ಕಾನ್ಶಿರಾಮ್ ಜಯಂತಿಯ ಮುನ್ನಾದಿನದಂದು (ಮಾರ್ಚ್ 14) ಪೋಸ್ಟರ್ ಅಂಟಿಸುತ್ತಿದ್ದ JNU ಬಾಪ್ಸಾ ಅಧ್ಯಕ್ಷ, ರಾಜಕೀಯ ಅಧ್ಯಯನ ಕೇಂದ್ರದ ಪಿ.ಎಚ್.ಡಿ ಸಂಶೋಧಕ ಓಂ ಪ್ರಕಾಶ್ ಮಹತೋ ಹಾಗೂ ಇತರ ಕಾರ್ಯಕರ್ತರ ಮೇಲೆ ಎಬಿವಿಪಿ ಕಾರ್ಯಕರ್ತರು ಜೆಎನ್ಯುನ ಗೋದಾವರಿ ಧಾಬಾದ ಬಳಿ ಹಲ್ಲೆ ನಡೆಸಿದ್ದಾರೆ ಎಂದು BAPSA ಆರೋಪಿಸಿದೆ.
ತಮ್ಮ ಅಧ್ಯಕ್ಷರ ಮೇಲಿನ ದಾಳಿಯನ್ನು ಖಂಡಿಸಿ ಬಾಪ್ಸಾ ಹೇಳಿಕೆ ಬಿಡುಗಡೆ ಮಾಡಿದ್ದು, ಜೆಎನ್ಯು ಆಡಳಿತ ಮತ್ತು ವಿದ್ಯಾರ್ಥಿ ಸಂಘಗಳು ಜೆಎನ್ಯು ಕ್ಯಾಂಪಸ್ನಲ್ಲಿ ಎಬಿವಿಪಿ ಗೂಂಡಾಗಿರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
Condemn the attack by ABVP on BAPSA activists in JNU while they were preparing for the occasion of Manyavar Kanshiram's birth anniversary. Rise in rage!
— Damni Kain (@DamniKain) March 14, 2021
ಕಾನ್ಶಿರಾಮ್ನಂತಹ ಸಮರ್ಥ ನಾಯಕ, ಜಾತಿ ವಿರೋಧಿ ಚಿಂತಕರ ಜಯಂತಿಯನ್ನು ಬಾಪ್ಸಾ ಆಚರಿಸುವುದಕ್ಕೆ ಪ್ರತಿಕ್ರಿಯೆಯಾಗಿ ಎಬಿವಿಪಿ ಹಿಂಸಾಚಾರ ನಡೆಸಿದೆ. ಬಾಪ್ಸಾ ಜಾತಿ ವಿರೋಧಿ ರಾಜಕಾರಣವನ್ನು ಪ್ರಬಲವಾಗಿ ಎತ್ತಿಹಿಡಿಯುತ್ತದೆ. ಅದು ಎಬಿವಿಪಿಯಂತಹ ಬ್ರಾಹ್ಮಣ್ಯ ಶಕ್ತಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಹಿಂಸೆಗಿಳಿಯುತ್ತವೆ. ಇತ್ತೀಚಿನ ದಾಳಿಯು ಎಬಿವಿಪಿಯ ಮನುವಾದಿ ಮನಸ್ಥಿತಿಯನ್ನು ತೋರುತ್ತದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ದಲಿತ ಕ್ಯಾಮರಾ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಬಾಪ್ಸಾ ಅಧ್ಯಕ್ಷ ಓಂ ಪ್ರಕಾಶ್ ಮಹತೋ ಮಾತನಾಡಿ, ‘ನಾವು ನಮ್ಮ ಐಕಾನ್ಗಳಾದ ಕಾನ್ಶಿರಾಮ್, ಫುಲೆ, ಅಂಬೇಡ್ಕರ್ ಅವರನ್ನು ಆಚರಿಸಿದರೆ ಅವರು ನಮ್ಮನ್ನು ಹೊಡೆಯಲು ಮತ್ತು ನಮ್ಮ ಕಾರ್ಯಕ್ರಮಗಳನ್ನು ಅಡ್ಡಿಪಡಿಸಲು ಬರುತ್ತಾರೆ. ಆದರೆ ಅವರ ಬೆದರಿಕೆಗೆ ನಾವು ಬಗ್ಗುವುದಿಲ್ಲ. ನಾಳೆಯ ಕಾನ್ಶಿರಾಮ್ ಜಯಂತಿಯನ್ನು ಸಬರಮತಿ ಧಾಬಾದಲ್ಲಿ ತಪ್ಪದೆ ಆಚರಿಸಲಾಗುವುದು’ ಎಂದಿದ್ದಾರೆ.
ಇಂತಹ ದಾಳಿಗೆ ವಿಶ್ವವಿದ್ಯಾಲಯ ಆಡಳಿತ ಬೆಂಬಲ ನೀಡುತ್ತಿದೆ ಎಂದು ಬಾಪ್ಸಾ ಆರೋಪಿಸಿದೆ. ಎಬಿವಿಪಿ ಪುನರಾವರ್ತಿತ ಹಿಂಸಾಚಾರದ ಹೊರತಾಗಿಯೂ ಅವರ ಮೇಲೆ ಯಾವುದೇ ವಿಚಾರಣೆ, ದಂಡ ಮತ್ತು ಶಿಕ್ಷೆ ನೀಡಿಲ್ಲ. ಪದೇ ಪದೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಎಬಿವಿಪಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರಾಕರಿಸುತ್ತಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
ಇಲ್ಲಿಯವರೆಗೆ ಇಂತಹ ಕೃತ್ಯಗಳಿಗಾಗಿ ಎಬಿವಿಪಿ ಗೂಂಡಾಗಳ ವಿರುದ್ಧ ಅನೇಕ ಎಫ್ಐಆರ್ ದಾಖಲಿಸಲಾಗಿದೆ ಆದರೆ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಬಾಪ್ಸಾ ಆರೋಪಿಸಿದೆ.
ಅಂಚಿನಲ್ಲಿರುವ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಶಾಂತಿಯಿಂದ ಮತ್ತು ಯಾವುದೇ ಬೆದರಿಕೆಯಿಲ್ಲದೆ ಮುಂದುವರಿಸಲು ಅವಕಾಶ ನೀಡುವಂತೆ ಆಡಳಿತವು ಅಪರಾಧಿಗಳನ್ನು ಕ್ಯಾಂಪಸ್ನ ಗಡಿಯಿಂದ ಹೊರಗಾಕಬೇಕು ಮತ್ತು ಎಬಿವಿಪಿಯ ಖಾಸಗಿ ಸೇನೆಯಂತೆ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗಳನ್ನು ವಜಾಮಾಡಬೇಕೆಂದು ಬಾಪ್ಸಾ ಆಗ್ರಹಿಸಿದೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ…