ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ತನ್ನ ಅಧಿಕೃತ ಲೋಗೋವನ್ನು ಬದಲಾಯಿಸಿದೆ. ಹೊಸ ಲೋಗೋದಲ್ಲಿ ‘ಇಂಡಿಯಾ’ ಬದಲು ‘ಭಾರತ’ ಎಂದು ಬರೆಯಲಾಗಿದೆ. ಅಲ್ಲದೆ, ರಾಷ್ಟ್ರೀಯ ಲಾಂಚನವನ್ನು ತೆಗೆದು ಹಾಕಿ ಆಯುರ್ವೇದದ ದೇವರು ಎನ್ನಲಾಗುವ ‘ಧನ್ವಂತರಿ’ಯ ಚಿತ್ರವನ್ನು ಸೇರಿಸಲಾಗಿದೆ.
ದೇಶದ ಉನ್ನತ ವೈದ್ಯಕೀಯ ನಿಯಂತ್ರಣ ಸಂಸ್ಥೆ ತನ್ನ ಲೋಗೋದಲ್ಲಿನ ರಾಷ್ಟ್ರೀಯ ಲಾಂಚನ ಸಿಂಹದ ಚಿತ್ರ ಕೈ ಬಿಟ್ಟು, ಹಿಂದೂಗಳ ಧನ್ವಂತರಿ ದೇವರ ಫೋಟೋ ಸೇರಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಧನ್ವಂತರಿಯ ಚಿತ್ರವನ್ನು ಆಗಾಗ ಆಯೋಗ ವಿವಿಧ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿತ್ತು. ಆದರೆ, ಈಗ ಲೋಗೋದೊಳಗೆ ಸೇರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಯೋಗ, ಧನ್ವಂತರಿಯ ಕಪ್ಪು-ಬಿಳುಪು ರೇಖಾಚಿತ್ರ ಈಗಾಗಲೇ ತನ್ನ ಹಳೆಯ ಲೋಗೋದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದೆ.
ಇದರಲ್ಲಿ (ಲೋಗೋ) ಏನೂ ದೊಡ್ಡ ಬದಲಾವಣೆ ಆಗಿಲ್ಲ. ಈಗಾಗಲೇ ಲೋಗೋದಲ್ಲಿ ಧನ್ವಂತರಿಯ ಕಪ್ಪು- ಬಿಳುಪು ರೇಖಾಚಿತ್ರ ಇತ್ತು. ಕಪ್ಪು ಬಿಳುಪು ಚಿತ್ರ ಮುದ್ರಿಸಲು ಸಾಧ್ಯವಾಗದ ಕಾರಣ ಅದಕ್ಕೆ ಬಣ್ಣ ಸೇರಿಸಬೇಕೆಂದು ಆಯೋಗ ಎಲ್ಲ ಸದಸ್ಯರು ಒಮ್ಮತದಿಂದ ನಿರ್ಧರಿಸಿದ್ದಾರೆ. ಆಯೋಗ ರಚನೆಯಾದಾಗ ಲೋಗೋದಲ್ಲಿ ಧನ್ವಂತರಿಯ ಚಿತ್ರವನ್ನು ಬಳಸಲು ನಿರ್ಧರಿಸಲಾಗಿತ್ತು. ಅಪೊಲೊ ಇತರ ದೇಶಗಳಲ್ಲಿ ರೋಗ ಗುಣಪಡಿಸುವ ದೇವರಾದರೆ, ಧನ್ವಂತರಿ ಭಾರತದಲ್ಲಿ ಆರೋಗ್ಯ ನೀಡುವ ಮತ್ತು ಅನಾರೋಗ್ಯ ಗುಣಪಡಿಸುವ ದೇವರು ಎಂದು ಎನ್ಎಂಸಿಯ ಕಾರ್ಯಾಧ್ಯಕ್ಷ ಬಿಎನ್ ಗಂಗಾಧರ್ ಹೇಳಿದ್ದಾರೆ.
ಇಂಡಿಯಾ ಬದಲು ‘ಭಾರತ’ ಎಂದು ಬಳಸಿರುವ ಬಗ್ಗೆಯೂ ಬಿಎನ್ ಗಂಗಾಧರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಸರ್ಕಾರ ಎಲ್ಲಾ ಕಡೆಗಳಲ್ಲಿ ಇಂಡಿಯಾ ಬದಲು ಭಾರತ ಎಂದು ಬಳಸುತ್ತಿದೆ. ಹಾಗೆಯೇ ಆಯೋಗ ಕೂಡ ಹೆಸರು ಬದಲಿಸಿದೆ. ಇದರಲ್ಲಿ ದೊಡ್ಡ ವಿಷಯವೇನು ಇಲ್ಲ ಎಂದಿದ್ದಾರೆ.
ಈ ವಾರದ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಹೆಸರನ್ನು ‘ಆಯುಷ್ಮಾನ್ ಆರೋಗ್ಯ ಮಂದಿರ’ ಎಂದು ಮರುನಾಮಕರಣ ಮಾಡಿದೆ.
ಇದನ್ನೂ ಓದಿ : ಜೀವ ರಕ್ಷಣೆಯ ಬಳಿಕ ಅತಂತ್ರ ಸ್ಥಿತಿಯಲ್ಲಿ ಸಿಲ್ಕ್ಯಾರ ಸುರಂಗ ಕಾರ್ಮಿಕರು