Homeಕರ್ನಾಟಕಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

ಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

- Advertisement -
- Advertisement -

ಕರಾವಳಿಯಿಂದಲೇ ‘ಇಂದಿರಾಬಾಯಿ’, ‘ಚೋಮನದುಡಿ’, ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಗಳು ಬಂದಿದ್ದು ಕುತೂಹಲಕರ. ಇವು ನಮ್ಮ ಸಮಾಜದ ವಿಧವಾಪದ್ಧತಿ, ಅಸ್ಪೃಶ್ಯತೆ, ಭೂಮಿಪ್ರಶ್ನೆ, ಸ್ತ್ರೀಶೋಷಣೆಯಂತಹ ಪ್ರಧಾನವಾದ ಸಮಸ್ಯೆಗಳನ್ನು ಕುರಿತವಾಗಿವೆ. ಒಂದರ್ಥದಲ್ಲಿ ಸಾರಾ, ಎಂಟು ದಶಕಗಳ ತರುವಾಯ ‘ಇಂದಿರಾಬಾಯಿ’ಯ ಉತ್ತರಾಧಿಕಾರಿಗಳಂತಿರುವ ಕತೆ ಕಾದಂಬರಿಗಳನ್ನು ರಚಿಸಿದರು. ವಿಧವೆಯಾಗಿ ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುವ, ಜೀವನ ಅನುಭವಿಸಬೇಕಾದ ಸ್ವಾತಂತ್ರ್ಯ ಕಳೆದುಕೊಳ್ಳುವ ಸಮಸ್ಯೆಯನ್ನು ಗುಲ್ವಾಡಿಯವರಂತೆ ಅವರ ಬರೆಹವೂ ಜೀವನ್ಮರಣದ ತುರ್ತಿನಲ್ಲಿ ಶೋಧಿಸಿತು.

ಮಹಿಳೆಯರಿಗೆ ಬಿಡುಗಡೆ ಮಾಡುವುದು ಆಧುನಿಕ ಶಿಕ್ಷಣವೆಂದು ನಂಬಿದ್ದ ಭಾರತದ ಪ್ರಥಮ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನದ ಮಾರನೇದಿನವೇ ಸಾರಾ ಅವರು ತೀರಿಕೊಂಡಿದ್ದು ಮಾರ್ಮಿಕ. ಫಾತಿಮಾ ಒಬ್ಬ ಶಿಕ್ಷಕಿಯಾಗಿ ಕೊಟ್ಟ ಸೂಚನೆಯನ್ನು, ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಎಂಬ ಲೇಖನದ ಮೂಲಕ ಬರವಣಿಗೆ ಆರಂಭಿಸಿದ ಸಾರಾ, ಒಬ್ಬ ವಿದ್ಯಾರ್ಥಿಯಾಗಿ ಬದುಕಿ ಸಾಧಿಸಿದವರು. ವಸಾಹತುಶಾಹಿ ಶಾಲೆಗಳಲ್ಲಿ ಕಲಿತ ನಾವು ನಮ್ಮ ಪರಂಪರೆಯ ಮೂಲಬೇರುಗಳನ್ನು ಕಳೆದುಕೊಂಡೆವು ಎಂದು ಅಳಲುವವರು ಇದ್ದಾರೆ. ಅವರ ಮಾತಲ್ಲಿ ಕೆಲವು ನಿಜಗಳಿವೆ. ಆದರೆ ಬ್ರಿಟಿಷರು ಬಾರದೆ ಹೋಗಿದ್ದರೆ, ಸ್ಕೂಲು ಕಾಲೇಜುಗಳನ್ನು ಮುಕ್ತವಾಗಿ ತೆರೆಯದೆ ಹೋಗಿದ್ದರೆ, ನಾವು ನಾವಾಗಿರುತ್ತಿರಲಿಲ್ಲ ಎಂದು ಈ ದೇಶದ ದಲಿತರು ಮತ್ತು ಮಹಿಳೆಯರು ಮತ್ತೆಮತ್ತೆ ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಸಾರಾ ಓದಿದ್ದು ಹತ್ತನೇ ತರಗತಿ ಮಾತ್ರ. ಬರೆಯಲು ಆರಂಭಿಸಿದ್ದು ತಮ್ಮ 50ರ ಪ್ರಾಯದಲ್ಲಿ. ಈ ಸೀಮಿತ ಶಿಕ್ಷಣ, ವಯಸ್ಸುಗಳ ಮಿತಿ, ಅವರ ಬರೆಹಕ್ಕೆ ದೊಡ್ಡ ತೊಡಕುಗಳಾಗಲಿಲ್ಲ. ಅವರು ಆಧುನಿಕ ಶಿಕ್ಷಣದಂತೆ ಸಾಹಿತ್ಯ ಕೂಡ ಬದುಕನ್ನು ಬದಲಿಸಬಹುದು ಎಂದು ನಂಬಿದ್ದವರು. ತಮ್ಮ ಕತೆ ಕಾದಂಬರಿ ಓದಿ, ತಮ್ಮ ಆಲೋಚನೆ ಬದಲಿಸಿಕೊಂಡ ಮಹಿಳೆಯರ ನಿದರ್ಶನಗಳನ್ನು ಅವರು ಸದಾ ಉಲ್ಲೇಖಿಸುತ್ತಿದ್ದರು. ಆಕ್ಟಿವಿಸ್ಟ್ ಬರೆಹಗಾರರನ್ನು ಸಿದ್ಧ ಕಲಾ ಮಾನದಂಡಗಳಿಂದ ಅಳೆಯುವುದು ಸುಲಭವಲ್ಲ.

ಸಾರಾ ಅವರ ಬದುಕು, ಆಲೋಚನೆ, ಕ್ರಿಯೆಗಳನ್ನು ರೂಪಿಸಿದ ಅಕ್ಷರ ಮತ್ತು ಬರೆಹಗಳ ಹಿಂದಿನ ವೈಚಾರಿಕತೆಯು, ಅವರು ಜೀವಂತವಾಗಿ ಅನುಭವಿಸಿದ ಬದುಕಿನ ಅನುಭವಗಳಿಂದ ಬಂದಿದ್ದು. ಅವರೊಬ್ಬ ರ್‍ಯಾಶನಲಿಸ್ಟ್ ಆಗಿ ಭಾರತದ ಆಧುನಿಕ ಚಿಂತಕರಿಂದ ಪ್ರೇರಣೆ ಪಡೆದಿದ್ದರು. ಅವರ ಬರೆಹದ ಹಿಂದೆ 70-80ರ ದಶಕಗಳು ಬಿಡುಗಡೆ ಮಾಡಿದ ಚಾರಿತ್ರಿಕ ಶಕ್ತಿಗಳೂ ಇದ್ದವು. ಅವರು ಸಮಾಜವನ್ನು ಅರಿಯಲು, ಎದುರಿಸಲು ಮತ್ತು ಬದಲಿಸಲು ಬೇಕಾದ ಚಿಂತನೆಯನ್ನು ಧಾರ್ಮಿಕ ನೆಲೆಯಿಂದಲೂ ಪಡೆಯುತ್ತಿದ್ದರು. ಅವರು ಕುರಾನಿನಲ್ಲಿ ಗಂಡುಹೆಣ್ಣು ಬೇಧವಿಲ್ಲವೆಂದೂ, ವಿದ್ಯೆ ಕಲಿಯಲು ಚೀನಾದವರೆಗೂ ಹೋಗಬೇಕಾದರೆ ಹೋಗೆಂದು ಪೈಗಂಬರರು ಹೇಳುತ್ತಿದ್ದರೆಂದೂ ಸದಾ ಉಲ್ಲೇಖಿಸುತ್ತಿದ್ದರು. ಧಾರ್ಮಿಕ ಭಾವುಕತೆಯು ಆಳವಾಗಿರುವ ಸಮಾಜದಲ್ಲಿ ಹೀಗೆ ಧಾರ್ಮಿಕ ನೆಲೆಯ ತಿಳಿವನ್ನು ಉಪಯೋಗಿಸುವುದು ಅಗತ್ಯವೂ ಆಗಿತ್ತು. ಯುದ್ಧತಂತ್ರವೋ ಶ್ರದ್ಧೆಯೋ ಹೇಳಲಾಗದ ಈ ವಿಧಾನವು ಅವರ ಸಮಕಾಲೀನ ಬರೆಹಗಾರರಾದ ಫಕೀರ್ ಕಟ್ಪಾಡಿಯವರಲ್ಲೂ, ಚಿಂತಕ ಅಸ್ಘರ್ ಅಲಿ ಇಂಜಿನಿಯರ್ ಅವರಲ್ಲೂ ಇತ್ತು.

