Homeಅಂತರಾಷ್ಟ್ರೀಯಭಾರತ-ಪಾಕ್ ಯುದ್ದ ತಾನೇ ನಿಲ್ಲಿಸಿದ್ದು, ಈ ಸಂದರ್ಭ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ: ಪುನರುಚ್ಚರಿಸಿದ ಟ್ರಂಪ್

ಭಾರತ-ಪಾಕ್ ಯುದ್ದ ತಾನೇ ನಿಲ್ಲಿಸಿದ್ದು, ಈ ಸಂದರ್ಭ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ: ಪುನರುಚ್ಚರಿಸಿದ ಟ್ರಂಪ್

- Advertisement -
- Advertisement -

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆ ಮತ್ತು ಈ ಸಂದರ್ಭದಲ್ಲಿ ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಬಹುಶಃ ಪರಮಾಣು ಯುದ್ಧದಲ್ಲಿ ಕೊನೆಗೊಳ್ಳಬಹುದಾಗಿದ್ದ ಈ ಸಂಘರ್ಷವನ್ನು ತಡೆಯಲು ತಾನು ಮಧ್ಯಪ್ರವೇಶಿಸಿದೆ ಎಂದು ಟ್ರಂಪ್ ಮಂಗಳವಾರ ಹೇಳಿಕೊಂಡಿದ್ದಾರೆ.

ವೈಟ್‌ಹೌಸ್‌ನಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಯುದ್ದವನ್ನು ಮಾತ್ರವಲ್ಲದೇ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾ ನಡುವಿನ ಯುದ್ಧವನ್ನು ತಾನು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಅವರು ಪರಿಸ್ಥಿತಿಯನ್ನು ವಿವರಿಸುತ್ತಾ, “ಭಾರತ-ಪಾಕಿಸ್ತಾನದವರು ಐದು ವಿಮಾನಗಳನ್ನು ಹೊಡೆದುರುಳಿಸಿದರು, ಅದು ಹಿಂದಕ್ಕೆ-ಮುಂದಕ್ಕೆ ನಡೆಯುತ್ತಿತ್ತು. ನಾನು ಅವರಿಗೆ ಕರೆ ಮಾಡಿ, ‘ಕೇಳಿ, ಇನ್ನು ಮುಂದೆ ನಿಮ್ಮೊಂದಿಗೆ ನಾವು ವ್ಯಾಪಾರ ನಡೆಸುವುದಿಲ್ಲ. ನೀವು ಯುದ್ಧವನ್ನು ಮುಂದುವರಿಸಿದರೆ ಅದು ಒಳ್ಳೆಯದಾಗಿರುವುದಿಲ್ಲ… ಅವೆರಡೂ ಪ್ರಬಲ ಪರಮಾಣು ರಾಷ್ಟ್ರಗಳು ಮತ್ತು ಈ ಪರಮಾಣು ಯುದ್ಧ ಸಂಭವಿಸುತ್ತಿತ್ತು ಮತ್ತು ಅದು ಎಲ್ಲಿಗೆ ತಲುಪುತ್ತಿತ್ತು ಎಂದು ಯಾರಿಗೂ ಗೊತ್ತಿರಲಿಲ್ಲ ಮತ್ತು ನಾನು ಅದನ್ನು ನಿಲ್ಲಿಸಿದೆ’ ಎಂದು ಹೇಳಿದರು.

ಟ್ರಂಪ್ ತಮ್ಮ ಆಡಳಿತದ ಇತರ ವಿದೇಶಾಂಗ ನೀತಿ ಯಶಸ್ಸುಗಳನ್ನು ಸಹ ಉಲ್ಲೇಖಿಸಿದರು. ಅಮೆರಿಕವು ಇರಾನ್‌ನ ಸಂಪೂರ್ಣ ಪರಮಾಣು ಸಾಮರ್ಥ್ಯವನ್ನು ತೆಗೆದುಹಾಕಿದೆ ಮತ್ತು ಕೊಸೊವೊ ಮತ್ತು ಸೆರ್ಬಿಯಾ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಮಾಜಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅದನ್ನು ಮಾಡುತ್ತಿದ್ದರು ಎಂದು ನೀವು ಭಾವಿಸುತ್ತೀರಾ? ನಾನು ಹಾಗೆ ಅಂದುಕೊಳ್ಳುವುದಿಲ್ಲ. ಅವರು ಆ ದೇಶಗಳ ಬಗ್ಗೆ ಎಂದಾದರೂ ಕೇಳಿದ್ದಾರೆಯೆಂದು ನೀವು ಭಾವಿಸುತ್ತೀರಾ? ನಾನು ಹಾಗೆ ಅಂದುಕೊಳ್ಳುವುದಿಲ್ಲ” ಎಂದು ಟ್ರಂಪ್ ಹೇಳಿದರು.

