ಸರ್ಕಾರ 4.8 ಲಕ್ಷ ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಆದರೆ 47 ಲಕ್ಷ ಭಾರತೀಯರು ಕೋವಿಡ್ನಿಂದ ಪ್ರಾಣ ಬಿಟ್ಟಿದ್ದಾರೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಮೋದಿ ಸುಳ್ಳು ಹೇಳುತ್ತಾರೆ, ಆದರೆ ವಿಜ್ಞಾನವಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಭಾರತದ ಕೋವಿಡ್ ಸಾವುಗಳ ಕುರಿತು WHO ಬಿಡುಗಡೆ ಮಾಡಿದ ವರದಿಯ ತುಣುಕು ಹಂಚಿಕೊಂಡಿರುವ ಅವರು, ಕೋವಿಡ್ನಿಂದ ಪ್ರಾಣಬಿಟ್ಟ ಕುಟುಂಬಗಳನ್ನು ಗೌರವಿಸಬೇಕು. ಪ್ರತಿ ಕುಟುಂಬಕ್ಕೂ ತಲಾ 4 ಲಕ್ಷ ರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
47 lakh Indians died due to the Covid pandemic. NOT 4.8 lakh as claimed by the Govt.
Science doesn't LIE. Modi does.
Respect families who've lost loved ones. Support them with the mandated ₹4 lakh compensation. pic.twitter.com/p9y1VdVFsA
— Rahul Gandhi (@RahulGandhi) May 6, 2022
2020ರ ಜನವರಿಯಿಂದ 2022ರ ಡಿಸೆಂಬರ್ವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಸುಮಾರು 47 ಲಕ್ಷಕ್ಕೂ ಹೆಚ್ಚುವರಿ ಕೋವಿಡ್ ಸಾವುಗಳು ಸಂಭವಿಸಿವೆ ಎಂದು WHO ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಇದು ಭಾರತದ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳಿಗಿಂತ ಹತ್ತು ಪಟ್ಟು ಹೆಚ್ಚು ಇದ್ದು, ಪ್ರಪಂಚದ ಮೂರನೇ ಒಂದು ಭಾಗದಷ್ಟು ಸಾವುಗಳು ಭಾರತದಲ್ಲಿಯೇ ಸಂಭವಿಸಿದೆ ಎಂದು ವರದಿ ಹೇಳಿದೆ.
ಇಡೀ ಪ್ರಪಂಚದಲ್ಲಿ 60 ಲಕ್ಷ ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ. ಆದರೆ ಅದು ಒಂದೂವರೆ ಕೋಟಿಗೂ ಹೆಚ್ಚಿದೆ ಎಂದು WHO ಹೇಳಿದೆ.
2020 ರಲ್ಲಿ ಸಿವಿಲ್ ನೋಂದಣಿ ವ್ಯವಸ್ಥೆಯ ಅಡಿಯಲ್ಲಿ ಭಾರತವು 4,74,806 ಸಾವುಗಳನ್ನು ದಾಖಲಿಸಿದೆ.
ಕೋವಿಡ್ ಸಾವುಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಬಳಸಿದ ಸಂಖ್ಯಾಶಾಸ್ತ್ರೀಯ ಮಾದರಿಯ ಬಳಕೆಯನ್ನು ಭಾರತ ಸರ್ಕಾರ ಬಲವಾಗಿ ನಿರಾಕರಿಸಿದೆ. ದೇಶವು ಜನನ – ಮರಣಗಳ ನೋಂದಣಿಯ ಅತ್ಯಂತ ದೃಢವಾದ ವ್ಯವಸ್ಥೆಯನ್ನು ಹೊಂದಿದೆ. WHOದ ಅಂಕಿ ಸಂಖ್ಯೆಗಳು ವಾಸ್ತವಕ್ಕೆ ದೂರವಾಗಿವೆ. ಈ ದತ್ತಾಂಶ ಸಂಗ್ರಹದ ವ್ಯವಸ್ಥೆಯನ್ನು “ಸಂಖ್ಯಾಶಾಸ್ತ್ರೀಯವಾಗಿ ಅಸ್ಪಷ್ಟ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹ” ಎಂದು ಕರೆದಿದೆ.
ಹದಿನೇಳು ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಕೆಲವು ವೆಬ್ಸೈಟ್ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದ್ದು, ಇದನ್ನು ಭಾರತವು ಸತತವಾಗಿ ಪ್ರಶ್ನಿಸಿದೆ. ಆದರೆ ಭಾರತದ ವಿರೋಧದ ನಡುವೆಯೂ ಕೋವಿಡ್ ಸಾವುಗಳ ಲೆಕ್ಕಾಚಾರದ ಪ್ರಕ್ರಿಯೆಯನ್ನು WHO ಮುಂದುವರೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಇದನ್ನೂ ಓದಿ; ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES
ಈ ಪ್ರಕ್ರಿಯೆಯಲ್ಲಿ WHO ಜೊತೆ ನಡೆಸಿದ ಸಂವಾದ-ಸಂವಹದನಲ್ಲಿ ಅದು ಹಲವಾರು ಮಾದರಿಗಳನ್ನು ಉಲ್ಲೇಖಿಸಿ ವಿವಿಧ ಹೆಚ್ಚುವರಿ ಮರಣದ ಅಂಕಿಅಂಶಗಳನ್ನು ಯೋಜಿಸಿದೆ. ಸಿವಿಲ್ ನೋಂದಣಿ ವ್ಯವಸ್ಥೆಯ ಅಡಿಯಲ್ಲಿ ದಾಖಲಾದ ಅಂಕಿ ಅಂಶಗಳನ್ನು WHO ಜೊತೆಗೆ ಹಂಚಿಕೊಂಡಿದ್ದೇವೆ. ಆದರೂ ನಮ್ಮೆಲ್ಲ ಅಂಕಿ ಅಂಶಗಳನ್ನು ತಿರಸ್ಕರಿಸಿ ಹೆಚ್ಚಿನ ಮರಣ ಸಂಭವಿಸಿವೆ ಎಂದು ವರದಿ ನೀಡಿದೆ. ಆದರೆ ಅದು ಬಳಸಿದ ಮಾದರಿಗಳ ಸಿಂಧುತ್ವ ಮತ್ತು ದೃಢತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಭಾರತ ಸರ್ಕಾರ ಹೇಳಿದೆ.