Homeಮುಖಪುಟನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

- Advertisement -
- Advertisement -

ಭೌತ ವಿಜ್ಞಾನದ ಖ್ಯಾತ ಶಿಕ್ಷಕ ಮತ್ತು ವಿಜ್ಞಾನಿಯಾದ ರಿಚರ್ಡ್ ಫೈನ್‌ಮನ್ ಅವರು ಕ್ಯಾಲ್ಟೆಕ್ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡುವಾಗ ಹೀಗೆಂದಿದ್ದರು: “The Stuff which we are made, was ‘cooked’ once in a star and spit out”. (ನಾವು ಯಾವುದರಿಂದ ಮಾಡಲ್ಪಟ್ಟಿದೇವೋ ಅದು ಒಂದಾನೊಂದು ಕಾಲದಲ್ಲಿ ನಕ್ಷತ್ರವೊಂದರಿಂದ ’ಬೇಯಿಸಿ’ ಉಗಿದದ್ದು). ಹಾಗೆಯೇ ಕಾರ್ಲ್ ಸಾಗನ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿ ಒಮ್ಮೆ “The Cosmos is within us. We are made of star stuff. We are a way for Universe to know itself” (ಕಾಸ್ಮೋಸ್ ನಮ್ಮೊಳಗೇ ಇದೆ. ನಾವು ನಕ್ಷತ್ರಗಳ ವಸ್ತುವಿನಿಂದ ಮಾಡಲ್ಪಟ್ಟವರು. ಬ್ರಹ್ಮಾಂಡವ ತನ್ನನ್ನು ಅರಿತುಕೊಳ್ಳಲು ನಾವು ಕೂಡ ದಾರಿಯೇ) ಎಂದು ಉದ್ಘರಿಸಿದ್ದರು. ಇವೆಲ್ಲವನ್ನು ಕೇಳುತ್ತಿದ್ದರೆ, ಈ ಭೂಮಿ, ಗ್ರಹ, ಗ್ಯಾಲಾಕ್ಸಿ, ನಾವು ನೀವು, ನಮ್ಮ ಮುಂದಿರುವ ಎಲ್ಲಾ ವಸ್ತುಗಳೂ ಹಾಗೂ ಸಕಲ ಜೀವರಾಶಿಗಳು – ಈ ಎಲ್ಲವೂ ಉತ್ಪಾದನೆಯಾಗಿರುವುದು ನಕ್ಷತ್ರದಲ್ಲಿನ ಧೂಳಿನ (Star Dust/ Cosmic Dust) ಕಣಗಳಿಂದ ಎನ್ನುವುದು ದೀರ್ಘ ಅಧ್ಯಯನದಿಂದ ಕಂಡುಕೊಂಡಿರುವ ಸ್ಪಷ್ಟವಾದ ಗ್ರಹಿಕೆ.

ನಕ್ಷತ್ರಗಳಲ್ಲಿನ ಕಣಗಳು ಒಂದೆಡೆ ಸೇರಿ ಬೆಳಕಿನ ಶಕ್ತಿಯನ್ನು ಉಪಯೋಗಿಸಿಕೊಂಡು ಪರಮಾಣು, ಪರಮಾಣುಗಳು ಅಣುಗಳಾಗಿ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಗೆ ಒಳಪಟ್ಟು ವಿವಿಧ ರೀತಿಯಲ್ಲಿ ವ್ಯವಸ್ಥೆಯ ರೂಪ ಪಡೆದು ದ್ರವ್ಯವಾಗುತ್ತದೆ. ಮನುಷ್ಯರಾದ ನಾವು ಕೂಡ ನಭೋಮಂಡಲದಲ್ಲಿ ಅನಂತವಾಗಿ ಹರಡಿರುವ ಧೂಳಿನ ಕಣಗಳಿಂದಲೇ ರೂಪುಗೊಂಡಿರುವುದು. ಹೀಗೆ ರೂಪುಗೊಂಡ ಮನುಷ್ಯ ಜೀವಿಯ ಮೆದುಳು ಯೋಚಿಸಬಲ್ಲದು, ಪ್ರಶ್ನಿಸಬಲ್ಲದು, ಪ್ರಶ್ನೆಗಳಿಗೆ ಉತ್ತರವೂ ಹುಡುಕಬಲ್ಲದು. ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿರುವ ಮನುಷ್ಯನು, ನಭೋಮಂಡಲದ ಕೌತುಕಗಳ ಮುಂದೆ ಇನ್ನೂ ಅಂಬೆಗಾಲು ಕೂಡ ಇಡದ ಮಗುವೆ ಸರಿ. ಮನುಷ್ಯನ ಒಳಗೆ ಕೊತಕೊತ ಕುದಿಯುವ ಇಂಥ ಪ್ರಶ್ನೆಗಳಿಗೆ ನಕ್ಷತ್ರಗಳ ಆಳದಲ್ಲಿ, ಗ್ಯಾಲಾಕ್ಸಿಗಳ ಆಳದಲ್ಲಿ, ವಿಶ್ವದ ಉಗಮದ ಪ್ರಾರಂಭದಲ್ಲಿ ಕೊತಕೊತ ಕುದ್ದಿರುವ ಕಣಗಳು ಮಾತ್ರ ಉತ್ತರ ಕೊಡಬಲ್ಲವು ಎಂದು ಅರಿತಿದ್ದೇವೆ.

