ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯಲ್ಲಿ 2021ರ ಮೇ ತಿಂಗಳೊಂದರಲ್ಲಿಯೇ 8,000 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಅಹಮದ್ ನಗರದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಕೊರೋನಾ ಮೂರನೆಯ ಅಲೆ ನಿಧಾನಕ್ಕೆ ಆರಂಭವಾಗುತ್ತಿರುವ ಲಕ್ಷಣವನ್ನು ತೋರಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು ಈ ಬಗ್ಗೆ ಗಮನ ಹರಿಸಿದ್ದು ಕೊರೋನಾ ಮೂರನೇ ಅಲೆಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದಲ್ಲೂ ದಿನೇ ದಿನೇ 18 ವರ್ಷದೊಳಗಿನ ಮಕ್ಕಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಲಿದ್ದು, ರಾಜ್ಯ ಸರ್ಕಾರ ಸಂಭಾವ್ಯ ಕೋವಿಡ್ ಅಲೆಯನ್ನು ನಿಯಂತ್ರಿಸಿಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಈಗಾಗಲೇ ಮಕ್ಕಳಿಗಾಗಿ ವಿಶೇಷ ಕೋವಿಡ್ ವಾರ್ಡ್ ಅನ್ನು ಸ್ಥಾಪಿಸಿದ್ದು ಸದ್ಯ ಐದು ಕೋವಿಡ್ ಸೋಂಕಿತ ಮಕ್ಕಳಿಗೆ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾವು ಮಕ್ಕಳಿಗಾಗಿ ವಿಶೇಷ ಕೋವಿಡ್ ವಾರ್ಡ್ ಅನ್ನು ಆರಂಭಿಸಿದ್ದೇವೆ. ಕೋವಿಡ್ ಮೂರನೇ ಅಲೆ ಈಗಾಗಲೇ ಆರಂಭವಾಗಿದೆಯೇ ಅಥವಾ ಯಾವಾಗ ಅರಂಭವಾಗಬಹುದು ಎಂಬುದು ಇನ್ನೂ ತಿಳಿದಿಲ್ಲ. ಆದರೆ ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಮಕ್ಕಳ ವಿಶೇಷ ಕೋವಿಡ್ ವಾರ್ಡ್ಗಳು ಆಸ್ಪತ್ರೆಗಳ ರೀತಿಯಲ್ಲಿ ಇಲ್ಲ. ಬದಲಾಗಿ ಮಕ್ಕಳು ತಮ್ಮ ಸ್ಕೂಲ್ ಅಥವಾ ನರ್ಸರಿಯಲ್ಲಿ ಪಡೆಯುವ ಸೌಲಭ್ಯಗಳನ್ನು ವಿಶೇಷ ವಾರ್ಡ್ಗಳಲ್ಲಿ ಕಲ್ಪಿಸಲಾಗಿದೆ ಎಂದು ಸಾಂಗ್ಲಿ ನಗರ ಕಾರ್ಪೊರೇಟರ್ ಅಭಿಜಿತ್ ಬೋಂಸ್ಲೆ ತಿಳಿಸಿದ್ದಾರೆ.
