Homeಕರ್ನಾಟಕದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

- Advertisement -
- Advertisement -

ಹಣಕ್ಕಿರುವ ‘ಖರೀದಿ ಗುಣ’ ವಿಪರೀತವಾಗಿರುವ ಕಾಲವಿದು. ಎಲ್ಲವನ್ನೂ ಖರೀದಿಸುವ ತೆವಲು ರಾಜಕಾರಣವನ್ನು ಬಹುಕೋಟಿ ಹೂಡಿಕೆಯ ವ್ಯವಹಾರವಾಗಿಸಿದೆ. ಜನಸಾಮಾನ್ಯರು ಹಣದ ಹರಿವಿನ ರಭಸಕ್ಕೆ ತತ್ತರಿಸಿದ್ದಾರೆ. ಅಲ್ಲಿಯ ಏರುಪೇರುಗಳನ್ನು ಮನರಂಜನೆಯೆಂಬ ಸಿನಿಕತನದಲ್ಲಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ರಾಜಕಾರಣ ನಡೆದುಬಂದ ಬಗೆಯನ್ನು, ಅದರಲ್ಲಿ ಬೆರೆತ ಮಹಿಳಾ ಸಂವೇದನೆಯ ಎಳೆಗಳನ್ನು ಕಾಣಬೇಕೆನಿಸಿತು. ಈಗ, ನಾಗರಿಕ ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿಯಂತೆ ರಾಜಕಾರಣದಲ್ಲಿಯೂ ಮಹಿಳೆ ಪಿತೃತ್ವದ ಸ್ಥಾಪಿತ ಮಾದರಿಯಲ್ಲಿ ಸೇರಿಹೋಗಿದ್ದಾಳೆ. ಪ್ರತ್ಯೇಕ ಚಹರೆ ಇಲ್ಲದಂತೆ.

