ಸರ್ಕಾರವು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುವಂತಿಲ್ಲ. ಸಾರ್ವಜನಿಕ ಶಿಕ್ಷಣಕ್ಕೆ ಧನಸಹಾಯವನ್ನು ಮುಂದುವರಿಸಬೇಕೆಂದು ದೆಹಲಿ ಹೈಕೋರ್ಟ್ನ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿ ಸಂಘದ ಮುಖಂಡರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಶುಲ್ಕ ಹೆಚ್ಚಳದ ಕಾರಣಕ್ಕಾಗಿ ಮುಂದಿನ ಸೆಮಿಸ್ಟರ್ಗೆ ನೋಂದಾಯಿಸದ ವಿದ್ಯಾರ್ಥಿಗಳಿಗೆ ಮುಂದಿನ ಒಂದು ವಾರದೊಳಗೆ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.
ಶುಲ್ಕ ಹೆಚ್ಚಳಕ್ಕೂ ಮುಂದೆ ಇದ್ದ ಕಡಿಮೆ ಶುಲ್ಕವನ್ನೇ ಪಡೆದು ವಿದ್ಯಾರ್ಥಿಗಳನ್ನು ಮುಂದಿನ ಸೆಮೆಸ್ಟರ್ಗೆ ಸೇರಲು ಅವಕಾಶ ನೀಡುವಂತೆ ನ್ಯಾಯಮೂರ್ತಿ ರಾಜೀವ್ ಶಕ್ದೇರ್ ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದಾರೆ.
ಶುಲ್ಕ ಹೆಚ್ಚಳವನ್ನು ಪ್ರಶ್ನಿಸಿರುವ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಜೆಎನ್ಯು ವಿದ್ಯಾರ್ಥಿ ಸಂಘದ ಮುಖಂಡರು ಕಳೆದ ವರ್ಷ ಇದ್ದಷ್ಟೆ ಶುಲ್ಕವನ್ನು ಮುಂದುವರೆಸಬೇಕು, ಹೊಸ ಶುಲ್ಕ ಹೆಚ್ಚಳದ ಆದೇಶವನ್ನು ಕೈಬಿಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು ವಿದ್ಯಾರ್ಥಿಗಳ ಮನವಿಯನ್ನು ಈಗಿನಿಂದಲೇ ತಿರಸ್ಕರಿಸುವಂತೆ ನ್ಯಾಯಾಲಯವನ್ನು ಕೋರಿದರು. ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿದ್ದಾರೆ ಎಂದು ಸೂಚಿಸಿದರು.
ಈ ವಾದವನ್ನು ಒಪ್ಪದ ನ್ಯಾಯಾಧೀಶರು “ನಿಮಗೆ ಆಯ್ಕೆಯೇ ಇಲ್ಲದಿದ್ದರೆ, ನೀವು ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದರು. ಆಗ ಕೇಂದ್ರದ ಹಿರಿಯ ಕಾನೂನು ಅಧಿಕಾರಿ, ವಿಶ್ವವಿದ್ಯಾನಿಲಯವು ನೇಮಕ ಮಾಡಿಕೊಂಡ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡಲು ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಆ ವಾದವನ್ನು ನ್ಯಾಯಮೂರ್ತಿ ಶಕ್ದೇರ್ ಪ್ರತಿರೋಧಿಸಿದರು.
“ಸರ್ಕಾರವು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುವಂತಿಲ್ಲ. ಸಾರ್ವಜನಿಕ ಶಿಕ್ಷಣಕ್ಕೆ ಧನಸಹಾಯವನ್ನು ಮುಂದುವರಿಸಬೇಕು. ಗುತ್ತಿಗೆ ಕಾರ್ಮಿಕರ ವೇತನವನ್ನು ಪಾವತಿಸುವ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕುವುದು ಸಮರ್ಥನೀಯವಲ್ಲ. ಅದಕ್ಕಾಗಿ ಬೇರೆ ಮೂಲವನ್ನು ಹುಡುಕಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಸೂಚಿಸಿದ್ದಾರೆ. ನಂತರ ಮುಂದಿನ ವಿಚಾರಣೆಯನ್ನು ಫೆಬ್ರವರಿ 28 ಕ್ಕೆ ಮುಂದೂಡಿದರು.
ಜೆಎನ್ಯುಎಸ್ಯು ಪದಾಧಿಕಾರಿಗಳು ಸಲ್ಲಿಸಿದ ಅರ್ಜಿಯಲ್ಲಿ ಹಾಸ್ಟೆಲ್ ಕೈಪಿಡಿ ಮತ್ತು ಶುಲ್ಕಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ವಿಶ್ವವಿದ್ಯಾಲಯಕ್ಕೆ ಆದೇಶಿಸುವಂತೆ ಕೇಳಿಕೊಂಡಿದ್ದರು.
ವಿದ್ಯಾರ್ಥಿಗಳ ಹೋರಾಟಕ್ಕೆ ನ್ಯಾಯಾಲಯದಲ್ಲಿ ಜಯ ದೊರಕಿರುವುದು ಸಂತೋಷದ ಸಂಗತಿ.