Homeಮುಖಪುಟಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

ಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

- Advertisement -
- Advertisement -

ಸರ್ಕಾರ ಬೀಳುವ ಎಲ್ಲ ಲಕ್ಷಣಗಳು ಮೋಲ್ನೋಟಕ್ಕೆ ಮುಖಕ್ಕೆ ಹೊಡೆಯುತ್ತಿರುವ ವೇಳೆಯೂ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಹಂತದ ರಕ್ಷಣೆಗೆ ಎಂಬಂತೆ ಎರಡು ಅಸ್ತ್ರಗಳನ್ನು 3 ಗಂಟೆ ಸುಮಾರಿಗೆ ಹೊರಬಿಟ್ಟಿದ್ದಾರೆ.

ಒಂದು, ರಾಜಿನಾಮೆ ನೀಡಿದ್ದೇವೆ ಎಂದು ಬಿಜೆಪಿ ಬಣದ ಜೊತೆ ಹೋಗಲು ಸಜ್ಜಾಗಿರುವ ಶಾಸಕರನ್ನು ಕಾನೂನಿನ ಅಸ್ತ್ರದಿಂದ ಬೆದರಿಸುವುದು. ಇನ್ನೊಂದು ನೀವು ಬಂದರೆ ನಿಮಗೆ ಸಚಿವಗಿರಿ (ಪರೋಕ್ಷವಾಗಿ ಇತರೆ ಸವಲತ್ತೂ ಸೇರಿ) ನೀಡುತ್ತೇವೆ ಎಂಬ ಪ್ರೀತಿಯ ಆಮಿಷ!

ಹಲವು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂವಿಧಾನದ ಶೆಡ್ಯೂಲ್ 10ರ ಪ್ಯಾರಾ 2ರ ಮೊರೆ ಹೋಗಿರುವ ಮೈತ್ರಿ ಬಣದ ನಾಯಕರು ಸೆಕ್ಷನ್ 164-1ಬಿ ಅಡಿ ಭಿನ್ನಮತದ ಬಾವುಟ ಹಾರಿಸಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‍ಗೆ ದೂರು ನೀಡಲು ಸಜ್ಜಾಗಿದ್ದಾರೆ.

ಅಂತಹ ಸಂದೇಶವೊಂದನ್ನು ತೇಲಿ ಬಿಡುವ ಮೂಲಕ ಮುಂಬೈನ ಸೋಫಿಟೆಲ್ ಹೊಟೆಲ್‍ನಲ್ಲಿ ಕುಳಿತು ಕರ್ನಾಟಕದ ರಾಜಕೀಯ ಬೆಳವಣೆಗಳನ್ನು ಟಿವಿಯ ಮೂಲಕ ವೀಕ್ಷಿಸುತ್ತಿರುವ ಅತೃಪ್ತರಿಗೆ ಕಾನೂನಾತ್ಮಕ ಕ್ರಮದ ಗುಮ್ಮವನ್ನು ತೋರಿಸಿದ್ದಾರೆ. ಅಲ್ಲಿರುವ ಶಾಸಕರಿಗೆ ‘ಹಾಗೆಲ್ಲ ಮಾಡಲು ಆಗುವುದಿಲ್ಲ’ ಎಂದು ಬಿಜೆಪಿ ಅಭಯ ನೀಡುತ್ತಿರಬಹುದು. ಆದರೆ, ಕಳೆದ ವರ್ಷವಷ್ಟೇ ಹೆಚ್ಚೂ ಕಡಿಮೆ ಇದೇ ಮಾದರಿಯಲ್ಲಿ, ಇಂಥದ್ದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ 18 ಶಾಸಕರನ್ನು ಅನರ್ಹಗೊಳಿಸಿದ್ದು, ಅದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿರುವಾಗ, ಅತೃಪ್ತ ಶಾಸಕರಲ್ಲಿ ಒಂದು ಅಳುಕಂತೂ ಮೂಡಿರಲು ಸಾಧ್ಯ.

ಈ ಸೆಕ್ಷನ್ ಅಳವಡಿಕೆ ಈಗಿನ ಸಂದರ್ಭದಲ್ಲಿ ಸಾಧ್ಯವೇ ಇಲ್ಲವೇ ಎಂಬುದು ಚರ್ಚೆಯ ವಿಷಯವೇ. ಆದರೆ ಸ್ಪೀಕರ್‍ಗೆ ಮನವರಿಕೆ ಮಾಡಲು, ಅದಕ್ಕೆ ತಕ್ಕ ಪುರಾವೆ ಒದಗಿಸಲು ಮೈತ್ರಿಬಣ ಯಶಸ್ವಿಯಾದರೆ, ರಾಜಿನಾಮೆ ಕೊಟ್ಟಿದ್ದೇವೆ ಎನ್ನುತ್ತಿರುವ ಶಾಸಕರ ಸದಸ್ಯತ್ವದ ಮೇಲೆ ತೂಗುಗತ್ತಿ ಗ್ಯಾರಂಟಿ. ಏಕೆಂದರೆ ಈಗ ಶಾಸಕರು ಸದನಕ್ಕೆ ರಾಜಿನಾಮೆ ಸಲ್ಲಿಸಿದ್ದಾರಷ್ಟೇ. ಅದೂ ಕೂಡ, ಇದನ್ನು ಅಂಗೀಕರಿಸುವ ಅಂತಿಮ ಅಧಿಕಾರವುಳ್ಳ ಸ್ಪೀಕರ್ ಕೈಗೆ ಅಧಿಕೃತವಾಗಿ ರಾಜಿನಾಮೆ ಪತ್ರಗಳು ತಲುಪಿಲ್ಲ. ಇದು ತಾಂತ್ರಿಕ ವಿಷಯವಾಗಿದ್ದರಿಮದ ಸ್ಪೀಕರ್ ವಿವೇಚನೆಯ ಮೇಲೆಯೇ ನಿಂತಿದೆ. ಈ ಅತೃಪ್ತರು ಪಕ್ಷಕ್ಕೆ ಇನ್ನೂ ರಾಜಿನಾಮೆ ನೀಡದೇ ಇರುವುದರಿಂದ ಉಭಯ ಪಕ್ಷಗಳು ಪಕ್ಷಾಂತರ ನಿಷೇಧ ಕಾನೂನಿನ ಅಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬಹುದು. ಈ ಶಾಸಕರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡು ಮೂಲ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಿರೂಪಿಸಬೇಕು. ಇದು ಈಗಿನ ಪರಿಸ್ಥಿಯಲ್ಲಿ ಕೊಂಚ ಕಷ್ಟವಾದರೂ, ಶಾಸಕರಲ್ಲಿ ಮಾತ್ರ ಭಯ ಹುಟ್ಟಿಸಲು ಸಫಲವಾಗಿರಬಹುದು.

ಮೈತ್ರಿಯ ಉಭಯ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ಜಾರಿ ಮಾಡಿದರೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‍ಗೆ ದೂರು ನೀಡಬಹುದು. ಅಷ್ಟರ ಮಟ್ಟಿಗೆ ಕಾನೂನಾತ್ಮಕ ಮೊದಲ ಅಸ್ತ್ರ ಶಾಸಕರಲ್ಲಿ ದಿಗಿಲು ಹುಟ್ಟಿಸುವಲ್ಲಿ ಸಫಲವಾಗಬಹುದು.