ಜಗತ್ತಿನ ಎಲ್ಲ ಚಳುವಳಿಗಳಂತೆ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಮಹಿಳಾ ಪಾಲುದಾರಿಕೆ ಗಣನೀಯವಾಗಿತ್ತು. ಸ್ವಾತಂತ್ರ್ಯಾನಂತರದ ಭಾರತದ ಅಧಿಕಾರ ರಾಜಕಾರಣ ಮಹಿಳೆಯರ ಯೋಗ್ಯತೆಯನ್ನು ನಿರ್ಲಕ್ಷಿಸಿತು. 1952 ರ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಚುನಾಯಿತರಾದವರು ಕೇವಲ ನಾಲ್ವರು ಮಾತ್ರ. ಈ ಅನುಪಾತದಲ್ಲೀಗ ಏರಿಕೆಯಾಗಿದೆ. ಆದರೆ ಏರಿಕೆ ದಾಖಲಾರ್ಹವಾಗೇನೂ ಇಲ್ಲ. ಕರ್ನಾಟಕದ ಮಟ್ಟಿಗೆ ಮಹಿಳಾ ರಾಜಕಾರಣದ ಮಹತ್ವದ ಹೆಸರು ಪೊನ್ನಮ್ಮಾಳ್. ಗಾಂಧೀ ಚಿಂತನೆಯನ್ನು ಬದುಕಿನ ಆದರ್ಶವಾಗಿಸಿಕೊಂಡು, ಸಮಾಜವಾದಿ ಚಿಂತನೆಯನ್ನು ವಿಚಾರಶಕ್ತಿಯಾಗಿಸಿಕೊಂಡು, ಜನಪರ ಕಾರ್ಯಗಳಲ್ಲಿ ಪಕ್ಕಾ ಎಡಪಂಥೀಯ ಕಾರ್ಯಕರ್ತೆಯಾಗಿದ್ದರು ಪೊನ್ನಮ್ಮಾಳ್. 1923 ರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಜನಿಸಿದ್ದರು. ಇವರ ತಂದೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯರಾಗಿದ್ದರು. ಇವರು 1928ರಿಂದಲೇ ಶಿವಮೊಗ್ಗೆಯಲ್ಲಿ ಭಾರತ ಸೇವಾದಳವನ್ನು ಸ್ಥಾಪಿಸಿದ್ದರು. ಕೌಟುಂಬಿಕ ಪರಿಸರ, ಸೇವಾದಳದ ತರಬೇತಿ ಅವರನ್ನು ಸಾರ್ವಜನಿಕ ಬದುಕಿಗೆ ತಂದಿತ್ತು. ಎಳೆಯ ಮಗುವಾಗಿದ್ದಾಗಲೇ ಗಾಂಧೀಜಿಯ ತೊಡೆಯೇರಿ ಪಡೆದ ಮಾರ್ದವ ಮಮತೆಯನ್ನು ಮನಸ್ಸಿನಲ್ಲಿ ಸಂಚಿತವಾಗಿಟ್ಟುಕೊಂಡಿದ್ದರು. 1942ರ ಕ್ವಿಟ್ ಇಂಡಿಯಾ ಮೂವಮೆಂಟನಲ್ಲಿ ಪೊನ್ನಮ್ಮಾಳ್ ಬಿ.ಎಸ್.ಸಿ. ವಿದ್ಯಾರ್ಥಿನಿ. ವಿದ್ಯಾರ್ಥಿ ಚಳುವಳಿಯಲ್ಲಿದ್ದರು. ಗಾಂಧೀಜಿ ಬಂಧನವಾದ ನಂತರದ ಚಳುವಳಿಯಲ್ಲಿ ಪೂರ್ತಿ ತೊಡಗಿಸಿಕೊಂಡಿದ್ದರು. ಭೂಗತ ಹೋರಾಟಗಳನ್ನೂ ನಡೆಸಿದರು. ಅಂದಿನ ಬೆಂಗಳೂರಿನ ಬೀದಿ-ಬೀದಿಗಳನ್ನು ಚಳುವಳಿಯ ಕೆಲಸಗಳಿಗಾಗಿ ಸುತ್ತುತ್ತಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದರು. ಪೊನ್ನಮ್ಮಾಳ ಪೋಲಿಸರ ಭಯ ನೀಗಿಕೊಂಡು ಕಮಲಾದೇವಿಯವರನ್ನು ಕದ್ದು ಭೇಟಿಯಾಗುತ್ತಿದ್ದರು. ಅವರ ಹೋರಾಟದ ವ್ಯಾಪ್ತಿ ವಿಸ್ತಾರವಾಗಿತ್ತು. ಆಗ್ರಾ, ಅಹಮದಾಬಾದ್, ಮುಂಬೈ, ದೆಹಲಿಗಳನ್ನು ಸುತ್ತಿದ್ದರು. ಬಾಪೂಜಿಯ ಹತ್ಯೆಯಾದಾಗ, ತಾಯಿಯ ಅನಾರೋಗ್ಯದ ಕಾರಣದಿಂದ ಆಶ್ರಮದಿಂದ ಶಿವಮೊಗ್ಗೆಗೆ ಬಂದು ದಣೀ 2 ತಿಂಗಳಾಗಿತ್ತು. ಪೊನ್ನಮ್ಮಾಳ್ ಕುದ್ದು ಹೋಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆಯೂ ಪಿಂಚಣಿ ಪಡೆದ ಜನರಿದ್ದ ಕಾಲದಲ್ಲಿ; ಚಳುವಳಿಯ ಕಾರಣದಿಂದ ಜೈಲುವಾಸ ಅನುಭವಿಸಿಯೂ ಸರ್ಕಾರದ ಪಿಂಚಣಿ ಪಡೆಯಲು ಮನಸ್ಸು ಮಾಡದ ಅಪ್ಪಟ ಗಾಂಧೀವಾದಿಯಾಗಿದ್ದರು. ಅವರು ಉಡುತ್ತಿದ್ದ ಬಿಳಿಯ ಖಾದಿಯಂತೆ ಅವರ ಮನಸ್ಸಿತ್ತು.

