20 ರೂಪಾಯಿಯ ಧ್ವಜವನ್ನು ಖರೀದಿಸಿದರೆ ನಿಮಗೆ ಪಡಿತರ ಸಿಗುತ್ತದೆ ಇಲ್ಲದಿದ್ದರೆ ನಿಮಗೆ ಪಡಿತರ ನೀಡುವುದಿಲ್ಲ ಎಂದು ಬಡವರಿಗೆ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ಜರುಗಿದೆ.
ಕರ್ನಾಲ್ ಜಿಲ್ಲೆಯ ಹೆಮ್ಡ ಪ್ರದೇಶದ ನ್ಯಾಯಬೆಲೆ ಅಂಗಡಿಯ ಮಾಲೀಕನೊಬ್ಬ ಪ್ರತಿಯೊಬ್ಬ ಪಡಿತರ ಚೀಟಿದಾರರು ಸಹ 20 ರೂ ಕೊಟ್ಟು ರಾಷ್ಟ್ರಧ್ವಜ ಖರೀದಿಸಬೇಕು ಎಂದು ಧಮಕಿ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ರೀತಿಯಾಗಿ ತಿರಂಗ ಕೊಳ್ಳುವಂತೆ ಬಡವರ ಮೇಲೆ ಒತ್ತಡ ಹೇರುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಡವರ ಮೇಲೆ ಬಲವಂತದ ದೇಶಪ್ರೇಮ ಹೇರುವುದು ಸರಿಯಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ.
“ಪಡಿತರ ಚೀಟಿದಾರರನ್ನು ತ್ರಿವರ್ಣ ಧ್ವಜವನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಖರೀದಿಸದಿದ್ದರೆ ಅವರ ಪಡಿತರ ನೀಡುವುದಿಲ್ಲ ಎಂದು ಬೆದರಿಸಲಾಗುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂಭ್ರಮವು ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ” ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
आजादी की 75वीं वर्षगाँठ का उत्सव गरीबों पर ही बोझ बन जाए तो दुर्भाग्यपूर्ण होगा।
राशनकार्ड धारकों को या तिरंगा खरीदने पर मजबूर किया जा रहा है या उसके बदले उनके हिस्से का राशन काटा जा रहा है।
हर भारतीय के हृदय में बसने वाले तिरंगे की कीमत गरीब का निवाला छीन कर वसूलना शर्मनाक है। pic.twitter.com/pYKZCfGaCV
— Varun Gandhi (@varungandhi80) August 10, 2022
ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿರುವ ತ್ರಿವರ್ಣ ಧ್ವಜದ ಬೆಲೆಯು ಬಡವರ ತುತ್ತನ್ನು ಕಸಿದುಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ
ವಿಷಯ ವೈರಲ್ ಆದ ನಂತರ ತಿರಂಗ ಕೊಳ್ಳುವಂತೆ ಒತ್ತಡ ಹೇರಿದ್ದ ಡಿಪೋ ಮಾಲೀಕನನ್ನು ಅಮಾನತ್ತು ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಹೆಮ್ಡಾ ಗ್ರಾಮದ ಪಡಿತರ ಡಿಪೋದಾರರೊಬ್ಬರು 20 ರೂಪಾಯಿ ದರದಲ್ಲಿ ತಿರಂಗವನ್ನು ಖರೀದಿಸದಿದ್ದಲ್ಲಿ ಅವರಿಗೆ ಪಡಿತರ ಸಾಮಾಗ್ರಿ ನೀಡುವುದಿಲ್ಲ ಎಂದು ಧ್ವಜಗಳನ್ನು ಮಾರುತ್ತಿದ್ದರು. ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದ ಕೂಡಲೇ ಅವರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಕರ್ನಾಲ್ ಜಿಲ್ಲಾಧಿಕಾರಿ ಅನೀಶ್ ಯಾದವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರಿಗೆ ಸುಲಭವಾಗಿ ತ್ರಿವರ್ಣ ಧ್ವಜಗಳು ಸಿಗುವಂತಾಗಲಿ ಎಂದು ಜಿಲ್ಲಾಡಳಿತದ ವತಿಯಿಂದ 88,400 ಧ್ವಜಗಳನ್ನು ರೇಷನ್ ಡಿಪೋಗಳಿಗೆ ನೀಡಿದ್ದೆವು. ಜನರು ಇಷ್ಟಪಟ್ಟು ಖರೀದಿಸಲಿ ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ ಡಿಪೋ ಮಾಲೀಕರು ಕಡ್ಡಾಯ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ತ್ರಿವರ್ಣ ಧ್ವಜ ಕೊಳ್ಳುವಂತೆ ಒತ್ತಡ ಹೇರಿದ್ದು ನಿಜ ಎಂದು ಡಿಪೋ ಮಾಲೀಕ ಒಪ್ಪಿಕೊಂಡಿದ್ದಾನೆ. ಧ್ವಜಗಳನ್ನು ಮಾರುವಂತೆ ನಮಗೆ ಆದೇಶವಿದೆ. ಧ್ವಜಗಳನ್ನು ಈ ಮೊದಲೇ ನಾವು ಹಣ ಪಾವತಿಸಿ ತಂದಿದ್ದೇವೆ. ಹಾಗಾಗಿ 20 ರೂ ಪಾವತಿಸಿ ಧ್ವಜ ಕೊಳ್ಳದವರಿಗೆ ನಾನು ಪಡಿತರವನ್ನು ನೀಡುತ್ತಿಲ್ಲ. ಪಡಿತರ ಪಡೆಯುವವರಿಗೆ ಧ್ವಜ ಕೊಳ್ಳುವುದನ್ನು ಕಡ್ಡಾಯ ಮಾಡಿ ಎಂದು ಇಲಾಖೆಯ ಇನ್ಸ್ಪೆಕ್ಟರ್ ಆದೇಶ ನೀಡಿದ್ದಾರೆ. ಅವರ ಆದೇಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯ” ಎಂದು ಮಾಧ್ಯಮದವರ ಬಳಿ ಮಾತನಾಡಿದ್ದಾನೆ.
ಇದನ್ನೂ ಓದಿ; ತಿರಂಗ ಯಾತ್ರೆ ವೇಳೆ ಹೊಡೆದಾಡಿಕೊಂಡ ಬಿಜೆಪಿ ಕಾರ್ಯಕರ್ತರು: ದಂಗೆಯಾತ್ರೆ ಮಾಡಬೇಡಿ ಎಂದ ಅಖಿಲೇಶ್