Homeನ್ಯಾಯ ಪಥ'ದೇಶವಿರೋಧಿ' ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

‘ದೇಶವಿರೋಧಿ’ ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

- Advertisement -
- Advertisement -

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು,
ಬದುಕು ಬೆಳಗುವ ದೀಪದಂತಿರಲಿ ಹೇ ದೇವದೇವ
ಕಳೆದು ಹೋಗಲಿ ಇಳೆಯ ಕತ್ತಲೆ,
ಹೊಳೆದು ಬೆಳಗಲಿ ಎಲ್ಲ ತಾವುಗಳು
ನನ್ನ ಕಾಂತಿಯಿಂದ.
ಸುಮಕುಸುಮಗಳು ಉದ್ಯಾನವ ಸಿಂಗರಿಸಿದಂತೆ
ಸೊಗಸಿಬಿಡಲೇ ನಾನೆನ್ನ ತಾಯ್ನೆಲವ ತಬ್ಬಿ ಹಬ್ಬಿ..
ಎನ್ನ ಜೀವದುಸಿರು ನೀನಾಗು ಎಲೆ ದೇವ,
ತಿಳಿವಿನ ದೀಪಕ್ಕೆಳೆಸುವ ಪತಂಗ ನಾನು
ಎನ್ನ ಇರವಿನ ಧ್ಯೇಯವಾಗಿಸು,
ವೃದ್ಧರು ದುಃಖಿತರು, ದೀನದರಿದ್ರರ ಸೇವೆಯನು.
ಹಿಡಿದೆತ್ತು ಅಂತರ್ಯಾಮಿಯೇ ನನ್ನನು ಜಗದ ಕೇಡಿನಿಂದ
ಉದ್ಧರಿಸು ಮುನ್ನಡೆಸು ಸಚ್ಚಾರಿತ್ರ್ಯದೆಡೆಗೆ

ಈ ಗೀತೆಯನ್ನು ಓದಿ, ಇದರ ಉರ್ದು ಮೂಲದ ಗಾಯನವನ್ನು ಆಲಿಸಿದ ನನಗೆ ಆಚಾರ್ಯ ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತಗಳು ಸಂಗ್ರಹದ ಪ್ರಸಿದ್ಧ ಪದ್ಯ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ನೆನಪಾಯಿತು. ಬಿ.ಎಂ.ಶ್ರೀ ಅವರ ಸೊಗಸಿನ ಅನುವಾದದ ಮಹಿಮೆ. ಮೂಲ ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಈ ಗೀತೆ ಕನ್ನಡಿಗರಲ್ಲಿ ಜನಪ್ರಿಯ. ರತ್ನಮಾಲಾ ಪ್ರಕಾಶ್ ಅವರ ಸಿರಿಕಂಠದಲ್ಲಿ ಈ ಗೀತೆಯನ್ನು ಕೇಳಿ ಧ್ಯಾನಸ್ಥ ಸ್ಥಿತಿಗೆ ಜಾರದ ಮನಸುಗಳೇ ಇರಲಾರವು. ಇಂಗ್ಲೆಂಡಿನ ಕ್ರೈಸ್ತ ಸಂತ ಜಾನ್ ಹೆನ್ರಿ ನ್ಯೂಮನ್ 1833ರಲ್ಲಿ ರಚಿಸಿದ್ದ ಪ್ರಾರ್ಥನಾ ಗೀತೆಯಿದು ಎಂಬ ಸಂಗತಿ ಈಗಲೂ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇಗರ್ಜಿಗಳಲ್ಲಿ ಇಂದಿಗೂ ಈ ಇಂಗ್ಲಿಷ್ ಗೀತೆಯನ್ನು ಹಾಡಲಾಗುತ್ತದೆ.