ಗಾಂಧೀಹತ್ಯೆಯ ನಂತರದ ಭಾರತ ಅವರನ್ನು ಸಮಾಜವಾದಿ ಚಿಂತನೆಗೆ ಆಕರ್ಷಿಸಿತ್ತು. ಲೋಹಿಯಾ ವಿಚಾರಧಾರೆಯ ಪ್ರಭಾವಕ್ಕೆ ಒಳಗಾದರು. ಪೊನ್ನಮ್ಮಾಳ ಅವರ ರಾಜಕೀಯ ಚಿಂತನೆ ಮತ್ತು ಕಾರ್ಯತತ್ಪರತೆಯನ್ನು ಗಾಂಧೀವಾದ, ಲೋಹಿಯಾವಾದ ಮತ್ತು ಎಡ ಚಿಂತನೆಗಳು ಬೆರೆತು ಎರಕಗೊಂಡು ರೂಪಿಸಿದವು. ಹೆಣ್ಣುಮಕ್ಕಳು ಸಾಮಾಜಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಕಾಲದಲ್ಲಿ ಪೊನ್ನಮ್ಮಾಳರ ಧೈರ್ಯದ ಓಡಾಟವನ್ನು ಜನ ಪಟಾಕಿ, ಬಜಾರಿ ಎಂದೆಲ್ಲ ಕರೆಯುತ್ತಿದ್ದರಂತೆ. ಆದರೆ ಪೊನ್ನಮ್ಮಾಳ್ ಇಂತಹ ಹಾಸ್ಯಗಳಿಗೆಲ್ಲ ಕಂಗಾಲಾಗಲಿಲ್ಲ. ಅವರು ವೃದ್ಧಾಪ್ಯದಲ್ಲೂ ನೆನೆಯುತ್ತಿದ್ದುದು ಸ್ವತಃ ಚಳುವಳಿಯಲ್ಲಿ ತೊಡಗಿಸಿಕೊಳ್ಳಲಾಗದ ಬಡವರು, ಬೀದಿ ಬದಿ ವ್ಯಾಪಾರಿಗಳು ಕೈಯೆತ್ತಿ ಕೊಡುತ್ತಿದ್ದ ಚಿಲ್ಲರೆ ಕಾಸು- ಚಳುವಳಿಯನ್ನು ಬೆಚ್ಚಗೆ ಪೊರೆಯುತ್ತಿತ್ತು ಎನ್ನುವುದನ್ನು.

ಪೊನ್ನಮ್ಮಾಳ್ ಎಂದೂ ಅಧಿಕಾರದ ಲಾಲಸೆಯನ್ನು ಹಚ್ಚಿಸಿಕೊಳ್ಳಲಿಲ್ಲ. ತಾವು ತುಂಬ ಗೌರವಿಸುತ್ತಿದ್ದ ಡಾಕ್ಟರ್ (ರಾಮಮನೋಹರ ಲೋಹಿಯಾ) ಅವರನ್ನೂ ವಿಮರ್ಶಿಸುವಷ್ಟು ಗಟ್ಟಿತನ ಅವರದ್ದು. ಹಾಗಾಗಿಯೇ ಹೈದ್ರಾಬಾದ್‍ನಲ್ಲಿ ನಡೆದ ಸೋಶಿಯಲಿಸ್ಟ ಕಾನ್‍ಫರೆನ್ಸಿನಲ್ಲಿ ಸಮಾಜವಾದಿಗಳು ಲೋಹಿಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಾಗ, ಪೊನ್ನಮ್ಮಾಳ್ ವಿರೋಧಿಸುತ್ತಾರೆ. ಅಧ್ಯಕ್ಷತೆಯ ಭಾರ ಸ್ವತಂತ್ರ ಕೆಲಸಗಳಿಗೆ ತಡೆಯಾದೀತೆಂಬ ಅಭಿಪ್ರಾಯ ಅವರದಾಗಿತ್ತು. ಇಂತಹ ಭಿನ್ನಮತಗಳು ರಾಜಕೀಯ ಬದುಕನ್ನು-ಸಂಬಂಧವನ್ನು ಶುದ್ಧೀಕರಿಸುತ್ತವೆಂಬ ಅಭಿಪ್ರಾಯ ಅವರದಾಗಿತ್ತು. ಶಿವಮೊಗ್ಗೆಯಲ್ಲಿ ನಡೆದ ಕಾಗೋಡು ಸತ್ಯಾಗ್ರಹದಿಂದ ತುಂಗಾಮೂಲ ಉಳಿಸಿ ಚಳುವಳಿಯವರೆಗೂ ಯಾವುದನ್ನೂ ಪೊನ್ನಮ್ಮಾಳರ ಹೆಸರಿಲ್ಲದೆ ಬರೆಯಲು ಸಾಧ್ಯವಿಲ್ಲ.

