’ಈರುಳ್ಳಿಯ ರುಚಿಯನ್ನು ಎಂದೂ ನೋಡಿಲ್ಲ’ ಎಂಬ ಹೇಳಿಕೆಯ ಮೂಲಕ ಸಾಕಷ್ಟು ಟೀಕೆಗೊಳಗಾಗಿದ್ದ ನಿರ್ಮಲಾ ಸೀತಾರಾಮನ್ ನಂತರ ಕೇಂದ್ರ ಸಚಿವ ಅಶ್ವಿನಿ ಚೌಬೆ ನಾನು ವೆಜ್, ನನಗೇಗೆ ಈರುಳ್ಳಿ ಬೆಲೆ ಏರಿಕೆ ಗೊತ್ತಾಗಬೇಕು? ಎಂದು ಹೇಳುವ ಮೂಲಕ ಟ್ರೋಲ್ ಪ್ರಿಯರಿಗೆ ಆಹಾರವಾಗಿದ್ದಾರೆ.
“ನಾನು ಸಸ್ಯಾಹಾರಿ. ನಾನು ಈರುಳ್ಳಿಯ ರುಚಿ ನೋಡಿಲ್ಲ. ಹಾಗಾಗಿ, ಈರುಳ್ಳಿಯ ಪರಿಸ್ಥಿತಿ (ಮಾರುಕಟ್ಟೆ ಬೆಲೆಗಳು) ಬಗ್ಗೆ ನನ್ನಂತಹ ವ್ಯಕ್ತಿಗೆ ಹೇಗೆ ತಿಳಿಯುತ್ತದೆ? ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಚೌಬೆ ಎಎನ್ಐಗೆ ಹೇಳುವ ಮೂಲಕ ಅವರು ವಿವಾದ ಉಂಟುಮಾಡಿದ್ದಾರೆ.
#WATCH "I am a vegetarian. I have never tasted an onion. So, how will a person like me know about the situation (market prices) of onions," says Union Minister Ashwini Choubey pic.twitter.com/cubekfUrYW
— ANI (@ANI) December 5, 2019
ದೇಶಾದ್ಯಂತ ಈರುಳ್ಳಿಯ ಬೆಲೆಯು ಕೆಜಿಗೆ 150 ರೂ ಮುಟ್ಟುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಬಂದ ಭಾರೀ ವಿರೋಧದ ಕುರಿತು ಅವರು ಈ ಹೇಳಿಕೆ ನೀಡಿದ್ದಾರೆ.
ಈರುಳ್ಳಿಯ ಏರುತ್ತಿರುವ ಬೆಲೆ ಬಗ್ಗೆ ಬಂದ ಟೀಕೆಗಳ ಹಿನ್ನೆಲೆಯಲ್ಲಿ ನಿನ್ನೆ ನಿರ್ಮಲಾ ಸೀತಾರಾಮನ್ “ನಾನು ಎಂದೂ ಈರುಳ್ಳಿಯ ರುಚಿ ನೋಡಿಲ್ಲ. ಅಂತಹ ಕುಟುಂಬದಿಂದಲೂ ಬಂದಿಲ್ಲ” ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಒಳಗಾಗಿದ್ದರು.
2019-20ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಬ್ಯಾಚ್ ಕುರಿತ ಚರ್ಚೆಗೆ ಉತ್ತರಿಸುತ್ತಿದ್ದ ಸೀತಾರಾಮನ್, ಈರುಳ್ಳಿ ಬೆಲೆ ಏರಿಕೆಯು ಕೃಷಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಇಳಿಕೆ ಮುಂತಾದ ಕಾರಣಗಳಿಮದ ಹೆಚ್ಚಾಗಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ “ಹಣಕಾಸು ಸಚಿವರು ಈರುಳ್ಳಿ ತಿನ್ನುವುದಿಲ್ಲ, ಹಾಗಾಗಿ ಅವರು ಅದರ ಬೆಲೆ ಏರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಂದರೆ ಅವರು ಮತ್ತೆ ಏನು ತಿನ್ನುತ್ತಾರೆ? ಆವಕಾಡೊ ತಿನ್ನುತ್ತಾರೆಯೇ” ಎಂದು ಹೇಳುವ ಮೂಲಕ ಟೀಕಿಸಿದ್ದರು.