ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಬಿಲ್ಲಿಪುರಂ ನಾಗರಾಜು ಎಂಬ 26 ವರ್ಷದ ದಲಿತ ಯುವಕನ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನ ಸರೂರ್ನಗರ ಪ್ರದೇಶದಲ್ಲಿ ಮೇ 04 ರಂದು ನಡುರಸ್ತೆಯಲ್ಲಿಯೇ ದಲಿತ ಯುವಕನನ್ನು ಕೊಚ್ಚಿ ಕೊಲ್ಲಲಾದ ಆರೋಪದಲ್ಲಿ ಸಯ್ಯದ್ ಮೊಬಿನ್ ಅಹ್ಮದ್ ಮತ್ತು ಮೊಹಮ್ಮದ್ ಮಸೂದ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
5 ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗರಾಜು ಮತ್ತು ಅಶ್ರಿನ್ ಸುಲ್ತಾನ ಇದೇ ಜನವರಿ 30 ರಂದು ಹಿಂದೂ ಧರ್ಮದ ಅನುಸಾರ ಮದುವೆಯಾಗಿದ್ದರು. ಆದರೆ ಯುವಕ ಬೇರೆ ಧರ್ಮದವನಾದ ಕಾರಣಕ್ಕೆ ಈ ಮದುವೆಗೆ ಸುಲ್ತಾನ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು.
ಅಶ್ರೀನ್ ಸುಲ್ತಾನನ ಸಹೋದರ ಸಯ್ಯದ್ ಮೊಬಿನ್ ಮತ್ತು ಇತರರು ನಾಗರಾಜುರನ್ನು ಅವರು ಕೆಲಸ ಮಾಡವು ಸ್ಥಳದಲ್ಲಿ ಕೊಲ್ಲಲು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದಾಗ ತಮ್ಮ ಸಂಬಂಧಿಗಳ ಮನೆಯಿಂದ ನಾಗರಾಜು ಮತ್ತು ಸುಲ್ತಾನ ಹಿಂತಿರುಗುತ್ತಿದ್ದಾಗ ಸರೂಜ್ನಗರದ ನಡುರಸ್ತೆಯಲ್ಲಿ ಹಲ್ಲೆ ನಡೆಸಿ, ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನೋವು ವ್ಯಕ್ತಪಡಿಸಿರುವ ಸುಲ್ತಾನ, “ನನ್ನ ಗಂಡನನ್ನು ನನ್ನ ಸಹೋದರರು ನಡುರಸ್ತೆಯಲ್ಲಿ ಕಬ್ಬಿಣದ ರಾಡ್ಗಳಿಂದ ಹೊಡೆಯುತ್ತಿದ್ದರು. ತಡೆಯಲು ಮುಂದಾದ ನನ್ನನ್ನು ದೂರಕ್ಕೆ ತಳ್ಳಿದರು. ಆಗ ಸುತ್ತಲು ಜನ ನೋಡುತ್ತಿದ್ದರು ಮತ್ತು ವಿಡಿಯೋ ಮಾಡುತ್ತಿದ್ದರೆ ಹೊರತು ಯಾರೂ ತಡೆಯಲು ಮುಂದಾಗಲಿಲ್ಲ. ನನ್ನ ಕಣ್ಣೆದುರೆ ನನ್ನ ಗಂಡನನ್ನು ಕೊಂದು ಬಿಟ್ಟರು” ಎಂದು ದುಃಖ ತೋಡಿಕೊಂಡಿದ್ದಾರೆ.
ಬೇರೆ ಧರ್ಮದ ಯುವಕನನ್ನು ಮದುವೆಯಾಗಿದ್ದ ಕೊಲೆಗೆ ಕಾರಣ ಎಂದು ಸರೂಜ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ ಸೀತಾರಾಮ್ ತಿಳಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇದನ್ನೂ ಓದಿ: ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’
ಈ ಕೊಲೆಯ ವಿರುದ್ಧ ಬಿಜೆಪಿ ಪಕ್ಷವು ಹೈದರಾಬಾದ್ನಲ್ಲಿ ಪ್ರತಿಭಟನೆ ನಡೆಸಿದೆ. “ನಾಗರಾಜು ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದ ಕಾರಣಕ್ಕೆ ಕೊಚ್ಚಿ ಕೊಲ್ಲಲಾಗಿದೆ. ಈ ರೀತಿಯ ಘಟನೆಗಳು ಸಾಮಾಜಿಕ ಅವನತಿ ಮತ್ತು ಧಾರ್ಮಿಕ ಗುರುತಿನ ತೀವ್ರ ಅಸಹಿಷ್ಣುತೆಯನ್ನು ತೋರಿಸುತ್ತವೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಬಿಜೆಪಿ ಮುಖಂಡ ಕೃಷ್ಣ ಸಾಗರ್ ರಾವ್ ತಿಳಿಸಿದ್ದಾರೆ.