ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುಗಂಧ ದ್ರವ್ಯಗಳ ಉದ್ಯಮಿಯೊಬ್ಬರ ಮನೆ, ಕಾರ್ಖಾನೆ ಮೇಲೆ ಆದಾಯ ಇಲಾಖೆ(ಐಟಿ) ದಾಳಿ ಮಾಡಿ ನೂರಾರು ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು. ಈ ನಡುವೆ ಶುಕ್ರವಾರ ಬೆಳಿಗ್ಗೆ ರಾಜ್ಯದ ಪ್ರತಿಪಕ್ಷ ಸಮಾಜವಾದಿ ಪಕ್ಷದ ನಾಯಕ ಪುಷ್ಪರಾಜ್ ಜೈನ್ ಅವರು ಕೂಡಾ ಐಟಿ ಇಲಾಖೆಯ ಅಧಿಕಾರಿಗಳಿಂದ ಶೋಧಿಸಲ್ಪಟ್ಟಿದ್ದಾರೆ.
ಪುಷ್ಪರಾಜ್ ಜೈನ್ ಅವರು ಸುಗಂಧ ದ್ರವ್ಯ, ಪೆಟ್ರೋಲ್ ಪಂಪ್ಗಳು ಮತ್ತು ಕೋಲ್ಡ್ ಸ್ಟೋರೇಜ್ಗಳನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಅವರು ಇತ್ತೀಚೆಗಷ್ಟೇ ತಮ್ಮ ಪಕ್ಷದ ಪ್ರಚಾರಕ್ಕಾಗಿ ‘ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ’ವನ್ನು ಬಿಡುಗಡೆ ಮಾಡಿದ್ದರು. ಇದೀಗ ಐಟಿ ಇಲಾಖೆಯು ಉತ್ತರ ಪ್ರದೇಶ, ದೆಹಲಿ ಮತ್ತು ಮುಂಬೈನಲ್ಲಿ ಅವರಿಗೆ ಸಂಬಂಧಿಸಿದ ಸುಮಾರು 50 ಸ್ಥಳಗಳನ್ನು ಶೋಧಿಸುತ್ತಿದೆ.
ಇದನ್ನೂ ಓದಿ:ಉತ್ತರ ಪ್ರದೇಶದ ಉದ್ಯಮಿ ಮನೆ ಮೇಲಿನ ದಾಳಿಗೆ ರಾಜಕೀಯ ಬಣ್ಣ: ತಪ್ಪಾಗಿ ನಡೆದ ದಾಳಿಯಲ್ಲ ಎಂದ ಏಜೆನ್ಸಿ
ಐಟಿ ದಾಳಿಯ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷ, “ಕಳೆದ ಬಾರಿ ಭಾರಿ ವೈಫಲ್ಯ ಹೊಂದಿತ್ತು. ಇದೀಗ ಬಿಜೆಪಿ ಕಟ್ಟಕಡೆಯ ಸ್ನೇಹಿತ ಐಟಿ ಇಲಾಕೆ ಕೊನೆಗೂ ಸಮಾಜವಾದಿ ಪಕ್ಷದ ಎಂಎಲ್ಸಿ ಪುಷ್ಪರಾಜ್ ಜೈನ್ ಮತ್ತು ಖನೌಜ್ನ ಇತರ ಸುಗಂಧ ದ್ರವ್ಯ ವ್ಯಾಪಾರಿಗಳ ಸ್ಥಳದ ಮೇಲೆ ದಾಳಿ ಮಾಡಿದೆ. ಹೆದರಿರುವ ಬಿಜೆಪಿ ಯುಪಿ ಚುನಾವಣೆಯಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಹಿರಂಗವಾಗಿ ದುರ್ಬಳಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ, ಅವರು ಮತದ ಮೂಲಕ ಉತ್ತರಿಸುತ್ತಾರೆ” ಎಂದು ಹೇಳಿದೆ.
