ಕರ್ನಾಟಕ ಸರ್ಕಾರ ರಚನೆ ಮಾಡಿರುವ ಸತ್ಯ-ಪರಿಶೀಲನಾ ಘಟಕದ ವ್ಯಾಪ್ತಿ ಮತ್ತು ಅಧಿಕಾರವನ್ನು ವ್ಯಾಖ್ಯಾನಿಸಬೇಕು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕೇಳಿಕೊಂಡಿದೆ. ಈ ಘಟಕವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವಾರ ನಕಲಿ ಸುದ್ದಿಗಳು, ವೈಯಕ್ತಿಕ ಮಾಹಿತಿ ಕದಿಯುವ ಇಮೇಲ್ಗಳು (ಫಿಶಿಂಗ್ ಇಮೇಲ್ಗಳು) ಮತ್ತು ಸೈಬರ್ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ಸತ್ಯ ತಪಾಸಣೆ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಿತ್ತು. ಸುಳ್ಳು ಸುದ್ದಿ ಪ್ರಚಾರದ ವಿರುದ್ಧ ಕಾನೂನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
”ಈ ಘಟಕವು ನಕಲಿ ಸುದ್ದಿಗಳನ್ನು ಹರಡುವ ತಂಡಗಳನ್ನು ಪತ್ತೆಹಚ್ಚಲು ಕೆಲಸ ಮಾಡುತ್ತದೆ. ಅಂತಹ ಸುದ್ದಿಗಳ ಪ್ರಸಾರವನ್ನು ತಡೆಯುತ್ತದೆ ಮತ್ತು ಅದರ ಹಿಂದೆ ಇರುವವರಿಗೆ ಶಿಕ್ಷೆಯಾಗುವಂತೆ ಮಾಡುತ್ತದೆ” ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಘಟಕವು ಮೇಲ್ವಿಚಾರಣಾ ಸಮಿತಿ, ಸತ್ಯಶೋಧನಾ ತಂಡಗಳು ಮತ್ತು ಇತರ ವಿಭಾಗಗಳನ್ನು ಹೊರತುಪಡಿಸಿ ವಿಶ್ಲೇಷಣಾ ತಂಡಗಳನ್ನು ಒಳಗೊಂಡಿರುತ್ತದೆ.
”ಡೀಪ್ ಫೇಕ್” ತಂತ್ರಜ್ಞಾನದ ಬೆಳವಣಿಗೆಯು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಸಂಭಾವ್ಯ ಸಾಧನವಾಗಿದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶೇಷ ಪರಿಣತಿಯ ಅಗತ್ಯವಿದೆ ಎಂದು ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸತ್ಯ ತಪಾಸಣೆ ಘಟಕವು ನಕಲಿ ಎಂದು ಟ್ಯಾಗ್ ಮಾಡುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಸುದ್ದಿ ವರದಿಗಳನ್ನು ತೆಗೆದುಹಾಕಲಾಗುವುದು. ಸುಳ್ಳು ಸುದ್ದಿಗಳನ್ನು ಶೇರ್ ಮಾಡುವವರ ವಿರುದ್ಧ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ ಎಂದು ಖರ್ಗೆ ಅವರ ಸಚಿವಾಲಯ ತಿಳಿಸಿದೆ.
ಭಾನುವಾರ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈ ಕ್ರಮದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ನಕಲಿ ವಿಷಯವನ್ನು ಪರಿಶೀಲಿಸುವ ಪ್ರಯತ್ನಗಳನ್ನು ಸರ್ಕಾರದ ವ್ಯಾಪ್ತಿಯಲ್ಲಿಲ್ಲದ ಸ್ವತಂತ್ರ ಸಂಸ್ಥೆಗಳು ಮಾಡಬೇಕು ಎಂದು ಹೇಳಿದ್ದಾರೆ.
”ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ ಸಲ್ಲಿಸುವ ಹಕ್ಕು ಮತ್ತು ನ್ಯಾಯಾಂಗ ಮೇಲ್ವಿಚಾರಣೆ ಸೇರಿದಂತೆ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕು” ಎಂದು ಪತ್ರಿಕಾ ಸಂಸ್ಥೆ ಹೇಳಿದೆ.
EGI notes with concern, some aspects of Karnataka govt’s decision to set up a ‘fact-checking unit’ to monitor ‘fake news’. We urge all govts to ensure such units are independent of executive control and their scope and powers are specified so as to not trample upon press freedom pic.twitter.com/7G9pdOweFQ
— Editors Guild of India (@IndEditorsGuild) August 27, 2023
”ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ಸೂಕ್ತ ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಅಂತಹ ಘಟಕಗಳನ್ನು ಸ್ಥಾಪಿಸಬೇಕು” ಎಂದು ಹೇಳಿದೆ.
ಕೇಂದ್ರ ಸರ್ಕಾರದ ಐಟಿ ನಿಯಮಗಳು, 2023ರ ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸಲು ಅನುಮತಿಸುವ ತಿದ್ದುಪಡಿಗಳ ವಿರುದ್ಧ ಈಗಾಗಲೇ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಗಿಲ್ಡ್ ಹೇಳಿದೆ.