ಭಾನುವಾರ ಮತ್ತು ಸೋಮವಾರದ ಹಿಂಸಾಚಾರಕ್ಕೆ ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ದೆಹಲಿಯಲ್ಲಿ ಎರಡು ದೂರುಗಳು ದಾಖಲಾಗಿವೆ. ಎಎಪಿ ಕಾರ್ಪೋರೇಟರ್ ರೇಷ್ಮಾ ನದೀಮ್ ಮತ್ತು ಹಸೀಬ್ ಉಲ್ ಹಸನ್ ದೂರು ದಾಖಲಿಸಿದವರಾಗಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಮಿಶ್ರಾ ಅವರ ಪ್ರಚೋದನಾಕಾರಿ ಭಾಷಣಗಳಿಂದ ಜನರನ್ನು ಉದ್ರೇಕಿಸಿದರು, ಇದು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರಿಗೆ ಲಿಖಿತ ದೂರುಗಳು ತಿಳಿಸಿವೆ. ಇದಕ್ಕಾಗಿ ಮಿಶ್ರಾ ಮಾತನಾಡಿದ್ದ ವಿಡಿಯೋವೊಂದನ್ನು ಸಹ ಸಾಕ್ಷ್ಯ ಆಗ ಒದಗಿಸಲಾಗಿದೆ. ಆದರೆ ಪೊಲೀಸರು ಈವರೆಗೆ ಮಿಶ್ರಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಎರಡು ದಿನದ ಮೊದಲು ಬಿಜೆಪಿಯ ಕಪಿಲ್ ಮಿಶ್ರಾ ಹಿಂಸೆಗೆ ಪ್ರಚೋದನೆ ನೀಡುವ ಭಾಷಣ ಮಾಡಿದ್ದರು. ಶನಿವಾರ ರಾತ್ರಿಯಿಂದ ಈಶಾನ್ಯ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಆದರೆ ಮೂರು ದಿನಗಳೊಳಗೆ ಪೊಲೀಸರು ಪ್ರತಿಭಟನಾಕಾರರನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತೇನೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ನಾವು ಕಾಯುತ್ತೇವೆ. ಆದರೆ ಅದರ ನಂತರ, ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ಬೀದಿಗಿಳಿಯಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳ ಎದುರಿಗೆ ಅವರಾಡಿದ್ದ ಮಾತುಗಳು ವೈರಲ್ ಆಗಿದ್ದವು.
दिल्ली पुलिस को तीन दिन का अल्टीमेटम – जाफराबाद और चांद बाग की सड़कें खाली करवाइए इसके बाद हमें मत समझाइयेगा , हम आपकी भी नहीं सुनेंगे, सिर्फ तीन दिन@DelhiPolice pic.twitter.com/9ozTazMZew
— Kapil Mishra (@KapilMishra_IND) February 23, 2020
ದೆಹಲಿಯ ಹಿಂಸೆಗೆ ಕಾರಣವಾಗುವಂತೆ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದವರು ಕಪಿಲ್ ಮಿಶ್ರಾ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಮತ್ತು ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ದೆಹಲಿ ಪೊಲೀಸರ ವಿಶೇಷ ಶಾಖೆಯ ವರದಿಯ ಪ್ರಕಾರ, ಪೊಲೀಸರ ಮೇಲೆ ಗುಂಡು ಹಾರಿಸಿದ ಮತ್ತು ಹಿಂಸಾಚಾರಕ್ಕೆ ಒಳಗಾದ ಚಾಂದ್ಬಾಗ್ ಮಜಾರ್ನಲ್ಲಿ ಗಲಭೆ ನಡೆಸಿದವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪಿಎಫ್ಐನ ಹಿರಿಯ ಕಚೇರಿ ಸದಸ್ಯ, ಮತ್ತು ಶಾಹೀನ್ ಬಾಗ್ ನಿವಾಸಿಗಳ ಹೆಸರನ್ನು ಸಹ ಪೊಲೀಸ್ ತಿನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉತ್ತರಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಸರಣಿಯಲ್ಲಿ ಪಿಎಫ್ಐನ ಪ್ರಮುಖ ಮುಖಂಡರ ವಿರುದ್ಧ ಈ ಹಿಂದೆ ಹಲವಾರು ಪ್ರಕರಣಗಳು ದಾಖಲಾಗಿವೆ.