ಟ್ರಂಪ್ ಈ ಹಿಂದೆ ಕೂಡ ಭಾರತ-ಪಾಕ್ ಸಂಘರ್ಷವನ್ನು ನಿಲ್ಲಿಸಿದ್ದಾಗಿ ಪದೇ ಪದೇ ಹೇಳಿದ್ದರು. ಕಳೆದ ಶುಕ್ರವಾರದಂದು ಯುದ್ಧದ ಸಮಯದಲ್ಲಿ “ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ” ಎಂದು ಅವರು ಮೊದಲ ಬಾರಿಗೆ ಉಲ್ಲೇಖಿಸಿದರು. ಭಾರತ, ಪಾಕಿಸ್ತಾನ ಯುದ್ದದಲ್ಲಿ ನಾಲ್ಕು ಅಥವಾ ಐದು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಈ ಎರಡು ಪರಮಾಣು ದೇಶಗಳಾಗಿವೆ ಎಂದು ಅವರು ರಿಪಬ್ಲಿಕನ್ ಸೆನೆಟರ್‌ಗಳಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ವೈಟ್‌ಹೌಸ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ಮಂಗಳವಾರದಂದು ನಡೆದ ‘ಬಹುಪಕ್ಷೀಯತೆ ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥ’ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಅಮೆರಿಕದ ಕಾರ್ಯಕಾರಿ ರಾಯಭಾರಿ ಡೊರೊಥಿ ಶಿಯಾ ಅವರು, ದೇಶ ದೇಶಗಳ ನಡುವಿನ ವಿವಾದಗಳಿಗೆ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳಲು ಅಮೆರಿಕವು ವಿಶ್ವಾದ್ಯಂತ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಕಳೆದ ಮೂರು ತಿಂಗಳಲ್ಲಿ “ಇಸ್ರೇಲ್ ಮತ್ತು ಇರಾನ್ ನಡುವೆ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ರುವಾಂಡಾ ನಡುವೆ, ಮತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ಅಮೆರಿಕದ ನಾಯಕತ್ವವು ಉದ್ವಿಗ್ನತೆಯನ್ನು ಕಡಿಮೆ ಮಾಡಿದೆ” ಎಂದು ಶಿಯಾ ಉಲ್ಲೇಖಿಸಿದರು.

ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು ಈ ಭದ್ರತಾ ಮಂಡಳಿಯ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಮುಖವಾಡವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿತ್ತು. ಇಂತಹ ಭಯೋತ್ಪಾದನೆ ಚಟುವಟಿಕೆಯನ್ನು ಹತ್ತಿಕ್ಕಲು ಸೂಕ್ತ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎಂದು ಹರೀಶ್ ಒತ್ತಿ ಹೇಳಿದರು.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ಪರಿಣಾಮವಾಗಿ 26 ಅಮಾಯಕ ಪ್ರವಾಸಿಗರನ್ನು ಕೊಂದಿದ್ದರಿಂದ ಮತ್ತು ಏಪ್ರಿಲ್ 25ರ  ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಯ ಆಧಾರದ ಮೇಲೆ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು ಎಂದು ಅವರು ಹೇಳಿದರು.

ಭದ್ರತಾ ಮಂಡಳಿಯ ಸದಸ್ಯರು ಈ ಭಯೋತ್ಪಾದಕ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸುದಾರರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಅವರನ್ನು ನ್ಯಾಯದ ಕಟಕಟೆಗೆ ತರಲು ಒತ್ತು ನೀಡಿದರು ಎಂದು ಹರೀಶ್ ಒತ್ತಿ ಹೇಳಿದರು. ಭಾರತವು ತನ್ನ ಪ್ರಾಥಮಿಕ ಉದ್ದೇಶಗಳನ್ನು ಸಾಧಿಸಿದ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಯುದ್ಧವನ್ನು ನೇರವಾಗಿ ನಿಲ್ಲಿಸಲಾಯಿತು ಎಂದು ಅವರು ಹೇಳಿದರು.

