Homeಕರ್ನಾಟಕಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

- Advertisement -
- Advertisement -

| ಸೋಮಶೇಖರ ಚಲ್ಯ |
ಸಕ್ಕರೆ ನಾಡು ಎನ್ನುವ ಹೆಗ್ಗಳಿಕೆ ಇರುವ ಮಂಡ್ಯ ಈಗೀಗ ಗುರುತಿಸಿಕೊಳ್ಳುತ್ತಿರುವುದು ಹಲವು ಕುಖ್ಯಾತ ಕಾರಣಗಳಿಂದ. ರೈತರ ಆತ್ಮಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿಯಾಧಾರಿತ ದೌರ್ಜನ್ಯಗಳ ಕುಖ್ಯಾತಿಯ ಪಟ್ಟಿಯಲ್ಲಿ ಮಂಡ್ಯ ಮೊದಲ ಶ್ರೇಣಿಯಲ್ಲಿರುವುದು ಮಂಡ್ಯದ ಘನತೆಯನ್ನು ಕುಂದಿಸುತ್ತಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ, ಕಲ್ಲಿನ ಕ್ವಾರೆಗಳಲ್ಲಿ ನಿಗೂಢ ಸಾವುಗಳು. ಕೆಆರ್‍ಎಸ್ ಸುತ್ತಮುತ್ತಲಿನ ಶ್ರೀರಂಗಪಟ್ಟಣ, ಬೇಬಿ ಬೆಟ್ಟ ಮುಂತಾದ ಹಲವಾರು ಪ್ರದೇಶಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಾಜಕೀಯ ಬಲ ಹಾಗೂ ತೋಳ್ಬಲಗಳಿಂದ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದರಿಂದಾಗಿ ಆ ಪ್ರದೇಶಗಳು ಬಳ್ಳಾರಿಯಂತಹ ಮೈನಿಂಗ್ ತಾಣಗಳಂತೆ ಕಾಣುತ್ತಿದ್ದು, ಮಂಡ್ಯದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ಗಣಿಗಾರಿಕೆಗಳಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೂ ಅಪಾಯ ಬಂದಿದೆಯೆಂದು, ಅದರ ಉಳಿವಿಗಾಗಿ ಮೈನಿಂಗ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ.

ಇದೆಲ್ಲದರ ನಡುವೆ ಕ್ವಾರೆಗಳಲ್ಲಿ ಕೂಲಿ ಕೆಲಸ ಮಾಡುವ ಜನರ ಸಾವುಗಳು ಸರಣಿ ರೀತಿಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ಸಾವುಗಳಿಗೆ ಕಾರಣವನ್ನು ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸೋತಿರುವುದು ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್ 20ರ ರಾತ್ರಿ ಮತ್ತೊಬ್ಬ ಕೂಲಿ ಕಾರ್ಮಿಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಕ್ವಾರೆಯಲ್ಲಿ ರಾತ್ರಿ 11 ಗಂಟೆಯ ವೇಳೆಗೆ ಕಂಪ್ರೆಸರ್ ಮೂಲಕ ಕುಳಿ ತೋಡಲು ಹೋಗಿದ್ದ ಕಾರ್ಮಿಕ ರಾಜು ಸಾವನ್ನಪ್ಪಿದ್ದಾನೆ. ಹಿಂದೆ ಒಂದು ಸಾರಿ ಕಲ್ಲನ್ನು ಸಿಡಿಸಲು ತೆಗೆದಿದ್ದ ಹಳೇ ಕುಳಿಯಲ್ಲಿ ಸಿಡಿಮದ್ದು ತುಂಬಿಯೂ ಅದು ಸಿಡಿದಿರಲಿಲ್ಲ. ಈಗ ಅದೇ ಸಿಡಿಮದ್ದು ತುಂಬಿದ್ದ ಕುಳಿಯಲ್ಲಿ ಮತ್ತೆ ಕುಳಿ ತೆಗೆದು ಸಿಡಿಸಲು ಹೋಗಿದ್ದಾರೆ. ಮೊದಲೇ ತುಂಬಿದ್ದ ಸಿಡಿಮದ್ದು ಕುಳಿ ಹಾಕುತ್ತಿದ್ದಂತೆಯೇ ಸಿಡಿದು ಹೋಗಿದೆ. ಇದರಿಂದ ರಾಜು ಸಾವನ್ನಪ್ಪಿದ್ದಾನೆ, ಆತನ ಸಂಬಂಧಿ ಮುನಿಯಪ್ಪನಿಗೆ ಕೈ ಮುರಿದಿದೆ. ಆದರೆ, ಕ್ವಾರೆಯ ಮಾಲೀಕರಾದ ಮೀನಾಕ್ಷಿ, ನಂಜೇಗೌಡ ಮತ್ತು ಸಂತೋಷ್ ಕಂಪ್ರೇಸರ್ ಟ್ರ್ಯಾಕ್ಟರ್ ಮಗುಚಿ ಆತ ಸಾವಿನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಪ್ರೊ.ಹುಲ್ಕೆರೆ ಮಹದೇವ ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ಮೊದಲೇನಲ್ಲ. ರಾಜ್ಯದ ಹಲವಾರು ಹಳ್ಳಿಗಳಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಉದ್ಯೋಗಗಳನ್ನು ಅರಸಿ ಬರುತ್ತಾರೆ. ಅಂತಹ ಜನರಿಗೆ ಒಂದಷ್ಟು ಮೊತ್ತದ ದುಡ್ಡು ಕೊಟ್ಟು ಇಂತಿಷ್ಟು ವರ್ಷಗಳಿಗೆ ಎಂದು ಜೀತದ ರೀತಿಯಲ್ಲಿ ದುಡಿಸಿಕೊಳ್ಳುವುದು ಕ್ವಾರೆಗಳಲ್ಲಿ ಇನ್ನು ತಪ್ಪಿಲ್ಲ. ದಾರುಣ ಬಡತನದಲ್ಲಿರುವ ಜನ ಈಗಲೂ ಜೀತದಾಳುಗಳಾಗಿ ಬಂದು ದುಡಿಯುತ್ತಿದ್ದಾರೆ.

ಇದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯ ಪ್ರಕರಣಗಳು ಎಲ್ಲರಿಗೂ ನೆನಪಿದ್ದೇ ಇರುತ್ತದೆ. 18 ವರ್ಷಗಳ ಹಿಂದೆ, ಹಂಗರಹಳ್ಳಿಯಲ್ಲಿ ಕಾಲಿಗೆ ಕೋಳ ತೊಡಿಸಿ ಕಾರ್ಮಿಕರು ಎಲ್ಲೂ ಹೋಗದಂತೆ ಒಂದೇ ಕಡೆ ಕಟ್ಟಿ ದುಡಿಸಲಾಗುತ್ತಿತ್ತು. ರೈತಸಂಘವು ಅದನ್ನು ಬಯಲಿಗೆ ತಂದನಂತರ ದೇಶಾದ್ಯಂತ ಸುದ್ದಿ ಆಗಿತ್ತು. ನಂತರದಲ್ಲಿ ಆ ಸಂತ್ರಸ್ತರನ್ನೇ ಹೆದರಿಸಿ, ತಮಗೆ ಸಿನೆಮಾ ಶೂಟಿಂಗ್ ಕಾರಣಕ್ಕೆ ಕೋಳ ತೊಡಿಸಲಾಗಿತ್ತೆಂದು ಸಾಕ್ಷಿ ನುಡಿಸಿದ್ದರು. ಅಂತಿಮವಾಗಿ ಕೇಸು ಬಿದ್ದುಹೋಗಿತ್ತು. ಇಷ್ಟಾದ ನಂತರ ಇದೇ ಹಂಗರಹಳ್ಳಿಯಲ್ಲಿ 2018ರ ಅಕ್ಟೋಬರ್‍ನಲ್ಲಿಯೂ ತನ್ನ ದುಡಿಮೆಯ ಲೆಕ್ಕ ಕೇಳಿದ ಕರಿಯಪ್ಪ ಮಾದರ್ ಎಂಬ ಜೀತಗಾರನನ್ನು ಕೊಂದು ನೇಣುಹಾಕಲಾಗಿತ್ತೆಂದು ಹೇಳಲು ಹಲವು ಸಾಂದರ್ಭಿಕ ಸಾಕ್ಷ್ಯಗಳಿದ್ದವು. ಆಗಲೂ ಪ್ರಕರಣ ಮುಚ್ಚಿಹೋಗದಂತೆ ಸ್ಥಳೀಯ ಹೋರಾಟಗಾರರು ಅದನ್ನು ಬೆಳಕಿಗೆ ತಂದಿದ್ದರು. ಅದೇ ಸಮಯದಲ್ಲಿ ಮದ್ದೂರಿನ ಕುದುರುಗುಂಡಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಜೀತಕ್ಕಿರಿಸಿಕೊಂಡು ದುಡಿಸಲಾಗುತ್ತಿತ್ತು. ಆಕೆ ಜೀತವನ್ನು ನಿರಾಕರಿಸಿ ಹೊರಹೋಗಿದ್ದರಿಂದ, ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯಗಳ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನೂ ಮಾಡಿದ್ದೆವು.

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು.

ರಾತ್ರಿಯ ವೇಳೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸುವುದರಿಂದ ರಾಜು ಮತ್ತು ಮುನಿಯಪ್ಪ ಕ್ವಾರೆಯಲ್ಲಿ ಕುಳಿ ತೆಗೆಯಲು ಬಂದಿದ್ದಾಗ ಈ ಘಟನೆ ನಡೆದಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ಶವವನ್ನು ಪೊಲೀಸ್ ಮಹಜರ್ ಮಾಡುವುದಕ್ಕೂ ಮೊದಲೇ ಯಾರಿಗೂ ತಿಳಿಯದಂತೆ ಜಲ್ಲಿ ಕ್ರಷರ್‍ನಲ್ಲಿ ಅಡಗಿಸಿಟ್ಟಿದ್ದಾರೆ. ಕ್ರಷರ್ ಬಳಿಗೆ ಯಾರೂ ಬಾರದಂತೆ ರಸ್ತೆಯಲ್ಲಿ ಗುಂಡಿ ತೋಡಿದ್ದಾರೆ. ಬೆಳಗ್ಗೆಯ ವೇಳೆಗೆ ಆತನ ಕುಟುಂಬಕ್ಕೆ 4.5 ಲಕ್ಷದಷ್ಟು ಹಣ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಆ ಸಮಯಕ್ಕೆ ಘಟನೆಯ ವಿಷಯ ಅಕ್ಕ-ಪಕ್ಕದವರಿಗೆ ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.

