ಕುರುಬ ಸಮುದಾಯದ ಸ್ವಾಮೀಜಿಯೊಬ್ಬರ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತುಚ್ಚವಾಗಿ ಮಾತನಾಡಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕುರುಬ ಸಮುದಾಯದ ವ್ಯಕ್ತಿಯೊಬ್ಬರು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೊಬೈಲ್ಗೆ ಕರೆ ಮಾಡಿ ಮಾತನಾಡಿದಾಗ ತಾನು ಲಿಂಗಾಯತ ಸಮುದಾಯಕ್ಕೆ ಮಾತ್ರ ಸಚಿವ ಎಂದಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾರ್ವಜನಿಕ ವ್ಯಕ್ತಿಯೊಬ್ಬರು ಅದರಲ್ಲೂ ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ಹೀಗೆ ಒರಟಾಗಿ ತನ್ನ ಸಮುದಾಯಕ್ಕೆ ಮಾತ್ರ ಸೀಮಿತ ಮಂತ್ರಿ ಎಂದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾನೂನು ಸಚಿವರೇ ಚಿಕ್ಕನಾಯಕನಹಳ್ಳಿಯಲ್ಲಿ ಕನಕ ಪ್ರತಿಮೆ ವಿಷಯದ ಕುರಿತು ಕುರುಬ ಸ್ವಾಮೀಜಿಯೊಬ್ಬರಿಗೆ ಕನಿಷ್ಟ ಪದಗಳನ್ನು ಬಳಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದರಿಂದ ಆಕ್ರೋಶಗೊಂಡಿರುವ ಕುರುಬ ಸಮುದಾಯದ ಸಂಘಟನೆಗಳು ಸಚಿವರು ಬಹಿರಂಗ ಕ್ಷಮೆ ಕೇಳಬೇಕು. ಸಂವಿಧಾನಬದ್ದವಾಗಿ ಯಾವ ಭೇದವೂ ಮಾಡುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿರುವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಹಾಲುಮತ ಮಹಾಸಭಾ ತುಮಕೂರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದೆ.
ಕಾನೂನು ಸಚಿವರಾಗಿಯೂ ಹೀಗೆ ಬೇಜವಾಬ್ದಾರಿತನದಿಂದ ಮಾತನಾಡಿರುವುದು ಮತ್ತು ತಾನು ಲಿಂಗಾಯತರಿಗೆ ಮಾತ್ರ ಮಂತ್ರಿ ಎಂದು ಹೇಳಿರುವುದು ಸೂಕ್ತವಲ್ಲ. ಸಚಿವರು ಹೀಗೆ ವರ್ತಿಸುವ ಮೂಲಕ ತಾನು ತೆಗೆದುಕೊಂಡ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ಎಂ. ಗರುಡಯ್ಯ, ಟಿ.ಇ.ರಘುರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇನ್ನೊಂದೆಡೆ ಕುರುಬ ಸಮುದಾಯದ ಸ್ವಾಮೀಜಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೆ.ಸಿ. ಮಾಧುಸ್ವಾಮಿ ಅವರನ್ನು ಕರೆಸಿಕೊಂಡು ಕಿವಿಮಾತು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಜೆ.ಸಿ. ಮಾಧುಸ್ವಾಮಿ ನಾನು ಯಾವ ಸ್ವಾಮೀಜಿ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಗರಂ ಆಗಿಯೇ ಹೇಳಿ ಹೊರಟು ಹೋಗಿದ್ದಾರೆ.
ಇದೇ ವೇಳೆ ಯಾವ ಜಾಗದಲ್ಲಿ ಕುರುಬ ಸಮುದಾಯದ ಸ್ವಾಮೀಜಿ ವಿರುದ್ಧ ಮಾತನಾಡಿದ್ದರೋ ಅದೇ ಜಾಗದಲ್ಲಿ ಬೃಹತ್ ಕನಕ ಜಯಂತಿ ಮಾಡಿ ಜೆ.ಸಿ. ಮಾಧುಸ್ವಾಮಿಗೆ ವೇದಿಕೆಯ ಮೂಲಕ ಸೂಕ್ತ ಉತ್ತರ ನೀಡಲು ಕುರುಬ ಸಮುದಾಯ ಸಿದ್ದವಾಗಿದೆ. ಜೊತೆಗೆ ಕಾನೂನು ಸಚಿವರು ಪಾಲ್ಗೊಳ್ಳುವ ಸಭೆ ಸಮಾರಂಭಗಳಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಕುರುಬ ಸಮುದಾಯ ಮುಂದಾಗಿದೆ.
ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ಕಾನೂನುಗಳನ್ನು ಗಾಳಿಗೆ ತೂರುವುದು ರಾಜ್ಯಪಾಲದಿಂದ ತೆಗೆದುಕೊಂಡ ಪ್ರಮಾಣವಚನ ಉಲ್ಲಂಘಿಸಿ ವರ್ತಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅಧಿಕಾರ ದಕ್ಕಿದ ಕೂಡಲೇ ಅಹಂಕಾರದ ಮೂಟೆಗಳಂತೆ ವರ್ತಿಸುವುದನ್ನು ನಮ್ಮ ರಾಜಕಾರಣಿಗಳು ಮೊದಲು ಬಿಡಬೇಕು.