ಶಾಂತವೇರಿ ಗೋಪಾಲಗೌಡರು, ಶಂಕರನಾರಾಯಣ ಭಟ್ಟರು, ಕಾಗೋಡು ತಿಮ್ಮಪ್ಪ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ, ಸದಾಶಿವರಾಯರು, ಬಂಗಾರಪ್ಪ ಹೀಗೆ ಅಂದಿನ ಸಮಾಜವಾದಿಗಳೊಂದಿಗೆ ಆತ್ಮೀಯ ಒಡನಾಟ. ತಮ್ಮ ಸಂಗಾತಿ ಗಂಡಸರ ಕುಡಿತದ ಚಟವನ್ನೂ ಎದುರಾಎದುರೇ ಬಯ್ದುಬಿಡುವ ಗುಣ ಇವರದಾಗಿತ್ತಂತೆ. ಎಲ್ಲರನ್ನೂ ತೀಕ್ಷ್ಣವಾಗಿ ಹಂಗಿಸಿಯೂ ಯಾರ ಹಂಗಿಗೂ ಒಳಗಾಗದ ಅಪರೂಪದ ವ್ಯಕ್ತಿಯಾಗಿದ್ದರು. ರಾಜಕೀಯ ಅಧಿಕಾರವನ್ನು ನಿರಂತರ ಅನುಮಾನದಿಂದ ಪರೀಕ್ಷಿಸುತ್ತಿದ್ದರು. ಶಾಂತವೇರಿ ಗೋಪಾಲಗೌಡರು ಒಮ್ಮೆ ಪೊನ್ನಮ್ಮಾಳರನ್ನೇ ಚುನಾವಣೆಗೆ ನಿಲ್ಲಿಸಬೇಕೆಂದು ಪ್ರಸ್ತಾಪಿಸಿದಾಗ “ಕಂಡವರ ಹಣದಿಂದ ಮಾಡುವ ಚುನಾವಣೆ ನನಗೆ ಬೇಡ” ಎಂದುಬಿಟ್ಟಿದ್ದರಂತೆ.

ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿ ಅಧಿಕಾರಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಬಂದ ಸ್ನೇಹಿತರಿಗೆ, ‘ಏನು, ಸಮಾಜವಾದಿಗಳ ಪಟ್ಟಾಭಿಷೇಕ ಪೂರೈಸಿಕೊಂಡು ಬಂದಿರಾ?’ ಎಂದು ವ್ಯಂಗ್ಯವಾಗಿ ಕೇಳಿದ್ದರಂತೆ ಪೊನ್ನಮ್ಮಾಳ್. ವಿಶ್ವಸುಂದರಿ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊನ್ನಮ್ಮಾಳ್ ಭಾಗವಹಿಸಿದ್ದರು. ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬ ಮುಲಾಜೇನೂ ಅವರಿಟ್ಟುಕೊಳ್ಳಲಿಲ್ಲ. ಒಮ್ಮೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಲಂ ಏರಿಯಾ ಜನರಿಗಾಗಿ ಒಂದು ಮನವಿಪತ್ರ ಹಿಡಿದು ಪೊನ್ನಮ್ಮಾಳ್ ವಿಧಾನಸಭೆಯ ಮೆಟ್ಟಿಲು ಹತ್ತಿದ್ದರು. ದೂರದಿಂದ ಪೊನ್ನಮ್ಮಾಳರನ್ನು ಕಂಡ ಬಂಗಾರಪ್ಪನವರು, ಮುಖ್ಯಮಂತ್ರಿತನದ ಸಂಪ್ರದಾಯವನ್ನು ಮೀರಿ ಸ್ವತಃ ಬಂದರಂತೆ. ‘ಬನ್ನಿ, ಬನ್ನಿ ಏನಾಗಬೇಕು?’ ಎಂದರೆ- ‘ನನಗೇನೂ ಆಗಬೇಕಿಲ್ಲ ಈ ಜನರಿಗೆ…’ ಎಂದರಂತೆ. “ನನ್ನ ಜನಕ್ಕೆ ಅಗತ್ಯ ಬಿದ್ದರೆ ನಾನು ಮತ್ತೆ ಬರುವವಳೇ” ಎಂದು ನಗುತ್ತ ಮರಳಿದ್ದರಂತೆ.

ಹಡಗಲಿಯ ರಂಗಭಾರತಿ ಟ್ರಸ್ಟನ ಎಂ.ಪಿ. ಪ್ರಕಾಶ ಅವರು ತಮ್ಮ ತಂದೆಯ ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಗೆ ಪೊನ್ನಮ್ಮಾಳರನ್ನು ಒಪ್ಪಿಸುವುದು ಹರಸಾಹಸವೇ ಆಗಿಬಿಟ್ಟಿತ್ತಂತೆ. ಆಗ ಗೃಹಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ ಅವರು ಪೊನ್ನಮ್ಮಾಳರ ಕಾಲಿಗೆ ನಮಸ್ಕರಿಸಿದ್ದಕ್ಕೆ ಆ ದಿನ ಸಾಕ್ಷಿಯಾಗಿತ್ತು. ಅಧಿಕಾರ ಲೋಭಕ್ಕಿಳಿಯದ ರಾಜಕೀಯ ದೃಢ ವ್ಯಕ್ತಿತ್ವ ಪೊನ್ನಮ್ಮಾಳರದು. ಸರ್ವಾಧಿಕಾರಿ ಕೂಡ ಜನರ ಮನಸ್ಸಿನ ಇಂಗಿತವನ್ನು ಗಮನಿಸುತ್ತಾನೆ. ಪ್ರಜಾಪ್ರಭುತ್ವದ ಗೆಲುವು ಜನರ ವಿಚಾರಶೀಲ ನಡೆಯಲ್ಲಿದೆ- ಎನ್ನುವುದನ್ನು ನಂಬಿದ್ದರು ಪೊನ್ನಮ್ಮಾಳ್.

ಪೊನ್ನಮ್ಮಾಳ್ ಈ ನೆಲದ ಬದುಕಿಗೆ ತಮ್ಮ ಶ್ರಮ ಸಾಧನೆಯ ರಂಗೋಲಿ ಬಿಡಿಸಿದರು. ತಳಮಟ್ಟದ ಕಾರ್ಯಕರ್ತೆಯಾಗಿ ನಿರಂತರ ದುಡಿದರು. ಜಿಲ್ಲೆಯಾದ್ಯಂತ ಮಹಿಳಾಸಂಘ, ಶಿಶುವಿಹಾರ, ಪುರಸಭೆ, ನೌಕರ ಸಂಘ, ಕ್ರೀಡಾ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳಂತಹ ಸಂಘಟನಾತ್ಮಕ ಕೆಲಸಗಳಲ್ಲಿ; ಬಾಲಭವನ, ಮಕ್ಕಳ ಪುಸ್ತಕ ಭಂಡಾರ, ರಿಮ್ಯಾಂಡ ಹೋಂ ಇಂತಹ ನೂರೆಂಟು ಕಾರ್ಯಕ್ರಮಗಳಲ್ಲಿ ಪೊನ್ನಮ್ಮಾಳ್ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದರು. ಕರ್ನಾಟಕ ಏಕೀಕರಣ ಚಳುವಳಿ, ಭೂ ದಾನ ಚಳುವಳಿ, ಸಮಾಜವಾದಿ ಹೋರಾಟ, ಗಣಿಗಾರಿಕೆ ವಿರೋಧಿ ಹೋರಾಟ, ತುಂಗಭದ್ರೆ ಹೋರಾಟ… ಇಂತಹ ನೂರಾರು ಹೋರಾಟಗಳ ಭಾಗವಾಗಿದ್ದರು.

