ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಲ್ಲಿ ಒಬ್ಬರಾದ ಪರಿಸರ ಕಾರ್ಯಕರ್ತ ಶಾಂತನು ಮುಲುಕ್ಗೆ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ನ್ಯಾಯಪೀಠವು “ಟ್ರಾನ್ಸಿಟ್” ನಿರೀಕ್ಷಣಾ ಜಾಮೀನು ನೀಡಿದ್ದು, ದೆಹಲಿ ಪೊಲೀಸರ ಬಂಧನದಿಂದ ರಕ್ಷಣೆ ನೀಡಿದೆ.
(ಟ್ರಾನ್ಸಿಟ್ ಎಂದರೆ, ಯಾವುದೇ ಒಬ್ಬ ವ್ಯಕ್ತಿಯನ್ನು ಹೊರ ರಾಜ್ಯದ ಪೊಲೀಸರು ಬಂಧಿಸಬೇಕಾದರೆ, ಅವರು ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್ ಅನ್ನು ಪಡೆದಿರಬೇಕು. ಈ ಬಂಧನದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯು ಟ್ರಾನ್ಸಿಟ್ ಜಾಮೀನನ್ನು ಪಡೆಯಬಹುದು. ಆದರೆ ದಿಶಾ ರವಿಯ ಬಂಧನದಲ್ಲಿ ದೆಹಲಿ ಪೊಲೀಸರು ನ್ಯಾಯಾಲಯದಿಂದ ಈ ಟ್ರಾನ್ಸಿಟ್ ವಾರೆಂಟ್ ಅನ್ನೂ ಪಡೆದಿರಲಿಲ್ಲ ಎಂಬ ಆರೋಪವಿದೆ)
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ನಿಕಿತಾ ಜಾಕೋಬ್ ಅವರ ಹೆಸರನ್ನು ಸೇರಿಸಲಾಗಿತ್ತು. ಹಾಗಾಗಿ ಇವರೂ ಕೂಡ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇವರ ಜೊತೆ ಮುಲುಕ್ ಅವರ ಹೆಸರನ್ನೂ ಸೇರಿಸಲಾಗಿದೆ ಎಂಬುದು ತಿಳಿದ ತಕ್ಷಣ ಮುಲುಕ್ ಸೋಮವಾರ ನ್ಯಾಯಾಲಯದ ಮೋರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮುಲುಕ್ಗೆ ಜಾಮೀನು ನೀಡಲಾಗಿದೆ.
ಇದನ್ನೂ ಓದಿ: ’ದಿಶಾ ಕೆಲಸದ ಬಗ್ಗೆ ಹೆಮ್ಮೆಪಡುತ್ತೇವೆ’: ಬೆನ್ನಿಗೆ ನಿಂತ ’ಮೌಂಟ್ ಕಾರ್ಮೆಲ್ ಹಳೆಯ ವಿದ್ಯಾರ್ಥಿ ಸಂಘ
ನಿಕಿತಾ ಜಾಕೋಬ್ ಸಲ್ಲಿಸಿದ್ದ ನಿರೀಕ್ಷಣಾ ಮನವಿಯ ಕುರಿತ ಆದೇಶ ಬುಧವಾರ ಹೊರಬೀಳುವ ಸಾಧ್ಯತೆಯಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ರೈತರ ಹೋರಾಟವನ್ನು ಬೆಂಬಲಿಸಿ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಆಕ್ಷೇಪಾರ್ಹ ವಿಷಯಗಳಿವೆ ಎಂದು ಆರೋಪಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ದಿಶಾ ರವಿಯವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ಕಳೆದ 83 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ‘ಮೋದಿ ಅಳಿಯಂದಿರು ಬಂದರು ಹುಷಾರು’: ರೈತ ಬೂಟಾ ಸಿಂಗ್ ಎಚ್ಚರಿಕೆ