ಆ ದಾರಿಯಲ್ಲಿ ಇನ್ನಷ್ಟು ತಿಳಿಯಲು ಹೆಜ್ಜೆಯಿಟ್ಟಿದ್ದೇವೆ. ನಭೋಮಂಡಲವನ್ನು ಇನ್ನೂ ಹೆಚ್ಚು ಸೂಕ್ಷ್ಮಗ್ರಾಹಿಯಾಗಿ ವೀಕ್ಷಿಸಲು ಮತ್ತು ಸ್ಪಷ್ಟವಾಗಿ ವಿಷಯಗಳನ್ನು ಗ್ರಹಿಸಲು ಅಗತ್ಯವಿದ್ದ ಒಂದು ಉಪಕರಣವನ್ನು ಕಳೆದ ಕ್ರಿಸ್‌ಮಸ್ ದಿನದಂದು ನಭೋಮಂಡಲಕ್ಕೆ ಕಳುಹಿಸಿದೆವು. ಅದೇ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್!

ಈ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸರಿ ಸುಮಾರು ಆರು ತಿಂಗಳು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ, ಭೂಮಿ ಮತ್ತು ಸೂರ್ಯನ ಗುರುತ್ವ ಬಲದಲ್ಲಿ ಬಂದಿಯಾಗಿ, ಸೂರ್ಯನ ಸುತ್ತಾ ಸುತ್ತುತ್ತ, ಪ್ರಪ್ರಥಮ ಬಾರಿಗೆ ತನ್ನ ದೂರದರ್ಶಕದಲ್ಲಿನ ದರ್ಪಣಗಳಿಗೆ ನಭೋ ಮಂಡಲದ ಕಿರಣಗಳನ್ನು ಸ್ಪರ್ಶಿಸಿ, ಅದರಿಂದ ರೂಪುಗೊಂಡ ಚಿತ್ರಗಳನ್ನು ಈ ತಿಂಗಳು ಭೂಮಿಗೆ ರವಾನಿಸಿದೆ.

