ಬಿಜೆಪಿ ಸೇರಿ, ಇಲ್ಲವೇ ಬುಲ್ಡೋಜರ್ ದಾಳಿ ಎದುರಿಸಿ ಎಂದು ಕಾಂಗ್ರೆಸ್ಸಿಗರಿಗೆ ಮಧ್ಯ ಪ್ರದೇಶ ಬಿಜೆಪಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಬಹಿರಂಗ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದು ಜನವರಿ 20 ರಂದು ನಡೆಯುತ್ತಿರುವ ರಾಘೋಘಡ್ ನಗರ ಸ್ಥಳೀಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಸೇರುವಂತೆ ಅವರು ಧಮಕಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಗುಣ ಜಿಲ್ಲೆಯ ರುಥಿಯಾಯ್ ಪಟ್ಟಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಸಿಸೋಡಿಯಾ “ಕಾಂಗ್ರೆಸ್ಸಿಗರೆ ನಮ್ಮ ಕಡೆಗೆ ಸೇರಿಕೊಳ್ಳಿ. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ… ಮಾಮನ ಬುಲ್ಡೋಜರ್ ಸಿದ್ಧವಾಗಿದೆ” ಎಂದು ಬೆದರಿಕೆಯ ರೀತಿಯಲ್ಲಿ ಹೇಳಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
राघोगढ़ में कांग्रेसियों से बोले पंचायत मंत्री महेंद्र सिंह सिसोदिया "भाजपा में आ जाओ नहीं तो 2023 के बाद बुलडोजर तैयार है"
मंत्री जी,आपका बुल डोजर अंग्रेजों से बड़ा नहीं है,हम उनसे लड़े हैं.@OfficeOfKNath pic.twitter.com/t0ZvVtd8Oh— KK Mishra (@KKMishraINC) January 19, 2023
ಈ ಕುರಿತು ಪ್ರತಿಕ್ರಿಯಿಸಿರುವ ಗುಣ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಹರಿಶಂಕರ್ ವಿಜಯವರ್ಗಿಯಾ, “ಸಿಸೋಡಿಯಾ ಅವರು ಸ್ವಲ್ಪ ತಾಳ್ಮೆಯಿಂದ ನಡೆದುಕೊಳ್ಳಬೇಕು. ಏಕೆಂದರೆ ಜನವರಿ 20 ರಂದು ರಾಘೋಗಢ್ ನಗರ ಸ್ಥಳೀಯ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ” ಎಂದಿದ್ದಾರೆ.
ತಮ್ಮ ವಿರೋಧಿಗಳ, ಅಲ್ಪಸಂಖ್ಯಾತರರ ಅಥವಾ ಆರೋಪಿಗಳ ಮನೆಗಳನ್ನು ಬುಲ್ಡೋಜರ್ಗಳ ಮೂಲಕ ಧ್ವಂಸಗೊಳಿಸುವ ಕ್ರಮದ ಮೂಲಕ ತಮ್ಮ ಬೆಂಬಲಿಗರಿಂದ ಮಧ್ಯಪ್ರದೇಶದ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಬುಲ್ಡೋಜರ್ ಮಾಮಾ ಎಂದು ಕರೆಸಿಕೊಳ್ಳುತ್ತಿದ್ದಾರೆ. ಮಾಫಿಯಾಗಳನ್ನು ಮಟ್ಟ ಹಾಕಲು ಈ ಕ್ರಮ ಅನಿವಾರ್ಯ ಎಂದು ಅವರು ಆ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಯಾವ ಕಾನೂನಿನಲ್ಲಿಯೂ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಲು ಅವಕಾಶವಿಲ್ಲ.
ನಮ್ಮ ದೇಶದಲ್ಲಿ ಪ್ರಜೆಗಳಾದ ನಾವು ನಮಗೆ ಅರ್ಪಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದಿದ್ದೇವೆ. ಅದರ ಪ್ರಕಾರ ಕಾನೂನುಗಳಿದ್ದು, ಯಾವುದೇ ಜನರ ವಿರುದ್ಧ ಯಾವುದೇ ಆರೋಪ ಕೇಳಿಬಂದಾಗ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಶಿಕ್ಷೆ ವಿಧಿಸುವ ಒಂದು ಸಾಂವಿಧಾನಿಕ ಪ್ರಕ್ರಿಯೆ ಇಲ್ಲಿದೆ. ಆದರೆ ಅದನ್ನು ಗಾಳಿಗೆ ತೂರುತ್ತಿರುವ ಬಿಜೆಪಿ ಸರ್ಕಾರ ಮುಸ್ಲಿಮರನ್ನು, ವಿರೋಧ ಪಕ್ಷದವರನ್ನು ಟಾರ್ಗೆಟ್ ಮಾಡಿ ಅವರ ಮನೆ ಉರುಳಿಸುತ್ತಿದೆ. Instant Justice (ತ್ವರಿತ ನ್ಯಾಯ) ಪರಿಕಲ್ಪನೆಯ ನಕಲಿ ಎನ್ಕೌಂಟರ್ಗಳಂತೆ, ನಕಲಿ ಡೆಮೊಲಿಶಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಒಂದು ಗುಂಪು ಮತ್ತು ಮಾಧ್ಯಮಗಳು ಅದನ್ನು ಸಂಭ್ರಮಿಸುವಂತೆ ನೋಡಿಕೊಳ್ಳುವ ಮೂಲಕ, ಒಪ್ಪಿಗೆಯ ಮುದ್ರೆಯೊತ್ತಲಾಗುತ್ತದೆ. ಆ ಮೂಲಕ ಬಿಜೆಪಿ ಬಹುಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ತನ್ನ ಅಧಿಕಾರ ಭದ್ರಗೊಳಿಸಿಕೊಳ್ಳುತ್ತಿದೆ. ಬಹುಸಂಖ್ಯಾತರ ಒಪ್ಪಿಗೆಯ ಮೇರೆಗೆ ಅಲ್ಪಸಂಖ್ಯಾತರನ್ನು ಮತ್ತು ದಮನಿತ ವರ್ಗವನ್ನು ಶೋಷಿಸುವ ಈ ಪ್ರಕ್ರಿಯೆಗೆ ಜಗತ್ತಿನಾದ್ಯಂತ ಫ್ಯಾಸಿಸಂ ಎಂದು ಕರೆಯಲಾಗುತ್ತದೆ. ಅದೀಗ ಭಾರತದಲ್ಲಿ ಬೇರು ಬಿಡುತ್ತಿದೆ.
ಇದನ್ನೂ ಓದಿ: ಹೋರಾಟಕ್ಕೆ ಪ್ರತೀಕಾರವಾಗಿ ಬುಲ್ಡೋಜರ್; ಬಿಜೆಪಿಯ ಕೀಳು ರಾಜಕೀಯ