ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಕುಕಿ ಪೀಪಲ್ಸ್ ಅಲೈಯನ್ಸ್(KPA) ಭಾನುವಾರ ಹಿಂತೆಗೆದುಕೊಂಡಿದೆ ಎಂದು ದಿ ಹಿಂದೂ ವರದಿ ಮಾಡಿದೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಕುಕಿ ಪೀಪಲ್ಸ್ ಅಲೈಯನ್ಸ್ ಇಬ್ಬರು ಶಾಸಕರನ್ನು ಹೊಂದಿದ್ದು, ಭಾನುವಾರ ರಾಜ್ಯಪಾಲ ಅನುಸೂಯಾ ಉಯಿಕೆ ಅವರಿಗೆ ಪಕ್ಷದ ವತಿಯಿಂದ ಪತ್ರ ಬರೆದು ಬೆಂಬಲ ಹಿಂಪಡೆಯುವುದಾಗಿ ಘೋಷಿಸಿದೆ. ಇನ್ನು ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಹೊಂದಿದೆ.
ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ 160 ಕ್ಕೂ ಹೆಚ್ಚು ಜನರನ್ನು ಕೊಂದಿರುವ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲು ಅಸಮರ್ಥತೆಯ ಬಿಸಿಯನ್ನು ಎದುರಿಸುತ್ತಿರುವಂತೆಯೇ ಆಡಳಿತಾರೂಢ ಮೈತ್ರಿಯಿಂದ ಹೊರಬರಲು ಕೆಪಿಎ ನಿರ್ಧಾರವು ಬಂದಿದೆ.
”ಪ್ರಸ್ತುತ ಘರ್ಷಣೆಯನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ಮಣಿಪುರದ ಸರ್ಕಾರಕ್ಕೆ ಬೆಂಬಲ ನೀಡಿರುವುದು ಫಲಪ್ರದವಾಗಿಲ್ಲ. ಅದರಂತೆ, ಮಣಿಪುರ ಸರ್ಕಾರಕ್ಕೆ KPA ಬೆಂಬಲವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಅನೂರ್ಜಿತವೆಂದು ಪರಿಗಣಿಸಬಹುದು” ಎಂದು ಹೇಳಿದೆ.
ಕುಕಿ ಪೀಪಲ್ಸ್ ಅಲೈಯನ್ಸ್ ಕೇಂದ್ರದಲ್ಲಿ ಆಡಳಿತಾರೂಢ NDAದ ಮಿತ್ರ ಪಕ್ಷವಾಗಿದೆ. ಜುಲೈ 18ರಂದು ದೆಹಲಿಯಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲೂ ಭಾಗವಹಿಸಿತ್ತು.
ಮಣಿಪುರವು ಮೇ 3 ರಿಂದ ಕುಕಿ ಮತ್ತು ಬಹುಸಂಖ್ಯಾತ ಮೈತಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗೆ ಸಾಕ್ಷಿಯಾಗಿದೆ. ಕನಿಷ್ಠ 187 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಮಣಿಪುರದ ಹಲವಾರು ಕುಕಿ ಗುಂಪುಗಳು ಸಿಂಗ್ ಅವರು ಹಿಂಸಾತ್ಮಕ ಮೈತಿ ಗುಂಪುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಮೇ ತಿಂಗಳಿನಿಂದ ರಾಜ್ಯದಲ್ಲಿ ನಡೆದ ಹಲವಾರು ಹಿಂಸಾಚಾರದ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಹಲವಾರು ವಿರೋಧ ಪಕ್ಷದ ನಾಯಕರು ಮತ್ತು ಮಣಿಪುರದ ಬಿಜೆಪಿ ಶಾಸಕರು ಕೂಡ ಮೈತಿ ಸಮುದಾಯಕ್ಕೆ ಸೇರಿದ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: