ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಳ್ಳಲು ಚರ್ಚುಗಳಿಗೆ ಭೇಟಿ ನೀಡುವ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗುವುದು ಎಂದು ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಬಜರಂಗದಳದ ಮುಖಂಡನೊಬ್ಬ ಘೋಷಿಸಿದ್ದಾನೆ.
ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೇಳಿಕೆ ನೀಡಿರುವವನನ್ನು ವಿಶ್ವ ಹಿಂದೂ ಪರಿಷತ್-ಬಜರಂಗದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಎಂದು ಗುರುತಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕ್ರೈಸ್ತರು ಬಹುಸಂಖ್ಯಾತರಾಗಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ರಾಮಕೃಷ್ಣ ಮಠದ ವಿವೇಕಾನಂದ ಕೇಂದ್ರವು ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ಅವರು, ಹಿಂದೂಗಳು ಕ್ರಿಸ್ಮಸ್ ದಿನದ ಕಾರ್ಯಕ್ರಮ ಮತ್ತು ಹಬ್ಬಕ್ಕೆ ಹಾಜರಾಗಲು ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿ.ಎಂ ಜಿಲ್ಲೆ ಶಿವಮೊಗ್ಗದಲ್ಲಿ ಕೋಮು ರಾಜಕಾರಣ ಭುಗಿಲೆದ್ದಿತಾ?
“ಚರ್ಚುಗಳಿಗೆ ಭೇಟಿ ನೀಡುವ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತೇವೆ. ಯಾಕೆಂದರೆ ನಮ್ಮ ಪೂಜಾ ಸ್ಥಳಗಳನ್ನು ಮುಚ್ಚಿದ ನಂತರ ಕ್ರಿಶ್ಚಿಯನ್ ಸಮಾರಂಭವೊಂದರಲ್ಲಿ ಹೋಗಿ ಮೋಜು ಮಾಡುವ ಹಿಂದೂಗಳನ್ನು ನಾನು ನಿಂದಿಸುತ್ತೇನೆ. ಈ ಕ್ರಿಸ್ಮಸ್ನಲ್ಲಿ ಯಾವುದೇ ಹಿಂದೂಗಳು ಚರ್ಚ್ಗೆ ಹೋಗುವುದಿಲ್ಲ. ನಾವು ಅದನ್ನು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಮಿಥು ನಾಥ್ ವೀಡಿಯೊದಲ್ಲಿ ಹೇಳಿದ್ದಾರೆ.
“ನಾವು ಹಿಂದೂಗಳ ಮೇಲೆ ಹಲ್ಲೆ ಮಾಡಿದರೆ ಮರುದಿನ ಪತ್ರಿಕೆಗಳಲ್ಲಿ ’ಗೂಂಡಾದಳವು ಓರಿಯೆಂಟಲ್ ಶಾಲೆಯನ್ನು ಧ್ವಂಸ ಮಾಡಿದೆ’ ಎಂದು ಸುದ್ದಿಯಾಗುತ್ತದೆ. ಆದರೆ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ. ಶಿಲ್ಲಾಂಗ್ನಲ್ಲಿ ದೇವಾಲಯದ ಗೇಟುಗಳಿಗೆ ಅವರು ಬೀಗ ಹಾಕಿ, ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಹಿಂದೂಗಳು ಭಾಗವಹಿಸುವುದನ್ನು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
ಆದರೆ ಮಿಥು ನಾಥ್ ಹೇಳಿಕೆಯನ್ನು ನಿರಾಕರಿಸಿರುವ ಮೇಘಾಲಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು, “ರಾಮಕೃಷ್ಣ ಮಿಷನ್ನ ಯಾವುದೇ ದೇವಾಲಯವನ್ನು ಮುಚ್ಚಲಾಗಿಲ್ಲ” ತಿಳಿಸಿದ್ದಾರೆ.
ಈಶಾನ್ಯ ರಾಜ್ಯದ ಕ್ಯಾಚರ್ ಜಿಲ್ಲೆಯಲ್ಲಿನ ಕ್ರಿಶ್ಚಿಯನ್ ಜನಸಂಖ್ಯೆ ಕಡಿಮೆಯಿದ್ದರೂ, ರಜಾದಿನವನ್ನು ಸಾಂಪ್ರದಾಯಿಕವಾಗಿ ಸಿಲ್ಚಾರ್ ಬಳಿಯ ಅಂಬಿಕಪಟ್ಟಿಯಲ್ಲಿರುವ ಓರಿಯಂಟಲ್ ಶಾಲೆಯಿಂದ ಅಮೋಘವಾಗಿ ಆಚರಿಸಲಾಗುತ್ತದೆ. ಇಲ್ಲಿ ಪ್ರತಿವರ್ಷ ವಿವಿಧ ಧರ್ಮದ ಜನರು ಸೇರುತ್ತಾರೆ.
ಇದನ್ನೂ ಓದಿ: ಸಂಘಪರಿವಾರದ ಕಾರ್ಯಕರ್ತರಿಂದ ಗೋ ಕಳ್ಳತನಕ್ಕೆ ಯತ್ನ ಆರೋಪ: ಮೂವರು ವಶಕ್ಕೆ