ಗುಜರಾತ್ನ ವಡ್ಗಾಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮನಿಬಾಯ್ ವಘೇಲ ವಿರುದ್ಧ ಸುಮಾರು 6,300 ಮತಗಳ ಅಂತರದ ಜಯಗಳಿಸಿದ್ದಾರೆ.
ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ನಡಿ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿ ಜಯ ತಮ್ಮದಾಗಿಸಿಕೊಂಡಿದ್ದಾರೆ.
ಪ.ಜಾ ಮೀಸಲು ಕ್ಷೇತ್ರವಾದ ವಡ್ಗಾಮ್ನಲ್ಲಿ ವಘೇಲ 2012ರಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ 2017ರಲ್ಲಿ ಜಿಗ್ನೇಶ್ ಮೇವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಕಾಂಗ್ರೆಸ್ ಪಕ್ಷವು ಅವರಿಗೆ ಬೆಂಬಲ ಸೂಚಿಸಿ ತಮ್ಮ ಪಕ್ಷದ ಅಭ್ಯರ್ಥಿ ಹಾಕದೆ ಜಿಗ್ನೇಶ್ ಗೆಲುವಿಗೆ ಸಹಕರಿಸಿತ್ತು.
ಆದರೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ವಘೇಲ 2021ರಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಅವರು ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಡಿ ಸ್ಪರ್ಧಿಸಿದ್ದರು. ಆದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ.
ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಜಿಗ್ನೇಶ್ ಮೇವಾನಿ ದಲಿತರಿಗೆ ಭೂಮಿ ದೊರಕಿಸಿಕೊಡಲು ಹೋರಾಡುತ್ತಿದ್ದರು. ಆದರೆ ಊನಾದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಅವರು ನಡೆಸಿದ ಬೃಹತ್ ಹೋರಾಟದ ಮೂಲಕ ಅವರು ದೇಶದ ಗಮನ ಸೆಳೆದಿದ್ದರು.
ಜಿಗ್ನೇಶ್ ಮೇವಾನಿ ದಲಿತ-ದಮನಿತರ ಪರವಾಗಿ ಹೋರಾಡುತ್ತಲೇ ಮೋದಿ ಸರ್ಕಾರದ ವಿರುದ್ಧ ಗಟ್ಟಿ ದನಿಯೆತ್ತುತ್ತಿದ್ದರು. ಗುಜರಾತ್ ಅಸೆಂಬ್ಲಿಯಲ್ಲಿ ದಮನಿತರ ಗಟ್ಟಿದನಿಯಾಗಿದ್ದರು. ಉತ್ತರ ಭಾರತದಲ್ಲಿ ಎಲ್ಲಿಯೇ ದಲಿತರ ಮೇಲಿನ ಹಲ್ಲೆ ನಡೆದರೂ ಜಿಗ್ನೇಶ್ ಅವರ ಪರವಾಗಿ ನಿಲ್ಲುತ್ತಿದ್ದರು. ಒಟ್ಟಿನಲ್ಲಿ ಮೋದಿ-ಶಾಗೆ ನುಂಗಲಾರದ ತುತ್ತಾಗಿದ್ದರು. ಹಾಗಾಗಿ ಅವರನ್ನು ಸೋಲಿಸುವುದಕ್ಕಾಗಿ ಬಿಜೆಪಿ-ಆರ್ಎಸ್ಎಸ್ ತೀವ್ರ ಪ್ರಯತ್ನ ನಡೆಸಿತ್ತು. ಬಿಜೆಪಿ ಹೈಕಮಾಂಡ್ ಕಳೆದ 5 ವರ್ಷದಿಂದಲೇ ಕಾರ್ಯಪ್ರವೃತ್ತವಾಗಿತ್ತು. ಆದರೂ ಜಿಗ್ನೇಶ್ ಮೇವಾನಿಯವರನ್ನು ಸೋಲಿಸಲು ಸಾಧ್ಯವಾಗಿಲ್ಲ.
ಗುಜರಾತ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಜಿಗ್ನೇಶ್ ಮೇವಾನಿ ಗೆಲುವು ಕಂಡರೂ ಸಹ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. 182 ಕ್ಷೇತ್ರಗಳಲ್ಲಿ ಕೇವಲ 16 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇದು ಗುಜರಾತ್ ಕಾಂಗ್ರೆಸ್ನ ಇತಿಹಾಸದಲ್ಲಿಯೇ ಅತಿ ಕೆಟ್ಟ ಸೋಲಾಗಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ: ಆಪರೇಷನ್ ಕಮಲದ ಭೀತಿಯಲ್ಲಿ ಕಾಂಗ್ರೆಸ್!?
ಜಿಗ್ನೇಶ್ ಮೇವಾನಿಯವರು ಗೆದ್ದಿರುವುದು ಸಮಾದಾನಕರ ಸಂಗತಿ.