Homeಕರ್ನಾಟಕತಲೆ ಮೇಲೆ ಬಟ್ಟೆ ಇದ್ದರೆ ನಿಮಗೇನು ತೊಂದರೆ?: ದೇವನೂರ ಮಹಾದೇವ

ತಲೆ ಮೇಲೆ ಬಟ್ಟೆ ಇದ್ದರೆ ನಿಮಗೇನು ತೊಂದರೆ?: ದೇವನೂರ ಮಹಾದೇವ

ಇವತ್ತು ಮನುಷ್ಯರು ಧರ್ಮ ಹಾಗೂ ದೇವರಿಗೆ ತಮ್ಮ ರೋಗವನ್ನು ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮ ಜಾಡ್ಯ ಎನ್ನುತ್ತಾರೆ: ದೇಮ

- Advertisement -
- Advertisement -

“ತಲೆ ಮೇಲೆ ಬಟ್ಟೆ ಇದ್ದರೆ ನಿಮಗೇನೂ ತೊಂದರೆ? ಯೂನಿಫಾರ್ಮ್ ಜೊತೆಯಲ್ಲಿ ಹಿಜಾಬ್‌ ಧರಿಸಿದರೆ ತಪ್ಪೇನು? ಮುಖವನ್ನೇನು ಮುಚ್ಚುವುದಿಲ್ಲವಲ್ಲ?” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಪ್ರಶ್ನಿಸಿದ್ದಾರೆ.

ಟಿ.ವಿ.9 ವಾಹಿನಿಯೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿನ ಬೆಳವಣಿಗೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಜಾಬ್‌ ವಿವಾದದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಯೂನಿಫಾರ್ಮ್‌ ಜೊತೆ ಹಿಜಾಬ್‌ ಹಾಕಿಕೊಂಡರೆ ಯೂನಿಫಾರ್ಮ್‌ಗೆ ಯಾವುದೇ ತೊಂದರೆ ಆಗಲ್ಲ. ಯೂನಿಫರ್ಮ್‌ನೂ ಹಾಕಿಕೊಳ್ಳಿ, ಹಿಜಾಬ್‌ನೂ ಹಾಕಿಕೊಳ್ಳಲಿ. ಹಿಜಾಬ್- ಹೆಚ್ಚಿಗೆ ಅಲಂಕಾರವೇ ಆಗಿಬಿಡಬಹುದು. ಇದನ್ನು ವಿವಾದ ಮಾಡಿಕೊಳ್ಳುವುದು ಬೇಡ” ಎಂದು ಆಶಿಸಿದ್ದಾರೆ.

ಇಲ್ಲಿ ಏನಾಗಿದೆ ಎಂದರೆ- ಅಹಂಕಾರದ ಸಮಸ್ಯೆ ಬಂದಿದೆ. ದ್ವೇಷದ ಸಮಸ್ಯೆ ಇದೆ. ಪಟ್ಟಭದ್ರ ಹಿತಾಸಕ್ತಿಗಳ ರಾಜಕಾರಣ ಇದೆ. ಆದರೆ ಹಿಜಾಬ್ ಹಾಕಿಕೊಂಡರೆ ಏನು ತಪ್ಪಾಗುತ್ತದೆ? ಬೇರೆ ಬೇರೆ ಹುಡುಗಿಯರು ವೇಲ್‌ ಹಾಕಿಕೊಳ್ಳುವಂತೆ ತಲೆಯ ಮೇಲೆ ಹಾಕಿಕೊಳ್ಳುತ್ತಾರಪ್ಪ. ಯೂನಿಫಾರ್ಮ್‌ ಜೊತೆ ಹಿಜಾಬ್‌ ಬರಲೆಂದು ಆಪೇಕ್ಷೆ ಪಡುತ್ತೇನೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ಮುಂದೆ ಈ ಪ್ರಕರಣವಿದೆ. ಇದಕ್ಕೆ ಒಂದು ಪರಿಹಾರ ಕೊಡಬೇಕು. ಅಲ್ಲಿಯವರೆಗೂ ತೂಗುಗತ್ತಿ ಆಡುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.

ಇವತ್ತು ಮನುಷ್ಯರು ಧರ್ಮ ಹಾಗೂ ದೇವರಿಗೆ ತಮ್ಮ ರೋಗವನ್ನು ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮ ಜಾಡ್ಯ ಎನ್ನುತ್ತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯವರು, ಯಾವುದೇ ರಾಗ ದ್ವೇಷ ಇಲ್ಲದೆ ಇರುವವರು. ಈ ಧರ್ಮ ಜಾಡ್ಯದಿಂದ ಬಿಡುಗಡೆ ಪಡೆಯಲಿ ಎಂದು ಆಶಿಸಿದ್ದಾರೆ.

ಇದನ್ನೂ ಓದಿರಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

“ತರಗತಿ ಒಳಗಡೆ ಹಿಜಾಬ್‌ ಇರಬಾರದೆಂಬುದು ಸದ್ಯದ ಆಕ್ಷೇಪ” ಎಂದು ಮಾಧ್ಯಮ ಪ್ರತಿನಿಧಿ ಕೇಳಿದಾಗ, “ಕೂದಲು ಹಾರಾಡಬಾರದು ಅಂತ ತಾನೇ ಹಿಜಾಬ್ ಹಾಕೋದು? ಬಿಟ್ಟು ಬಿಡಿ, ಇದನ್ನೇಕೆ ದೊಡ್ಡದು ಮಾಡ್ತಾ ಇದ್ದೀರಿ. ಅದು ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ನಿಷೇಧ ಮಾಡಿದರೆ, ಪ್ರತಿಭಟನಾತ್ಮಕವಾಗಿ ಬೇರೆಯವರೂ ಹಿಜಾಬ್ ಹಾಕುತ್ತಾರೆ. ಅದು ಹೆಚ್ಚಿಗೆ ಆಗುತ್ತಾ ಹೋಗುತ್ತದೆ” ಎಂದು ಎಚ್ಚರಿಸಿದ್ದಾರೆ.

ವಿದ್ಯಾರ್ಥಿಗಳ ಮುಂದೆ ದೇಶದ ಸಮಸ್ಯೆಗಳನ್ನು ಬಿಚ್ಚಿಟ್ಟಿರುವ ಅವರು, “ಗಮನಿಸಿ, ಮಧ್ಯಮ ವರ್ಗ ಬಡತನದ ಕಡೆಗೆ ಹೋಗುತ್ತಿದೆ. ಬಡವರು ಹಸಿವಿನ ಕಡೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳಲ್ಲವೇ ಕೈಗೆ ತೆಗೆದುಕೊಳ್ಳಬೇಕಾದದ್ದು?” ಎಂದು ಕೇಳಿದ್ದಾರೆ.

ಮತ್ತೊಂದು ಕಡೆ ಬಂಡವಾಳಶಾಹಿಗಳ ಕೈಗೆ ಸಂಪತ್ತು ಹೋಗುತ್ತಿದೆ. ದೇಶದ ಸಂಪತ್ತಿನ ಅರ್ಧ ಭಾಗ ಹತ್ತು ಜನರ ಕೈಲಿ ಇದೆ. ಅಂಥವರ ಸಂಪತ್ತು ಕೊರೊನಾ ಇದ್ದಾಗ, ಜಿಎಸ್‌ಟಿ ಇದ್ದಾಗ, ನೋಟ್ ಬ್ಯಾನ್‌ ಆಗಿ ಜನರು ತತ್ತರಿಸುವಾಗ ಹೆಚ್ಚಾಯಿತ್ತಲ್ಲಪ್ಪ? ಇದಕ್ಕೆ ಕಾರಣವೇನು? ಲೂಟಿ ಎಲ್ಲಾಗುತ್ತಿದೆ? ಇದನ್ನು ಎಚ್ಚೆತ್ತ ವಿದ್ಯಾರ್ಥಿಗಳು ಸಮಾಜಕ್ಕೆ ಹೇಳಬೇಕು. ನಾವು ಅವರಿಗೆ ಹೇಳೋದಲ್ಲ, ಅವರೇ ಸಮಾಜಕ್ಕೆ ಹೇಳಬೇಕು. ಈ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಕಿವಿಮಾತು ಹೇಳಿದ್ದಾರೆ.

ನೋಟ್ ಬ್ಯಾನ್‌ ಅವಾಂತರ, ಜಿಎಸ್‌ಟಿ ಅವಿವೇಕತನ- ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿವೆ. ಆರ್ಥಿಕ ತಜ್ಞರು, ತಿಳಿದವರು ಹೇಳುತ್ತಿರುವುದು ಏನಂದರೆ ಈ ಬಂಡವಾಳಶಾಹಿಗಳ ಸಂಪತ್ತಿನ ಮೇಲೆ ಶೇ. 2ರಷ್ಟು ತೆರಿಗೆ ವಿಧಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದು. ಪ್ರಾಥಮಿಕ ಆರೋಗ್ಯವನ್ನು ಅಭಿವೃದ್ಧಿಪಡಿಸಬಹುದು. ಶೇ. 2ಕ್ಕಿಂತ ಹೆಚ್ಚಿನ ತೆರಿಗೆಯನ್ನು ಕಾರ್ಪೋರೇಟ್‌ಗಳ ಮೇಲೆ ಕೇಂದ್ರ ಸರ್ಕಾರ ಹಾಕಲಿಲ್ಲ. ಬದಲಾಗಿ ಅವರ ಟ್ಯಾಕ್ಸ್‌ ಕಮ್ಮಿ ಮಾಡಿತು. ಇಲ್ಲದವರಿಗಲ್ಲ, ಉಳ್ಳವರಿಗೆ ಟ್ಯಾಕ್ಸ್‌ ಕಡಿಮೆ ಮಾಡಿತು. ಉಳ್ಳವರ ಸಾಲವನ್ನು ಮನ್ನಾ ಮಾಡುತ್ತೆ. ರೈತರು ಕೇಳಿದರೂ ಮಾಡಲ್ಲ. ಉಳ್ಳವರಿಗೆ ಭೂಮಿ ರಿಯಾಯಿತಿ, ನೀರಿನ ರಿಯಾಯಿತಿ, ವಿದ್ಯುತ್ ರಿಯಾರಿತಿ ನೀಡಲಾಗುತ್ತಿದೆ. ಇಲ್ಲದವರಿಗೆ ಯಾಕಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಬೇಕಾದದ್ದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ರಾಹುಲ್‌ ಗಾಂಧಿ ಜೊತೆಯಲ್ಲಿ ದಿಟ್ಟ ಹುಡುಗಿ ಮುಸ್ಕಾನ್‌ ಫೋಟೋ ತೆಗೆದುಕೊಂಡಿದ್ದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...