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ರವಾನಿಸಿದ ಚಿತ್ರಗಳು ಬಿಡುಗಡೆಯಾದ ಕ್ಷಣ ಮಾತ್ರದಲ್ಲಿ ಅವರು ಪ್ರಪಂಚದಾದ್ಯಂತ ಪಸರಿಸಿ ಅಬ್ಬರಿಸಿದವು. ನಾವು ರೂಪುಗೊಳ್ಳಲು ಕಾರಣಗಳಾದ ಕಣ/ಕ್ಷಣಗಳನ್ನು ಈ ಟೆಲಿಸ್ಕೋಪ್ ಹೇಗೆ ಸೆರೆಹಿಡಿಯುತ್ತೆ, ಅದರಿಂದ ನಮಗೆ ಯಾವ ಮಾಹಿತಿ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಖಗೋಳ ವಿಜ್ಞಾನಿಗಳು, ಹವ್ಯಾಸಿ ಖಗೋಳ ವಿಜ್ಞಾನಿಗಳು ಮತ್ತು ನಾವೆಲ್ಲರೂ ಕಾಯುತ್ತಿದ್ದುದಂತು ನಿಜ. ಅಮೆರಿಕ ಅಧ್ಯಕ್ಷರು ತಮ್ಮ ವೈಟ್‌ಹೌಸ್‌ನಿಂದಲೆ ಈ ಚಿತ್ರಗಳನ್ನು ಅನಾವರಣ ಮಾಡಿದರು. ಈಗಾಗಲೇ ಕಳೆದ 30 ವರ್ಷದಿಂದ ಹಬಲ್ ಟೆಲಿಸ್ಕೋಪ್‌ನಿಂದ ತೆಗೆದ ಹಲವು ಚಿತ್ರಗಳು ಮತ್ತು ಅಧ್ಯಯನಗಳು ನಮ್ಮಲ್ಲಿ ಲಭ್ಯವಿದ್ದರೂ, ಹಬಲ್‌ಗಿಂತಲೂ 6-7 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುವ ಮತ್ತು ಅತಿಗೆಂಪು (Infrared Radiation) ಬೆಳಕಿನ ಕಿರಣಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಟೆಲಿಸ್ಕೋಪ್ ಹೇಗೆ ವಿಶ್ವದ ಪ್ರಾರಂಭವನ್ನು ಗ್ರಹಿಸುತ್ತೆ ಎನ್ನುವ ಯೋಚನೆ ಎಲ್ಲರಿಗೂ ಇದ್ದೇಇತ್ತು. ಜುಲೈ 11ರಂದು ಬಿಡುಗಡೆಯಾದ ಚಿತ್ರಗಳು ನಮ್ಮ ಊಹೆಗೂ ನಿಲುಕದಂತಿತ್ತು.

ಒಂದು ಸಣ್ಣ ಮರಳಿನ ಕಣವನ್ನು ನಮ್ಮ ಕೈ ಬೆರಳಿನಲ್ಲಿ ಹಿಡಿದುಕೊಂಡು ನಮ್ಮ ಕೈಯನ್ನು ಚಾಚಿ ನೋಡಿದರೆ ಎಷ್ಟು ಸಣ್ಣದಾಗಿ ಕಾಣುತ್ತದೋ, ಅಷ್ಟೇ ಸಣ್ಣದಾಗಿರುವ ಆಕಾಶದಲ್ಲಿನ ಪ್ರದೇಶವನ್ನು ಈ ಟೆಲಿಸ್ಕೋಪ್‌ನ ಅತಿಗೆಂಪು ಕ್ಯಾಮರಾವು 12 ಗಂಟೆಗಳ ಕಾಲ ದಿಟ್ಟಿಸಿ ನೋಡಿ ಒಂದು ಚಿತ್ರವನ್ನು ತೆಗೆದಿದೆ. ಈ ಚಿತ್ರವು ಹಿಂದೆಂದಿಗಿಂತಲೂ ನಮಗೆ ಸಿಕ್ಕಿರುವ ಅತೀ ಆಳವಾದ, ಅತೀ ಚಿಕ್ಕ ಪ್ರದೇಶದ ನಭೋಮಂಡಲದ ಚಿತ್ರ. ಹಬಲ್ ಟೆಲಿಸ್ಕೋಪ್‌ನಲ್ಲಿ ಇಂತಹ ಚಿತ್ರಗಳನ್ನು ತೆಗೆಯಲು ವಾರಗಟ್ಟಲೆ ಸಮಯವಾಗುತ್ತಿತ್ತು. ಈ ಚಿತ್ರದಲ್ಲಿರುವ ಪ್ರತಿಯೊಂದು ಬೆಳಕಿನ ಬಿಂದುವು ಒಂದೊಂದು ಗ್ಯಾಲಾಕ್ಸಿ. ಮರಳಿನ ಕಣದ ಗಾತ್ರವಾದ ಸಣ್ಣ ಪ್ರದೇಶದಲ್ಲಿ ಸಾವಿರಾರು ಗ್ಯಾಲಾಕ್ಸಿಗಳನ್ನು ಕಾಣುತ್ತಿರುವ ನಾವು ನಭೋ ಮಂಡಲದ ಅನಂತತೆಯನ್ನು ಊಹಿಸಲಿಕ್ಕೂ, ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲದಿರುವುದು ಅತಿಶಯೋಕ್ತಿಯಲ್ಲ. ಈ ಚಿತ್ರದಲ್ಲಿ ಅಲ್ಪರ್ಟ್ ಐನ್‌ಸ್ಟೀನ್ ಪ್ರತಿಪಾದಿಸಿದ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ Gravitational Lensing ಪರಿಣಾಮಗಳನ್ನೂ ಸಹ ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಚಿತ್ರದಲ್ಲಿನ ಗ್ಯಾಲಾಕ್ಸಿ ಪುಂಜವು 460 ಕೋಟಿ ಬೆಳಕಿನ ವರ್ಷದಷ್ಟು ದೂರದಲ್ಲಿದೆ. ಅಂದರೆ, 460 ಕೋಟಿ ವರ್ಷಗಳ ಹಿಂದೆ ಈ ಗ್ಯಾಲಕ್ಸಿಗಳು ಹೇಗಿದ್ದವು ಎನ್ನವ ಚಿತ್ರವನ್ನು ಈ ಟೆಲಿಸ್ಕೋಪ್ ಸೆರೆಹಿಡಿದಿದೆ. ಈ ದೂರದರ್ಶಕವು ವಿಶ್ವದ ಆದಿ ಸ್ಥಿತಿಗೆ ಪ್ರಯಾಣ ಬೆಳೆಸುವ ಕಾಲಯಂತ್ರವಾಗಿದೆ (ಟೈಮ್ ಮೆಶಿನ್).