87 ವರ್ಷಗಳ ಬಾಳಿನಲ್ಲಿ ನಿಸ್ವಾರ್ಥರಾಗಿದ್ದ ಪೊನ್ನಮ್ಮಾಳ್ ನೆನಪು ಮ್ಯಾಕ್ಸಿಂಗಾರ್ಕಿಯ ತಾಯಿಯ ಪಾತ್ರವನ್ನು ನೆನಪಿಸುವಂಥದ್ದು. ಸ್ವಲ್ಪ ಮನಸ್ಸು ಮಾಡಿದ್ದರೂ ರಾಜಕೀಯ ಅಧಿಕಾರವನ್ನು ಪಡೆಯಬಹುದಿತ್ತು. ಆದರೆ ಹಾಗೆ ಅಧಿಕಾರ ಪಡೆದವರು ‘ಅರ್ಧರ್ಧ ಶಿವಮೊಗ್ಗೆಯನ್ನೇ ಖರೀದಿಸಿ’ ಭ್ರಷ್ಟರಾಗಿದ್ದನ್ನು ನಿಷ್ಠುರ ವಿಷಾದದಿಂದ ನೋಡಿದ್ದರು. ಕಡೆಯ ದಿನಗಳಲ್ಲಿ ಗಾಂಧೀಜಿಯ ಅಹಿಂಸೆಯನ್ನು ನಕ್ಸಲ ಹಿಂಸೆಯನ್ನು ತಾತ್ವಿಕವಾಗಿ ಒರೆಹಚ್ಚುತ್ತಿದ್ದರು. “ಪಾರ್ವತಿ ಬಹು ಒಳ್ಳೆಯ ಹುಡುಗಿ ಹಾಗಿದ್ದರೆ ನಕ್ಸಲರೂ ಒಳ್ಳೆಯವರಿದ್ದಿರಬಹುದು” ಎನ್ನುತ್ತಿದ್ದರು. “ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ” ಎಂಬ ಎಚ್ಚರದ ಪೊನ್ನಮ್ಮಾಳರನ್ನು ಈ ಕೆಟ್ಟಕಾಲದಲ್ಲಿ ನೆನೆಯಬೇಕು. ಸ್ವಾಭಿಮಾನ, ಆತ್ಮಗೌರವ, ಜನಹಿತ, ತಾತ್ವಿಕತೆ ಎಂಬ ಪದಗಳೆಲ್ಲ ಮೈಲಿಗೆಯಾಗುತ್ತಿರುವಾಗ ಪೊನ್ನಮ್ಮಾಳರಂಥವರ ಸ್ಮರಣೆಯ ಜಲದಿಂದ ಅದನ್ನು ಶುದ್ಧೀಕರಿಸಿಕೊಳ್ಳುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪೊನ್ನಮ್ಮಾಳ್ ರವರ ಚಿತ್ರದ ಹಾಕುವ ಬದಲು ಬಂಗಾರಪ್ಪ ಚಿತ್ರ ಏಕೆ ಹಾಕಿದೆ ಇಲ್ಲಿ?

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...