ಸೋಮವಾರ (ಮಾರ್ಚ್ 15) ಈ ದಿನವನ್ನು ಖಾಸಗೀಕರಣ ಮತ್ತು ಕಾರ್ಪೊರೇಟಿಂಗ್ ವಿರುದ್ಧದ ದಿನವೆಂದು ಗುರುತಿಸಲಾಗಿತ್ತು. ‘ಕಾರ್ಪೊರೇಟೈಸೇಶನ್ ವಿರೋಧಿ, ಖಾಸಗೀಕರಣ ವಿರೋಧಿ ದಿನಕ್ಕೆ ದೇಶಾದ್ಯಂತ ಸಾವಿರಾರು ಕಾರ್ಮಿಕರು ಮತ್ತು ರೈತ ಗುಂಪುಗಳು ಸಾಕ್ಷಿಯಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
110ನೇ ರೈತ ಹೋರಾಟದ ದಿನ ಪ್ರವೇಶಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರವನ್ನು ಮುಖ್ಯ ಅಂಶಗಳನ್ನಾಗಿ ಇಂದಿನ ಪ್ರತಿಭಟನೆಯಲ್ಲಿ ಪರಿಗಣಿಸಿತ್ತು. ಟ್ರೇಡ್ ಯೂನಿಯನ್ ಸದಸ್ಯರು ರೈಲ್ವೆ ನಿಲ್ದಾಣಗಳಲ್ಲಿ ಧರಣಿ ನಡೆಸುವುದರ ಜೊತೆಗೆ ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಎಸ್ಕೆಎಂ ತಿಳಿಸಿದೆ.
ಇಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 46 ನೇ ಅಧಿವೇಶನದಲ್ಲಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ರೈತ ಮುಖಂಡ ಡಾ.ದರ್ಶನ್ ಪಾಲ್, ರೈತರು ಪ್ರತಿಭಟಿಸುತ್ತಿರುವ ಕೇಂದ್ರದ ಮೂರು ವಿವಾದಿತ ಕಾನೂನುಗಳಿಂದ ರೈತರ ಹಕ್ಕುಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಹರಿಯಾಣದ ಎಲ್ಲಾ ಬಿಜೆಪಿ, ಜೆಜೆಪಿ ಮುಖಂಡರ ಸಾಮಾಜಿಕ ಬಹಿಷ್ಕಾರಕ್ಕೆ ರೈತರ ನಿರ್ಧಾರ
ಸೋಮವಾರ, ಸುನೆಹ್ರಾ – ಜುರೇಹ್ರಾ ಗಡಿಯಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ಅನ್ನು ಶಹೀದ್ ಹಸನ್ ಖಾನ್ ಮೇವತಿಯವರ ಹುತಾತ್ಮ ದಿನ ಎಂದು ಗುರುತಿಸಲಾಗಿದೆ. ನಡೆಯುತ್ತಿರುವ ರೈತ ಹೋರಾಟಕ್ಕೆ ಆರಂಭದಿಂದಲೇ ಮೇವಾಟ್ ಜನರ ಬೆಂಬಲವಿತ್ತು. ಮಹಾಪಂಚಾಯತ್ನಲ್ಲಿ ಭಾಗವಹಿಸಿದ ಜನರು ಚಳವಳಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ಭಾರತದ ಆಹಾರ ನಿಗಮವು ಖಾರಿಫ್ ಮಾರ್ಕೆಟಿಂಗ್ ಸೀಸನ್ 2021 ಕ್ಕೆ ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳು ಮತ್ತು ಖರೀದಿ ಮಾನದಂಡಗಳಿಗಾಗಿ ಬದಲಾದ ಮಾನದಂಡಗಳ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಈ ಮಾನದಂಡಗಳು, ಮಾರುಕಟ್ಟೆ ಖರೀದಿ ಆಡಳಿತವನ್ನು ಕೆಡವಲು ಮತ್ತು ಪಂಜಾಬ್ನ ರೈತರಿಗೆ ಶಿಕ್ಷೆ ವಿಧಿಸುವ ಭಾರತ ಸರ್ಕಾರದ ತಂತ್ರಗಳು ಎಂದು ಎಸ್ಕೆಎಂ ಆರೋಪಿಸಿದೆ.
ಇದನ್ನೂ ಓದಿ: ಹೋರಾಟಕ್ಕೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಬೆಂಬಲ: ರೈತರ ಬೆನ್ನಿಗೆ ನಿಂತ ‘ಲಿಲ್ಲಿ ಸಿಂಗ್’
ಕರ್ನಾಟಕದಲ್ಲಿ ಬಸವಕಲ್ಯಾಣದಿಂದ ಬಳ್ಳಾರಿವರೆಗೆ ನಡೆಸಲಾಗುತ್ತಿರುವ ಪಾದಯಾತ್ರೆ ಬಗ್ಗೆ ಎಸ್ಕೆಎಂ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಾದಯಾತ್ರೆಯಲ್ಲಿ ಮಾರ್ಗದಾದ್ಯಂತ ಸಿಗುವ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಸಭೆಗಳು, ಸಮಿತಿಗಳ ರಚನೆಯೊಂದಿಗೆ, ದಿನ ದಿನಕ್ಕೆ ಹೋರಾಟವು ಹೆಚ್ಚಿನ ಸ್ಥಳಗಳಿಗೆ ಹರಡುತ್ತಿದೆ ಎಂದು ಪ್ರಶಂಸಿಸಿದೆ.
ಉತ್ತರಾಖಂಡದಲ್ಲಿ ಪ್ರಾರಂಭವಾದ ಕಿಸಾನ್ ಮಜ್ದೂರ್ ಜಾಗೃತಿ ಯಾತ್ರೆ ಪಾಲಿಯಾವನ್ನು ದಾಟಿ ಈಗ ಸಂಘಾಯಿ ಗ್ರಾಮವನ್ನು ತಲುಪಿದೆ. ಈ ಯಾತ್ರೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸೋಮವಾರ ಹರಿಯಾಣದ ಜಖಾಲ್ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳಾ ರೈತರು ಸೇರಿ ಹೋರಾಟ ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ: ನರೇಂದ್ರ ಟಿಕಾಯತ್