ಸಾರಾ ಅವರು ತಮ್ಮ ಬರೆಹಗಳಲ್ಲಿ ಕಾಣಿಸುವ ಮುಸ್ಲಿಂ ಸಮಾಜವು ಮುಖ್ಯವಾಗಿ ಕರಾವಳಿಯದು ಅಥವಾ ಕೇರಳದ್ದಾಗಿದ್ದರೂ, ಅದು ವಿಶಾಲ ಅರ್ಥದಲ್ಲಿ ಭಾರತದ ಮಹಿಳೆಯರದೂ ಆಗಿತ್ತು. ಮುಸ್ಲಿಂ ಸಮುದಾಯವು ಒಳಗಿನ ಮೂಲಭೂತವಾದ ಮತ್ತು ಹೊರಗಿನ ಮತೀಯವಾದಗಳ ನಡುವೆ ಚಾರಿತ್ರಿಕವಾದ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಲದಲ್ಲಿ, ದರ್ಗಾ, ಸಾರಾ, ಕಟ್ಪಾಡಿ, ಬೊಳುವಾರು, ಬಾನುಮುಷ್ತಾಕ್ ಬರೆಯಲು ಆರಂಭಿಸಿದವರು. ಪುರುಷ ಲೇಖಕರು ಎರಡೂ ಕೆಡುಕುಗಳ ವಿರುದ್ಧ ಸಮಾನ ಎಚ್ಚರದಲ್ಲಿ ಬರೆದರೆ, ಮಹಿಳೆಯರು ಹೆಚ್ಚಾಗಿ ಒಳಗಿನ ಸಮಸ್ಯೆಯತ್ತಲೇ ಕೇಂದ್ರೀಕರಿಸಿದರು. ಇದಕ್ಕೆ ಕಾರಣ, ಈ ಸಮಸ್ಯೆಯು ಅವರ ವೈಚಾರಿಕ ಗ್ರಹಿಕೆಯ ಪರಿಣಾಮವಾಗಿರಲಿಲ್ಲ. ಸ್ವಂತಾನುಭವದ್ದಾಗಿತ್ತು. ಆದರೆ ಸಮುದಾಯವನ್ನು ಅದರ ಗಂಡಾಳಿಕೆ ಮತ್ತು ಪುರೋಹಿತಶಾಹಿ ಕೇಡುಗಳ ಬಾಧೆಯ ಚೌಕಟ್ಟಿನಲ್ಲಿ ಗ್ರಹಿಸಿದಾಗ, ಅದು ಧರ್ಮ ಅಥವಾ ಸಮುದಾಯಗಳನ್ನು ದ್ವೇಷಿಸುವ ಮತೀಯವಾದಿಗಳಿಗೆ ಹತ್ಯಾರಗಳು ಕೂಡ ಆಗಿಬಿಡುವ ಅಪಾಯವಿರುತ್ತದೆ. ಸಾರಾ ಅವರ ಪಠ್ಯಗಳನ್ನು ತರಗತಿಗಳಲ್ಲಿ ಪಾಠಮಾಡುತ್ತಿದ್ದ ದುಷ್ಟ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಮುಸ್ಲಿಮರ ಬಗ್ಗೆ ಇದೊಂದು ಕೊಳೆತುಹೋದ ಜನಾಂಗವೆಂಬ ಗ್ರಹಿಕೆಯನ್ನು ಉತ್ಪಾದಿಸಿರುವ ಸಾಧ್ಯತೆಗಳಿವೆ. ಒಳವಿಮರ್ಶಕರಾಗಿ ಸಮುದಾಯವನ್ನು ಅನುಸಂಧಾನ ಮಾಡುವ ಎಲ್ಲ ಲೇಖಕರು ಎದುರಿಸಬೇಕಾದ ದುರಂತಮಯ ಇಕ್ಕಟ್ಟು ಇದು.

ಸಾರಾ, ನೇರ ದಿಟ್ಟಗುಣದ ಲೇಖಕಿಯಾಗಿದ್ದರು. ಕೆಲವೊಮ್ಮೆ ಸನ್ನಿವೇಶದ ಜಟಿಲತೆ ಅರ್ಥವಾಗಿಲ್ಲವೇನೋ ಎಂಬಂತೆ ಸರಳವಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು. ಅವರ ಆಕ್ರೋಶವು ಕೊನೆಯ ತನಕವೂ ಧಗಧಗಿಸುತ್ತಿತ್ತು. ಬದುಕನ್ನು ಅದು ಸಮಸ್ಯಾತ್ಮಕವಾಗಿದೆ ಎಂಬ ನೆಲೆಯಲ್ಲಿ ಅನುಸಂಧಾನ ಮಾಡುವ ಎಲ್ಲ ಸಮಾಜಸುಧಾರಕ ಬರೆಹವೂ, ತನ್ನ ಸಮುದಾಯದ ಸುಖದುಃಖಗಳನ್ನು, ಬಾಳಿನ ಸಣ್ಣಪುಟ್ಟ ಸಂತಸಗಳನ್ನು ಕಾಣಿಸುವ ಕಲಾತ್ಮಕ ಸೂಕ್ಷ್ಮತೆಗೆ ಕೆಲವೊಮ್ಮೆ ಎರವಾಗುತ್ತದೆ. ಹೀಗೆ ಎರವಾದ ಕುಶಲತೆಯನ್ನು ಕುವೆಂಪು, ಕಟ್ಪಾಡಿ, ಬೊಳುವಾರು ಅಂತಹವರಲ್ಲಿ ಕಾಣಬಹುದು. ಸಾರಾ ಬರೆಹ ಈ ಆಯಾಮದಿಂದ ವಂಚಿತವಾಯಿತೇ ಎಂಬ ಶಂಕೆ ನನಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...