Homeಮುಖಪುಟ’ಹಿಂದುತ್ವಕ್ಕೆ ಮರುಳಾಗಿರುವ "ಜಾತಿ" ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

- Advertisement -
- Advertisement -

ದಲಿತ ಹೋರಾಟಗಾರ-ಮುಖಂಡ ಜಿಗ್ನೇಶ್ ಮೇವಾನಿ ಗುಜರಾತಿನ ವಡಗಾಂ ಕ್ಷೇತ್ರದ ಶಾಸಕ. ಸದ್ಯಕ್ಕೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿರುವ ಅವರು ತಮ್ಮ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5ರಂದು ನಡೆಯುವ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಕೆಲಸಗಳ ನಡುವೆ ಬೆಂಗಳೂರಿಗೆ ಭೇಟಿ ನೀಡಿದಾಗ ಗುಜರಾತಿನ ಚುನಾವಣೆಗಳ ಬಗ್ಗೆ ನ್ಯಾಯಪಥಕ್ಕೆ ಅವರು ನೀಡಿದ ಸಂದರ್ಶನವಿದು.

ಗುರುಪ್ರಸಾದ್: ನೀವೀಗ ಗುಜರಾತ್ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿದ್ದೀರಿ. ಇಡೀ ದೇಶದಲ್ಲಿ ಗುಜರಾತ್ ಅತಿ ಹೆಚ್ಚು ಕೋಮು ಧ್ರುವೀಕರಣಗೊಂಡ ರಾಜ್ಯ ಎನ್ನಬಹುದು. ಅಲ್ಲಿನ ಪರಿಸ್ಥಿತಿ ಈಗ ಹೇಗಿದೆ? ಚುನಾವಣೆಗಳು ಹತ್ತಿರವಿರುವಾಗ ನಿಮ್ಮ ಸವಾಲುಗಳೇನು?

ಜಿಗ್ನೇಶ್ ಮೇವಾನಿ: ಗುಜರಾತ್ ಕೆಲವು ವರ್ಷಗಳಿಂದ ಹಿಂದುತ್ವದ ಪ್ರಯೋಗಶಾಲೆಯಾಗಿದ್ದು, ಬಿಜೆಪಿ ಬಹಳ ಬಲಶಾಲಿ ಪಕ್ಷವಾಗಿ ರಾಜ್ಯದ ಎಲ್ಲಾ ವಲಯಗಳನ್ನು ತೆಕ್ಕೆಗೆ ತೆಗೆದುಕೊಂಡಿರುವಾಗ ಮತ್ತು ಎಲ್ಲಾ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ಬುಡಮೇಲು ಮಾಡುತ್ತಿರುವಾಗ ಕಾಂಗ್ರೆಸ್ ಮಾತ್ರವೇ ಅಲ್ಲ, ಬೇರೇ ಯಾವುದೇ ರಾಜಕೀಯ ಪಕ್ಷಕ್ಕೆ ಇದು ಕಷ್ಟದ ಮತ್ತು ಸವಾಲಿನ ಪರಿಸ್ಥಿತಿ. ಅಲ್ಲದೆ ಕಾರ್ಪೊರೆಟ್‌ಗಳು, ಮತ್ತಿತರ ಸ್ವಹಿತಾಸಕ್ತಿ ಗುಂಪುಗಳು ಮೋದಿ, ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಬೆಂಬಲಕ್ಕೆ ನಿಂತಿರುವಾಗ ಹೋರಾಟ ಇನ್ನಷ್ಟು ಕಷ್ಟವಾಗುತ್ತದೆ. ಆದರೆ ಇದರ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ಕೂಡ ಗೆಲುವಿನ ಹತ್ತಿರಕ್ಕೆ ಬಂದಿದ್ದವು. ಈ ನಿಟ್ಟಿನಲ್ಲಿ ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಹೋರಾಟ ನಿರಂತರವಾಗಿದೆ.

ಪ್ರ: ಕೊನೆಯ ಬಾರಿ ಗುಜರಾತ್‌ನಿಂದ ಹೊರಗಿರುವವರಿಗೆ ಕಾಂಗ್ರೆಸ್ ಅಷ್ಟು ಸೀಟುಗಳನ್ನು ಗೆದ್ದದ್ದು ಅಚ್ಚರಿಯೆನಿಸಿತ್ತು. ಏಕೆಂದರೆ ಯಾವ ಎಕ್ಸಿಟ್ ಪೋಲ್‌ಗಳೂ ಅದನ್ನು ಸೂಚಿಸಿರಲಿಲ್ಲ. ಈ ಬಾರಿ ಪರಿಸ್ಥಿತಿ ಹೇಗಿದೆ?

