ಉತ್ತರ ಕರ್ನಾಟಕದಲ್ಲಿ ಮಳೆಯ ರುದ್ರನರ್ತನಕ್ಕೆ ಜನತೆ ಆತಂಕಗೊಂಡಿದ್ದಾರೆ. ಮತ್ತೆ ಬಂದೆರಗಿರುವ ಮಹಾಪ್ರವಾಹ ಜನರ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಎರಡು ಬಾರಿ ಬಂದಪ್ಪಳಿಸಿರುವ ನೆರೆಗೆ ಮಕ್ಕಳು, ವೃದ್ಧರು, ಮಹಿಳೆಯರು ನಲುಗುತ್ತಿದ್ದಾರೆ. ಎಲ್ಲೆಲ್ಲೂ ನೀರು ತುಂಬಿಕೊಂಡಿದೆ. ಮನೆ, ಮಠ ಕಳೆದುಕೊಂಡು ಜನತೆ ಕಾಳಜಿ ಕೇಂದ್ರ ಸೇರಿದ್ದಾರೆ.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನೆರೆಗೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಿ, ಸುರಕ್ಷಿತ ಸ್ಥಳದತ್ತ ಸಾಗಿಸಲು 4 ಎನ್.ಡಿ.ಆರ್.ಎಫ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳು ಮತ್ತೆ ಪ್ರವಾಹದ ಭೀತಿಯಲ್ಲಿವೆ. ಬೆಳಗಾವಿ, ರಾಯಚೂರು, ಹಾವೇರಿ, ಚಿತ್ರದುರ್ಗ, ಮಂಡ್ಯ, ದ.ಕನ್ನಡ, ಉ. ಕನ್ನಡ, ಧಾರವಾಡ, ಸೇರಿದಂತೆ ಹಲವು ಕಡೆ ಸಾವು ನೋವುಗಳಾಗಿವೆ. ಬೆಳಗಾವಿಯಲ್ಲಿ- 1000 ಮನೆಗಳು, ದಾವಣಗೆರೆ- 210, ಬಾಗಲಕೋಟೆ- 600, ಧಾರವಾಡ- 1816, ಶಿವಮೊಗ್ಗ- 92 ಮನೆಗಳು ಬಿದ್ದಿವೆ.
ಒಟ್ಟು 12 ಜನ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ೫ ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಆಲಮಟ್ಟಿ ಡ್ಯಾಂನಲ್ಲಿ 1 ಲಕ್ಷ 20 ಸಾವಿರ ಕ್ಯೂಸೆಕ್ ಒಳ ಹರಿವಿದೆ. 1 ಲಕ್ಷ 60 ಸಾವಿರ ಕ್ಯೂಸೆಕ್ ಹೊರ ಹರಿವಿದೆ ಎಂದು ವಿಧಾನಸೌಧದಲ್ಲಿ ಆರ್.ಅಶೋಕ್ ಹೇಳಿದರು.