ಚಂಡೀಗಢದಲ್ಲಿ ಗುರುವಾರ ಸಂಜೆ ನಡೆದ ಕೇಂದ್ರ ಸರ್ಕಾರದ ಮೂವರು ಸಚಿವರ ತಂಡ ಮತ್ತು ರೈತರ ಸಂಘನೆಗಳ ನಡುವಿನ ಮೂರನೇ ಸುತ್ತಿನ ಸಭೆಯಲ್ಲಿಯೂ ಕೂಡ ಒಮ್ಮತ ಮೂಡಿಲ್ಲ. ರೈತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡಲು ಸರ್ಕಾರ ನಿರಾಕರಿಸಿದ್ದು, ಇದೀಗ ಉಭಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಇದೀಗ ನಾಲ್ಕನೇ ಸುತ್ತಿನ ಸಭೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಶಂಭು ಮತ್ತು ಖಾನೂರಿ ಗಡಿಯಲ್ಲಿ ರೈತರ ಪ್ರತಿಭಟನೆಯೂ ಮುಂದುವರಿಯಲಿದೆ. ಚುನಾವಣಾ ನೀತಿ ಸಂಹಿತೆಗೂ ಮುನ್ನವೇ ಒತ್ತಡ ತಂದು, ತಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತ ಮುಖಂಡರಿಗೆ ನಿರಾಶೆಯಾಗಿದೆ. ಇತ್ತ ಕೇಂದ್ರ ಸರ್ಕಾರ ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಮಾತುಕತೆಯನ್ನು ಎಳೆದು ತರಲು ಮುಂದಾಗಿದೆ ಎಂದು ಇಂದಿನ ಸಭೆ ಸೂಚಿಸಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ಅರ್ಜುನ್ ಮುಂಡಾ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರನ್ನೊಳಗೊಂಡ ಮೂರನೇ ಸುತ್ತಿನ ಸಭೆಯ ವಿಫಲವಾಗಿದೆ. ಈ ನಡುವೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಧ್ಯಸ್ಥಗಾರನ ಪಾತ್ರವನ್ನು ವಹಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಸಭೆಯಲ್ಲಿ ಶಂಭು ಮತ್ತು ಖಾನೂರಿ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸಿರುವ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ರೈತರ ಮೇಲಿನ ದೌರ್ಜನ್ಯದ ಕೆಲವು ಚಿತ್ರಗಳನ್ನೂ ಮುಖಂಡರು ಕೇಂದ್ರ ಸಚಿವರಿಗೆ ತೋರಿಸಿದರು. ಉಳಿದ ಬೇಡಿಕೆಗಳ ಬಗ್ಗೆ ಚರ್ಚಿಸಿದ ನಂತರ ಇಡೀ ಸಭೆಯು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿಯ ಮೇಲೆ ಕೇಂದ್ರೀಕರಿಸಿತು. ಬೆಳೆ ಬೆಲೆಗಳ ಕಾನೂನುಬದ್ಧ ಖಾತರಿಯ ವಿಷಯದ ಬಗ್ಗೆ, ಕೇಂದ್ರ ಸಚಿವರು ಭಾರತ ಸರ್ಕಾರವು ಈ ವಿಷಯದ ಬಗ್ಗೆ ಎಲ್ಲ ರಾಜ್ಯಗಳು, ಗ್ರಾಹಕ ವೇದಿಕೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸುತ್ತದೆ. ನಂತರ, ವಿಷಯವನ್ನು ಪರಿಣಾಮಕಾರಿಯಾಗಿ ಎದುರಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಹ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಒಪ್ಪದ ರೈತ ಮುಖಂಡರು, ಬೆಳೆ ಬೆಲೆಯ ಖಾತರಿ ಕಾನೂನನ್ನು ಯಾವಾಗ ಮತ್ತು ಯಾವ ಸಮಯಕ್ಕೆ ಮಾಡುತ್ತಾರೆ ಎಂಬ ಬದ್ಧತೆಯನ್ನು ಬಯಸುತ್ತೇವೆ ಎಂದರು. ಬೆಳೆ ಬೆಲೆ ಖಾತ್ರಿ ಕಾನೂನು ಜಾರಿಯಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ ಅವರು, ಸಚಿವ ಪಿಯೂಷ್ ಗೋಯಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಂತರ, ಪಿಯೂಷ್ ಗೋಯಲ್ ಅವರು ರೈತರನ್ನು ಪ್ರತಿನಿಧಿಸುವ ಎಂಎಸ್ಪಿ ಮೇಲಿನ ಕಾನೂನು ಖಾತರಿಯ ವಿಷಯವನ್ನು ಚರ್ಚಿಸಲು ಕೇಂದ್ರ ಕೃಷಿ ಸಚಿವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದರು. ಯಾವುದೇ ಸಮಿತಿಯ ಸದಸ್ಯರಾಗಿರಲು ಇಷ್ಟಪಡುವುದಿಲ್ಲ ಎಂದು ಜಗಜಿತ್ ಸಿಂಗ್ ದಲ್ಲೆವಾಲ್ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೇ ನಕಲಿ ಕೀಟನಾಶಕಗಳ ವಿರುದ್ಧ ಕಟ್ಟುನಿಟ್ಟಿನ ಬೇಡಿಕೆ ಕುರಿತು ಕೇಂದ್ರ ಸಚಿವರು ಮಾತನಾಡಿ, ಕೇಂದ್ರ ಸರ್ಕಾರವು ಈಗಿರುವ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಕಲಿ ಔಷಧಗಳ ವಿರುದ್ಧ ಕಠಿಣ ಕಾನೂನು ತರಲಿದೆ ಎಂದರು. ಸಚಿವರು ಬೇಡಿಕೆಗೆ ಸಮ್ಮತಿಸಿದ್ದು, ಪ್ರಸ್ತುತ ಆಂದೋಲನ ಅಂತ್ಯಗೊಂಡ ನಂತರ ಒಂದು ವಾರದೊಳಗೆ ಲಖಿಂಪುರ ಖೇರಿಯಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಸಚಿವರು ಚರ್ಚೆ ನಡೆಸಿದರೂ ರೈತರು ಸೊಪ್ಪು ಹಾಕಿಲ್ಲ.
ದೆಹಲಿಯಲ್ಲಿ ಧರಣಿ ಅನುಮತಿಗೆ ಒತ್ತಾಯ:
ಮೂಲಗಳ ಪ್ರಕಾರ, ಸಭೆಯಲ್ಲಿ ರೈತ ಮುಖಂಡರು ದೆಹಲಿಯಲ್ಲಿ ಪ್ರತಿಭಟನೆಗೆ ಸ್ಥಳವನ್ನು ಕೇಳಿದ್ದಾರೆ. ನಂತರ ಪಿಯೂಷ್ ಗೋಯಲ್ ಅವರು ಪಂಜಾಬ್ ಸರ್ಕಾರವು ಅನುಮೋದಿಸಿದ ಯಾವುದೇ ಸ್ಥಳದಲ್ಲಿ ಕುಳಿತುಕೊಳ್ಳಬಹುದು ಎಂದು ಹೇಳಿದರು. ಜಾಗ ನೀಡುವುದಾಗಿ ಮುಖ್ಯಮಂತ್ರಿ ಭಗವಂತ ಮಾನ್ ಒಪ್ಪಿಗೆ ಸೂಚಿಸಿದ್ದು, ದಿಲ್ಲಿಯಲ್ಲಿ ಧರಣಿ ಸತ್ಯಾಗ್ರಹಕ್ಕೆ ಜಾಗ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಬೆಳೆ ಬೆಲೆ ಖಾತ್ರಿ ಕಾನೂನು ಜಾರಿಯಾಗುವವರೆಗೆ ಬ್ಯಾರಿಕೇಡ್ಗಳನ್ನು ತೆಗೆದು ದೆಹಲಿಯಲ್ಲಿ ಕುಳಿತುಕೊಳ್ಳಲು ಜಾಗ ನೀಡಬೇಕು ಎಂದು ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಪಂಜಾಬ್ನ ಮೂರು ಜಿಲ್ಲೆಗಳು ಮತ್ತು ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಈಗಾಗಲೆ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪಂಜಾಬ್, ಸಂಗ್ರೂರ್, ಪಟಿಯಾಲ ಮತ್ತು ಫತೇಘರ್ ಸಾಹಿಬ್ನ ಮೂರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಫೆಬ್ರವರಿ 16 ರವರೆಗೆ ಬಂದ್ ಮಾಡಲಾಗಿದೆ. ಮತ್ತೊಂದೆಡೆ, ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್, ಮೊಬೈಲ್ ಮತ್ತು ಎಸ್ಎಂಎಸ್ ಸೇವೆಗಳ ಮೇಲಿನ ನಿಷೇಧವನ್ನು ಫೆಬ್ರವರಿ 17 ರವರೆಗೆ ವಿಸ್ತರಿಸಲಾಗಿದೆ. ಈ ಏಳು ಜಿಲ್ಲೆಗಳಲ್ಲಿ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಸೇರಿವೆ.
ಇದನ್ನೂ ಓದಿ; ಮಣಿಪುರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಇಬ್ಬರ ಸಾವು, 25 ಮಂದಿಗೆ ಗಾಯ