”ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವುದನ್ನು ಬೆಂಬಲಿಸುತ್ತಿರುವವರಿಗೆ ವಾಸ್ತವದ ಅರಿವು ಇಲ್ಲ” ಎಂದು ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ ಮುಖ್ಯಸ್ಮ ಗುಲಾಂ ನಬಿ ಆಜಾದ್ ಅಸಮಧಾನ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ, ಸಂವಿಧಾನದ 370ನೇ ನಿಧಿಯನ್ನು ಹಿಂಪಡೆದಿತ್ತು ಜೊತೆಗೆ ಕಣವೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪದೇಶಗಳನ್ನಾಗಿ ವಿಭಜಿಸಿತ್ತು. ಇದನ್ನು ವಿರೋಧಿಸಿ ಮತ್ತು ಬೆಂಬಲಿಸಿ ಹಲವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ರವಿವಾರ ದೂಡಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ್ಯಾಲಿ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗುಲಾಂ ನಬಿ ಆಜಾದ್, ”ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಯಾರೆಲ್ಲ ವಿರೋಧ ಮಾಡುತ್ತಿದ್ದಾರೋ ಅವರಿಗೆ ವಾಸ್ತವ, ಇತಿಹಾಸ, ಭೌಗೋಳಿಕ ಸನ್ನಿವೇಶ, ಸಾಂವಿಧಾನಿಕ ನಿಬಂಧನೆಯ ಅನುಕೂಲ ಮತ್ತು ಅನಾನುಕೂಲತೆಗಳ ಅರಿವಿಲ್ಲ ಈ ಸ್ಥಾನಮಾನ ಯಾವುದೇ ನಿರ್ದಿಷ್ಟ ಪ್ರದೇಶ, ಪ್ರಾಂತ ಅಥವಾ ಧರ್ಮದ ಜನರಿಗೆ ಸೀಮಿತವಾಗಿರಲಿಲ್ಲ. ಎಲ್ಲರಿಗೂ ಸಮಾನವಾಗಿ ಅನ್ವಯವಾಗಿತ್ತು” ಎಂದು ಹೇಳಿದ್ದಾರೆ.
ಮಾಧ್ಯಮದವರು ಈ ವಿಶೇಷ ಸ್ಥಾನಮಾನ ಹಿಂಪಡೆದಿರುವುದನ್ನು ಬೆಂಬಲಿಸಿ ಕೆಲವು ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಕುರಿತು ಕೇಳಲಾದ ಪುಶ್ನೆಗೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್, ”ವಿಶೇಷ ಸ್ಥಾನಮಾನ ಹಿಂಪಡೆದಿರುವುದು ಬಲವಂತದ ಮತ್ತು ಅಸಾಂವಿಧಾನಿಕ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”370ನೇ ವಿಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಭಾರತದ ಸಂವಿಧಾನದ ರಕ್ಷಕನಾಗಿ ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಲಿದೆ ಎಂಬ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಸ್ಥಾನಮಾನ ಹಿಂಪಡೆಯಲು ಅನುಸರಿಸಲಾಗಿರುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನ್ಯಾಯಾಲಯ ಪರಿಗಣಿಸಲಿದೆ” ಎಂದು ಆಜಾದ್ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ನಿರ್ಧಾರ ಸಮರ್ಥಿಸಿ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