ಅಹಮದನಗರ ಜಿಲ್ಲೆಯಲ್ಲಿ 8000 ಕ್ಕಿಂತ ಹೆಚ್ಚು ಮಕ್ಕಳು ಕೋವಿಡ್ ಸುಂಕಿಗೆ ತುತ್ತಾಗಿರುವುದು ಸರ್ಕಾರಕ್ಕೆ ಕೋವಿಡ್ ಮೂರನೇ ಅಲೆಯ ಎಚ್ಚರಿಕೆಗಂಟೆಯಾಗಿದೆ. ಜಿಲ್ಲಾಡಳಿತ ಈಗಾಗಲೇ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿಯನ್ನು ನೀಡಿದ್ದು ಎಚ್ಚರಿಕೆಯನ್ನು ನೀಡಿದೆ. ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಕೊರೋನಾ ಸೋಂಕಿಗೆ ತುತ್ತಾದವರಲ್ಲಿ 10% ದಷ್ಟು ಜನರು 18 ವರ್ಷದ ಮಕ್ಕಳಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಜಿಲ್ಲಾಡಳಿತವು ಮಕ್ಕಳ ತಜ್ಞರೊಂದಿಗೆ ಈ ಸಬಂಧ ಚರ್ಚೆಯನ್ನು ನಡೆಸಿದೆ. ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳುವಂತೆ ಸಂಬಂಧಿಸಿದ ಆಸ್ಪತ್ರೆಗೆ ತಿಳಿಸಲಾಗಿದೆ. 2021 ರ ಮೇ ತಿಂಗಳೊಂದರಲ್ಲೇ ಜಿಲ್ಲೆಯ 8000 ಮಕ್ಕಳಲ್ಲಿ ಕೊರೋನಾ ಸೋಂಕು ಧೃಢಪಟ್ಟಿರುವುದು ಮುಂದೆ ಬರಲಿರುವ ವಿಪತ್ತಿನ ಮುನ್ಸೂಚನೆಯಂತಿದೆ ಎಂದು ಅಹ್ಮದ್ನಗರ ಜಿಲ್ಲಾಧಿಕಾರಿ ರಾಜೇಂದ್ರ ಬೋಸ್ಲೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಮಹರಾಷ್ಟ್ರದಲ್ಲಿ ಆಸ್ಪತ್ರೆಗಳ ಬೆಡ್ಗಳ ಕೊರತೆ ಮತ್ತು ಆಕ್ಸಿಜನ್ ಕೊರತೆ ವ್ಯಾಪಕವಾಗಿ ತಲೆದೋರಿತು. ಮೂರನೇ ಅಲೆಯ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಹಿಂದೆ ಸಂಭವಿಸಿದ ದುರಂತ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ ಎಂದು ಶಾಸಕ ಸಂಗ್ರಾಮ್ ಜಗದೀಪ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಈ ಸಂದರ್ಭದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಜುಲೈ ಕೊನೇ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಮಹರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆಯು ಕಾಣಸಿಕೊಳ್ಳುವ ಲಕ್ಷಣವಿದ್ದು ಎರಡು ತಿಂಗಳ ಅವಧಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರ ಅಧಿಕಾರಿಗಳಿಗೆ ತಿಳಿಸಿದೆ.
ಭಾರತದಲ್ಲಿ ಕೊರೋನಾ ಎರಡನೆ ಅಲೆಯು ಆರಂಭವಾದ ಮೊದಲ ರಾಜ್ಯ ಮಹಾರಾಷ್ಟ್ರ. ಫೆಭ್ರವರಿ ಕೊನೆಯಲ್ಲಿ ಆರಂಭವಾದ ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಸಾವಿರಾರು ಸೋಂಕಿತರು ತೊಂದರೆಗೆ ಒಳಗಾಗಿದ್ದರು. ಆಕ್ಸಿಜನ್, ಅಗತ್ಯ ಔಷಧಿಗಳ ಕೊರತೆ ಮಹರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ದುರಂತಕ್ಕೆ ಕಾರಣವಾಗಿತ್ತು.
ಕೇಂದ್ರಸರ್ಕಾರದ ವೈಜ್ಞಾನಿಕ ಸಲಹೆಗಾರ ಡಾ. ಕೆ ವಿಜಯರಾಘವನ್ ಅವರು ಜೂನ್ ತಿಂಗಳಿನ ಆರಂಭ ಅಥವಾ ಮಧ್ಯದ ವೇಳೆಗೆ ದೇಶದಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗುವ ಲಕ್ಷಣಗಳಿವೆ ಎಂದು ಸರ್ಕಾರಕ್ಕೆ ಮತ್ತು ದೇಶಕ್ಕೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಆಸ್ಪತ್ರೆಗಳ ಅವ್ಯಸ್ಥೆಯನ್ನು ತೆರೆದಿಟ್ಟ ಕೊರೋನಾ ಸಾಂಕ್ರಾಮಿಕ