ಐಟಿ ಇಲಾಖೆಯು ಇತ್ತೀಚೆಗೆ ಮತ್ತೋರ್ವ ಉದ್ಯಮಿ ಪಿಯೂಷ್ ಜೈನ್ ಅವರಿಗೆ ಸೇರಿದ ಕಾನ್ಪುರ ಮತ್ತು ಖನೌಜ್ನ ಕೆಲವು ಸ್ಥಳಗಳಿಂದ ಅಪಾರ ಪ್ರಮಾಣದ ನಗದು ಮತ್ತು ಚಿನ್ನಗಳನ್ನು ವಶಕ್ಕೆ ಪಡೆದಿತ್ತು. ಈ ವೇಳೆ 196 ಕೋಟಿ ರೂ. ನಗದು ಮತ್ತು 23 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ದೇಶದ ಪ್ರತಿಷ್ಠಿತ ಚುನಾವಣೆಯಾಗಿರುವ ಉತ್ತರ ಪ್ರದೇಶದಲ್ಲಿ ಈಗಾಗಲೇ ಎಲ್ಲಾ ಪಕ್ಷಗಳು ಪ್ರಚಾರಗಳನ್ನು ಪ್ರಾರಂಭಿಸಿವೆ. ಈ ಮಧ್ಯದಲ್ಲಿ ಈ ದಾಳಿಗಳು ನಡೆಯುತ್ತಿದ್ದು, ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಬಿಜೆಪಿ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರನ್ನು ಬೆಂಬಲಿಸುತ್ತಿದೆ ಎಂದು ಪರಸ್ಪರ ಆರೋಪಿಸುತ್ತಿದೆ.
ಇದನ್ನೂ ಓದಿ:5 ನೇ ದಿನವೂ ಮುಂದುವರೆದ ಐಟಿ ದಾಳಿ; 200 ಕೋಟಿ ರೂ. ನಗದು ವಶಕ್ಕೆ!
ಸಮಾಜವಾದಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದವರು ಪಿಯೂಷ್ ಜೈನ್ ಎಂದು ಬಿಜೆಪಿ ಆರೋಪಿಸಿತ್ತು. ಬುಧವಾರ ಕಾನ್ಪುರದಲ್ಲಿ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ‘‘ನೋಟು ತುಂಬಿದ ಬಾಕ್ಸ್ಗಳು ಹೊರಬಂದಿವೆ. ಕಾನ್ಪುರದ ಜನರು ವ್ಯಾಪಾರ ಮತ್ತು ವ್ಯವಹಾರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 2017 ಕ್ಕಿಂತ ಮೊದಲು ಅವರು ಎಲ್ಲೆಡೆ ಎರಚಿದ್ದ ಭ್ರಷ್ಟಾಚಾರದ ಸುಗಂಧ ದ್ರವ್ಯ ಉತ್ತರ ಪ್ರದೇಶ ಎಲ್ಲರಿಗೂ ಕಾಣಿಸುತ್ತಿದೆ” ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಅಖಿಲೇಶ್ ಯಾದವ್, “ಬಿಜೆಪಿಯು ಉದ್ಯಮಿ ಪಿಯೂಷ್ ಜೈನ್ ಅವರನ್ನು ಸಮಾಜವಾದಿ ಪಕ್ಷದ ಪುಷ್ಪರಾಜ್ ಜೈನ್ ಅವರೊಂದಿಗೆ ಸೇರಿಸಲು ನೋಡುತ್ತಿದೆ. ಪಿಯೂಷ್ ಜೈನ್ ಅವರೊಂದಿಗಿನ ನಮಗೆ ಯಾವುದೆ ಸಂಬಂಧವಿಲ್ಲ. ಬಿಜೆಪಿಯು ಅವರದೇ ಉದ್ಯಮಿಯ ಮೇಲೆ ತಪ್ಪಾಗಿ ದಾಳಿ ಮಾಡಿದೆ” ಎಂದು ಹೇಳಿದ್ದರು.
ಇದನ್ನೂ ಓದಿ:ಯುಪಿ ಚುನಾವಣೆ-2022: ‘ಸ್ಮೆಲ್ ಆಫ್ ಸೋಶಿಯಲಿಸಂ!’