ಕೇರಳದ ಕೊಚ್ಚಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ವಾಮಾಚಾರಕ್ಕಾಗಿ ನರಬಲಿ ನೀಡಲಾಗಿದೆ ಎಂಬ ವರದಿಗೆ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣಗಳ ಬಗ್ಗೆ ಅಘಾತ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು, ರಾಜ್ಯ ಎಲ್ಲಿಗೆ ಹೋಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದು, “ರಾಜ್ಯವು ವಿಚಲಿತವಾಗುತ್ತಿದೆ ಮತ್ತು ಜನರು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ” ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಮಾಚಾರಕ್ಕೆ ಬಲಿ ನೀಡಲಾಗಿದ್ದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿಗಳನ್ನು ಮಂತ್ರವಾದಿ ಮೊಹಮ್ಮದ್ ಶಫಿ ಅಲಿಯಾಸ್ ರಶೀದ್ ಮತ್ತು ಬಗವಾಲ್ ಸಿಂಗ್ ಹಾಗೂ ಅವನ ಪತ್ನಿ ಲೈಲಾ ಎಂದು ಗುರುತಿಸಲಾಗಿದೆ. ನರಬಲಿಯು ಸಮೃದ್ಧಿಯನ್ನು ತರುತ್ತದೆ ಎಂದು ಮಂತ್ರವಾದಿಯು ದಂಪತಿಗೆ ನಂಬಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಾಮಾಚಾರ ಶಂಕೆ: ಮಂತ್ರವಾದಿಯ ಮಾತು ಕೇಳಿ ಮೂವರು ಮಹಿಳೆಯರ ಗುಂಪು ಹತ್ಯೆ
ಹೀಗಾಗಿ 50 ಮತ್ತು 52 ವರ್ಷ ವಯಸ್ಸಿನ ಇಬ್ಬರು ಮಹಿಳೆಯರನ್ನು ಅಪಹರಿಸಿ, ಕೊಂದು, ಅವರ ದೇಹಗಳನ್ನು ತುಂಡರಿಸಿ ಅದನ್ನು ದಂಪತಿಯ ಮನೆಯ ಆವರಣದಲ್ಲಿ ಹೂತುಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ ಮತ್ತು ಸೆಪ್ಟೆಂಬರ್ನಲ್ಲಿ ಕೊಚ್ಚಿಯ ಬೇರೆ ಬೇರೆ ಪ್ರದೇಶಗಳಿಂದ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದರು. ಅವರ ಸಂಬಂಧಿಕರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು. ಈ ತನಿಖೆಯಲ್ಲಿ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ನಲ್ಲಿ ದಂಪತಿಗಳು ಹಣಕ್ಕಾಗಿ ವಾಮಾಚಾರದ ಮೂಲಕ ಇಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಹತ್ಯೆಯಾದ ಮಹಿಳೆಯಿಬ್ಬರನ್ನು ತ್ರಿಶೂರ್ ಮೂಲದ ರೋಸ್ಲಿ ಮತ್ತು ತಮಿಳುನಾಡಿನ ಧರ್ಮಪುರಿ ಮೂಲದ ಪದ್ಮಮ್ ಎಂದು ಗುರುತಿಸಲಾಗಿದೆ. 52 ವರ್ಷದ ರೋಸ್ಲಿ ಜೂನ್ನಿಂದ ಕೊಚ್ಚಿ ಸಮೀಪದ ಕಾಲಡಿಯಿಂದ ನಾಪತ್ತೆಯಾಗಿದ್ದರು. ಹಾಗೆಯೇ 50 ವರ್ಷದ ಪದ್ಮಮ್ ಸೆಪ್ಟೆಂಬರ್ 26ರಿಂದ ಕೊಚ್ಚಿಯ ಕಡವಂತರಾದಿಂದ ನಾಪತ್ತೆಯಾಗಿದ್ದರು. ಅವರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಜಾರ್ಖಂಡ್: ವಾಮಾಚಾರದ ಆರೋಪ, ಮಹಿಳೆಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ ಗ್ರಾಮಸ್ಥರು
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಕೊಚ್ಚಿ ಬಳಿಯ ಪೆರುಂಬವೂರ್ ಮೂಲದವನಾದ ಶಫಿ ತನ್ನನ್ನು ಮಾಂತ್ರಿಕನೆಂದು ಪರಿಚಯಿಸಿಕೊಂಡು, ಸಾಮಾಜಿಕ ಜಾಲತಾಣದ ಮೂಲಕ ದಂಪತಿಗಳನ್ನು ಸಂಪರ್ಕಿಸಿದ್ದಾನೆ. ಮಾಟಮಂತ್ರ ಮೂಲಕ ಅವರಿಗೆ ಸುಖ ಸಮೃದ್ಧಿ ದೊರೆಯುತ್ತದೆ ಎಂದು ಅವರಿಗೆ ಭರವಸೆ ನೀಡಿದ್ದನು. ಜೊತೆಗೆ ಹತ್ಯೆಗೀಡಾದ ಇಬ್ಬರು ಮಹಿಳೆಯರಿಗೆ, ಅಶ್ಲೀಲ ಚಿತ್ರದಲ್ಲಿ ನಟಿಸಿದರೆ ಆಕರ್ಷಕ ಸಂಭಾವನೆ ನೀಡುವ ಆಮಿಷವೊಡ್ಡಿ, ಆರ್ಥಿಕವಾಗಿ ದುರ್ಬಲರಾಗಿದ್ದ ಮಹಿಳೆಯರನ್ನು ಪ್ರಭಾವಿಸಿದ್ದನು.
ಆಗಸ್ಟ್ನಲ್ಲಿ ರೋಸ್ಲಿಯನ್ನು ದಂಪತಿಯ ಮನೆಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿ, ಅವರ ರಕ್ತವನ್ನು ಮನೆಯ ಆವರಣದಲ್ಲಿ ಚಿಮುಕಿಸಿ ಶವವನ್ನು ಹೂಳಲಾಯಿತು. ನಂತರ, ಸೆಪ್ಟೆಂಬರ್ನಲ್ಲಿ ಪದ್ಮಂ ಅವರನ್ನು ಕರೆದೊಯ್ದು ಅದೇ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.