಬೆಂಬಲಿಸುವ ಮತದಾರರ ಸ್ಥಳೀಯ ಲೆಕ್ಕಾಚಾರ ಎಂತಹದ್ದು? ಅಥವಾ ಒಟ್ಟಿನಲ್ಲಿ ಇವರನ್ನು ಗೆಲ್ಲಿಸುವುದರ ಮೂಲಕ ಮತದಾರರು ಯಾವ ತರದ ಮೌಲ್ಯಗಳನ್ನು ಬೆಂಬಲಿಸಿದರು? ಇಂತಹ ಪ್ರಶ್ನೆಗಳನ್ನೆಲ್ಲಾ ಕೇಳುವಂತಿಲ್ಲ.

ಮತದಾರರ ತೀರ್ಪು ಪವಿತ್ರ. ಭಾರತ ಗೆದ್ದವರನ್ನು ಆರಾಧಿಸುವ ದೇಶ. ಅಧಿಕಾರದ ಮುಂದೆ ಮಕಾಡೆ ಮಲಗುವ ಜಾಯಮಾನ ಭಾರತೀಯ ಸಂಸ್ಕೃತಿಯ ಭಾಗ. ಹಾಗಿರುವಾಗ ಮುಂದಿನ ದಿನಗಳಲ್ಲಿ ಮೋದಿ ಎರಡನೆಯ ಬಾರಿ ಗೆದ್ದದ್ದೇ ಚರ್ಚೆಯ ವಿಷಯವಾದೀತೇ ಹೊರತು, ಆ ಗೆಲುವು ಯಾವ ರೀತಿಯಲ್ಲಿ ಸಾಧ್ಯವಾಯಿತು ಎನ್ನುವ ಪ್ರಶ್ನೆಯನ್ನು ಯಾರೂ ಕೇಳಲಾರರು. ಮೋದಿ ಸಾಧನೆಯ ಬಲದಿಂದ ಗೆದ್ದರೋ ಅಥವಾ ತಂತ್ರ ಹೂಡಿ ಗೆದ್ದರೋ, ಮೋದಿ ಜನರನ್ನು ಮೋಡಿ ಮಾಡಿದ ನಾಯಕತ್ವದ ಗುಣಾವಗುಣಗಳೇನು? ಇಂತಹ ತಂತ್ರದ ಮೂಲಕ ಗೆಲ್ಲುವ ಇಂತಹ ನಾಯಕತ್ವದ ಮಾದರಿ ಭಾರತೀಯ ಪ್ರಜಾತಂತ್ರವನ್ನು ಯಾವ ದಾರಿಯಲ್ಲಿ ಮುನ್ನಡೆಸೀತು? ಈ ಪ್ರಶ್ನೆಗಳೆಲ್ಲಾ ಮುಖ್ಯವಾದರೂ ಅವುಗಳನ್ನು ಕೇಳುವ ವ್ಯವಧಾನವಾಗಲೀ, ಉತ್ಸಾಹವಾಗಲೀ ಸದ್ಯಕ್ಕೆ ಕಂಡು ಬರಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...