ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ವಿಧಾನಸಭಾ ಚುನಾವಣೆಗಳು ಆರಂಭವಾಗಲಿವೆ. ರಾಜಕೀಯ ಪಕ್ಷಗಳು ಭರದಿಂದ ಪ್ರಚಾರ ನಡೆಸುತ್ತಿವೆ. ಆದರೆ ಅದೇ ಸಮಯದಲ್ಲಿ ಕೆಲ ಮಾಧ್ಯಮಗಳು ಅನಪೇಕ್ಷಿತ ಪ್ರಚಾರದಲ್ಲಿ ತೊಡಗಿವೆ ಎಂಬ ಆರೋಪ ಕೇಳಿಬಂದಿವೆ. ರೈತರ ಕುರಿತು ಚರ್ಚೆಯಲ್ಲಿ ಮಂದಿರ v/s ಮಸೀದಿ ಚಿತ್ರ ಪ್ರಸಾರ ಮಾಡಿದ ಇಂಡಿಯಾ ಟಿ.ವಿ ವಿರುದ್ದ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ವೇದಿಕೆ ಮೇಲೆಯೇ ನಿರೂಪಕನನ್ನು ತರಾಟೆಗೆ ತೆಗೆದುಕೊಂಡಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ರೈತರ ಸಮಸ್ಯೆಗಳು ಮತ್ತು ಉತ್ತರ ಪ್ರದೇಶ ಚುನಾವಣೆಯಲ್ಲಿ ರೈತರ ಆಯ್ಕೆ ಯಾರಾಗಿರುತ್ತೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಚರ್ಚೆಗೆ ಸಂಬಂಧವೇ ಇರದ ರಾಮಮಂದಿರ ಮತ್ತು ಮಸೀದಿಯ ಚಿತ್ರ ವೇದಿಕೆ ಹಿಂಭಾಗದಲ್ಲಿ ಪ್ರದರ್ಶಿಸಿದಾಗ ಇಂಡಿಯಾ ಟಿ.ವಿ ಹಾಗೂ ಅದರ ನಿರೂಪಕನ ವಿರುದ್ಧ ರೈತ ನಾಯಕ ರಾಕೇಶ್ ಟಿಕಾಯತ್ ಕಿಡಿ ಕಾರಿದ್ದಾರೆ.
"मंदिर और मस्जिद दिखाओगे आप इसपे? आप चैनल वाले किसी का प्रचार नहीं कर सकते। चैनल वाले देश को बरबाद करना चाहते हैं. क्या मजबूरी है ये दिखाने की? आप किसका प्रचार कर रहे हैं? देश इसे चलता है क्या?" – @RakeshTikaitBKU
गोदी मिडिया धर्म को बढ़ावा देकर राजनीती खेल खेल रही है.. pic.twitter.com/ACQYUVRrVq
— Mohammed Zubair (@zoo_bear) January 29, 2022
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆ ರೈತರ ಮುಖ್ಯಮಂತ್ರಿ ಯಾರು ಎಂಬ ಚರ್ಚಾ ಕಾರ್ಯಕ್ರಮವನ್ನು ರಾಷ್ಟ್ರೀಯ ಸುದ್ದಿ ವಾಹಿನಿ ಇಂಡಿಯಾ ಟಿ.ವಿ ಆಯೋಜಿಸಿತ್ತು. ಈ ವೇದಿಕೆಯಲ್ಲಿ ರೈತರ ಅಭಿಪ್ರಾಯ ಕಲೆ ಹಾಕುವ ಸಲುವಾಗಿ ರೈತ ಹೋರಾಟವನ್ನು ಮುನ್ನಡೆಸಿದವರಲ್ಲಿ ಒಬ್ಬರಾದ ರಾಕೇಶ್ ಟಿಕಾಯತ್ ಅವರನ್ನು ಕೂಡ ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ಅತಿಥಿಯಾಗಿದ್ದ ರಾಕೇಶ್ ಟಿಕಾಯತ್ ಜೊತೆಗೆ ನಿರೂಪಕ ಚರ್ಚೆ ನಡೆಸುತ್ತಿರುವಾಗ ವೇದಿಕೆ ಹಿಂಭಾಗದ ಪರದೆಯ ಮೇಲೆ ಹಿಂದಿಯಲ್ಲಿ ಕಿಸಾನ್ ಕಾ ಮುಖ್ಯಮಂತ್ರಿ ಕೌನ್ (ರೈತರ ಮುಖ್ಯಮಂತ್ರಿ ಯಾರು) ಎಂಬ ಪ್ರಶ್ನಾರ್ಥಕ ಶೀರ್ಷಿಕೆ ಪ್ರದರ್ಶಿಸಿ ಅದರ ಕೆಳಗಡೆ ಅಯೋಧ್ಯೆಯ ರಾಮ ಮಂದಿರ v/s ಮಸೀದಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇದನ್ನು ಕಂಡು ವಾಹಿನಿ ವಿರುದ್ಧ ಗರಂ ಆದ ರಾಕೇಶ್ ಟಿಕಾಯತ್, ಬಿಜೆಪಿಯ ವಿಭಜಕ ತಂತ್ರಗಳನ್ನು ನೀವು ಯಾಕೆ ಪ್ರಮೋಟ್ ಮಾಡುತ್ತಿದ್ದೀರಿ ಎಂದು ವೇದಿಕೆಯಲ್ಲೇ ನಿರೂಪಕನನ್ನು ಪ್ರಶ್ನಿಸಿದ್ದಾರೆ.