: ಮೋದಿಯವರ ರ್‍ಯಾಲಿಗಳಿಗೆ ಜನರು ಬರುತ್ತಿಲ್ಲ. ಜನ ಮೋದಿಯವರಿಂದ ಬೇಸತ್ತು ಹೋಗಿದ್ದಾರೆ. ಅವರಿಂದ ಏನೂ ಹೊಸತು ಬರುತ್ತಿಲ್ಲ. ಹಣದ ಮೂಲಕ ಮತ್ತು ಸರ್ಕಾರಿ ಇಲಾಖೆಗಳಿಗೆ ಜನರನ್ನು ಕರೆತರುವಂತೆ ಒತ್ತಡ ಹೇರಿ ಅವರ ಸಭೆಗಳಿಗೆ ಜನ ಸೇರಿಸಲಾಗುತ್ತಿದೆ. ಇದು ಗುಜರಾತ್ ಚುನಾವಣೆಯ ಸದ್ಯದ ಕಥೆಯನ್ನು ಹೇಳುತ್ತಿದೆ. ಇನ್ನು ಎರಡನೆಯದಾಗಿ ಗುಜರಾತ್ ಸರ್ಕಾರದ ಇಡೀ ಸಂಪುಟವನ್ನು ಬದಲಾಯಿಸಲಾಯಿತು. ಮೂರನೆಯದಾಗಿ, ಕೋವಿಡ್ ಸಂದರ್ಭದಲ್ಲಿ ಗುಜರಾತ್ ಸರ್ಕಾರದ ವೈಫಲ್ಯ. ನಾಲ್ಕನೆಯದಾಗಿ, ಜಿಎಸ್‌ಟಿ, ಡಿಮಾನೆಟೈಸೇಶನ್ ಮತ್ತಿತರ ಆರ್ಥಿಕ ನೀತಿಗಳಿಂದ ಗುಜರಾತ್ ಜನ ಹೈರಾಣಾಗಿ ರೋಸಿಹೋಗಿದ್ದಾರೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ವ್ಯಾಪಾರಿ ವರ್ಗ, ನಿರುದ್ಯೋಗಿ ಯುವಕರು ಶತಮಾನಗಳ ಕಾಲ ವ್ಯವಹಾರದ ತವರೆನಿಸಿಕೊಂಡಿದ್ದ ಗುಜರಾತ್‌ನಲ್ಲಿ ಆಕ್ರೋಶಗೊಂಡಿದ್ದಾರೆ. ಈ ಎಲ್ಲಾ ಸೂಚನೆಗಳಿಂದ ನಾವು ಈ ಚುನಾವಣೆಯಲ್ಲಿ ಚಾಲಕನ ಸ್ಥಾನದಲ್ಲಿದ್ದೇವೆ ಮತ್ತು ಚುನಾವಣೆ ಗೆಲ್ಲಲು ಸಂಪೂರ್ಣವಾಗಿ ಕಾರ್ಯೋನ್ಮುಖರಾಗಿದ್ದೇವೆ.

ಇದನ್ನೂ ಓದಿ: ಗುಜರಾತ್: ಮೋದಿ-ಶಾ ಜೋಡಿಗೆ ’ಮಾಡು ಇಲ್ಲವೇ ಮಡಿ’ ಚುನಾವಣೆ

ಪ್ರ: ಗೆಲ್ಲುವ ಸೂಚನೆ ನೀಡುವ ಆಂತರಿಕ ಸರ್ವೇಗಳು ಪಕ್ಷದೊಳಗೆ ನಡೆದಿವೆಯೇ?

: ನಮಗೆ ಬಹಳ ಒಳ್ಳೆಯ ಚಾನ್ಸ್ ಇದೆ ಈ ಬಾರಿ. ಅದರ ಬಗ್ಗೆ ನನಗೆ ಭರವಸೆಯಿದೆ.

ಪ್ರ: ಕರ್ನಾಟಕದಲ್ಲಿ ಒಂದು ಮೇಲ್ಮಟ್ಟಕ್ಕೆ ಯಾವ ಜಾತಿ ಸಮುದಾಯ ಯಾವ ಪಕ್ಷದ ಜೊತೆಗೆ ಹೆಚ್ಚು ಗುರುತಿಸಿಕೊಂಡಿದೆ ಎಂಬ ಒಂದು ಅಂದಾಜಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ಗಾಗಲೀ ಅಥವಾ ಬಿಜೆಪಿ ಪಕ್ಷಕ್ಕಾಗಲೀ ಜಾತಿಗಳ ನಡುವೆ ಮತದಾನದ ವಿಷಯದಲ್ಲಿ ಅಂತಹ ಧ್ರುವೀಕರಣ ಗುರುತಿಸಲು ಸಾಧ್ಯವೇ?

: ಪ.ಜಾ, ಪ.ಪಂ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಸಾಮಾನ್ಯವಾಗಿ ಕಾಂಗ್ರೆಸ್‌ನ ಮೂಲ ಮತಬ್ಯಾಂಕ್ ಎಂದು ಪರಿಗಣಿಸಲಾಗುತ್ತದೆ. ಹಿಂದಿನಿಂದಲೂ ಅವರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಆದರೆ ಉಳಿದವರು ಬಿಜೆಪಿ ಜತೆಗೆ ಇದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ನಗರದ ಮತದಾದರರು ಹೆಚ್ಚು ಬಿಜೆಪಿಯ ಜತೆಗಿದ್ದಾರೆ. ಕಳೆದ 40 ವರ್ಷಗಳಿಂದಲೂ ಅದನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ ಎನ್ನಬಹುದು. ಉಳಿದಂತೆ ಗ್ರಾಮೀಣ ಗುಜರಾತ್ ಮತ್ತು ಸಣ್ಣ ಪಟ್ಟಣಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಆ ಪ್ರದೇಶಗಳಲ್ಲಿ ಒಳ್ಳೆಯ ಸಾಧನೆ ಮಾಡುವ ಭರವಸೆಯಿದೆ.

ಪ್ರ: ಬಿಜೆಪಿಗೆ ನಕಲಿ ಸುದ್ದಿಗಳನ್ನು ಸೃಷ್ಟಿಸುವ ಮತ್ತು ಹರಡುವ ಅತಿ ದೊಡ್ಡ ಎಕೋಸಿಸ್ಟಮ್ ಇದೆ. ಇದನ್ನು ಕೌಂಟರ್ ಮಾಡಲು ಕಾಂಗ್ರೆಸ್ ಯಾವುದಾದರೂ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯೇ?

: ಖಂಡಿತಾ. ನಾವೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಣಾಮಕಾರಿ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ನಮ್ಮ ಪಕ್ಷ ನೀಡುತ್ತಿರುವ ಭರವಸೆಗಳು ಕೂಡ ಆ ನಿಟ್ಟಿನಲ್ಲಿಯೇ ಇವೆ. 3000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಿರ್ಮಿಸುವುದಾಗಿ ರಾಹುಲ್ ಗಾಂಧಿಯವರು ಘೋಷಿಸಿದ್ದಾರೆ. ಭೂಸುಧಾರಣೆಯ ಬಗ್ಗೆ ಮಾತನಾಡಿದ್ದೇವೆ. ಅಲ್ಲದೆ ಹಲವು ಯಾತ್ರೆಗಳನ್ನು ಆಯೋಜಿಸಿದ್ದೇವೆ. ಈ ಪರಿವರ್ತನ ಯಾತ್ರೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಚಾಲನೆ ನೀಡಿ ಭಾಗಿಯಾಗಿದ್ದಾರೆ. ಯುವ ಕಾಂಗ್ರೆಸ್ ಕೂಡ ರ್‍ಯಾಲಿ ನಡೆಸಿದೆ. ಗುಜರಾತಿನಲ್ಲಿ 15% ಬುಡಕಟ್ಟು ಸಮುದಾಯದ ನಾಗರಿಕರಿದ್ದಾರೆ. ಆದಿವಾಸಿ ಅಧಿಕಾರ ಸತ್ಯಾಗ್ರಹಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿಯವರೇ ಬಂದಿದ್ದರು. ಕಳೆದ ತಿಂಗಳು 50 ಸಾವಿರ ದಲಿತರನ್ನು ಸೇರಿಸಿ ಸಭೆಯನ್ನು ನಡೆಸಿದ್ದೇವೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಪ್ರ: ಭಾರತ್ ಜೋಡೋ ಇಂದ ಪ್ರಯೋಜನವಾಯಿತೇ? ಈ ಯಾತ್ರೆಯ ಮಾರ್ಗದಲ್ಲಿ ಗುಜರಾತ್ ಇಲ್ಲದೆ ಇರುವುದು ಕೊರತೆಯಲ್ಲವೇ?