ಜೂನ್ 21ರಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರ ಹಿರಿಯ ಹೋರಾಟಗಾರರಿಗೆ ವಿಷಯ ತಿಳಿದಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರನ್ನು ವಿಚಾರಿಸಿದ್ದಾರೆ. ತಹಶೀಲ್ದಾರ್ ಆ ವಿಷಯ ತಮಗೆ ತಿಳಿದೇ ಇಲ್ಲವೆಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅರಕೆರೆ ಪೊಲೀಸರೂ ತಮಗೂ ವಿಷಯ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಇಂಥದೊಂದು ಘಟನೆ ನಡೆದಿದೆ, ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಗಾರರು ಹೇಳುವಾಗ, ಆ ಮಾಲೀಕ ದಲಿತ ಜಾತಿಗೆ ಸೇರಿದವರು ಏನ್ ಮಾಡ್ತಿರಾ ಎಂದು ಅರಕೆರೆ ಪೊಲೀಸ್ ಠಾಣೆಯ ಎಸ್‍ಐ ಹೇಳಿದ್ದಾರೆ. ಇದು ಪೊಲೀಸರು ಕ್ವಾರೆಯ ಮಾಲೀಕರೊಂದಿಗೆ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದು ಅವರ ಆರೋಪ. ಮೊದಲೇ ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿರುವುದು ಹಸಿಹಸಿಯಾಗಿ ಬಯಲಾದ ನಂತರ ಅವರು ತಬ್ಬಿಬ್ಬಾದರು ಮತ್ತು ಆಗ ಪೊಲೀಸರು ಮತ್ತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡೆವೆಂದು ಹೇಳಿದ್ದಾರೆ.

ನಂತರ ಸಂಜೆ 4.30ರ ವೇಳೆಗೆ ಮೈಸೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ತಂದಿದ್ದಾರೆ. ಅಲ್ಲಿಯವರೆಗೂ ಶವ ಎಲ್ಲಿತ್ತು ಎಂಬ ಸುಳಿವೇ ಸಿಕ್ಕಿಲ್ಲ, ಮಹಜರ್ ಸಹಾ ಮಾಡಲಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‍ಐಆರ್ ಆಗದೆ ಪೋಸ್ಟ್‍ಮಾರ್ಟಂ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅಪಘಾತ ಸಾವು ಎಂದು ಎಫ್‍ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಪ್ರೆಸರ್ ಟ್ರ್ಯಾಕ್ಟರ್ ಮೇಲಿತ್ತು, ನಾವು ಹೋಗುವ ಸಮಯದಲ್ಲಿ ಅದು ಉರುಳಿಬಿತ್ತು ಎಂದು ಮುನಿಯಪ್ಪ ಹೇಳಿಕೆ ನೀಡಿದ್ದಾನೆ. ಆದರೆ ಈ ಹೇಳಿಕೆಯು ಮಾಲೀಕರ ಮೇಲಿನ ಭಯದಿಂದ ಬಂದಿದೆ ಎಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹಜರು ಮಾಡದೆ ಮತ್ತು ಎಫ್‍ಐಆರ್ ಹಾಕದೆ ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಹಜರ್ ಮಾಡದೇ ಶವವನ್ನ ತೆಗೆದಿದ್ದು ಯಾಕೆ? ಯಾರು ಆ ಸ್ಥಳಕ್ಕೆ ಬಾರದಂತೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು ಯಾಕೆ? ಎಫ್‍ಐಆರ್ ದಾಖಲಿಸದೇ ಪೋಸ್ಟ್ ಮಾರ್ಟಮ್‍ಗೆ ತೆಗೆದುಕೊಂಡು ಹೋಗಿದ್ದಾರೆ, ಅಲ್ಲಿಯವರೆಗೆ ಶವ ಎಲ್ಲಿತ್ತು? ಶವವನ್ನು ಬಚ್ಚಿಟ್ಟಿದ್ದು ಯಾಕೆ? ಇಷ್ಟೆಲ್ಲಾ ಆದರೂ ಪೊಲೀಸರು ಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಯಾಕೆ? ಇವೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಪೋಸ್ಟ್‍ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿಲ್ಲ.

ಈಗಲಾದರೂ ಇದನ್ನೊಂದು ಪ್ರತ್ಯೇಕ ಆಕಸ್ಮಿಕ ಘಟನೆ ಎಂದು ನೋಡದೇ, ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ, ನಿಗೂಢ ಸಾವುಗಳು ಇದರ ಕುರಿತಂತೆ ಸಮಗ್ರ ತನಿಖೆ ಹಾಗೂ ಕ್ರಮಗಳು ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...