ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ, ಪ್ರಖರ ಭಾಷಣಕಾರ, ಎಐಎಸ್ಎಫ್ನ ಕನ್ಹಯ್ಯ ಕುಮಾರ್ರವರು ನಿಗದಿತ ಯೋಜನೆಯಂತೆ ಇಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಬೇಕಿತ್ತು. “ತಮಗೆ ವಹಿಸಿದ ವಿಷಯದ ಕುರಿತು ಮಾತ್ರ ಮಾತನಾಡಬೇಕು. ಯಾವುದೇ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಬಾರದು.” ಎಂಬ ಷರತ್ತಿನೊಂದಿಗೆ ಅನುಮತಿಯನ್ನು ಸಹ ನೀಡಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ರಾಜ್ಯಪಾಲರಾದ ವಜುಬಾಯಿ ವಾಲಾರವರು ಅನುಮತಿ ನಿರಾಕರಿಸುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಕೂಡಲೇ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಿದ ಆಯೋಜಕರು ಇಂದು ಮಧ್ಯಾಹ್ನ 12 ಗಂಟೆಗೆ ಕಲಬುರ್ಗಿಯ ತಿಮ್ಮಾಪುರ ಸರ್ಕಲ್ ಬಳಿ ಇರುವ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ಹಯಕುಮಾರ ಭಾಷಣಕ್ಕೆ ಏರ್ಪಾಟು ಮಾಡಿದ್ದಾರೆ. ಕನ್ಹಯ್ಯ ಭಾಷಣ ಕೇಳಲು ಸಾವಿರಾರು ಜನ ಜಮಾಯಿಸಿದ್ದಾರೆ.
ಏಕಾಏಕಿ ಕಾರ್ಯಕ್ರಮ ರದ್ದುಪಡಿಸಿದ್ದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿರೋಧ ಭುಗಿಲೆದ್ದಿದ್ದು ನೂರಾರು ಜನ ರಾಜ್ಯಪಾಲರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರು, ಅವರ ಸರ್ಕಾರ, ಅವರ ರಾಜ್ಯಪಾಲ ಎಂಥ ಹೇಡಿಗಳು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕನ್ಹಯ್ಯ ಕುಮಾರ್ ಎತ್ತಬಹುದಾದ ಪ್ರಶ್ನೆಗಳಿಗೆ ಹೆದರಿ ಗುಲ್ಬರ್ಗ ವಿವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ನಡುರಾತ್ರಿ ಕಾರ್ಯಾಚರಣೆಯಲ್ಲಿ ರದ್ದುಪಡಿಸಲಾಗಿದೆ. ವಿಚಾರಗಳಿಗೆ ಹೆದರುವವರ ತಲೆಯಲ್ಲಿ ಕತ್ತೆ ಲದ್ದಿಯಷ್ಟೆ ಇರಲು ಸಾಧ್ಯ. ಇವರೆಲ್ಲ ಈ ಲದ್ದಿ ಇಟ್ಟುಕೊಂಡೇ ಬದುಕು ಕಳೆದುಬಿಡುತ್ತಾರಲ್ಲ ಎಂದು ಅನುಕಂಪವಾಗುತ್ತದೆ ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂರವರು ತಿಳಿಸಿದ್ದಾರೆ.
ಮುಂದುವರೆದು ಗುಲ್ಬರ್ಗದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ವಿವಿಯಲ್ಲಿ ಹೆಚ್ಚು ಸದ್ದುಗದ್ದಲವಿಲ್ಲದೆ ನಡೆದುಹೋಗುತ್ತಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ ಆಯಾಮ ನೀಡಿದ ಘನತೆವೆತ್ತ ರಾಜ್ಯಪಾಲರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ.