ನಕ್ಷತ್ರಗಳು ಹುಟ್ಟುವ ಪ್ರಕ್ರಿಯೆ ಮತ್ತು ನೆಬುಲ್ಲಾಗಳನ್ನೂ ಸಹ ನಾವು ಅಧ್ಯಯನ ಮಾಡಿದ್ದೇವೆ. ಆದರೆ, ಅವುಗಳ ಚಿತ್ರಗಳನ್ನು ಹಿಂದಿನ ಟೆಲಿಸ್ಕೋಪ್‌ಗಳು ಸೆರೆಹಿಡಿದಾಗ, ಕಾಸ್ಮಿಕ್ ಧೂಳು ಹಲವು ಯೌವ್ವನದ ನಕ್ಷತ್ರಗಳನ್ನು, ಮುದಿ ನಕ್ಷತ್ರಗಳು ಮತ್ತು ಇತರೆ ನಕ್ಷತ್ರದ ಚಟುವಟಿಕೆಗಳನ್ನು ಮರೆ ಮಾಚುತ್ತಿತ್ತು. ಆದರೆ, ಈಗಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇವುಗಳನ್ನು ಸ್ಪಷ್ಟವಾಗಿ ನೋಡುವ ಕಣ್ಣಾಗಿದ್ದು, ಅವುಗಳ ಚಿತ್ರಗಳನ್ನೂ ಸಹ ಅದ್ಭುತವಾಗಿ ಸೆರೆಹಿಡಿದಿದೆ. ಕರೀನಾ ನೆಬುಲ್ಲಾದ ಚಿತ್ರದಲ್ಲಿ, ಕಾಸ್ಮಿಕ್ ಧೂಳಿನ ಜೊತೆಗೆ, ಆ ಧೂಳಿನ ಹಿಂದೆ ಅವಿತುಕೊಂಡಿರುವ ನಕ್ಷತ್ರಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ರಿಚರ್ಡ್ ಫೈನ್‌ಮನ್ ಹೇಳಿದ ಮಾತಿನಲ್ಲಿ “Cooking” ಹೇಗೆ ನಡೆಯುತ್ತೆ ಎಂದು ಅರಿಯುವ ಆಕಾಶದಲ್ಲಿನ ಲ್ಯಾಬೋರೇಟರಿಗಳಿವು.

