ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಗುರುವಾರ ತಮ್ಮ ಸಂಸದೀಯ ಕ್ಷೇತ್ರವಾದ ಕೇರಳದ ವಯನಾಡಿನ ಶಾಲೆಯೊಂದರಲ್ಲಿ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಆಗ ಅವರು ನನ್ನ ಭಾಷಣವನ್ನುಇಂಗ್ಲಿಷ್ನಿಂದ ಮಲಯಾಳಂಗೆ ಅನುವಾದಿಸಲು ಯಾರಾದರೂ ಸಿದ್ಧರಿದ್ದೀರಾ? ಎಂದು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದರು. ಅವರ ಎಂದಿನ ಭಾಷಾಂತರಕಾರರಾಗಿದ್ದ ಪಕ್ಷದ ಮುಖಂಡ ಕೆ.ಸಿ.ವೇಣುಗೋಪಾಲ್ ನಗುತ್ತಾ ಕುಳಿತಿದ್ದರು.
ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ, ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿ ಸಫಾ ಸೆಬಿನ್ ಎದ್ದು ವೇದಿಕೆಯಲ್ಲಿದ್ದ ರಾಹುಲ್ ಗಾಂಧಿಯತ್ತ ಹೆಜ್ಜೆ ಹಾಕಿದಳು. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಆಕೆಯನ್ನು ಸ್ವಾಗತಿಸಿದರು.
ಅವಳು ವೇದಿಕೆಯನ್ನು ತಲುಪಿ ರಾಹಲ್ ಗಾಂಧಿಯನ್ನು ಮುಖಾಮುಖಿಯಾಗಿ ಭೇಟಿಯಾದಾಗ, ಸಫಾಳ ಮೊದಲ ಪ್ರತಿಕ್ರಿಯೆ ಅವರನ್ನು ನಮಸ್ತೆಯಿಂದ ಸ್ವಾಗತಿಸುವುದು. ರಾಹುಲ್ ಗಾಂಧಿ ಬೆಚ್ಚಗಿನ ಹ್ಯಾಂಡ್ಶೇಕ್ ನೀಡಿ ಧನ್ಯವಾದ ತಿಳಿಸಿದರು. ಅವರು ವಿದ್ಯಾರ್ಥಿನಿಗೆ ಮೈಕ್ ಹಸ್ತಾಂತರಿಸಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ಮುಕ್ತ ಮನಸ್ಸಿನಿಂದ ಚಿಂತಿಸುವುದು ವಿಜ್ಞಾನದ ಸಾರವಾಗಿದೆ. ಅದೇ ವಿಜ್ಞಾನವನ್ನು ಕಲಿಯುವ ಮೊದಲ ಹೆಜ್ಜೆಯಾಗಿದೆ. ನಿಮ್ಮ ಮನಸ್ಸು ಎಂದೂ ಮುಚ್ಚಬಾರದು. ಇತರರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಇತರರ ಅಭಿಪ್ರಾಯವನ್ನು ಗೌರವಿಸಬೇಕು. ಅವರ ಭಾಷೆ, ಧರ್ಮ, ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ.
ವಿಡಿಯೋ ನೋಡಿ
“ನಮ್ಮ ದೇಶದಲ್ಲಿ ಈ ದಿನಗಳಲ್ಲಿ ನೀವು ಜನರನ್ನು ದ್ವೇಷಿಸಬಹುದು ಮತ್ತು ಅದೇ ಸಮಯದಲ್ಲಿ ವೈಜ್ಞಾನಿಕವಾಗಿ ಪ್ರಗತಿ ಹೊಂದಬಹುದು ಎಂಬ ಚರ್ಚೆ ಆರಂಭವಾಗಿದೆ. ಆದರೆ ಇದು ಸಂಪೂರ್ಣ ಅಸಂಬದ್ಧವಾಗಿದೆ” ಎಂದು ಅವರು ಹೇಳಿದರು. ಸಫಾ ಯಾವುದೇ ಗೊಂದಲವಿಲ್ಲದೇ ಸರಾಗವಾಗಿ ಮಲೆಯಾಳಂಗೆ ಅನುವಾದಿಸುತ್ತಿದ್ದರೆ ಅವಳ ಸಹಪಾಠಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.