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು… ಎಂಬ ಪದ್ಯದ ಉರ್ದು ಮೂಲ ಹೀಗಿದೆ-

‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ/ ಝಿಂದಗೀ ಶಂಮಾ ಕೀ ಸೂರತ್ ಹೋ ಖುದಾಯಾ ಮೇರೀ/ ದೂರ್ ದುನಿಯಾ ಕಾ ಮೇರೇ ದಮ್ ಸೇ ಅಂಧೇರಾ ಹೋ ಜಾಯೇ/ ಹರ್ ಜಗಾಹ ಮೇರೀ ಚಮಕನೇ ಸೇ ಉಜಾಲಾ ಹೋ ಜಾಯೇ/ ಹೋ ಮೇರೇ ದಮ್ ಸೇ ಯೂಂ ಹೀ ಮೇರೆ ವತನ್ ಕೀ ಝೀನತ್/ ಜಿಸ್ ತರಾಹ್ ಫೂಲ್ ಸೇ ಹೋತೀ ಹೈ ಚಮನ್ ಕೀ ಝೀನತ್/ ಝಿಂದಗೀ ಹೋ ಮೇರೀ ಪರವಾನೇ ಕೀ ಸೂರತ್ ಯಾರಬ್/ ಇಲ್ಮ್ ಕೀ ಶಂಮಾ ಸೇ ಹೋ ಮುಝಕೋ ಮೊಹೋಬ್ಬತ್ ಯಾರಬ್/ ಹೋ ಮೇರಾ ಕಾಮ್ ಗರೀಬೋಂ ಕೀ ಹಿಮಾಯತ್ ಕರನಾ/ ದರದಮಂದೋ ಸೇ ಝೀಂಫೋ ಸೇ ಮೊಹೊಬ್ಬತ್ ಕರನಾ/ ಮೇರೇ ಅಲ್ಲಾಹ ಬುರಾಯೀ ಸೇ ಬಚಾನಾ ಮುಝಕೋ/ ನೇಕ ಜೋ ರಾಹ ಉಸೀ ಪೆ ಚಲಾನಾ ಮುಝಕೋ/ ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’

ಈ ಉರ್ದು ಗೀತೆಯನ್ನು ನನ್ನ ತಿಳಿವಳಿಕೆಗೆ ನಿಲುಕಿದ ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಓದುಗರ ಮುಂದೆ ಇರಿಸಿದ್ದೇನೆ. ಹೆಚ್ಚು ಬಲ್ಲವರು ಇನ್ನಷ್ಟು ಸೊಗಸಾಗಿ ಅನುವಾದ ಮಾಡಿಕೊಳ್ಳಬಹುದು.

ಈಗಲೂ ದೇಶದ ಲಕ್ಷಾಂತರ ಶಾಲೆಗಳಲ್ಲಿ ದಿನನಿತ್ಯ ಮತ್ತು ಸ್ವಾತಂತ್ರ್ಯೋತ್ಸವ ದಿನ ಹಾಗೂ ಗಣರಾಜ್ಯೋತ್ಸವದಂದು ಮೊಳಗುವ ಇನ್ನೊಂದು ಸುಂದರ ದೇಶಭಕ್ತಿ ಗೀತೆಯಿದೆ. ಅದು ‘ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ ಹಮಾರಾ….’

ಈ ಗೀತೆಯ ಬರೆದ ಕವಿಯೇ ‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’ (ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು…’) ಎಂಬ ಗೀತೆಯನ್ನೂ ಬರೆದಿದ್ದಾನೆ.

ಆತನ ಹೆಸರು ಅಲ್ಲಾಮ ಇಕ್ಬಾಲ್. 1902ರಲ್ಲಿ ಈ ಗೀತೆಯನ್ನು ಆತ ಬರೆದಿದ್ದ. ಸಾರೇ ಜಹಾಂ ಸೇ ಅಚ್ಛಾ ಬರೆದದ್ದು ಎರಡು ವರ್ಷಗಳ ನಂತರ 1904ರಲ್ಲಿ. ಹಿಂದೂಸ್ತಾನಿ ಬಚ್ಚೋಂ ಕಾ ಖೋಮಿ ಗೀತ್ ನ್ನು ಬರೆದದ್ದು 1905ರಲ್ಲಿ. ಈ ಕಾಲಘಟ್ಟದಲ್ಲಿ ಆತ ಅಪ್ಪಟ ಭಾರತೀಯ ರಾಷ್ಟ್ರವಾದಿಯಾಗಿದ್ದ. ಆನಂತರ ಆತ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಪಾಕಿಸ್ತಾನದ ರಾಷ್ಟ್ರಕವಿ ಎನಿಸಿಕೊಂಡದ್ದು ಹೌದು. ಆದರೆ ಲಬ್ ಪೇ ಆತೀ…ಗೀತೆಯಲ್ಲಿ ಬರುವ ‘ವತನ್’ (ಜನ್ಮಭೂಮಿ) ಪದವು ಭಾರತವನ್ನೇ ಉದ್ದೇಶಿಸಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಇಂದಿಗೂ ಮನದುಂಬಿ ಹಾಡುವ ಸಾರೇ ಜಹಾಂ ಸೇ ಅಚ್ಛಾ ಗೀತೆಯನ್ನು ಆತ ರಚಿಸಿದ್ದು ಲಬ್ ಪೇ ಆತೀ ಬರೆದ ಎರಡು ವರ್ಷಗಳ ನಂತರ ಎಂಬುದನ್ನು ಗಮನಿಸಬೇಕು.

ಯಾವ ಕೋನದಿಂದ ನೋಡಿದರೂ ಲಬ್ ಪೇ ಆತೀ ಹೈ ದುವಾ….ಧಾರ್ಮಿಕ ಗೀತೆ ಅಥವಾ ಮುಸ್ಲಿಂ ಪ್ರಾರ್ಥನೆ ಅಲ್ಲ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ…ಮುಸ್ಲಿಂ ಪ್ರಾರ್ಥನೆಯೆಂದು ಹೇಳುವುದು ಎಷ್ಟು ವಿಕೃತವೋ, ಲಬ್ ಪೇ ಆತೀ ಹೈ ದುವಾ…ಕ್ಕೆ ಮುಸ್ಲಿಂ ಪ್ರಾರ್ಥನೆಯ ಬಣ್ಣ ಹಚ್ಚುವುದೂ ಅಷ್ಟೇ ವಿಕೃತ ಆದೀತು.

ಇಷ್ಟೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉತ್ತರಪ್ರದೇಶದ ಪೀಲೀಭೀತ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಅಮಾನತು ಪ್ರಕರಣ. ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರು ಶಾಲೆಯಲ್ಲಿ ಮದರಸಾದ ಪ್ರಾರ್ಥನೆಯನ್ನು ಮಕ್ಕಳಿಂದ ಹಾಡಿಸುತ್ತಿದ್ದಾರೆ ಎಂಬುದಾಗಿ ವಿಶ್ವಹಿಂದು ಪರಿಷತ್ ಆರೋಪ ಮಾಡಿತ್ತು. ಅಲಿ ಅವರಿಂದ ವಿವರಣೆಯನ್ನೂ ಪಡೆಯದೆ ಜಿಲ್ಲಾಡಳಿತ ಆತನನ್ನು ಅಕ್ಟೋಬರ್ 14ರಂದು ಅಮಾನತಿನಲ್ಲಿ ಇರಿಸಿತು. ಲಬ್ ಪೇ ಆತೀ ಹೈ ದುವಾ ಗೀತೆಯು ಮದರಸಾ ಪ್ರಾರ್ಥನೆ, ಅದನ್ನು ಹಾಡಿಸುವುದು ದೇಶವಿರೋಧದ ಕೃತ್ಯ ಎಂದು ವಿ.ಹಿಂ.ಪ. ದೂರು ನೀಡಿತ್ತು.