ಇದನ್ನು (ರಾಮ ಮಂದಿರದ ಫೋಟೋ) ತೋರಿಸಲು ನಿಮಗೆ ಯಾರ ಒತ್ತಡವಿದೆ? ಯಾರ ಪರ ಪ್ರಚಾರ ಮಾಡುತ್ತಿದ್ದೀರಿ? ನೀವು ಯಾರ ಆದೇಶವನ್ನು ಅನುಸರಿಸುತ್ತಿದ್ದೀರಿ?” ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.
ಈ ವೇಳೆ ವಾಹಿನಿಯ ನಿರೂಪಕ ಸೌರಭ್ ಶರ್ಮಾ ಅವರು ಟಿಕಾಯತ್ ಪ್ರಶ್ನೆಗೆ ಸಮರ್ಥನೆ ನೀಡಲು ಪ್ರಯತ್ನಿಸಿದಾಗ, ಖಾರವಾಗಿಯೇ ಪ್ರತಿಕ್ರಿಯಿಸಿರು ಟಿಕಾಯತ್, “ರೈತರ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ನೀವು ಮಂದಿರ ಮತ್ತು ಮಸೀದಿಯನ್ನು ತೋರಿಸುತ್ತೀರಾ? ನೀವು ಇದನ್ನು ತೋರಿಸಲು ಸಾಧ್ಯವಿಲ್ಲ. ನೀವು ಟಿವಿ ಚಾನೆಲ್ಗಳು ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.
ಅದಕ್ಕೆ ಸ್ಪಷ್ಟನೆ ನೀಡಿರುವ ನಿರೂಪಕ ಮಂದಿರ v/s ಮಸೀದಿ ರಾಜಕೀಯವನ್ನು ಮಾಡಿರುವುದು ನಾವಲ್ಲ, ಬದಲಿಗೆ ರಾಜಕೀಯ ಪಕ್ಷಗಳು, ನೀವು ಅವರನ್ನು ಕೇಳಿ ಎಂದು ಹೇಳಿದಾಗ ರಾಕೇಶ್ ಟಿಕಾಯತ್ ಸುಮ್ಮನಾಗಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.
ಸದ್ಯ ಇಂಡಿಯಾ ಟಿ.ವಿ ಸಂವಾದದ ಈ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಭಾರೀ ವೈರಲ್ ಆಗಿದ್ದು, ರೈತರ ಚರ್ಚೆಗೆ ಸೀಮಿತವಾಗಿದ್ದ ವೇದಿಕೆಯನ್ನು ಬಿಜೆಪಿ ಪರ ಪ್ರಚಾರಕ್ಕೆ ಬಳಸಿದ್ದಕ್ಕಾಗಿ ಇಂಡಿಯಾ ಟಿ.ವಿ ಹಾಗೂ ನಿರೂಪಕ ಸೌರಬ್ ಶರ್ಮಾ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಫ್ಯಾಕ್ಚ್ ಚೆಕ್: ನೀಟ್ ಟಾಪರ್ಗೆ ಸೀಟ್ ಸಿಗಲಿಲ್ಲವೆಂಬ ಸುಳ್ಳು ವರದಿ – ವಿಶ್ವೇಶ್ವರ ಭಟ್ ಕ್ಷಮೆ ಕೇಳಿದ್ದು ನಿಜವೇ?