: ಈ ಯಾತ್ರೆ ಗುಜರಾತ್‌ನಿಂದಲೇ ಪ್ರಾರಂಭವಾಗಬೇಕಿತ್ತು ಎನ್ನುವ ಆಸೆ ವೈಯಕ್ತಿಕವಾಗಿ ನನಗಿತ್ತು. ಆದರೆ ಕಾಂಗ್ರೆಸ್ ಧುರೀಣರು ಇವತ್ತಿನ ಪರಿಸ್ಥಿತಿಗೆ ತಕ್ಕಂತೆ ಕಾರ್ಯಕ್ರಮವನ್ನು ಆಯೋಜಿಸಿದರು. ಆದರೆ ರಾಹುಲ್ ಗಾಂಧಿಯವರೇ ಹೇಳಿರುವಂತೆ ಇದು ಯಾವುದೇ ಪ್ರಯೋಜನ ಗಳಿಸಲು ಆಯೋಜಿಸಿರುವ ಯಾತ್ರೆಯಲ್ಲ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು, ದೇಶದ ಉದ್ದಗಲ ಸುತ್ತಿ, ಭಾರತದಲ್ಲಿ ಆರ್‌ಎಸ್‌ಎಸ್ ನಡೆಸುತ್ತಿರುವ ಒಡಕನ್ನು ಸರಿಪಡಿಸಲು, ಹಿಂದೂ-ಮುಸ್ಲಿಮರನ್ನು ಒಟ್ಟಿಗೆ ತರಲು, ಹಲವು ಸಮುದಾಯಗಳನ್ನು ಒಗ್ಗೂಡಿಸಲು ನಡೆಸುತ್ತಿರುವ ಯಾತ್ರೆಯಿದು. ಅದು ಹೆಸರಿನಿಂದಲೇ ವ್ಯಕ್ತವಾಗುತ್ತದೆ. ಇದು ಚುನಾವಣೆಯ ಲೆಕ್ಕಾಚಾರಕ್ಕೆ ನಡೆಯುತ್ತಿರುವ ಯಾತ್ರೆಯಂತೂ ಅಲ್ಲ. ಆದರೆ ಭಾರತ್ ಜೋಡೋ ಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದ ಗುಜರಾತಿನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಹಳ ಉತ್ಸುಕರಾಗಿದ್ದಾರೆ ಮತ್ತು ಸ್ಫೂರ್ತಿ ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಈ ಯಾತ್ರೆಯಲ್ಲಿ ಮಾಡುತ್ತಿರುವ ತಪಸ್ಸು ಮತ್ತು ಅವರ ಬದ್ಧತೆ ಕೇರಳ ಮತ್ತು ಕರ್ನಾಟಕದಲ್ಲಿ ಸಿಕ್ಕ ಜನಬೆಂಬಲದಿಂದ ವ್ಯಕ್ತವಾಗಿದೆ. ಅದರ ಪರಿಣಾಮ ಗುಜರಾತ್‌ಗೂ ತಲುಪಿದೆ.

ಪ್ರ: ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿಯಿತ್ತು. ಆದರೆ ಈ ಬಾರಿ ಮೂರನೇ ಪಕ್ಷ ಎಎಪಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅತಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಕಾಂಗ್ರೆಸ್‌ಗೆ ಇದರಿಂದ ಹಿನ್ನಡೆ ಇದೆಯೇ?