ಪೀಲೀಭೀತ್ ಜಿಲ್ಲೆಯ ಈ ಶಾಲೆಯ ಮಕ್ಕಳು ನಿತ್ಯವೂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಮತ್ತು ಸರಸ್ವತಿ ವಂದನಾ ವನ್ನೂ ವಾಚಿಸುತ್ತಿದ್ದಾರೆ, ವೋ ಶಕ್ತಿ ಹಮೇಂ ದೋ ದಯಾನಿಧೀ ಗೀತೆಯನ್ನೂ ಹಾಡುತ್ತಿದ್ದಾರೆ.

ತಮ್ಮ ಮುಖ್ಯೋಪಾಧ್ಯಾಯರನ್ನು ಈ ಶಾಲೆಯ ಮಕ್ಕಳು ಬಹುವಾಗಿ ಪ್ರೀತಿಸುತ್ತಿದ್ದರು. ಯಾಕೆಂದರೆ ಆತನೂ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಸಂಬಳದ ಹಣ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಮಧ್ಯಾಹ್ನದ ಬಿಸಿಯೂಟದ ತರಕಾರಿಗೆ ತಾವೇ ಹಣ ನೀಡುತ್ತಿದ್ದರು. ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಮೇಷ್ಟ್ರನ್ನು ಅಮಾನತಿನಲ್ಲಿ ಇರಿಸಿರುವ ಕ್ರಮವನ್ನು ಮಕ್ಕಳು ಪ್ರತಿಭಟಿಸಿದ್ದಾರೆ. ಕಳೆದ ಶುಕ್ರವಾರ ಶಾಲಾಮೈದಾನದಲ್ಲಿ ಸೇರಿದ್ದ ಮಕ್ಕಳು ಸಾಲುಗಳಲ್ಲಿ ನಿಂತು ಕೂಗಿದ ಘೋಷಣೆ- ದೇಶದ ರಕ್ಷಣೆ ಯಾರು ಮಾಡ್ತಾರೆ? ನಾವು ಮಾಡ್ತೇವೆ. ಹೇಗೆ ಮಾಡ್ತೇವೆ? ತನುವಿನಿಂದ ಮಾಡ್ತೇವೆ, ಮನಸಿನಿಂದ ಮಾಡ್ತೇವೆ, ಧನದಿಂದ ಮಾಡ್ತೇವೆ.

ಹತ್ತು ನಿಮಿಷ ಘೋಷಣೆ ಕೂಗಿ ಮನೆಯತ್ತ ಹೊರಟವು ಮಕ್ಕಳು. ತಮ್ಮ ಮೇಷ್ಟ್ರು ವಾಪಸು ಬರುವವರೆಗೆ ತಾವೂ ಶಾಲೆಗೆ ಬರುವುದಿಲ್ಲ ಎಂದವು. ಲಬ್ ಪೇ ಆತೀ ಹೈ ಗೀತೆಯನ್ನು ಹಾಡುವಂತೆ ಮತ್ತು ಹಾಡಿಸುವಂತೆ ನಾವೇ ಮೇಷ್ಟ್ರನ್ನ ಕೇಳಿಕೊಂಡೆವು. ದಿನ ಬಿಟ್ಟು ದಿನ ಹಾಡಲು ಅವರು ನಮಗೆ ಅನುಮತಿ ಕೊಟ್ಟರು ಎಂದು ಮಕ್ಕಳು ತಿಳಿಸಿವೆ. ಹಾಜರಾತಿ 150ರಿಂದ ಐದು ಹತ್ತಕ್ಕೆ ತಗ್ಗಿದೆ.

ತನ್ನ ತಪ್ಪಿನ ಅರಿವಾದಂತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಅಲಿಯ ಅಮಾನತನ್ನು ಮಾನವೀಯತೆಯ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದಿದೆ. ಆದರೆ ಅವರನ್ನು ಬೇರೆ ಶಾಲೆಗೆ ವರ್ಗ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...