ರಾಜ್ಯಪಾಲರನ್ನು ಭೇಟಿ ಮಾಡಿ ಬೆಳಿಗ್ಗೆ ತಾನೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಈಗ ಬಿಜೆಪಿ ವಿಮಾನದಲ್ಲಿ ಮುಂಬೈನತ್ತ ಹಾರಿದ್ದಾರೆ.
ಯಡಿಯೂರಪ್ಪನವರ ಪರ್ಸನಲ್ ಅಸಿಸ್ಟೆಂಟ್ ಮತ್ತು ಸಂಬಂಧಿ ಎನ್ ಆರ್ ಸಂತೋಷ್ ವಿಮಾನದ ವ್ಯವಸ್ಥೆ ಮಾಡಿದ್ದು, ಅತೃಪ್ತ ಶಾಸಕರು ತಂಗಿರುವ ಫೈವ್ ಸ್ಟಾರ್ ಹೋಟೆಲ್ ಕಡೆಗೆ ನಾಗೇಶ್ ಕೂಡ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ಶಾಸಕ/ಸಚಿವರ ರಾಜಿನಾಮೆಯಲ್ಲಿ ತಮ್ಮ ಪಾತ್ರ ಇಲ್ಲವೆಂದೇ ಹೇಳುತ್ತಿದ್ದ ಬಿಜೆಪಿ ಈಗ ನೇರ ಅಖಾಡಕ್ಕಿಳಿದಿದೆ. ಇನ್ನು ನಾಗೇಶ್ರವರು ರಾಜ್ಯಬಿಟ್ಟು ಹೋಗುವುದನ್ನು ತಪ್ಪಿಸಲು ಆ ವಿಮಾನ ನಿಲ್ದಾಣಕ್ಕೆ ಡಿ.ಕೆ ಶಿವಕುಮಾರ್ ಬಂದರೂ, ಅಷ್ಟರಲ್ಲಿ ನಾಗೇಶ್ರವರು ಹಾರಿ ಹೋಗಿದ್ದರು.
ಅಲ್ಲಿ ಎ.ಎನ್.ಐ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ಇದೆಲ್ಲಾ ಬಿಜೆಪಿ ಮತ್ತು ಯಡಿಯೂರಪ್ಪನವರ ಕುತಂತ್ರವೆ ಹೊರತು ಬೇರೆನಲ್ಲ ಎಂದು ಕಿಡಿಕಾರಿದ್ದಾರೆ. ಈಗ ಸ್ವಲ್ಪ ಹೊತ್ತಿನ ಮುಂಚೆ ನಾಗೇಶ್ ನನಗೆ ಫೋನ್ ಮಾಡಿದ್ದರು. ಯಡಿಯೂರಪ್ಪನವರು ನನ್ನನ್ನು ಹೈಜಾಕ್ ಮಾಡಿದ್ದಾರೆ ಎಂದು ಹೇಳಿದರು. ತಡೆಯಲು ನಾನು ಓಡಿಬಂದೆ ಅಷ್ಟರಲ್ಲಿ ವಿಮಾನ ಹೊರಟೋಗಿದೆ ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಾಗೇಶ್ ರವರು ನಿಧಾನವಾಗಿ ನಡೆದುಕೊಂಡು ಬಂದು ಚಿಕ್ಕ ವಿಮಾನವೇರಿ ಹೊರಟ ವಿಡಿಯೋ ತುಣುಕುಗಳು ಎಲ್ಲೆಡೆ ಹರಿದಾಡುತ್ತಿದ್ದ ಬಹಳಷ್ಟು ಜನ ಕಿಡಿಕಾರಿದ್ದಾರೆ. ಒಂದು ತಿಂಗಳ ಹಿಂದಷ್ಟೇ ನಾಗೇಶ್ರವರಿಗೆ ಜೆಡಿಎಸ್ ತನ್ನ ಪಾಲಿನ ಸಣ್ಣ ಕೈಗಾರಿಕಾ ಸಚಿವರ ಸ್ಥಾನಮಾನ ನೀಡಿತ್ತು. ಆದರೆ ತೃಪ್ತರಾಗದ ಅವರು ಅತೃಪ್ತರ ಬಣ ಸೇರಿದ್ದಾರೆ. ಇದರಿಂದ ಸರ್ಕಾರದ ಬಲ ದಿನೇ ದಿನೇ ಕುಸಿಯುತ್ತಿದೆ.