: ಮುಖ್ಯವಾಹಿನಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಂದಲೇ ಎಎಪಿ ಕಾಣಿಸಿಕೊಳ್ಳುತ್ತಿರುವುದು. ಅವರು ಪಿಆರ್, ಬ್ರಾಂಡಿಂಗ್, ಮಾರ್ಕೆಟಿಂಗ್ ವಿಭಾಗಗಳಲ್ಲಿ ಸಾಕಷ್ಟು ಹಣ ಹೂಡಿದ್ದಾರೆ. ಸಾಮಾಜಿಕ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಪಂಜಾಬ್ ಚುನಾವಣೆಗಳಲ್ಲಿ ಕೂಡ ಸಾಕಷ್ಟು ಹಣ ಹರಿಸಿದ್ದಾರೆ ಎಂದು ಕೇಳಿದ್ದೇನೆ. ಆದರೆ ಅವರಿಗೆ ಕ್ಯಾಡರ್ ಇಲ್ಲ; ಪಕ್ಷದ ಮೂಲ ಬೇಸ್ ಇಲ್ಲ. ಸುಮ್ಮನೆ ಹವಾ ಸೃಷ್ಟಿಸಿದರೆ ಚುನಾವಣೆ ಗೆಲ್ಲಲಾಗುವುದಿಲ್ಲ. ನಾಳೆ ಚುನಾವಣೆ ನಡೆದರೆ ಒಂದು ಕ್ಷೇತ್ರವನ್ನು ಕೂಡ ಅವರಿಗೆ ಗೆಲ್ಲಲಾಗುವುದಿಲ್ಲ. ಇದನ್ನು ಸಂಪೂರ್ಣ ಪ್ರಜ್ಞೆಯಿಂದಲೇ ಹೇಳುತ್ತಿದ್ದೇನೆ. ಅವರಿಗೆ ಒಂದು ಸಣ್ಣ ವೋಟ್‌ಶೇರ್ ಸಿಗಲಿದೆ. ಆದರೆ ತ್ರಿಕೋಣ ಸ್ಪರ್ಧೆಯಿದೆ ಎಂಬುದರಲ್ಲಿ ಹುರುಳಿಲ್ಲ.

ಪ್ರ: ಕಳೆದ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರ ವಡಗಾಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಲಿಲ್ಲ. ನೀವು ಸ್ವತಂತ್ರವಾಗಿ ಗೆದ್ದಿರಿ. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವಾಗ ಸವಾಲುಗಳು ಹೆಚ್ಚಾಗಿವೆಯೇ?

: ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮೊದಲನೇ ಗುರಿಯಾಗಿದ್ದೇನೆ ಎಂಬ ಸೂಚನೆಯಿದೆ. ಆರ್‌ಎಸ್‌ಎಸ್ ತನ್ನ ಕ್ಯಾಡರ್‌ನ 1000 ಜನರನ್ನು ನನ್ನ ಸೋಲಿಸುವುದಕ್ಕಾಗಿಯೇ ನೇಮಿಸುತ್ತಿದೆ ಎಂದು ತಿಳಿದುಬಂದಿದೆ. ಹಿಂದೆ ಕೂಡ, ಜಿಗ್ನೇಶ್ ಜಿಹಾದಿಗಳಿಂದ ದುಡ್ಡು ತೆಗೆದುಕೊಳ್ಳುತ್ತಿದ್ದಾರೆಂಬ ಅತಿ ಕೆಟ್ಟ ಮತ್ತು ಸುಳ್ಳು ಹೇಳಿಕೆಗಳನ್ನು ಅಮಿತ ಶಾ ನೀಡಿದ್ದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಂದು ಹೋಗಿದ್ದರು. ಈ ಬಾರಿ ಇನ್ನೂ ಹೆಚ್ಚು ತೀವ್ರವಾಗಿ ತೊಡಗಿಸಿಕೊಳ್ಳಲಿದ್ದಾರೆ. ನಾನು ನನ್ನ ಕೆಲಸವನ್ನು ದಕ್ಷವಾಗಿ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಗುಜರಾತಿನಲ್ಲೇ ಅತಿ ಹೆಚ್ಚು ಅನ್ನಬಹುದಾದ 10 ಸಾವಿರ ಜನರಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಕೆಲಸ ಸಿಕ್ಕಿದೆ.

ಇದನ್ನೂ ಓದಿ: ಗುಜರಾತ್‌: 2036ರ ಒಲಂಪಿಕ್ಸ್‌ ಆಯೋಜನೆ ಕನಸು ಕಂಡ ಬಿಜೆಪಿ ಪ್ರಣಾಳಿಕೆ

ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಮಾಡಲು ಬಿಜೆಪಿಗೆ ಕೂಡ ಆಗುತ್ತಿಲ್ಲ. ನನ್ನ ಕ್ಷೇತ್ರದ ಜನ ನನ್ನ ಕೆಲಸವನ್ನು ಪ್ರಶಂಸಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಇವೆಲ್ಲಾ ನನ್ನನ್ನು ಕಾಯುತ್ತವೆ ಎಂದು ನಂಬಿದ್ದೇನೆ.

