ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿವಾದಾತ್ಮಕ “ಟೂಲ್ಕಿಟ್” ಡಾಕ್ಯುಮೆಂಟ್ ಪ್ರಕರಣದಲ್ಲಿ ಆರೋಪಿತರಾಗಿರುವ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜಾಕೋಬ್, ‘ಗಣರಾಜ್ಯೋತ್ಸವದ ಮೊದಲು ಜೂಮ್ ಸಭೆ ನಡೆದಿತ್ತು. ಇದರಲ್ಲಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥಾಪಕ ಎಂ.ಒ. ಧಲಿವಾಲ್, ದಿಶಾ ರವಿ ಮತ್ತು ತಾವು ಸೇರಿದಂತೆ ಹಲವು ಆಕ್ಟಿವಿಸ್ಟ್ಗಳು ಪಾಲ್ಗೊಂಡಿದ್ದೆವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿಕಿತಾ ಜಾಕೋಬ್ ಅವರ ವಕೀಲರು ಮುಂಬೈ ಪೊಲೀಸರಿಗೆ ಸಲ್ಲಿಸಿದ ದಾಖಲೆಯಲ್ಲಿ, “ಟೂಲ್ಕಿಟ್” ಅನ್ನು ಎಕ್ಸ್ಆರ್ ಇಂಡಿಯಾ ಸ್ವಯಂಸೇವಕರು ಸಿದ್ಧಪಡಿಸುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟದ ಚಿತ್ರಣವನ್ನು ಕೊಡುವುದು ಮತ್ತು ಹೋರಾಟಕ್ಕೆ ಬೆಂಬಲ ಪಡೆಯುವುದು ಇದರ ಉದ್ದೇಶವಾಗಿತ್ತು ಎಂದು ನಿಕಿತಾ ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಒಪ್ಪಿಗೆಯ ಹೊರತಾಗಿಯೂ, ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿದ್ದನ್ನು ನಿಕಿತಾ ನಿರಾಕರಿಸಿದ್ದಾರೆ. ಟೂಲ್ಕಿಟ್ ಡಾಕ್ಯುಮೆಂಟ್ ಒಂದು “ಮಾಹಿತಿಯ ಗುಚ್ಛ” ಆಗಿದೆಯಷ್ಟೇ ಮತ್ತು ಅದು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ವಕೀಲೆ ತಿಳಿಸಿದ್ದಾರೆ.
“ಜಾಗೃತಿ ಮೂಡಿಸುವ ಉದ್ದೇಶದಿಂದ ಟೂಲ್ಕಿಟ್ಗಳನ್ನು ಸಂಶೋಧಿಸಲು, ಚರ್ಚಿಸಲು, ಸಂಪಾದಿಸಲು ಮತ್ತು ಪ್ರಸಾರ ಮಾಡಲು ತಾನು ಯಾವುದೇ ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಉದ್ದೇಶ ಅಥವಾ ಕಾರ್ಯಸೂಚಿಯನ್ನು ಹೊಂದಿಲ್ಲ” ಎಂದೂ ನಿಕಿತಾ ಜಾಕೋಬ್ ಅವರು ಹೇಳಿದ್ದಾರೆ.
ಇದಲ್ಲದೆ, ನಿಕಿತಾ ಜಾಕೋಬ್ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ, ಯಾವುದೇ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ಮತ್ತು ತನ್ನ ವಿರುದ್ಧ ನೋಂದಾಯಿಸಲಾದ ಎಎಫ್ಐಆರ್ ಪ್ರತಿಯನ್ನು ತನ್ನೊಂದಿಗೆ ಹಂಚಿಕೊಳ್ಳಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಮುಂಬೈ ಪೊಲೀಸರಿಗೆ ಸಲ್ಲಿಸಿದ ಪತ್ರದಲ್ಲಿ ಕೋರಿದ್ದಾರೆ.
‘ಖಲಿಸ್ತಾನ್ ಪರ ಇರುವ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥಾಪಕ ಎಂ.ಒ.ಧಲಿವಾಲ್ ಅವರು ಗಣರಾಜ್ಯೋತ್ಸವದ ಮುನ್ನ ಟ್ವಿಟರ್ನಲ್ಲಿ ಚಂಡಮಾರುತವನ್ನು ಸೃಷ್ಟಿಸಲು ನಿಕಿತಾ ಜಾಕೋಬ್ ಅವರನ್ನು ಕೆನಡಾದ ಪ್ರಜೆಯಾದ ತನ್ನ ಸಹೋದ್ಯೋಗಿ ಪುನೀತ್ ಮೂಲಕ ಸಂಪರ್ಕಿಸಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ನಿನ್ನೆ ತಿಳಿಸಿದ್ದವು ಎಂದು ಎನ್ಡಿಟಿವಿ ವರದಿ ಪ್ರಸ್ತಾಪಿಸಿದೆ.
ಈ ಮೊದಲು, ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ಕಿಟ್ ದಾಖಲೆಯ ಸೂತ್ರೀಕರಣ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ 21 ವರ್ಷದ ದಿಶಾ ರವಿ ಅವರನ್ನು ಬೆಂಗಳೂರಿನಿಂದ ಬಂಧಿಸಲಾಗಿತ್ತು. ಅವರು ‘ಟೂಲ್ಕಿಟ್’ ಡಾಕ್ಯುಮೆಂಟ್ ಎಡಿಟ್ ಮಾಡಿದವರಲ್ಲಿ ಒಬ್ಬರು ಎಂಬುದು ಪೊಲೀಸರ ಆರೋಪ.
ನಂತರ ದಿಶಾ ರವಿ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ಸೋಮವಾರ, ನಿಕಿತಾ ಜಾಕೋಬ್ ಮತ್ತು ಮಹಾರಾಷ್ಟ್ರದ ಬೀಡ್ ನಿವಾಸಿ ಶಾಂತನು ವಿರುದ್ಧ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಆದರೆ ಶಾಂತನು ಬಂಧಿಸಿ ಬೇರೆ ರಾಜ್ಯಕ್ಕೆ ಕರೆದೊಯ್ಯುವುದರ ವಿರುದ್ಧ ಜಾಮೀನು ಪಡೆದುಕೊಂಡಿದ್ದಾರೆ.
ದಿಶಾ ರವಿ ಅವರ ಬಂಧನವೇ ಅಕ್ರಮವಾಗಿದೆ, ಬೆಂಗಳೂರು ಪೊಲೀಸರ ಅನುಮತಿಯಿಲ್ಲದೇ ಮತ್ತು ಬೆಂಗಳೂರು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸದೇ ಸೀದಾ ಅವರನ್ನು ದಹಲಿಗೆ ಕರೆದೊಯ್ದಿದ್ದು ಅಕ್ರಮವಾಗಿದೆ ಎಂದು ಹಲವಾರು ಪ್ರಗತಿಪರ ಸಂಘಟನೆಗಳು, ವಕೀಲರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ‘ದಿಶಾ ಕೆಲಸದ ಬಗ್ಗೆ ಹೆಮ್ಮೆಪಡುತ್ತೇವೆ’: ಬೆನ್ನಿಗೆ ನಿಂತ ’ಮೌಂಟ್ ಕಾರ್ಮೆಲ್ ಹಳೆಯ ವಿದ್ಯಾರ್ಥಿ ಸಂಘ