ಇನ್ನೊಬ್ಬರ ಅಭಿಪ್ರಾಯವನ್ನು ಮುಕ್ತವಾಗಿ ಸ್ಪೀಕರಿಸಿವುದೇ ವಿಜ್ಞಾನವನ್ನು ಕಲಿಯುವ ಅತಿ ಪ್ರಮುಖ ಅಂಶವಾಗಿದೆ. ಉತ್ತರಕ್ಕಿಂತ ಹೆಚ್ಚಾಗಿ ಪ್ರಶ್ನೆ ಕೇಳುವುದು ಅತಿ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ಶಿಕ್ಷಕರು ಮಕ್ಕಳು ಹೆಚ್ಚು ಪ್ರಶ್ನೆ ಕೇಳು ಅವಕಾಶ ಮಾಡಿಕೊಡಿ. ಅದರಲ್ಲಿ ತಪ್ಪು ಪ್ರಶ್ನೆ, ಒಳ್ಳೆ ಪ್ರಶ್ನೆ ಎಂಬುದಿರುವುದಿಲ್ಲ ಎಂದರು.
ಎಲ್ಲಾ ಮಕ್ಕಳು, ಅದರಲ್ಲಿಯೂ ಚಿಕ್ಕಮಕ್ಕಳು ಎಲ್ಲಾ ವಿಷಯದ ಬಗ್ಗೆ ಕೂತೂಹಲವುಳ್ಳವರಾಗಿತ್ತಾರೆ. ಅವರಲ್ಲಿ ದ್ವೇಷ ಇರುವುದಿಲ್ಲ. ಇದೇ ರೀತಿ ಕಲಿಯಬೇಕು ಎಂದರು.
ದ್ವೇಷ, ಅಸೂಯೆ ಮನೋಭಾವನೆ ವಿಜ್ಞಾನಕ್ಕೆ ವಿರುದ್ಧವಾಗಿದೆ. ನೀವು ಜೀವನದಲ್ಲಿ ಏನಾದರೂ ಆಗಿ. ಆದರೆ ದ್ವೇಷ, ಅಸೂಯೆಯನ್ನು ನಾವು ಕೊಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಕೇರಳದ ಶಾಲೆಗಳು ದೇಶದಲ್ಲಿಯೇ ಉತ್ತಮವಾಗಿದ್ದರೂ ಇನ್ನು ಸಾಕಾಗುವುದಿಲ್ಲ. ಕಳೆದ ತಿಂಗಳು ಒಬ್ಬ ವಿದ್ಯಾರ್ಥಿ ಹಾವು ಕಚ್ಚಿ ಮರಣ ಹೊಂದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಈ ರೀತಿಯಾಗಿ ಆಗದಂತೆ ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಇದನ್ನು ಪಾರ್ಲಿಮೆಂಟ್ನಲ್ಲಿ ಚರ್ಚಿಸುವುದಾಗಿ ಹೇಳಿದರು.
ಭಾಷಣದ ನಂತರ ರಾಹುಲ್ ಗಾಂಧಿಯವರು “ಉತ್ತಮ ಭಾಷಾಂತರವನ್ನು ಮಾಡಿದ್ದಕ್ಕಾಗಿ” ಸಫಾಗೆ ಧನ್ಯವಾದ ಅರ್ಪಿಸಿದರು. ಕೇರಳದ ಸ್ಪೂರ್ತಿ ಕ್ರಿಯೆಯಲ್ಲಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ರೋಮಾಂಚನಗೊಂಡ ವಿದ್ಯಾರ್ಥಿನಿಯು ಇದು ತನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಹೇಳಿದ್ದಾಳೆ.
The Spirit of Kerala in action! pic.twitter.com/wt6KCdRfK4
— Rahul Gandhi (@RahulGandhi) December 5, 2019
“ಇದು ನನ್ನ ಜೀವನದ ಅತ್ಯುತ್ತಮ ಕ್ಷಣ. ನಾನೇ ಖುದ್ದು ಅನುವಾದ ಮಾಡಬೇಕು ಎಂಬುದರ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದೆ. ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬಾರದೆಂದು ನಿರ್ಧರಿಸಿದ್ದೆ. ನಾನು ವೇದಿಕೆಗೆ ಹೋಗುವಾಗ ನಡುಗುತ್ತಿದ್ದೆ. ಆದರೆ ರಾಹುಲ್ ಗಾಂಧಿಯವರು ಶಾಂತಗೊಳಿಸಿದರು. ಅವರು ತುಂಬಾ ಸೌಮ್ಯ ಸ್ವಭಾವದರು” ಎಂದು ಆಕೆ ಎನ್ಡಿಟಿವಿಗೆ ತಿಳಿಸಿದ್ದಾಳೆ.