ಪ್ರ: ಕಳೆದ ಬಾರಿ 19 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಿರಿ. ಅದಕ್ಕೆ ಹೋಲಿಸಿದರೆ ಈ ಬಾರಿ ನಿಮ್ಮ ಮತ ಗಳಿಕೆಯಲ್ಲಿ ಹೆಚ್ಚಳ ಸಾಧ್ಯತೆಯಿದೆಯೇ?

: ಈ ಬಾರಿ 25 ಸಾವಿರ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಆದರೆ ನನ್ನದೊಂದು ಕ್ಷೇತ್ರದ ಬಗ್ಗೆ ಮಾತ್ರ ನನ್ನ ಚಿಂತೆಯಲ್ಲ. ಅಲ್ಲದೆ, ಚುನಾವಣೆ ಎಂದರೆ ಗೆಲುವು ಮತ್ತು ಸೋಲು ಮಾತ್ರವಲ್ಲ. ಅದಕ್ಕೂ ಮೀರಿದ ಕೆಲಸ ಮಾಡುವ ಉತ್ಸಾಹವಿದೆ.

ಪ್ರ: ಅದು ನಿಜ; ನೀವು ಸಾಮಾಜಿಕ ಕಾರ್ಯಕರ್ತರಾಗಿ ರಾಜಕಾರಣ ಪ್ರಾರಂಭಿಸಿದವರು..

: ಚುನಾವಣೆ ಮುಗಿದ ಮುಂದಿನ ದಿನ ನಾನು ಬೀದಿಗೆ ಇಳಿಯುತ್ತೇನೆ. ಕಚ್ ಭಾಗದಲ್ಲಿ ಭೂರಹಿತರಿಗೆ ಮತ್ತು ನಿರ್ದಿಷ್ಟವಾಗಿ ದಲಿತರಿಗೆ ಭೂಮಿ ಬೇಡಿಕೆಯ ಬಗ್ಗೆ ಹೋರಾಟ ಮಾಡಬೇಕಿದೆ. ಹಾಗೆಯೇ ಗುಜರಾತ್‌ನಲ್ಲಿ ಭಾರತ್ ಜೋಡೋ ರೀತಿಯ ಜಾಥಾ ಮಾಡಬೇಕಿದೆ. ಚುನಾವಣೆ ಗೆಲ್ಲುವುದು ಒಂದು. ಆದರೆ ಚುನಾವಣೆಯ ನಂತರ ನನ್ನ ಜನಗಳಿಗೆ ಮಾಡಬೇಕಾದ ಕೆಲಸ ಸಾಕಷ್ಟಿದೆ.

ಪ್ರ: ಚುನಾವಣೆಯಿಂದ ಸ್ವಲ್ಪ ಹೊರಬಂದು ಚರ್ಚೆ ಮಾಡುವುದಾದರೆ, ಗುಜರಾತ್‌ನಲ್ಲಿ ಐತಿಹಾಸಿಕವಾಗಿ ಮತ್ತು ಪ್ರಚಲಿತದಲ್ಲಿ ದಲಿತ ಚಳವಳಿಗಳ ಬಗ್ಗೆ ಸ್ವಲ್ಪ ಹೇಳ್ತೀರಾ?

