ಇಂದೋರ್ನ ಅನಾಥಾಶ್ರಮವೊಂದರಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದ ಘಟನೆ ಬಯಲಾಗಿದ್ದು, ಅಧಿಕಾರಿಗಳು ಅನಾಥಾಶ್ರಮಕ್ಕೆ ಭೇಟಿ ನೀಡಿದ ವೇಳೆ ಮಕ್ಕಳು ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ.
ಇಂದೋರ್ನ ಅನಾಥಾಶ್ರಮಕ್ಕೆ ಜನವರಿ 12ರಂದು ಸಿಡಬ್ಲ್ಯುಸಿ ಅಧಿಕಾರಿಗಳ ತಂಡ ಹಠಾತ್ ಭೇಟಿ ನೀಡಿ ತಪಾಸಣೆ ನಡೆಸಿದೆ. ಈ ವೇಳೆ ಅನಾಥಾಶ್ರಮದಲ್ಲಿ 4-14 ವರ್ಷದೊಳಗಿನ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿರುವುದು ಬಯಲಾಗಿದೆ. ನಮ್ಮನ್ನು ತಲೆ ಕೆಳಗಾಗಿ ನೇತು ಹಾಕುತ್ತಿದ್ದಾರೆ, ಕಾಯಿಸಿದ ಕಬ್ಬಿಣದಿಂದ ಬರೆ ಹಾಕುತ್ತಾರೆ ಮತ್ತು ತಮ್ಮನ್ನು ಬೆತ್ತಲೆಗೊಳಿಸಿ ಬಳಿಕ ಚಿತ್ರಗಳನ್ನು ತೆಗೆಯುತ್ತಾರೆ, ಬೆಂಕಿಯಲ್ಲಿ ಉರಿಯುತ್ತಿರುವ ಕೆಂಪು ಮೆಣಸಿನಕಾಯಿಯ ಹೊಗೆಯನ್ನು ಉಸಿರಾಡುವಂತೆಯೂ ಮಾಡಲಾಗುತ್ತಿತ್ತು ಎಂದು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧಿಕಾರಿಗಳ ಬಳಿ ಮಕ್ಕಳು ಭಯದಿಂದಲೇ ಹೇಳಿಕೊಂಡಿದ್ದಾರೆ.
ಸಿಡಬ್ಲ್ಯುಸಿ ಅಧಿಕಾರಿಗಳ ದೂರಿನ ಮೇರೆಗೆ ಅನಾಥಾಶ್ರಮದ ಐವರು ಸಿಬ್ಬಂದಿಗಳ ವಿರುದ್ಧ ಜುವೆನೈಲ್ ಜಸ್ಟೀಸ್ ಆಕ್ಟ್ (ಜೆಜೆ ಆಕ್ಟ್) ಮತ್ತು ಐಪಿಸಿಯ ಸೆಕ್ಸನ್ಗಳಡಿಯಲ್ಲಿ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಪೋಕ್ಸೊ ಕಾಯ್ದೆ ಮತ್ತು ಮಾನವ ಕಳ್ಳಸಾಗಣೆ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ಅಧಿಕಾರಿಗಳ ತಂಡಕ್ಕೆ ದೂರು ನೀಡಿದ ಮಕ್ಕಳ ಆರೋಪಗಳ ಬಗ್ಗೆ ಪರಿಶೀಲಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಇಂದೋರ್ನ ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ತಂಡವು ಜುವೆನೈಲ್ ಜಸ್ಟೀಸ್ ಆಕ್ಟ್ನ ಉಲ್ಲಂಘನೆಯನ್ನು ಪತ್ತೆಹಚ್ಚಿದೆ. ನಾವು ಹಾಸ್ಟೆಲ್ನ್ನು ಸೀಲ್ ಮಾಡಿದ್ದೇವೆ ಮತ್ತು ಮಕ್ಕಳನ್ನು ಸರ್ಕಾರಿ ವಸತಿ ನಿಲಯಕ್ಕೆ ಸ್ಥಳಾಂತರ ಮಾಡಿದ್ದೇವೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
4 ವರ್ಷದ ಬಾಲಕ ತನ್ನ ಪ್ಯಾಂಟ್ನಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಗಂಟೆಗಳ ಕಾಲ ಸ್ನಾನಗೃಹದಲ್ಲಿ ಆತನಿಗೆ ದಿಗ್ಭಂಧನ ವಿಧಿಸಲಾಗಿತ್ತು. ಅವನಿಗೆ 2-3 ದಿನಗಳವರೆಗೆ ಆಹಾರವನ್ನು ನೀಡಲಾಗಿಲ್ಲ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಮಕ್ಕಳಿಗಾದ ಗಾಯಗಳ ಕುರಿತು ಚಿತ್ರಗಳಿವೆ. ಅವುಗಳು ಬಿಸಿ ಕಬ್ಬಿಣ ಇಟ್ಟುರುವುದರಿಂದ ಉಂಟಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಚಂದ್ರಭಾನ್ ಸಿಂಗ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣದ ತನಿಖಾಧಿಕಾರಿಯಾದ ಸಬ್ ಇನ್ಸ್ಪೆಕ್ಟರ್ ಕೀರ್ತಿ ತೋಮರ್ ಅವರು ಮಕ್ಕಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದಂತೆ ಅವರು ತಲೆಕೆಳಗಾಗಿ ನೇಣು ಹಾಕಿರುವ ಬಗ್ಗೆ ಈ ವೇಳೆ ಹೇಳಲಿಲ್ಲ. ಆದರೆ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಥಳಿಸಲಾಗಿದೆ ಎಂದು ಹೇಳಿರುವ ಬಗ್ಗೆ ಹೇಳಿದ್ದಾರೆ.
ಇಂದೋರ್ನ ಅನಾಥಾಶ್ರಮದಲ್ಲಿದ್ದ ಮಕ್ಕಳು ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದ ಮಕ್ಕಳಾಗಿದ್ದಾರೆ. ಅವರು ಅಲ್ಲಿಗೆ ಹೇಗೆ ಬಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅನಾಥಾಶ್ರಮದ ಕೇಂದ್ರವು ಇಂದೋರ್, ಜೋಧಪುರ, ಸೂರತ್, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಇದೆ.
ಇದನ್ನು ಓದಿ: ಫೇಸ್ಬುಕ್ ವಿರುದ್ಧ ರೋಹಿಂಗ್ಯಾ ನಿರಾಶ್ರಿತರು ಕೋರ್ಟ್ ಮೊರೆ