ಕಾರ್ಕಳದ ತಾಲ್ಲೂಕು ಕಛೇರಿ ರಸ್ತೆಯಲ್ಲಿ ಶಾಸಕ ಸುನೀಲ್ ಕುಮಾರ್ರವರು ಕಟ್ಟಿಸುತ್ತಿರುವ ಬಂಗಲೆ ಮತ್ತು ಅದಕ್ಕೆ ಬಳಸಿರುವ ಸಿಮೆಂಟ್ ವಿಚಾರಕ್ಕೆ ಎದ್ದಿರುವ ವಿವಾದದ ಕುರಿತು ಸ್ವತಃ ಶಾಸಕರೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ಕಾರ್ಕಳದಲ್ಲಿ ನನ್ನ ಕುಟುಂಬ ಕಟ್ಟಡ ನಿರ್ಮಾಣ ಮಾಡುತ್ತಿರುವುದರ ಕುರಿತು ಎದ್ದಿರುವ ಆರೋಪಗಳು ನಿರಾಧಾರವಾಗಿವೆ ಎಂದಿದ್ದಾರೆ.
ನಮ್ಮ ಮನೆಯ ಶಿಲ್ಪ ವಿನ್ಯಾಸ ಜವಾಬ್ದಾರಿಯನ್ನು ಪ್ರಮೋದ್ ಕುಮಾರ್ ವಹಿಸಿಕೊಂಡಿದ್ದಾರೆ. ಹಾಗೆ ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ನಂದಿಕೂರಿನ ಸೃಷ್ಟಿ ವೆಂಚರ್ಸ್ ಇಂಡಸ್ಟ್ರಿಯವರಿಗೆ ಕೊಟ್ಟಿದ್ದೇನೆ. ಖರೀದಿ, ಸಾಗಾಣಿಕೆ ಮತ್ತು ಮಾನವ ಸಂಪನ್ಮೂಲಗಳ ಬಳಕೆ ಎಲ್ಲವೂ ಅವರ ಜವಾಬ್ದಾರಿ. ನನ್ನ ಜವಾಬ್ದಾರಿ ಯಾವುದು ಇಲ್ಲ ಎಂದಿದ್ದಾರೆ.
ಸರ್ಕಾರಿ ಸಿಮೆಂಟ್ ಬಳಸಿದ್ದಾರೆ ಎಂದು ನನ್ನ ಮೇಲೆ ಆರೋಪಿಸಲಾಗಿದೆ. ಸಿಮೆಂಟ್ ಖರೀದಿಯಲ್ಲಿ ಟ್ರೇಡ್ ಸಿಮೆಂಟ್ ಮತ್ತು ನಾನ್ ಟ್ರೇಡ್ ಸಿಮೆಂಟ್ ಎಂಬ ಎರಡು ವಿಧಗಳಿವೆ. ಉತ್ಪಾದಕರಿಂದ ಡೀಲರ್ಗೆ ಬಂದು ಅಲ್ಲಿಂದ ಗ್ರಾಹಕರಿಗೆ ಮಾರುವುದು ಟ್ರೇಡ್ ಸಿಮೆಂಟ್. ಇನ್ನು ಉತ್ಪಾಕದರಿಂದ ನೇರ ಗ್ರಾಹಕರು ತೆಗೆದುಕೊಳ್ಳುವುದು ನಾನ್ ಟ್ರೇಡ್ ಸಿಮೆಂಟ್. ಹಾಗಾಗಿ ನಮ್ಮ ಮನೆ ನಿರ್ಮಾಣಕ್ಕೆ ಯಾವುದು ತೆಗೆದುಕೊಂಡಿದ್ದಾರೆ ಎಂಬುದು ನನ್ನ ಗುತ್ತಿಗೆದಾರರಿಗೆ ಬಿಟ್ಟ ವಿಚಾರ. ಇದ್ಯಾವುದಕ್ಕೂ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ನಮ್ಮ ಮನೆ ಕಟ್ಟಿಸುವ ಜವಾಬ್ದಾರಿ ಗುತ್ತಿಗೆದಾರರಿಗೆ ನೀಡಿದ್ದೇನೆ: ಸರ್ಕಾರಿ ಸಿಮೆಂಟ್ ಬಳಸಿದ ಆರೋಪಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸ್ಪಷ್ಟನೆ
Posted by Naanu Gauri on Friday, July 17, 2020
ಜರ್ಮನ್ ತಂತ್ರಜ್ಞಾನ ಮತ್ತು ಇಕೋವಲ್ಪ್ಯಾನಲ್ ತಂತ್ರಜ್ಞಾನ ಬಳಸಿ ಕಟ್ಟಡ ಕಟ್ಟಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಮನೆ ಕಟ್ಟಿ ಮುಗಿಸಿವಂತೆ ಗುತ್ತಿಗೆದಾರರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಸಹ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿರೋಧಿಗಳು ಮತ್ತು ಕಾಂಗ್ರೆಸ್ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲಾ ತನಿಖೆಗಳಿಗೆ ನಾನು ಸಿದ್ಧನಿದ್ದೇನೆ. ಈ ಹಿಂದೆಯೂ ಹಲವು ವಿಚಾರದಲ್ಲಿ ನನ್ನ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ ಯಾವುದನ್ನು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ. ಈಗ ನನ್ನ ಮೇಲೆ ನಿರಾಧಾರ ಆರೋಪ ಮಾಡಿರುವುದಕ್ಕೆ ಒಂದು ವಾರದಲ್ಲಿ ದೂರು ದಾಖಲಿಸುತ್ತೇನೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಂಗಲೆಗೆ ಸಿಮೆಂಟ್ ಎಲ್ಲಿಯದು?: ಈ ವಿಡಿಯೋವನ್ನು ಸುಳ್ಳೆನ್ನಲು ಸಾಧ್ಯವೇ?