ಮಹಾರಾಷ್ಟ್ರದಾದ್ಯಂತ ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್ಸಿಪಿ) ಪಕ್ಷವು ‘ಪರಿವಾರ್ ಸಂವಾದ್ ಯಾತ್ರೆ’ ನಡೆಸುತ್ತಿದ್ದು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆಯೆ ಎಂಬ ಪ್ರಶ್ನೆಗಳು ಎದ್ದಿದೆ. ಎನ್ಸಿಪಿಯ ಮಹಾರಾಷ್ಟ್ರದ ಅಧ್ಯಕ್ಷ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಜಯಂತ್ ಪಾಟೀಲ್ ಅವರು ಕಳೆದ ಹಲವು ದಿನಗಳಿಂದ ರಾಜ್ಯವ್ಯಾಪಿ ಅಭಿಯಾನದಲ್ಲಿದ್ದು, ಪಕ್ಷದ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಎನ್ಸಿಪಿಯ ಈ ರಾಜಕೀಯ ನಡೆಯ ಬಗ್ಗೆ ಹಲವಾರು ರಾಜಕೀಯ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಎನ್ಸಿಪಿ ಮೊದಲೇ ತನ್ನ ವೇದಿಕೆಯನ್ನು ಸಿದ್ಧಪಡಿಸಲು ಬಯಸಿದೆ ಎಂಬ ಊಹಾಪೋಹಗಳೆದ್ದಿದೆ.
ಇದನ್ನೂ ಓದಿ: ರಾಕೇಶ್ ಟಿಕಾಯತ್ ಭೇಟಿಯಾಗಿ ಬೆಂಬಲ ಘೋಷಿಸಿದ ಶಿವಸೇನೆಯ ಸಂಜಯ್ ರಾವತ್!
ಆದರೆ, ಎನ್ಸಿಪಿ ಇದನ್ನು ನಿರಾಕರಿಸಿದೆ. ಎನ್ಸಿಪಿ ಮಹರಾಷ್ಟ್ರದ ಅಧ್ಯಕ್ಷ ಜಯಂತ್ ಪಾಟೀಲ್, “ನಮ್ಮ ಅಧ್ಯಕ್ಷ ಶರದ್ ಪವಾರ್ ಅವರು ಚುನಾವಣೆಗಳಿರಲಿ ಅಥವಾ ಇಲ್ಲದಿರಲಿ, ನಾಯಕರು ಯಾವಾಗಲೂ ಜನರೊಂದಿಗೆ ಇರಬೇಕು ಎಂದು ನಮಗೆ ಕಲಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರವು ಒಂದು ವರ್ಷವನ್ನು ಪೂರೈಸಿದೆ. ಆದ್ದರಿಂದ ನಾವು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆ ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ, ಆದ್ದರಿಂದ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಎನ್ಸಿಪಿಯು ತನ್ನ ಮತಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಎನ್ಸಿಪಿ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗಳಲ್ಲಿ ಬಹುಪಾಲು ಸಂಘಪರಿವಾರದವರು