ಮೇ 10ರಂದು ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಯುದ್ಧ ಪ್ರಾರಂಭವಾದಗಿನಿಂದ ಪರಿಸ್ಥಿತಿಯನ್ನು ನಿವಾರಿಸಲು ಸಹಾಯ ಮಾಡಿದ್ದೇನೆ ಮತ್ತು ಸಂಘರ್ಷವನ್ನು ನಿಲ್ಲಿಸಿದರೆ ಅಮೆರಿಕವು ಭಾರತ ಪಾಕಿಸ್ತಾನದೊಂದಿಗೆ “ಹೆಚ್ಚು ಹೆಚ್ಚು ವ್ಯಾಪಾರ” ಮಾಡಲಿದೆ ಎಂದು ಹೇಳಿದ್ದೇನೆ ಎಂದು ಅನೇಕ ಸಂದರ್ಭಗಳಲ್ಲಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಟ್ರಂಪ್ ಜೂನ್‌ನಲ್ಲಿ ಕೆನಡಾದ ಕಾನಾನ್‌ಸ್ಕಿಸ್‌ನಲ್ಲಿ ನಡೆದ ಜಿ7 ನಾಯಕರ ಶೃಂಗಸಭೆಯಲ್ಲಿ ಭೇಟಿಯಾಗಲು ನಿಗದಿಯಾಗಿತ್ತು. ಆದರೆ ಅಮೆರಿಕ ಅಧ್ಯಕ್ಷರು ಬೇಗನೆ ವಾಷಿಂಗ್ಟನ್‌ಗೆ ಮರಳಿದರು. ಕಾನಾನ್‌ಸ್ಕಿಸ್‌ನಿಂದ ನಿರ್ಗಮಿಸುವ ಮೊದಲು ಮೋದಿ ಟ್ರಂಪ್‌ರೊಂದಿಗೆ 35 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿದರು.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಾನಾನ್‌ಸ್ಕಿಸ್‌ನಿಂದ ನೀಡಿದ ವಿಡಿಯೋ ಸಂದೇಶದಲ್ಲಿ, ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆಯಾಗಲಿ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕುರಿತು ಅಮೆರಿಕದ ಮಧ್ಯಸ್ಥಿಕೆಯ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೋದಿ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು ಎಂದು ಹೇಳಿದರು. ಭಾರತವು ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿಯವರು ಟ್ರಂಪ್ ಅವರಿಗೆ  ದೃಢವಾಗಿ ಹೇಳಿದ್ದಾರೆ ಎಂದು ಮಿಸ್ರಿ ಹೇಳಿದರು.  ಯುದ್ದವನ್ನು ನಿಲ್ಲಿಸುವ ಚರ್ಚೆಯು ಭಾರತ ಮತ್ತು ಪಾಕಿಸ್ತಾನದ ನಡುವೆಯೇ ನೇರವಾಗಿ ನಡೆಯಿತು ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಯುದ್ಧ ನಿಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಯಿತು ಎಂದು ಸ್ಪಷ್ಟಪಡಿಸಿದರು.

ಮೋದಿ ಮೌನ: ಜೈರಾಮ್ ರಮೇಶ್ ತರಾಟೆ

ಕಳೆದ 73 ದಿನಗಳಲ್ಲಿ ಟ್ರಂಪ್ ಅವರು 25 ಬಾರಿ ತಾನೇ ಭಾರತ ಪಾಕಿಸ್ತಾನಗಳ ನಡುವಿನ ಯುದ್ಧವನ್ನು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಸಂಪೂರ್ಣವಾಗಿ ಮೌನವಾಗಿದ್ದಾರೆ. ಮೋದಿಯವರು ವಿದೇಶ ಪ್ರವಾಸ ಮಾಡಲು ಮತ್ತು ಸ್ವದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಮಾತ್ರ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ “X” ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ: ಮೂರನೇ ದಿನವೂ ಸಂಸತ್ ಕಲಾಪ ಮುಂದೂಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....