ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ 11ನೇ ಶತಮಾನದ ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಧ್ಯಪ್ರದೇಶ ಹೈಕೋರ್ಟ್ ಇಂದು (ಮಾ.11) ಆದೇಶಿಸಿದೆ.
ಹಿಂದೂಗಳು ಕಟ್ಟಡವನ್ನು ವಾಗ್ದೇವಿಯ ಭೋಜಶಾಲಾ ದೇವಸ್ಥಾನ ಎಂದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ.
‘ಹಿಂದಿ ಫ್ರಂಟ್ ಫಾರ್ ಜಸ್ಟೀಸ್’ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ಎ ಧರ್ಮಾಧಿಕಾರಿ ಮತ್ತು ದೇವನಾರಾಯಣ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಅಲ್ಲದೆ, ಪ್ರಕರಣ ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.
ವರದಿಗಳ ಪ್ರಕಾರ, ಎಎಸ್ಐನ ನಿರ್ದೇಶಕರು ಅಥವಾ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸುವಂತೆ ಮತ್ತು ಆರು ವಾರಗಳಲ್ಲಿ ಸಮೀಕ್ಷೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡ ಪುರಾತತ್ವ ಇಲಾಖೆಯಡಿ ಸಂರಕ್ಷಿತ ಸ್ಮಾರಕವಾಗಿರುವುದರಿಂದ 1991ರ ಪೂಜಾ ಸ್ಥಳಗಳ ಸಂರಕ್ಷಣೆ ಕಾಯ್ದೆ ಇಲ್ಲಿ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
2003ರಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ರೂಪಿಸಿದ ವ್ಯವಸ್ಥೆಯಂತೆ ಭೋಜಶಾಲಾ ದೇವಸ್ಥಾನ ಅಥವಾ ಕಮಲ್ ಮೌಲಾ ಮಸೀದಿ ಕಟ್ಟಡದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ವಾಗ್ದೇವಿಗೆ ಪೂಜೆ ಮಾಡುತ್ತಾರೆ ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಝ್ ಮಾಡುತ್ತಿದ್ದಾರೆ.
ಈ ವಿಚಾರವಾಗಿ ಹಲವು ಭಾರೀ ಸಂಘರ್ಷ ಉಂಟಾಗಿದೆ. ಈ ಹಿಂದೆ ಒಂದು ಬಾರಿ ಹಿಂದೂಗಳ ಬಸಂತ್ ಪಂಚಮಿ ಮತ್ತು ಶುಕ್ರವಾರ ಬಂದಿತ್ತು. ಅಂದು ಮುಸ್ಲಿಮರ ಪ್ರಾರ್ಥನಾ ದಿನವಾದ ಕಾರಣ, ಹಿಂದೂಗಳು ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ಕಾಯಬೇಕಾದ ಅನಿವಾರ್ಯತೆ ಉಂಟಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಾಗ್ದೇವಿ (ಸರಸ್ವತಿ ದೇವಿ)ಯ ವಿಗ್ರಹವನ್ನು ಪುರಾತನ ಕಟ್ಟಡದೊಳಗೆ ಹಿಂದೂಗಳು ಇರಿಸಿದ್ದರು. ಇದು ಉದ್ವಿಗ್ನತೆಯನ್ನು ಉಂಟು ಮಾಡಿತ್ತು. ಬಳಿಕ ಪೊಲೀಸರು ಕಟ್ಟಡದ ಬಳಿ ಸರ್ಪಗಾವಲು ಹಾಕಿ ವಿಗ್ರಹ ತೆರವುಗೊಳಿಸಿದ್ದರು.
ಇದನ್ನೂ ಓದಿ : ಕೇಂದ್ರ ಗೃಹ ಸಚಿವಾಲಯದಿಂದ ಇಂದು ‘ಪೌರತ್ವ ಕಾಯ್ದೆ’ ಅಧಿಸೂಚನೆ ಪ್ರಕಟಣೆ?