ಡಿಜಿಟಲ್ ಮಾಧ್ಯಮಗಳಿಗೆ ಪರಿಚಯಿಸಿದ ಹೊಸ ಮಾಹಿತಿ ತಂತ್ರಜ್ಞಾನ ನಿಯಮವನ್ನು ತಡೆ ಹಿಡಿಯದಿದ್ದರೆ ಟ್ವಿಟರ್ ಕಂಪೆನಿಯು ಆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ತಿಳಿಸಿದೆ.
ಟ್ವಿಟರ್ ನಿಯಮಗಳನ್ನು ಪಾಲಿಸಲಿಲ್ಲ ಎಂದು ಆರೋಪಿಸಿ ಅಮಿತ್ ಆಚಾರ್ಯ ಎಂಬ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಿದ್ದರು. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ತಮ್ಮ ನಿಲುವುಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರ ಮತ್ತು ಸೋಷಿಯಲ್ ಮೀಡಿಯಾ ವೇದಿಕೆಯಾದ ಟ್ವಿಟರ್ಗೆ ನೋಟಿಸ್ ಜಾರಿಮಾಡಿದ್ದಾರೆ.
ಇದನ್ನೂ ಓದಿ: ಟೂಲ್ಕಿಟ್-ಟ್ವೀಟ್ ಪ್ರಕರಣ: ಟ್ವಿಟರ್ ಕಚೇರಿಗೆ ಹೋದ ಪೊಲೀಸರು, ಯಾರೂ ಸಿಗದೆ ವಾಪಸ್
ತಾನು ನಿಯಮಗಳನ್ನು ಪಾಲಿಸಿದ್ದು, ಸ್ಥಳೀಯ ಅಧಿಕಾರಿಯನ್ನು ನೇಮಿಸಿದ್ದೇನೆ ಎಂದು ನ್ಯಾಯಾಲಯದ ಮುಂದೆ ಟ್ವಿಟರ್ ಹೇಳಿದೆ. ಆದರೆ ಕೇಂದ್ರ ಸರ್ಕಾರವು ಟ್ವಿಟರ್ನ ಈ ಪ್ರತಿಪಾದನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ರಿಪುದಮನ್ ಸಿಂಗ್ ಭರದ್ವಾಜ್ ಅವರು ಟ್ವಿಟರ್ ನಿಯಮಗಳನ್ನು ಪಾಲಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಹೊಸ ನಿಯಮಗಳನ್ನು ತಡೆಹಿಡಿಯಲಾಗದಿದ್ದರೆ ಟ್ವಿಟರ್ ನಿಯಮಗಳನ್ನು ಅನುಸರಿಸಬೇಕು” ಎಂದು ನ್ಯಾಯಾಲಯವು ಹೇಳಿದೆ.
ವಕೀಲ ಆಕಾಶ್ ವಾಜಪೇಯಿ ಮತ್ತು ಮನೀಶ್ ಕುಮಾರ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಅಮಿತ್ ಆಚಾರ್ಯ ಅವರು ಒಂದೆರಡು ಟ್ವೀಟ್ಗಳ ವಿರುದ್ಧ ನಾವು ದೂರು ನೀಡಲು ಪ್ರಯತ್ನಿಸಿದೆವು. ಆಗ ನಮಗೆ ಟ್ವಿಟರ್ ಹೊಸ ನಿಯಮವನ್ನು ಪಾಲಿಸದ ಆರೋಪ ಕೇಳಿ ಬಂದಿದೆ ಎಂದು ಹೇಳಿದ್ದಾರೆ.
ಹೊಸ ಐಟಿ ನಿಯಮಗಳು ಫೆಬ್ರವರಿ 25 ರಿಂದ ಜಾರಿಗೆ ಬಂದವು ಮತ್ತು ಅವುಗಳನ್ನು ಅನುಸರಿಸಲು ಕೇಂದ್ರವು ಟ್ವಿಟರ್ ಸೇರಿದಂತೆ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಿಗೆ ಮೂರು ತಿಂಗಳು ಕಾಲಾವಕಾಶ ನೀಡಿತ್ತು. ಮೇ 25 ರಂದು ಮೂರು ತಿಂಗಳ ಅವಧಿ ಮುಗಿದಿದೆ. ಆದರೆ ಟ್ವಿಟ್ಟರ್ ತನ್ನ ಪ್ಲಾಟ್ಫಾರ್ಮ್ನಲ್ಲಿನ ಟ್ವೀಟ್ಗಳಿಗೆ ಸಂಬಂಧಿಸಿದ ದೂರುಗಳನ್ನು ಎದುರಿಸಲು ಯಾವುದೇ ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲಿಲ್ಲ ಎಂದು ಅಮಿತ್ ಆಚಾರ್ಯ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರದಿಂದ ಲಸಿಕೆಯಲ್ಲೂ ಮೋಸ: ಟ್ವಿಟರ್ ಅಭಿಯಾನಕ್ಕೆ ಕರೆವೇ ಕರೆ
ವಿಳಂಬ ಮಾಡದೆ ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವಂತೆ ಟ್ವಿಟರ್ಗೆ ನಿರ್ದೇಶನ ನೀಡುವಂತೆ ಅವರು ಮನವಿಯಲ್ಲಿ ಕೋರಿದ್ದು, ಜೊತೆಗೆ ಐಟಿ ನಿಯಮಗಳನ್ನು ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆಯು ಕೋರಿದ್ದಾರೆ.
ಟ್ವಿಟರ್ ಇತ್ತೀಚೆಗೆ ಭಾರತದ ನಿಯಮಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿತ್ತು, ಆದರೆ ಹೊಸ ಐಟಿ ನಿಯಮಗಳು ಮತ್ತು ನಿಬಂಧನೆಗಳನ್ನು ಅದು ಟೀಕಿಸಿದ್ದು, “ಭಾರತವು ಮುಕ್ತ ಸಾರ್ವಜನಿಕ ಅಭಿವ್ಯಕ್ತಿಯನ್ನು ತಡೆಯುತ್ತಿದೆ” ಎಂದು ಹೇಳಿತ್ತು. ಆದರೆ ಟ್ವಿಟರ್ನ ಈ ಮಾತಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರವು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದೆ.
‘ಸೂಚಿಸಿದ’ ಸಂದೇಶದ ಮೂಲವನ್ನು ಗುರುತಿಸುವ ಮತ್ತು ಕುಂದುಕೊರತೆಯ ಪರಿಶೀಲಿಸುವ ಅಧಿಕಾರಿಗಳನ್ನು ನೇಮಿಸಲು ಹೇಳುವ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿದೆ ಎಂದು ಕೇಂದ್ರ ಆರೋಪಿಸಿದೆ.
ಹೊಸ ಡಿಜಿಟಲ್ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪೆನಿಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಟ್ವಿಟರ್ಗಳನ್ನು ‘ಸೂಚಿಸಿದ’ ಸಂದೇಶದ ಮೂಲವನ್ನು 36 ಗಂಟೆಗಳಲ್ಲಿ ಗುರುತಿಸುವುದು ಮತ್ತು ಹೆಚ್ಚುವರಿ ಕ್ರಮಗಳನ್ನು ತಗೆದುಕೊಳ್ಳುವುದು ಮಾಡಬೇಕಾಗುತ್ತದೆ. ಮುಖ್ಯ ಪಾಲನೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಎಂದು ನಿಯಮವು ಹೇಳುತ್ತದೆ.
ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್ ಅನ್ನು ಬೆದರಿಸುತ್ತಿರುವ ಕೇಂದ್ರ ಸರ್ಕಾರ!