ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ, ಅನಧಿಕೃತ ಸ್ಥಳಗಳಲ್ಲಿ ವಾಹನಗಳ್ನು ನಿಲ್ಲಿಸಿದ ಸಂದರ್ಭಗಳಲ್ಲಿ ಜಾರಿಯಿರುವ ಟೋಯಿಂಗ್ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ (ಜ.30) ತಿಳಿಸಿದ್ದಾರೆ.
‘ವಾಹನಗಳ ಟೋಯಿಂಗ್ ಸಂದರ್ಭದಲ್ಲಿ ವಹನ ಸವಾರರು ಮತ್ತು ಟೋಯಿಂಗ್ ಸಿಬ್ಬಂದಿ, ಪೊಲೀಸರ ನಡುವೆ ಪದೇ ಪದೇ ಜಟಾಪಟಿ ನಡೆಯುತ್ತಿರುವ ಕುರಿತು ಮಾತನಾಡಿರುವ ಮುಖ್ಯಮಂತ್ರಿಗಳು, ಕಾನೂನು ಉಲ್ಲಂಘಿಸುವವರ ಕ್ರಮ ಅಗತ್ಯ ಆದರೆ, ಕಾನೂನು ಪಾಲಕರ ಅತಿರೇಕದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಹೀಗಾಗಿ ಟೋಯಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಲು ಸೋಮವಾರ (ಜ.31) ಪೊಲೀಸ್ ಮಹಾನಿರ್ದೇಶಕರು, ಕಮೀಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ಬದುಕಿರುವ ರೈತನಿಗೆ ಮರಣ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳು
ನಗರದಲ್ಲಿ ಟೋಯಿಂಗ್ ಸಿಬ್ಬಂದಿಯ ಅಮಾನವೀಯ ವರ್ತನೆಗಳು ಆಗ್ಗಾಗೆ ದಾಖಲಾಗುತ್ತಿವೆ. ಕಳೆದೆರಡು ದಿನಗಳ ಹಿಂದೆ ಇಂದಿರಾನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಆನ್ಲೈನ್ ವಸ್ತು ಡೆಲಿವರಿ ಮಾಡುವ ಯುವಕನ ಬೈಕ್ ಟೋ ಮಾಡಲಾಗಿತ್ತು. ಯುವಕ ಅಂಗಲಾಚಿದರೂ, ವಾಹನದ ಹಿಂದೆಯೇ ಓಡಿದ್ದರೂ ಸಿಬ್ಬಂದಿ ವಾಹನ ನಿಲ್ಲಿಸಿರಲಿಲ್ಲ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಈ ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಡೆಲಿವರಿ ಬಾಯ್ ಬೈಕ್ ಟೋಯಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಟೋಯಿಂಗ್ ಕರ್ತವ್ಯದಿಂದ ಎಎಸ್ಐ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಪ್ರಕರಣದ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ.ಆರ್. ರವಿಕಾಂತೇಗೌಡ ತನಿಖೆಗೆ ಆದೇಶಿಸಿದ್ದಾರೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಟೋಯಿಂಗ್ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು, ನಾಳೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಎಎಸ್ಐ ಹಲ್ಲೆ: ಗೃಹ ಸಚಿವರ ಸೂಚನೆ ಬೆನ್ನಲ್ಲೇ ಅಧಿಕಾರಿ ಅಮಾನತು