ವಿಶ್ವದಲ್ಲಿ ಈಗಾಗಲೇ ಎರಡನೇ ಅಲೆಗೆ ತುತ್ತಾದ ದೇಶಗಳಿಂದ ಪಾಠ ಕಲಿಯುವ ಮೂಲಕ ಭಾರತವು ಕೊರೊನಾ ವೈರಸ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದ್ದಾರೆ.
“ಕೊರೊನಾ ಎರಡನೆಯ ಅಲೆ ಹೆಚ್ಚು ಭೀಕರವಾಗಿದೆ. ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ವೃದ್ಧರಲ್ಲದೆ, ವೈರಸ್ ಸೋಂಕಿತ ಯುವಕರು ಸಹ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ಅಪ್ಪಳಿಸಿದ್ದ ಇತರ ದೇಶಗಳಿಂದ ನಾವು ಪಾಠ ಕಲಿಯಬೇಕಾಗಿತ್ತು. ದೆಹಲಿಯಲ್ಲಿ ಕುಳಿತುಕೊಳ್ಳುವ ಜನರು ಇದನ್ನು ನೋಡಿ ಜನರಿಗೆ ನಿರ್ದೇಶನ ನೀಡಬೇಕು” ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಎನ್ಡಿಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಇದೇ ಸಂದರ್ಭಗಳಲ್ಲಿ ವಿದೇಶದಲ್ಲಿ ತಯಾರಾದ ಲಸಿಕೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವ ಅಗತ್ಯತೆ ಇದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,501 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕೊರೊನಾ ಎರಡನೆ ಅಲೆಗೆ ವೇದಿಕೆ ಒದಗಿಸಿದ್ದು ಮೋದಿ ಸರ್ಕಾರದ ಅಪಕ್ವ ನಿರ್ಧಾರಗಳು, ಕಣ್ಕಟ್ಟು ಅಂಕಿಅಂಶಗಳು
ಪ್ರಧಾನಿ ನರೇಂದ್ರ ಮೋದಿಯವರು ಲಕ್ಷಾಂತರ ಪ್ರಮಾಣದಲ್ಲಿ ಕೊರೊನಾ ವಿರೋಧಿ ಲಸಿಕೆಗಳನ್ನು ಇತರ ದೇಶಗಳಿಗೆ ಉಡುಗೊರೆಯಾಗಿ ನೀಡಿರುವುದನ್ನು ಟೀಕಿಸಿರುವ ಸಿಎಂ, “ನೀವು ರೆಮ್ಡೆಸಿವಿರ್ ಲಸಿಕೆಯನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದ್ದೀರಿ. ಆದರೆ, ಭಾರತದಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಲಸಿಕೆ ಹಾಕುವ ಅಗತ್ಯವಿದೆ” ಎಂದು ಹೇಳಿದ್ದಾರೆ.
’ಭಾರತದ ಲಸಿಕೆ ಆರಂಭವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು. ಆದರೂ ದೇಶದಲ್ಲಿ ಕೊರೊನಾ ಇಷ್ಟೊಂದು ಹರಡಿದೆ. ಅತಿ ಹೆಚ್ಚು ಹಾನಿಗೊಳಗಾಗಿರುವ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ವ್ಯಾಕ್ಸಿನೇಷನ್ ಕೊರತೆ ಎದುರಿಸುತ್ತಿವೆ. ಲಸಿಕೆ ಬೇಕು ಎಂದು ಕೇಂದ್ರಕ್ಕೆ ಮನವಿ ಮಾಡುತ್ತಿವೆ’ ಎಂದಿದ್ದಾರೆ.
ಸಾಂಕ್ರಾಮಿಕ ರೋಗ ಇಷ್ಟು ಹಬ್ಬಿರುವ ಮಧ್ಯೆಯು ಚುನಾವಣಾ ರ್ಯಾಲಿಗಳು ಮತ್ತು ಹರಿದ್ವಾರದಲ್ಲಿ ಕುಂಭಮೇಳದಲ್ಲಿ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯನ್ನೂ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಟೀಕಿಸಿದ್ದಾರೆ.
ಇನ್ನು ಕೊರೊನಾ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎಲ್ಲಾ ಸಾರ್ವಜನಿಕ ರ್ಯಾಲಿಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಛತ್ತೀಸ್ಗಢ ಸಿಎಂ ಶ್ಲಾಘಿಸಿದ್ದಾರೆ. “ರಾಜಕಾರಣಿಗಳು ನಮಗೆ ಆದರ್ಶಪ್ರಾಯರಾಗಿರಬೇಕು. ಕೊರೊನಾ ಕಾರಣಕ್ಕೆ ರ್ಯಾಲಿಗಳನ್ನು ಮಾಡುವುದಿಲ್ಲ ಎಂದು ಯಾವ ನಾಯಕರು ಹೇಳಿಲ್ಲ. ಪ್ರಧಾನಿ ಮೋದಿ ಅವರೇ ಅನೇಕ ರ್ಯಾಲಿಗಳನ್ನು ಮಾಡುತ್ತಿದ್ದಾರೆ” ಎಂದಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,61,500 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಪ್ರತಿ ದಿನ 2 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ನಾಲ್ಕನೆ ದಿನ ಇದಾಗಿದ್ದು, ಕಳೆದ ಒಂದು ವಾರದಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ಭಾರತದಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿ: ಕಳವಳ ವ್ಯಕ್ತಪಡಿಸಿದ ಯುರೋಪ್ ಸಂಸದೀಯ ಸಮಿತಿ