: ಗುಜರಾತಿನಲ್ಲಿ ದಲಿತರು 7% ಇದ್ದರೂ ಕೂಡ ದಲಿತ ಚಳವಳಿಯ ದೊಡ್ಡ ಇತಿಹಾಸವಿದೆ. ಬಾಬಾಸಾಹೇಬರು ಕೂಡ ಅಹಮದಾಬಾದ್ ಮತ್ತು ಗುಜರಾತಿನ ವಿವಿಧ ಬಾಗಗಳಲ್ಲಿ ಓಡಾಡಿದ್ದರು. ನಾನೆಲ್ಲೋ ಓದಿದ್ದೆ, 1931ರಲ್ಲಿ ಬಾಬಾಸಾಹೇಬರು ಅಹಮದಾಬಾದಿನ ದರಿಯಾಪುರ ಭಾಗದಲ್ಲಿ ಗುಜರಾತಿಯಲ್ಲಿ ಬಾಷಣ ಮಾಡಿದ್ದರು ಎಂದು. ಗುಜರಾತ್ ಮತ್ತು ಮಹಾರಾಷ್ಟ್ರ ಒಂದೇ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಕಾರಣಕ್ಕಾಗಿಯೂ ದಲಿತ್ ಪ್ಯಾಂಥರ್ಸ್‌ನ ಕೆಲವು ಸಂಸ್ಥಾಪಕರ ಪ್ರಭಾವವೂ ಇಲ್ಲಿ ಇತ್ತು. ಅಲ್ಲದೆ ಊನಾ ಚಳವಳಿ ನಡೆದದ್ದು ನಿಮಗೆ ಗೊತ್ತಿರಬಹುದು. ನಾನು ಸಕ್ರಿಯವಾಗಿ ರಾಜಕಾರಣದಲ್ಲಿ ಬೆಳೆದದ್ದು ಅಲ್ಲಿಂದಲೇ. ಇಲ್ಲಿ ದಲಿತ ಭೂಚಳವಳಿ ಕೂಡ ದೊಡ್ಡದಾಗಿತ್ತು. ದಲಿತ ದೌರ್ಜನ್ಯಗಳು ಕೂಡ ಹೆಚ್ಚಿದ್ದು ಇಲ್ಲಿ ಮೊದಲಿನಿಂದಲೂ ದಲಿತ ಚಳವಳಿ ಸಕ್ರಿಯವಾಗಿದೆ. ಈಗಂತೂ ಬಿಜೆಪಿ-ಆರ್‌ಎಸ್‌ಎಸ್ ಮತ್ತು ಸೋ ಕಾಲ್ಡ್ ಮೇಲ್ಜಾತಿಗಳ ಕೂಟದಿಂದ ಈ ದೌರ್ಜನ್ಯಗಳು ಹೆಚ್ಚಾಗಿವೆ. ಅದರ ವಿರುದ್ಧವೂ ಹೋರಾಟ ನಡೆಯುತ್ತಿದೆ.

ಪ್ರ: ನಿಮಗೆ ಪ್ರಭಾವ ಬೀರಿದ ದಲಿತ ಹೋರಾಟಗಾರರನ್ನು ನೆನಪಿಸಿಕೊಳ್ಳಬಹುದಾ?

: ವಾಲ್ಜಿಬಾಯ್ ಪಟೇಲ್ ಎಂಬ ಒಬ್ಬ ಮುಖಂಡರಿದ್ದರು. ಅವರ ಹೆಸರಿನಲ್ಲಿ ಪಟೇಲ್ ಇರುವುದರಿಂದ ಗೊಂದಲ ಬೇಡ; ಅವರು ದಲಿತರು. ಗುಜರಾತಿನ ದಲಿತ್ ಪ್ಯಾಂಥರ್ಸ್‌ನ ಸಂಸ್ಥಾಪಕರಲ್ಲಿ ಅವರೂ ಒಬ್ಬರೂ. ಹಲವು ಭೂಹೋರಾಟ ಚಳವಳಿಗಳನ್ನು ಕಟ್ಟಿದವರು. ಸುಮಾರು 4500 ಭೂರಹಿತರಿಗೆ ಭೂಮಿ ಸಿಗುವಂತೆ ಮಾಡಿದವರು. ಹಲವು ದಲಿತ ದೌರ್ಜನ್ಯಗಳ ವಿರುದ್ಧ ಹೋರಾಡಿದವರು. ಅವರು ನನ್ನ ವಿರುದ್ಧ ಕ್ರಿಟಿಕಲ್ ಆಗಿದ್ದರೂ ಕೂಡ ಅವರ ಆರು ದಶಕಗಳ ಕೆಲಸ ನನಗೆಂದೂ ಸ್ಫೂರ್ತಿ ನೀಡಿದೆ. ಹೀಗೆ ಇನ್ನೂ ಹಲವರು ನನ್ನ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾರೆ.

ಸಂದರ್ಶಕ: ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ: ಅಭಿಜೀತ್ ದೀಪ್ಕೆಗೆ ‘ರಾಷ್ಟ್ರೀಯ ಸಂಚಾಲಕ’

ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಹೋರಾಟದ ಮೂಲಕ ಗಮನಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಅಧಿಕೃತವಾಗಿ ತನ್ನ ಮೊದಲ 14 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಪ್ರಕಟಿಸಿದೆ....

ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ ವಿರೋಧ: ‘ಮೃದು ಧೋರಣೆ’ ವದಂತಿಗೆ ಉದಯನಿಧಿ ಸ್ಟಾಲಿನ್ ಬ್ರೇಕ್

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ...