Homeಕರ್ನಾಟಕಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

- Advertisement -
- Advertisement -

| ಸೋಮಶೇಖರ ಚಲ್ಯ |
ಸಕ್ಕರೆ ನಾಡು ಎನ್ನುವ ಹೆಗ್ಗಳಿಕೆ ಇರುವ ಮಂಡ್ಯ ಈಗೀಗ ಗುರುತಿಸಿಕೊಳ್ಳುತ್ತಿರುವುದು ಹಲವು ಕುಖ್ಯಾತ ಕಾರಣಗಳಿಂದ. ರೈತರ ಆತ್ಮಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿಯಾಧಾರಿತ ದೌರ್ಜನ್ಯಗಳ ಕುಖ್ಯಾತಿಯ ಪಟ್ಟಿಯಲ್ಲಿ ಮಂಡ್ಯ ಮೊದಲ ಶ್ರೇಣಿಯಲ್ಲಿರುವುದು ಮಂಡ್ಯದ ಘನತೆಯನ್ನು ಕುಂದಿಸುತ್ತಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ, ಕಲ್ಲಿನ ಕ್ವಾರೆಗಳಲ್ಲಿ ನಿಗೂಢ ಸಾವುಗಳು. ಕೆಆರ್‍ಎಸ್ ಸುತ್ತಮುತ್ತಲಿನ ಶ್ರೀರಂಗಪಟ್ಟಣ, ಬೇಬಿ ಬೆಟ್ಟ ಮುಂತಾದ ಹಲವಾರು ಪ್ರದೇಶಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಾಜಕೀಯ ಬಲ ಹಾಗೂ ತೋಳ್ಬಲಗಳಿಂದ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದರಿಂದಾಗಿ ಆ ಪ್ರದೇಶಗಳು ಬಳ್ಳಾರಿಯಂತಹ ಮೈನಿಂಗ್ ತಾಣಗಳಂತೆ ಕಾಣುತ್ತಿದ್ದು, ಮಂಡ್ಯದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ಗಣಿಗಾರಿಕೆಗಳಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೂ ಅಪಾಯ ಬಂದಿದೆಯೆಂದು, ಅದರ ಉಳಿವಿಗಾಗಿ ಮೈನಿಂಗ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ.

ಇದೆಲ್ಲದರ ನಡುವೆ ಕ್ವಾರೆಗಳಲ್ಲಿ ಕೂಲಿ ಕೆಲಸ ಮಾಡುವ ಜನರ ಸಾವುಗಳು ಸರಣಿ ರೀತಿಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ಸಾವುಗಳಿಗೆ ಕಾರಣವನ್ನು ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸೋತಿರುವುದು ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್ 20ರ ರಾತ್ರಿ ಮತ್ತೊಬ್ಬ ಕೂಲಿ ಕಾರ್ಮಿಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಕ್ವಾರೆಯಲ್ಲಿ ರಾತ್ರಿ 11 ಗಂಟೆಯ ವೇಳೆಗೆ ಕಂಪ್ರೆಸರ್ ಮೂಲಕ ಕುಳಿ ತೋಡಲು ಹೋಗಿದ್ದ ಕಾರ್ಮಿಕ ರಾಜು ಸಾವನ್ನಪ್ಪಿದ್ದಾನೆ. ಹಿಂದೆ ಒಂದು ಸಾರಿ ಕಲ್ಲನ್ನು ಸಿಡಿಸಲು ತೆಗೆದಿದ್ದ ಹಳೇ ಕುಳಿಯಲ್ಲಿ ಸಿಡಿಮದ್ದು ತುಂಬಿಯೂ ಅದು ಸಿಡಿದಿರಲಿಲ್ಲ. ಈಗ ಅದೇ ಸಿಡಿಮದ್ದು ತುಂಬಿದ್ದ ಕುಳಿಯಲ್ಲಿ ಮತ್ತೆ ಕುಳಿ ತೆಗೆದು ಸಿಡಿಸಲು ಹೋಗಿದ್ದಾರೆ. ಮೊದಲೇ ತುಂಬಿದ್ದ ಸಿಡಿಮದ್ದು ಕುಳಿ ಹಾಕುತ್ತಿದ್ದಂತೆಯೇ ಸಿಡಿದು ಹೋಗಿದೆ. ಇದರಿಂದ ರಾಜು ಸಾವನ್ನಪ್ಪಿದ್ದಾನೆ, ಆತನ ಸಂಬಂಧಿ ಮುನಿಯಪ್ಪನಿಗೆ ಕೈ ಮುರಿದಿದೆ. ಆದರೆ, ಕ್ವಾರೆಯ ಮಾಲೀಕರಾದ ಮೀನಾಕ್ಷಿ, ನಂಜೇಗೌಡ ಮತ್ತು ಸಂತೋಷ್ ಕಂಪ್ರೇಸರ್ ಟ್ರ್ಯಾಕ್ಟರ್ ಮಗುಚಿ ಆತ ಸಾವಿನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಪ್ರೊ.ಹುಲ್ಕೆರೆ ಮಹದೇವ ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ಮೊದಲೇನಲ್ಲ. ರಾಜ್ಯದ ಹಲವಾರು ಹಳ್ಳಿಗಳಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಉದ್ಯೋಗಗಳನ್ನು ಅರಸಿ ಬರುತ್ತಾರೆ. ಅಂತಹ ಜನರಿಗೆ ಒಂದಷ್ಟು ಮೊತ್ತದ ದುಡ್ಡು ಕೊಟ್ಟು ಇಂತಿಷ್ಟು ವರ್ಷಗಳಿಗೆ ಎಂದು ಜೀತದ ರೀತಿಯಲ್ಲಿ ದುಡಿಸಿಕೊಳ್ಳುವುದು ಕ್ವಾರೆಗಳಲ್ಲಿ ಇನ್ನು ತಪ್ಪಿಲ್ಲ. ದಾರುಣ ಬಡತನದಲ್ಲಿರುವ ಜನ ಈಗಲೂ ಜೀತದಾಳುಗಳಾಗಿ ಬಂದು ದುಡಿಯುತ್ತಿದ್ದಾರೆ.

ಇದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯ ಪ್ರಕರಣಗಳು ಎಲ್ಲರಿಗೂ ನೆನಪಿದ್ದೇ ಇರುತ್ತದೆ. 18 ವರ್ಷಗಳ ಹಿಂದೆ, ಹಂಗರಹಳ್ಳಿಯಲ್ಲಿ ಕಾಲಿಗೆ ಕೋಳ ತೊಡಿಸಿ ಕಾರ್ಮಿಕರು ಎಲ್ಲೂ ಹೋಗದಂತೆ ಒಂದೇ ಕಡೆ ಕಟ್ಟಿ ದುಡಿಸಲಾಗುತ್ತಿತ್ತು. ರೈತಸಂಘವು ಅದನ್ನು ಬಯಲಿಗೆ ತಂದನಂತರ ದೇಶಾದ್ಯಂತ ಸುದ್ದಿ ಆಗಿತ್ತು. ನಂತರದಲ್ಲಿ ಆ ಸಂತ್ರಸ್ತರನ್ನೇ ಹೆದರಿಸಿ, ತಮಗೆ ಸಿನೆಮಾ ಶೂಟಿಂಗ್ ಕಾರಣಕ್ಕೆ ಕೋಳ ತೊಡಿಸಲಾಗಿತ್ತೆಂದು ಸಾಕ್ಷಿ ನುಡಿಸಿದ್ದರು. ಅಂತಿಮವಾಗಿ ಕೇಸು ಬಿದ್ದುಹೋಗಿತ್ತು. ಇಷ್ಟಾದ ನಂತರ ಇದೇ ಹಂಗರಹಳ್ಳಿಯಲ್ಲಿ 2018ರ ಅಕ್ಟೋಬರ್‍ನಲ್ಲಿಯೂ ತನ್ನ ದುಡಿಮೆಯ ಲೆಕ್ಕ ಕೇಳಿದ ಕರಿಯಪ್ಪ ಮಾದರ್ ಎಂಬ ಜೀತಗಾರನನ್ನು ಕೊಂದು ನೇಣುಹಾಕಲಾಗಿತ್ತೆಂದು ಹೇಳಲು ಹಲವು ಸಾಂದರ್ಭಿಕ ಸಾಕ್ಷ್ಯಗಳಿದ್ದವು. ಆಗಲೂ ಪ್ರಕರಣ ಮುಚ್ಚಿಹೋಗದಂತೆ ಸ್ಥಳೀಯ ಹೋರಾಟಗಾರರು ಅದನ್ನು ಬೆಳಕಿಗೆ ತಂದಿದ್ದರು. ಅದೇ ಸಮಯದಲ್ಲಿ ಮದ್ದೂರಿನ ಕುದುರುಗುಂಡಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಜೀತಕ್ಕಿರಿಸಿಕೊಂಡು ದುಡಿಸಲಾಗುತ್ತಿತ್ತು. ಆಕೆ ಜೀತವನ್ನು ನಿರಾಕರಿಸಿ ಹೊರಹೋಗಿದ್ದರಿಂದ, ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯಗಳ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನೂ ಮಾಡಿದ್ದೆವು.

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

ರಾತ್ರಿಯ ವೇಳೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸುವುದರಿಂದ ರಾಜು ಮತ್ತು ಮುನಿಯಪ್ಪ ಕ್ವಾರೆಯಲ್ಲಿ ಕುಳಿ ತೆಗೆಯಲು ಬಂದಿದ್ದಾಗ ಈ ಘಟನೆ ನಡೆದಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ಶವವನ್ನು ಪೊಲೀಸ್ ಮಹಜರ್ ಮಾಡುವುದಕ್ಕೂ ಮೊದಲೇ ಯಾರಿಗೂ ತಿಳಿಯದಂತೆ ಜಲ್ಲಿ ಕ್ರಷರ್‍ನಲ್ಲಿ ಅಡಗಿಸಿಟ್ಟಿದ್ದಾರೆ. ಕ್ರಷರ್ ಬಳಿಗೆ ಯಾರೂ ಬಾರದಂತೆ ರಸ್ತೆಯಲ್ಲಿ ಗುಂಡಿ ತೋಡಿದ್ದಾರೆ. ಬೆಳಗ್ಗೆಯ ವೇಳೆಗೆ ಆತನ ಕುಟುಂಬಕ್ಕೆ 4.5 ಲಕ್ಷದಷ್ಟು ಹಣ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಆ ಸಮಯಕ್ಕೆ ಘಟನೆಯ ವಿಷಯ ಅಕ್ಕ-ಪಕ್ಕದವರಿಗೆ ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.

ಜೂನ್ 21ರಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರ ಹಿರಿಯ ಹೋರಾಟಗಾರರಿಗೆ ವಿಷಯ ತಿಳಿದಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರನ್ನು ವಿಚಾರಿಸಿದ್ದಾರೆ. ತಹಶೀಲ್ದಾರ್ ಆ ವಿಷಯ ತಮಗೆ ತಿಳಿದೇ ಇಲ್ಲವೆಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅರಕೆರೆ ಪೊಲೀಸರೂ ತಮಗೂ ವಿಷಯ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಇಂಥದೊಂದು ಘಟನೆ ನಡೆದಿದೆ, ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಗಾರರು ಹೇಳುವಾಗ, ಆ ಮಾಲೀಕ ದಲಿತ ಜಾತಿಗೆ ಸೇರಿದವರು ಏನ್ ಮಾಡ್ತಿರಾ ಎಂದು ಅರಕೆರೆ ಪೊಲೀಸ್ ಠಾಣೆಯ ಎಸ್‍ಐ ಹೇಳಿದ್ದಾರೆ. ಇದು ಪೊಲೀಸರು ಕ್ವಾರೆಯ ಮಾಲೀಕರೊಂದಿಗೆ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದು ಅವರ ಆರೋಪ. ಮೊದಲೇ ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿರುವುದು ಹಸಿಹಸಿಯಾಗಿ ಬಯಲಾದ ನಂತರ ಅವರು ತಬ್ಬಿಬ್ಬಾದರು ಮತ್ತು ಆಗ ಪೊಲೀಸರು ಮತ್ತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡೆವೆಂದು ಹೇಳಿದ್ದಾರೆ.

ನಂತರ ಸಂಜೆ 4.30ರ ವೇಳೆಗೆ ಮೈಸೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ತಂದಿದ್ದಾರೆ. ಅಲ್ಲಿಯವರೆಗೂ ಶವ ಎಲ್ಲಿತ್ತು ಎಂಬ ಸುಳಿವೇ ಸಿಕ್ಕಿಲ್ಲ, ಮಹಜರ್ ಸಹಾ ಮಾಡಲಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‍ಐಆರ್ ಆಗದೆ ಪೋಸ್ಟ್‍ಮಾರ್ಟಂ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅಪಘಾತ ಸಾವು ಎಂದು ಎಫ್‍ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಪ್ರೆಸರ್ ಟ್ರ್ಯಾಕ್ಟರ್ ಮೇಲಿತ್ತು, ನಾವು ಹೋಗುವ ಸಮಯದಲ್ಲಿ ಅದು ಉರುಳಿಬಿತ್ತು ಎಂದು ಮುನಿಯಪ್ಪ ಹೇಳಿಕೆ ನೀಡಿದ್ದಾನೆ. ಆದರೆ ಈ ಹೇಳಿಕೆಯು ಮಾಲೀಕರ ಮೇಲಿನ ಭಯದಿಂದ ಬಂದಿದೆ ಎಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹಜರು ಮಾಡದೆ ಮತ್ತು ಎಫ್‍ಐಆರ್ ಹಾಕದೆ ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಹಜರ್ ಮಾಡದೇ ಶವವನ್ನ ತೆಗೆದಿದ್ದು ಯಾಕೆ? ಯಾರು ಆ ಸ್ಥಳಕ್ಕೆ ಬಾರದಂತೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು ಯಾಕೆ? ಎಫ್‍ಐಆರ್ ದಾಖಲಿಸದೇ ಪೋಸ್ಟ್ ಮಾರ್ಟಮ್‍ಗೆ ತೆಗೆದುಕೊಂಡು ಹೋಗಿದ್ದಾರೆ, ಅಲ್ಲಿಯವರೆಗೆ ಶವ ಎಲ್ಲಿತ್ತು? ಶವವನ್ನು ಬಚ್ಚಿಟ್ಟಿದ್ದು ಯಾಕೆ? ಇಷ್ಟೆಲ್ಲಾ ಆದರೂ ಪೊಲೀಸರು ಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಯಾಕೆ? ಇವೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಪೋಸ್ಟ್‍ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿಲ್ಲ.

ಈಗಲಾದರೂ ಇದನ್ನೊಂದು ಪ್ರತ್ಯೇಕ ಆಕಸ್ಮಿಕ ಘಟನೆ ಎಂದು ನೋಡದೇ, ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ, ನಿಗೂಢ ಸಾವುಗಳು ಇದರ ಕುರಿತಂತೆ ಸಮಗ್ರ ತನಿಖೆ ಹಾಗೂ ಕ್ರಮಗಳು ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...