ಇನ್ನು ಎರಡನೇ ಅಸ್ತ್ರ ಬೆದರಿಕೆಯದ್ದಲ್ಲ, ಬದಲಿಗೆ ತಮ್ಮದೇ ಶಾಸಕರನ್ನು ರಮಿಸುವಂತದ್ದು. ಬನ್ನಿ ಬನ್ನಿ ಇಲ್ಲಿ ಸಚಿವ ಸಂಪುಟದ ಎಲ್ಲ ಸ್ಥಾನಗಳು ಖಾಲಿಯಿವೆ. ನಿಮಗೆಲ್ಲರಿಗೂ ಅವಕಾಶವಿದೆ ಎಂದು ಪ್ರತಿ ಆಹ್ವಾನ ನೀಡಲಾಗಿದೆ. ಅದಕ್ಕಾಗಿ ಎಲ್ಲ ಸಚಿವರ ರಾಜಿನಾಮೆ ಪಡೆದಿರುವುದಾಗಿ ಉಭಯ ಪಕ್ಷಗಳ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಮೊದಲ ಅಸ್ತ್ರಕ್ಕೆ ಬೆದರಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕೆ. ಆರ್ ಪೇಟೆಯ ಶಾಸಕ ನಾರಾಯಣಗೌಡ ಥರದ ವೈಯಕ್ತಿಕ ವರ್ಚಸಿಲ್ಲದ ಶಾಸಕರು ಶರಣಾಗಿ ಹೇಗೂ ಸಚಿವ ಸ್ಥಾನ ಸಿಗಲಿದೆ ಎಂದು ಮಣಿಯಬಹುದು ಎಂದು ಮೈತ್ರಿ ಬಣ ಅಂದಾಜಿಸಿದೆ. ಸಚಿವರಾಗಲೆಂದೇ ಭಿನ್ನಮತ ಸಾರಿರುವ ರಾಮಲಿಂಗಾರೆಡ್ಡಿ, ಎಸ್‍ಟಿ ಸೋಮಶೇಖರ್, ಬೈರತಿ ಬಸವರಾಜ, ರಮೇಶ ಜಾರಕಿಹೊಳಿ ಥರದವರು ಖುಷಿಯಿಂದ ವಾಪಸ್ ಬರಬಹದೆಂಬ ನಿರೀಕ್ಷೆ ಮೈತ್ರಿಬಣದ್ದು.

ಆದರೆ ಇದೆಲ್ಲವು ಅಷ್ಟು ಸರಳವಾಗಿಲ್ಲ. ಸಂಕೀರ್ಣ ಕಾನೂನನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಕಾನೂನು ತಜ್ಞರಲ್ಲೇ ಭಿನ್ನಾಭಿಪ್ರಾಯ ಇವೆ. ಬಿಜೆಪಿ ಕೂಡ ಕಾನೂನು ಪಂಡಿತರೊಂದಿಗೆ ಸಮಾಲೋಚನೆ ನಡೆಸಿದ್ದು ಯಾವುದೇ ಅಪಾಯವಿಲ್ಲ ಎಂಬ ಭರವಸೆಯನ್ನು ನೀಡಲು ಸಫಲವಾದರೆ ಮಾತ್ರ ಅತೃಪ್ರಲ್ಲಿ ಧೈರ್ಯ ಬರಬಹುದು.

2006 ಮತ್ತು 2008ರ ಹಗ್ಗಜಗಾಟ ಮರುಕಳಿಸುವ ಎಲ್ಲ ಲಕ್ಷಣಗಳಿವೆ. ಸದ್ಯ ರಾಜಿನಾಮೆ ಕೊಟ್ಟ ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿ ಸಂಖ್ಯೆ 106 ( ಪಕ್ಷೇತರ ನಾಗೇಶ ಸೇರಿದರೆ 107) ಇದ್ದರೆ ಮೈತ್ರ ಬಣದ ಸಂಖ್ಯೆ 104 ಇದೆ. ಈ ಲೆಕ್ಕಾಚಾರದಲ್ಲಿ ಕತ್ತಿಯಂಚಿನ ಸರಳ ಬಹುಮತವಷ್ಟೇ ಈಗ ಬಿಜೆಪಿಗೆ ಸಿಗುತ್ತದೆ. 104 ಸದಸ್ಯರನ್ನು ಹೊಂದಿರುವ ಮೈತ್ರಿ ಬಣವು ಆಪರೇಷನ್ ಶುರು ಮಾಡಿದರೆ ಮತ್ತೆ ಡೋಲಾಯಮಾನವೇ! 3 ಗಂಟೆಯ ನಂತರದ ಈ ಬೆಳವಣಿಗೆ ಈ ಅಧಿಕಾರದ ಆಟಕ್ಕೆ ಹೊಸ ತಿರುವನ್ನಂತೂ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...