“ಕನ್ಹಯ್ಯ ಎಂಬ ಸಣ್ಣ ಪ್ರಾಯದ ಯುವಕನನ್ನು ಕಂಡರೆ “ವಿಶ್ವಗುರು” “56 ಇಂಚಿನ” ಎದೆಯ ನಾಯಕನ ಅನುಯಾಯಿಗಳಿಗೆ ಇಷ್ಟೊಂದು ಭಯ ಯಾಕೆ ?
ಆತನ ಗುಲ್ಬರ್ಗ ವಿ ವಿ ಭಾಷಣದ ಅನುಮತಿ ರದ್ದತಿಗೆ ರಾಜ್ಯಪಾಲರ ಮೂಲಕ ಅಮಿತ್ ಷಾ ನೇರ ಕಾರ್ಯಾಚರಣೆ ನಡೆಸಿದರಂತೆ!” ಎಂದು ಡಿವೈಎಫ್ಐನ ರಾಜ್ಯಾಧ್ಯಕ್ಷರಾದ ಅಬ್ದುಲ್ ಮುನೀರ್ ಪ್ರಶ್ನಿಸಿದ್ದಾರೆ.
ನಿನ್ನೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟು ರಾತ್ರೋರಾತ್ರಿ ಕಾರ್ಯಕ್ರಮ ರದ್ದುಗೊಳಿಸಿದ ಗುಲಬರ್ಗಾ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಹೇಳಿ ದಿಕ್ಕಾರ ದಿಕ್ಕಾರ …!
ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕೂಗು ಇಡೀ ರಾಷ್ಟ್ರದ ದ್ವನಿಯಾಗಿ ಪ್ರಜ್ವಲಿಸಬೇಕು….! ಎಂದು ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಬಾವ್ಗೆ ತಿಳಿಸಿದ್ದಾರೆ.
ಹಿಂದುತ್ವ ಉಗ್ರರ ಬೆದರಿಕೆಗೆ ಕನ್ನಡಿಗರು ಬಗ್ಗಬಾರದು.. ಭಾಷಣ ಇಷ್ಟ ಇಲ್ವಾ ಕೇಳಬೇಡಿ..ವ್ಯಕ್ತಿ ಇಷ್ಟ ಇಲ್ವಾ ಮೆಚ್ಚಬೇಡಿ…. ಭಾಷಣ ಮಾಡಲೇಬಾರದು ಅನ್ನೋದು ಅಕ್ಷಮ್ಯ..
ಉಗ್ರರು ಬೀದಿ ಬೀದಿಯಲ್ಲಿ ಹಿಂಸೆ ಪ್ರಚೋದನೆ ಮಾಡುತ್ತಾ ದೊಂಬಿಗೆ ಪ್ರಚೋದನೆ ಮಾಡೋರಿಗೆ ಆರಾಮಾಗಿ ಅನುಮತಿ ಸಿಗತ್ತೆ. ಅಂತಹ ಯಾವುದೇ ಮನೆ ಮುರಿಯುವ ಕೆಲಸ ಮಾಡದ ಒಬ್ಬರಿಗೆ ಮಾತನಾಡಲು ತಡೆ.. ಏಕೆ ಎಂದು ಕೃಷಿಕ್ ಎ.ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ನೆರೆಯ ಸಂಕಷ್ಟಕ್ಕೆ ಕರಗದ ಜಡಮನಸ್ಸುಗಳು, ಉತ್ತರ ಕರ್ನಾಟಕದಲ್ಲಿ ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ಬೆಚ್ಚಿ ಬೀಳುವುದ್ಯಾಕೆ ? ಎಂದು ಆನಂದ್ ಕುಮಾರ್ ಕೆ.ಎನ್ ಪ್ರಶ್ನಿಸಿದ್ದಾರೆ.
ಇಂದು ಸಂಜೆ ೫ ಗಂಟೆಗೆ ಕಲಬುರ್ಗಿಯ ಅಂಬೇಡ್ಕರ್ ಮೈದಾನದಲ್ಲಿ ಕನ್ಹಯ್ಯಕುಮಾರ್ರವರ ಬಹಿರಂಗ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.