ಫೆಬ್ರವರಿ ತಿಂಗಳಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ, ಆಡಳಿತರೂಢ ಬಿಜೆಪಿಯ ಇಬ್ಬರು ಶಾಸಕರು ಒಂದೇ ದಿನದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಪಕ್ಷವು ತೀವ್ರ ಮುಖಭಂಗ ಅನುಭವಿಸಿದೆ. ರಾಜೀನಾಮೆ ನೀಡಿರುವವರಲ್ಲಿ, ಪ್ರವೀಣ್ ಜಾಂತ್ಯೆ ಅವರು ಮೇಮ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರೆ, ಮೈಕೆಲ್ ಲೋಬೋ ಅವರು ಕ್ಯಾಲಂಗುಟ್ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಸಚಿವರೂ ಆಗಿರುವ ಲೋಬೋ ಇಂದು ಬೆಳಿಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಲೋಬೋ ಅವರು, “ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಮುಂದಕ್ಕೆ ಯಾವ ಹೆಜ್ಜೆ ಇಡಬೇಕೆಂದು ನೋಡುತ್ತೇನೆ. ಇತರ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಪಕ್ಷವು ನಮ್ಮನ್ನು ನೋಡುವ ರೀತಿಯಿಂದ ನಾನು ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಕರ್ತರು ಅತೃಪ್ತರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:‘ಕೋಮುವಾದಿ ಪಕ್ಷ’: TMC ಸೇರಿದ ಮೂರೇ ತಿಂಗಳಲ್ಲಿ ಪಕ್ಷದಿಂದ ಹೊರ ನಡೆದ ಗೋವಾದ ಮಾಜಿ ಶಾಸಕ!
“ಗೋವಾ ಬಿಜೆಪಿಯಲ್ಲಿ, ಮನೋಹರ್ ಪರಿಕ್ಕರ್ ಅವರ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದನ್ನು ನಾನು ನೋಡುತ್ತಿಲ್ಲ. ಅವರನ್ನು ಬೆಂಬಲಿಸಿದ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಬದಿಗೆ ತಳ್ಳಿದೆ” ಎಂದು ಅವರು ಹೇಳಿದ್ದಾರೆ.
ಮೇಮ್ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರವೀಣ್ ಜಾಂತ್ಯೆ, 1991 ರಿಂದ 1996 ರವರೆಗೆ ಉತ್ತರ ಗೋವಾದಿಂದ ಕಾಂಗ್ರೆಸ್ ಸಂಸದರಾಗಿದ್ದ ಹರೀಶ್ ಜಾಂತ್ಯೆ ಅವರ ಮಗ. 2012 ರ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ನಂತರ 2017 ರ ಚುನಾವಣೆಗೆ ಮುಂಚಿತವಾಗಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಪರಿಕ್ಕರ್ ಅವರ ಆಶ್ವಾಸನೆಗಳ ಆಧಾರದ ಮೇಲೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೆ, ಆದರೆ ಬಿಜೆಪಿಯು ಅಂದಿನ ಪಕ್ಷವಾಗಿ ಉಳಿದಿಲ್ಲ ಎಂದು ಪ್ರವೀಣ್ ಜಾಂತ್ಯೆ ಹೇಳಿದ್ದಾರೆ. ಗಣಿಗಾರಿಕೆಯನ್ನು ಪುನರಾರಂಭಿಸುವಲ್ಲಿ ಮತ್ತು ತನ್ನ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲಾಗಿದ್ದು, “ನಾನು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಗೆ ಸೇರುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೋವಾ: ಕಾಂಗ್ರೆಸ್ನ ಮಾಜಿ ಕಾರ್ಯಾಧ್ಯಕ್ಷ, ಶಾಸಕ ಅಲೆಕ್ಸೊ ಟಿಎಂಸಿಗೆ ಸೇರ್ಪಡೆ
ಇತ್ತೀಚಿನ ವಾರಗಳಲ್ಲಿ ನಾಲ್ವರು ಶಾಸಕರು ಬಿಜೆಪಿ ತೊರೆದಿದ್ದು, ಲೋಬೋ ಅವರು ಪ್ರತಿಪಕ್ಷ ಕಾಂಗ್ರೆಸ್ಗೆ ಸೇರುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲೋಬೋ ಬಿಜೆಪಿಯನ್ನು ತೊರೆದ ಮೂರನೇ ಕ್ರಿಶ್ಚಿಯನ್ ಶಾಸಕರಾಗಿದ್ದಾರೆ. ಈ ಹಿಂದೆ ಅಲೀನಾ ಸಲ್ಡಾನ್ಹಾ ಮತ್ತು ಕಾರ್ಲೋಸ್ ಅಲ್ಮೇಡಾ ಬಿಜೆಪಿಯನ್ನು ತೊರೆದಿದ್ದರು. ಸಲ್ಡಾನ್ಹಾ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರೆ, ಅಲ್ಮೇಡಾ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು 25% ಕ್ಕಿಂತ ಹೆಚ್ಚಾಗಿದ್ದಾರೆ. ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಪಕ್ಷ ತೊರೆದವರ ವಿರುದ್ಧ ವಾಗ್ದಾಳಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ಬಿಜೆಪಿ ದೊಡ್ಡ ಕುಟುಂಬವಾಗಿದ್ದು, ಮಾತೃಭೂಮಿಗೆ ಸಂಪೂರ್ಣ ಭಕ್ತಿಯಿಂದ ಸೇವೆ ಸಲ್ಲಿಸುತ್ತಿದೆ. ಕೆಲವು ಪಕ್ಷಾಂತರಗಳು, ದುರಾಶೆ ಮತ್ತು ವೈಯಕ್ತಿಕ ಹಿತಾಸಕ್ತಿಗಳ ಕಾರ್ಯಸೂಚಿಯನ್ನು ಪೂರೈಸಲು ನಮ್ಮ ಉತ್ತಮ ಆಡಳಿತದ ಕಾರ್ಯಸೂಚಿಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Congress nalli geddu matte bjp sertare