ಈಗ ಈ ಲ್ಯಾಬ್‌ಗಳನ್ನು ನೋಡಲು ಮನುಷ್ಯನಿಗೆ ಒಂದು ಕಣ್ಣು ಸಿಕ್ಕಿದಂತಾಗಿದೆ. ಇದೇ ರೀತಿ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನ ಇತರೆ ವೈಶಿಷ್ಟ್ಯಗಳನ್ನು ಪರೀಕ್ಷಿಸಿರುವ ನಾಸಾ, ಭೂಮಿಯ ರೀತಿ 1,150 ಬೆಳಕಿನ ವರ್ಷಗಳಷ್ಟು ದೂರ ಇರುವ ಒಂದು ಗ್ರಹದ ರೋಹಿತವನ್ನು (Spectrum) ಸೆರೆಹಿಡಿದಿದೆ. ಈ ಗ್ರಹವು ಸೂರ್ಯನಂತಿರುವ ಒಂದು ನಕ್ಷತ್ರದ ಸುತ್ತ ಸುತ್ತುತ್ತಿದ್ದು, ಭೂಮಿ ಮತ್ತು ಸೂರ್ಯನ ವ್ಯವಸ್ಥೆಯಂತಿದೆ. ಈ ರೋಹಿತದಿಂದ ಆ ಗ್ರಹಗಳಲ್ಲಿ ಜೀವಿಗಳಿಗೆ ಅತ್ಯಂತ ಅಗತ್ಯವಾಗಿ ಇರಬೇಕಾದ ನೀರು ಮತ್ತು ವಾತಾವರಣದ ಇರುವಿಕೆಯ ಗುರುತನ್ನು ಪತ್ತೆ ಮಾಡುವಲ್ಲಿ ಟೆಲಿಸ್ಕೋಪ್ ಯಶಸ್ವಿಯಾಗಿದೆ. ಈ ರೋಹಿತವು ಇಲ್ಲಿಯವರೆಗಿನ most detailed spectrum of exoplanet ಎನ್ನಲಾಗಿದೆ, ಅಂದರೆ ಸೌರಮಂಡಲದ ಹೊರಗಿರುವ ಯಾವುದೇ ಗ್ರಹದ ರೋಹಿತದ ಅದ್ಭುತ ಚಿತ್ರಣ. ಈ ಅಧ್ಯಯನಗಳು ಮುಂದೊಂದು ದಿನ ಭೂಮಿಯಲ್ಲಿ ಮಾತ್ರ ಜೀವ ಸಂಕುಲಗಳು ಇವೆ ಎನ್ನುವ ವಿಷಯನ್ನು ಸುಳ್ಳು ಮಾಡುವ ಯೋಚನೆಗಳನ್ನು ಹುಟ್ಟುಹಾಕಿವೆ.

ಇಗ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರಿಹಿಡಿದಿರುವ ಚಿತ್ರಗಳು, ಪ್ರಾರಂಭಿಕ ಹಂತದಲ್ಲಿ ಟೆಲಿಸ್ಕೋಪ್‌ನ ಕಾರ್ಯವೈಖರಿಯನ್ನು ಪರೀಕ್ಷಿಸಲು ಸೆರೆಹಿಡಿದಿರುವ ಮಾದರಿ ಚಿತ್ರಗಳು ಮಾತ್ರ. ಮುಂದಿನ ದಿನಗಳಲ್ಲಿ ಈ ದೂರದರ್ಶಕದಲ್ಲಿ ಅಡಗಿರುವ ಇನ್ನೂ ಅನೇಕ ವೈಜ್ಞಾನಿಕ ಉಪಕರಣಗಳಿಂದ ಬರಬಹುದಾದ ಚಿತ್ರಗಳು, ಮಾಹಿತಿಗಳು ನಭೋಮಂಡಲದ ಅನಂತತೆಯನ್ನು ಇನ್ನಷ್ಟು ಗ್ರಹಿಸಲು, ನಮ್ಮ ವಿಜ್ಞಾನದ ಕುತೂಹಲಗಳನ್ನು ತಣಿಸಲು ಮತ್ತು ಕೆರಳಿಸಲು ಮುಂದಾಗುವುದರಲ್ಲಿ ಸಂದೇಹವಿಲ್ಲ. ಕುವೆಂಪು ಅವರ ಪದ್ಯದ ಸಾಲಾದ, “ಓ ನನ್ನ ಚೇತನ, ಆಗು ನೀ ಅನಿಕೇತನ”ದಂತೆ ಈ ಟೆಲಿಸ್ಕೋಪ್ ಮನುಷ್ಯರ ಚೇತನವನ್ನು ಅನಿಕೇತನ ಮಾಡಲು ಹೊರಟಿರುವುದಂತಿದೆ. ಅದನ್ನು ತಿಳಿಯಲು ನಾವೆಲ್ಲರೂ ವಿಜ್ಞಾನದ ಬೆಳಕಲ್ಲಿ ಬದುಕಬೇಕಿದೆಯಷ್ಟೆ!


ಇದನ್ನೂ ಓದಿ: ಬಾಹ್ಯಾಕಾಶದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ ಜೇಮ್ಸ್‌ ವೆಬ್‌‌ ದೂರದರ್ಶಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...